Homeಅಂಕಣಗಳುಕಂಗೆಟ್ಟಿದ್ದ ಬಿಜೆಪಿಗೆ ಸಿಕ್ಕ ಭಜರಂಗಿ ಭಜನೆ!

ಕಂಗೆಟ್ಟಿದ್ದ ಬಿಜೆಪಿಗೆ ಸಿಕ್ಕ ಭಜರಂಗಿ ಭಜನೆ!

- Advertisement -
- Advertisement -

ಕರ್ನಾಟಕದ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿರುವ ವಿವಿಧ ಪಕ್ಷಗಳು ಭರವಸೆಗಳ ಮಹಾಪೂರವನ್ನೇ ಹರಿಸಿವೆ ಮತ್ತು ಆ ಭರವಸೆಗಳ ವಿಮರ್ಶೆಯಲ್ಲಿ ಪರಸ್ಪರ ನಿರತವಾಗಿವೆ. ಇದು ಅಗತ್ಯವಾದದ್ದೇ. ಆದರೆ ಮಂಗಳವಾರ ಬೆಳಗ್ಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗುತ್ತಿದ್ದಂತೆಯೇ, ’ಇದಕ್ಕೇ ಕಾಯುತ್ತಿದ್ದೆವು’ ಎಂಬಂತೆ ಬಿಜೆಪಿ ಮತ್ತು ಸಂಘ ಪರಿವಾರ, ಅದರೊಳಗಿನ ಒಂದು ಭರವಸೆಯನ್ನು ಹೆಕ್ಕಿ ತೆಗೆದು ಅದನ್ನೇ ತನ್ನ ಚುನಾವಣೆಯ ಪ್ರಮುಖ ವಿಷಯವನ್ನಾಗಿಸಿಕೊಳ್ಳಲು ಮುಂದಾಗಿದೆ. ’ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಅದರಲ್ಲಿ “ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಭಜರಂಗದಳ ಮತ್ತು ಪಿ.ಎಫ್.ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ, ಆದಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂಬ ಸಾಲುಗಳನ್ನು ಸೇರಿಸಿದೆ. ಕೋಮು ಧ್ರುವೀಕರಣವನ್ನೇ ಬಲವಾಗಿ ನಂಬಿರುವ ಬಿಜೆಪಿ ಈ ಅಂಶವನ್ನು ಅಸ್ತ್ರವನ್ನಾಗಿಸಿಕೊಳ್ಳಲು ತೊಡಗಿದೆ. ಇಲ್ಲಿಯವರೆಗೂ ಭಜರಂಗ ದಳದ ಸದಸ್ಯರನ್ನು ಕಾಲಾಳುಗಳಾಗಿ ಬಳಸಿಕೊಂಡು ಕಷ್ಟದ ಸಂದರ್ಭಗಳಲ್ಲಿ ಫ್ರಿಂಜ್‌ಗಳೆಂದು ದೂರವಿಡುತ್ತಿದ್ದ ಬಿಜೆಪಿ ಈಗ ಚುನಾವಣಾ ಸಂದರ್ಭದಲ್ಲಿ ಆ ಸಂಘಟನೆಯನ್ನು ರಕ್ಷಿಸುವುದು ತನ್ನ ಪರಮ ಕರ್ತವ್ಯ ಎಂಬಂತೆ ಬಗೆದು, ಅದರ ಮುಖಂಡರೆಲ್ಲಾ ಭಜರಂಗಿ ಭಜನೆಯಲ್ಲಿ ಮುಳುಗಿದ್ದಾರೆ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಿ ಹಲವು ಚುನಾವಣಾ ರ್‍ಯಾಲಿಗಳಲ್ಲಿ ಭಾಗವಹಿಸಿ, ತಾನು ಹೇಗೆ ಕಾಂಗ್ರೆಸ್ ಕಾರ್ಯಕರ್ತರಿಂದ ನಿಂದನೆಗೆ ಗುರಿಯಾಗಿದ್ದೇನೆ ಎಂದು ಲೆಕ್ಕ ಹೇಳಿದ ಮೇಲೆಯೂ ಬಿಜೆಪಿ ಪ್ರಚಾರ ಚುರುಕು ಪಡೆದಿರಲಿಲ್ಲ. ಬಹುತೇಕ ಒಪಿನಿಯನ್ ಪೋಲ್‌ಗಳು ಕಾಂಗ್ರೆಸ ಸ್ಪಷ್ಟ ಬಹುಮತ ಗಳಿಸುತ್ತದೆಂಬ ಸುಳಿವು ನೀಡಿದ್ದವು. ಈದಿನ.ಕಾಂ ತನ್ನ ಸಮೀಕ್ಷೆಯಲ್ಲಿ ಕಾಂಗ್ರೆಸ್ 132-140 ಸ್ಥಾನಗಳನ್ನು ಗಳಿಸಿತ್ತದೆ ಎಂದು ಅಂದಾಜಿಸಿದರೆ, ಬಿಜೆಪಿ 57-65 ಸ್ಥಾನಗಳಿಗೆ ಕುಸಿಯುತ್ತದೆ ಎಂದಿತ್ತು. ಇನ್ನು ಸಿ-ವೋಟರ್ ವಿವಿಧ ಮಾಧ್ಯಮ ಸಂಸ್ಥೆಗಳ ಜೊತೆಗೆ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಅಂದಾಜು 107-119 ಸ್ಥಾನಗಳನ್ನು ನೀಡಿ ಬಹುಮತದತ್ತ ದಾಪುಗಾಲು ಹಾಕುತ್ತಿರುವುದನ್ನು ಸೂಚಿಸಿತ್ತು. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳ ಕೊನೆಯಲ್ಲಿ ನಡೆಸಿದ ಪ್ರತ್ಯೇಕ ಒಪಿನಿಯನ್ ಪೋಲ್‌ಗಳಲ್ಲಿ ಕಾಂಗ್ರೆಸ್ ಬಹುಮತದ ಸ್ಥಾನಗಳನ್ನು ಉಳಿಸಿಕೊಳ್ಳುವುದರಲ್ಲಿ ಹೆಚ್ಚುಕಮ್ಮಿ ಯಾವುದೇ ಬದಲಾವಣೆಯಿಲ್ಲವೆಂದು ಬಿಂಬಿತವಾಗುತ್ತಿದ್ದುದು ಬಿಜೆಪಿ ಮುಖಂಡರು ಇನ್ನಷ್ಟು ಅಗ್ರೆಸ್ಸಿವ್ ಆಗಿ ಪ್ರಚಾರ ಮಾಡಲು ಹಾತೊರೆಯುವಂತೆ ಮಾಡಿತ್ತು. ಅದರ ಪರಿಣಾಮವಾಗಿಯೇ ಈಗ ಭಜರಂಗಿ ಮತ್ತು ಹನುಮಂತನ ಅಸ್ಮಿತೆಯನ್ನು ಹಿಡಿದುಕೊಂಡು, ಹಿಂದೂ ಉಗ್ರವಾದಿ ಬಣವಾದ ಭಜರಂಗ ದಳದ ನಿಷೇಧದ ಬಗ್ಗೆ ಕಾಂಗ್ರೆಸ್ ನೀಡಿರುವ ಆಶ್ವಾಸನೆಯನ್ನು, ಧಾರ್ಮಿಕ ಯುದ್ಧವಾಗಿ ಪರಿವರ್ತಿಸುವುದಕ್ಕೆ ಪ್ರಯತ್ನಿಸುತ್ತಿರುವುದು.

