Homeಅಂಕಣಗಳುಮುಂದೆ ಏನಾಗುತ್ತೆ ಅಂತ ನೋಡ್ತಾಯಿರಿ!

ಮುಂದೆ ಏನಾಗುತ್ತೆ ಅಂತ ನೋಡ್ತಾಯಿರಿ!

- Advertisement -
- Advertisement -

ರಸ್ತೆ ಉದ್ಘಾಟನೆ, ರೈಲುಗಳ ಉದ್ಘಾಟನೆಗೆ ಓಡೋಡಿ ಬರುವ ಪ್ರಧಾನಿ ಸಂಸತ್ ಭವನದ ಉದ್ಘಾಟನೆ ಬಿಟ್ಟಾರೆಯೇ! 20 ವಿರೋಧಪಕ್ಷಗಳು ವಿರೋಧಿಸಿದ್ದನ್ನೂ ಕೇರ್ ಮಾಡದ ಪ್ರಧಾನಿ ಸಾಧು ಸಂತರು, ಸಿದ್ದರು, ಸರ್ವ ಸಂಗ ಪರಿತ್ಯಾಗಿಗಳು ಎಂದು ಕರೆದುಕೊಳ್ಳುವವರನ್ನು ಕರೆಸಿ, ಪ್ರಧಾನಿ ಪೀಠಕ್ಕೆ ತೀರಾ ನಿಷ್ಠೆಯಿಂದಿರುವ ಶೃಂಗೇರಿ ಯತಿಗಳನ್ನು ಆಹ್ವಾನಿಸಿ ಸಂಸತ್ ಭವನದ ಉದ್ಘಾಟನೆಯನ್ನು ನೆರವೇರಿಸಿದರಲ್ಲಾ. ಇನ್ನ ನ್ಯಾಯೋಚಿತವಾಗಿ ಉದ್ಘಾಟನೆಯ ಹಕ್ಕು ಪಡೆದಿದ್ದ ದ್ರೌಪದಿ ಮುರ್ಮು ಅವರು, ತಮಗೆ ಒಲಿದ ರಾಷ್ಟ್ರಪತಿ ಹುದ್ದೆಯ ಖುಷಿಯಲ್ಲಿಯೇ ಇನ್ನೂ ಇರುವುದರಿಂದ ಪ್ರಧಾನಿ ಕೃತ್ಯವನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಭಾರತದ ರಾಷ್ಟ್ರಪತಿಗಳಾಗಿದ್ದ ರಾಜೇಂದ್ರ ಪ್ರಸಾದ್, ರಾಧಾಕೃಷ್ಣನ್ ಇಂತಹ ಮಹಾಚೇತನಗಳು ಪ್ರಧಾನಿ ಹಠಕ್ಕೆ ಮರುಗುತ್ತಿರಬಹುದಲ್ಲವೆ? ಸಂಸತ್ತಿನ ಒಳಗಿನವರಿಂದಲೂ ಈ ದೇಶಕ್ಕೆ ಏನೂ ಆಗಲಾರದು ಎಂದಿದ್ದ ಗಾಂಧೀಜಿಯವರ ಮಾತು ನೆನಪಿಗೆ ಬರುತ್ತಿದೆಯಲ್ಲಾ, ಥೂತ್ತೇರಿ.

