ಪ್ರತಿಭಟನಾನಿರತ ಉದ್ಯೋಗಾಂಕ್ಷಿಗಳು ಬುಧವಾರ ಜಮ್ಮುವಿನಲ್ಲಿ ರಸ್ತೆ ತಡೆಗೆ ಯತ್ನಿಸಿದರು, ಆಗ ಅವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿ, ಹಲವರನ್ನು ಬಂಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರಾಡಳಿತವು ಬ್ಯಾಕ್ಲಿಸ್ಟ್ನಲ್ಲಿರುವ ಏಜೆನ್ಸಿ ಮೂಲಕ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿತ್ತು. ಹಾಗಾಗಿ ನೂರಾರು ಯುವ ಉದ್ಯೋಗ ಆಕಾಂಕ್ಷಿಗಳು ಆ ಬ್ಯಾಕ್ಲಿಸ್ಟ್ ಏಜೆನ್ಸಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಈಗಾಗಗಲೇ ದೇಶದ ಹಲವು ರಾಜ್ಯಗಳು ಈ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಿವೆ ಮತ್ತು ನೇಮಕಾತಿಗಳಲ್ಲಿ ಅಕ್ರಮ ನಡೆಸುತ್ತದೆ ಎಂದು ನ್ಯಾಯಾಲಯ ದಂಡವನ್ನು ವಿಧಿಸಿದೆ. ಆದರೂ ಅಂತಹ ಏಜಿನ್ಸಿ ಮೂಲಕ ಪರೀಕ್ಷೆ ನಡೆಸಲು ಕೇಂದ್ರಾಡಳಿತ ಮುಂದಾಗಿದೆ.
ನ್ಯಾಯಯುತ ಪರೀಕ್ಷೆಗಳು ಮತ್ತು ಪಾರದರ್ಶಕ ನೇಮಕಾತಿ ಪ್ರಕ್ರಿಯೆಗೆ ಒತ್ತಾಯಿಸಿ ಉದ್ಯೋಗಾಂಕ್ಷಿಗಳಿಂದ ಶ್ರೀನಗರದಲ್ಲಿ ಏಕಕಾಲದಲ್ಲಿ ಪ್ರತಿಭಟನೆಗಳು ನಡೆದವು.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಜನರಿಗೆ ಬೇಕಾಗಿದ್ದು ಉದ್ಯೋಗ, ಸಿಕ್ಕಿದ್ದು ಬಿಜೆಪಿಯ ಬುಲ್ಡೋಜರ್: ರಾಹುಲ್ ಗಾಂಧಿ
ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆ ಮಾಡುವ ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
”ವಿದ್ಯಾರ್ಥಿಗಳು ಹಾಗೂ ಜಮ್ಮು-ಕಾಶ್ಮೀರ ಸೇವೆಗಳ ಆಯ್ಕೆ ಮಂಡಳಿಯ (JKSSRB) ಆಕಾಂಕ್ಷಿಗಳ ವಿರುದ್ಧ ಲಾಠಿ ಚಾರ್ಜ್ ಮಾಡಿರುವುದನ್ನು ನಾನು ಕಠಿಣ ಪದಗಳಲ್ಲಿ ಖಂಡಿಸುತ್ತೇನೆ. ಜಮ್ಮು-ಕಾಶ್ಮೀರ ಸೇವೆಗಳ ಆಯ್ಕೆ ಮಂಡಳಿಯ ಕಪ್ಪುಪಟ್ಟಿಯಲ್ಲಿರುವ Aptech ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ನಿರ್ಧಾರವನ್ನು ವಿರೋಧಿಸಲು ಈ ಯುವಕರು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುತ್ತಿದ್ದಾರೆ” ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಟ್ವೀಟ್ ಮಾಡಿಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರಿ ಉದ್ಯೋಗಗಳ ನೇಮಕಾತಿಯು ಕಳೆದ ಕೆಲವು ವರ್ಷಗಳಿಂದ ಹಗರಣಗಳಿಂದ ಕೂಡಿತ್ತು ಮತ್ತು ಭ್ರಷ್ಟಾಚಾರ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪಗಳು ಕೇಳಿಬಂದ ಬಳಿಕ ಹಲವಾರು ನೇಮಕಾತಿ ಪಟ್ಟಿಗಳನ್ನು ರದ್ದುಗೊಳಿಸಲಾಯಿತು.
ಕಳೆದ ವರ್ಷದಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದಿರುವ ನಾಲ್ಕು ನೇಮಕಾತಿ ಹಗರಣಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.