ಇದನ್ನೂ ಓದಿ: ಬಜರಂಗದಳ, ಪಿಎಫ್‌ಐ ನಿಷೇಧ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ಕಾಂಗ್ರೆಸ್ ಮೊದಲಿನಿಂದಲೂ ತನ್ನ ಪ್ರಚಾರವನ್ನು ಬೆಲೆಯೇರಿಕೆ, ಭ್ರಷ್ಟಾಚಾರದ ಸಮಸ್ಯೆಗಳು ಹಾಗೂ ವಿದ್ಯುತ್, ಪ್ರಯಾಣ, ಪಡಿತರ ಮುಂತಾದವುಗಳ ಬಗ್ಗೆ ಕಲ್ಯಾಣ ಯೋಜನೆಗಳ ಭರವಸೆಯನ್ನು ನೀಡುವುದರ ಕಡೆಗೆ ತಿರುಗಿಸಿತ್ತು. ಬಿಜೆಪಿ ಇದನ್ನು ಮೊದಮೊದಲಿಗೆ ’ಬಿಟ್ಟಿ’, ’ಫ್ರೀಬೀಸ್’ ಎಂಬಿತ್ಯಾದಿಯಾಗಿ ಜರೆಯುವ ಮಾತನಾಡುತ್ತಿದ್ದರೂ, ಕೊನೆಗೆ, ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ಕೊಡುವ, ಐದು ಕೆ.ಜಿ ಅಕ್ಕಿ ಮತ್ತು ಸಿರಿಧಾನ್ಯವನ್ನು ನೀಡುವ, ಅಟಲ್ ಆಹಾರ ಕೇಂದ್ರಗಳನ್ನು ತೆರೆಯುವ ಕಲ್ಯಾಣ ಯೋಜನೆಗಳಿಗೆ ತನ್ನ ಪ್ರಣಾಳಿಕೆಯಲ್ಲಿ ಮಣೆ ಹಾಕಬೇಕಾದ ಒತ್ತಡಕ್ಕೆ ಒಳಗಾಯಿತು. ಆದರೆ, ಹಿಂದಿನಿಂದಲೂ ಇಂದಿರಾ ಕ್ಯಾಂಟೀನ್ ಅನ್ನು ವಿರೋಧಿಸಿಕೊಂಡು, ಅವಮಾನಿಸಿಕೊಂಡು, ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯ ಬಗ್ಗೆ ಕುಹಕ ವಾಡಿಕೊಂಡು ಬಂದಿದ್ದ ಬಿಜೆಪಿ ಪಕ್ಷದ ಈ ಹೊಸ ಭರವಸೆಗಳನ್ನು ನಂಬುವ ಮಟ್ಟಕ್ಕೆ ಜನರಿರಲಿಲ್ಲ. ಅಲ್ಲದೆ, 2018ರ ಭರವಸೆಗಳು ಈಡೇರಿಸಿರುವ ಬಗ್ಗೆ ರಿಪೋರ್ಟ್ ಕಾರ್ಡ್ ನೀಡಿ ಎಂಬ ಆಗ್ರಹವನ್ನು ಜನರು ಮಾಡಲಾರಂಭಿಸಿದರು. ಇನ್ನೂ ಒಂದು ಹೆಜ್ಜೆ ಮುಂದುಹೋಗಿ, ಉತ್ತರಪ್ರದೇಶದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಬಗ್ಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ಯೋಗಿ ಸರ್ಕಾರ ಒಂದು ವರ್ಷ ಕಳೆದರೂ ಇನ್ನೂ ಯಾರಿಗೂ ಸಿಲಿಂಡರ್ ವಿತರಿಸದ ಬಗ್ಗೆ ಪ್ರಶ್ನೆಗಳು ತೂರಿ ಬರಲಾರಂಭವಾದವು. ಇಂತಹ ಸಮಯದಲ್ಲಿ ಕೈಚೆಲ್ಲಿ ಕಂಗೆಟ್ಟು ಕೂತಿದ್ದ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಪ್ರಣಾಳಿಕೆಯ ಕೆಲವು ಮಾತುಗಳೇ ಬೇಕಾಗಿದ್ದವು. ಜನ ಕಲ್ಯಾಣ, ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಕೊಚ್ಚಿಕೊಳ್ಳಲು ಏನೂ ಇಲ್ಲದಿರುವಾಗ, ತಮ್ಮ ಹಳೇ ಚಾಳಿಯೇ ಗತಿಯೆಂದು ಹನುಮನ ಹೆಸರಿನಲ್ಲಿ ಧ್ರುವೀಕರಣಕ್ಕೆ ಮುಂದಾಗಿದೆ ಬಿಜೆಪಿ ಪಕ್ಷ.

ಆಗಲೇ ಮೋದಿಯವರು ತಮ್ಮ ಚುನಾವಣಾ ರ್‍ಯಾಲಿಯೊಂದರ ಭಾಷಣದಲ್ಲಿ ಭಜರಂಗಿಯನ್ನು ಭಜಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಬೊಮ್ಮಾಯಿಯವರು “ಭಯೋತ್ಪಾದನೆ, ಹಿಂಸೆ ಹಾಗೂ ದೇಶದ್ರೋಹದ ಚಟುವಟಿಕೆ ನಡೆಸುವ ಪಿ.ಎಫ್.ಐ ಜೊತೆ ಧರ್ಮ, ಪರಂಪರೆ ಹಾಗೂ ಇತಿಹಾಸವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವ ಭಜರಂಗದಳವನ್ನು ತುಲನೆ ಮಾಡುವುದು ದೊಡ್ಡ ಅಪರಾಧ. ಆದರೆ ಕಾಂಗ್ರೆಸ್ ಇಂತಹ ತಪ್ಪು ಮಾಡಿ, ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಹೇಳಿದೆ. ಹನುಮ ಭಕ್ತರು ಸಿಡಿದು ನಿಂತರೇ, ಈಗಾಗಲೇ ಅವಸಾನದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಈ ದೇಶದಿಂದ ಕಿತ್ತೆಸೆಯುತ್ತಾರೆ. ಉತ್ತರದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ದಕ್ಷಿಣದ ಅಂಜನಾದ್ರಿಯಲ್ಲಿ ಶ್ರೀ ಹನುಮ ಮಂದಿರ ನಿರ್ಮಾಣ ನಮ್ಮ ಧ್ಯೇಯವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ. ತೇಜಸ್ವಿ ಸೂರ್ಯನಿಂದ ಹಿಡಿದು ಬಿಜೆಪಿ ಮುಖಂಡರು ಲೀಲಾಜಾಲವಾಗಿ ಭಜರಂಗದಳದ ಸಮರ್ಥನೆಗೆ ನಿಂತಿದ್ದಾರೆ. ಅಂದರೆ ಇದರರ್ಥ ದೇಶದಾದ್ಯಂತ ನೂರಾರು ಗಲಭೆ-ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಭಜರಂಗದಳದ ಪಾಪಕರ್ಮಗಳನ್ನೂ ಇವರು ಹೊತ್ತುಕೊಳ್ಳಲಿದ್ದಾರೆಯೇ? ಇವುಗಳಿಗೆ ತಾವೂ ಕಾರಣ ಎಂದು ಆ ಕೃತ್ಯಗಳಿಗೆ ಉತ್ತರದಾಯಿಯಾಗಲಿದ್ದಾರೆಯೇ?

ಕಾಂಗ್ರೆಸ್‌ನ ಒಂದು ವಲಯದಲ್ಲಿ ’ಇದು ಬೇಕಾಗಿತ್ತಾ’ ಎಂಬ ಅಪಸ್ವರದ ಚರ್ಚೆಗಳು ವೇಗ ಪಡೆಯುತ್ತಿವೆ. ಇಂತಹ ಕರಾಳ ಸಮಯದಲ್ಲಿ ಇಂತಹ ಗಟ್ಟಿ ನಿಲುವನ್ನು ತೆಗೆದುಕೊಂಡಿರುವ ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಹಿಂದಡಿಯಿಡಬಾರದು. ಸಂವಿಧಾನದ ಉದಾತ್ತ ಧ್ಯೇಯಗಳ ಬಗ್ಗೆ ಬರೆದುಕೊಂಡಿರುವ ಪ್ರಣಾಳಿಕೆಯನ್ನು ಮುಂದೆ ಅಕ್ಷರಶಃ ಜಾರಿಗೆ ತರಲು ಪ್ರಯತ್ನಿಸಬೇಕು. ಯಾರಾದರೂ ಕಾಂಗ್ರೆಸ್ ಕಾರ್ಯಕರ್ತರು ಇದರ ಬಗ್ಗೆ ಗೊಂದಲಗೊಂಡಿದ್ದರೆ ಸೂಕ್ತ ಮಾತು ಮತ್ತು ವಿಧಾನಗಳಲ್ಲಿ ಸಂವಿಧಾನ ವಿರೋಧಿ ಗುಂಪುಗಳನ್ನು ನಿಷೇಧಿಸುವ ಅಗತ್ಯವನ್ನು ಮನಗಾಣಿಸಬೇಕು. ಜನಸಾಮಾನ್ಯರ ವಿವೇಕ ಇಂಥಹ ಸಂಘಟನೆಗಳನ್ನು ನಿಷೇಧಿಸುವ ಕಡೆಗಿದೆ ಎಂಬುದನ್ನು ಮನಗಂಡು ಬಿಜೆಪಿ ಪಕ್ಷದ ಅಪಪ್ರಚಾರಕ್ಕೆ ಹೆದರಬಾರದು. ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು ತಾವು ನೀಡಿರುವ ಭರವಸೆಗೆ ಬದ್ಧರಾಗಿರಬೇಕು. ಇಂತಹ ಶಾಂತಿಯ ತೋಟದಲ್ಲಷ್ಟೆ ಯಾವುದೇ ಪಕ್ಷ ನೀಡುವ ಜನಪರವಾದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...