******

ನಮ್ಮ ವಿಧಾನಸೌಧದ ಸ್ಪೀಕರ್ ಸ್ಥಾನ ಅತ್ಯಂತ ಶ್ರೇಷ್ಠವಾದ ಪಕ್ಷಾತೀತ ಪೀಠ. ಅಲ್ಲಿ ಕುಳಿತಿದ್ದ ಕಾಗೇರಿ ನಾನು ಆರೆಸ್ಸೆಸ್ಸಿನವನು ಎಂದು ಹೆಮ್ಮೆಯಿಂದ ಹೇಳಿ ಈ ನಾಡನ್ನು ಬೆಚ್ಚಿಬೀಳಿಸಿದ್ದರು. ಇನ್ನ ಆ ಪಾರ್ಟಿಯ ವಿದ್ವಾಂಸರು, ಸೆಕ್ಯುಲರ್ ಅಂದರೇನು, ಆ ಪದದ ಒಳಾರ್ಥವೇನು, ಅದನ್ನು ಅನುಸರಿಸುವವರ ನಡವಳಿಕೆಯೇನು ಎಂಬುದನ್ನು ಕುವೆಂಪು ಯೂನಿವರ್ಸಿಟಿಯಿಂದ ಹಿಡಿದು ಬೆಲ್ಜಿಯಂ ಬಾಲನವರೆಗೂ ಕೇಳಿ ಚರ್ಚೆ ನಡೆಸುತ್ತಿರುವಾಗ, ಸ್ಪೀಕರ್ ಸ್ಥಾನಕ್ಕೇರಿದ ಖಾದರ್ ಮಹಾ ಸೆಕ್ಯುಲರ್, ಮಾನವತಾವಾದಿ ಜಾತ್ಯತೀತ ಮನಸ್ಸುಳ್ಳವರು ಎಂದು ಹೇಳಿದ ಬಿಜೆಪಿ ಎಮ್ಮೆಲ್ಲೆಗಳೇ ಬಿಜೆಪಿ ವಿದ್ವಾಂಸರಿಗೆ ಸೆಕ್ಯುಲರ್ ಅರ್ಥವನ್ನು ರವಾನಿಸಿದ್ದಾರಲ್ಲಾ. ನಿಜಕ್ಕೂ ಪ್ರಜಾಪ್ರಭುತ್ವದ ಯಕ್ಷಣಿ ಎಂದರೆ ಇದೇ ಇರಬೇಕು. ಪ್ರಮಾದಗಳನ್ನು ಮತ್ತು ವಕ್ರಬುದ್ಧಿಗಳನ್ನು ಸರಿಪಡಿಸುವ ಶಕ್ತಿ ಕಾಲಪುರುಷನಿಗೆ ಮಾತ್ರ ಇರುವಂಥದಲ್ಲಾ, ಥೂತ್ತೇರಿ.

******

ಭಾರತ ಮತ್ತು ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಮಾಧ್ಯಮ ವಿರೋಧ ಪಕ್ಷಗಳನ್ನು ಪ್ರಶ್ನೆ ಮಾಡುತ್ತಾ, ಟೀಕಿಸುತ್ತಾ ಕಾಲ ಹಾಕಿದ್ದು ಇದೇ ಪ್ರಥಮ ಆದ್ದರಿಂದ ಇನ್ನ ಆಡಳಿತಕ್ಕೇರಿದ ವಿರೋಧ ಪಕ್ಷವನ್ನು ಬಿಡುತ್ತವೆಯೇ? ಎಂದಿನಂತೆ ಬಣ ಸೃಷ್ಟಿಸಿಕೊಂಡು ಮಂತ್ರಿಗಳಾಗದವರನ್ನು ಕೆಣಕುತ್ತ, ಇಂತಹವೆಲ್ಲಾ ಸಾಧ್ಯವೇ ಇಲ್ಲಾ ಅಂತ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಎಂದು ಬೊಬ್ಬೆಯಿಡುತ್ತಿವೆಯಲ್ಲಾ. ಇದನ್ನು ನೋಡಿದ ಕರ್ನಾಟಕದ ಜನಸ್ತೋಮ, ’ಈ ಮಾಧ್ಯಮದ ಮಂದಮತಿಗಳಿಗೆ ಕಳೆದ ಸರಕಾರದ ಹಗರಣಗಳು ಒಂದೂ ಕಾಣಲಿಲ್ಲ, ಮುಖ್ಯವಾಗಿ ನಲವತ್ತು ಪರಸೆಂಟ್ ಲಂಚ ಕಾಣಲಿಲ್ಲ, ಹಿಂದಿನ ಸರಕಾರ ಕರುಣಿಸಿದ್ದ ಹಲವು ಭಾಗ್ಯಗಳ ಪೈಕಿ ಇಂದಿರಾ ಕ್ಯಾಂಟಿನ್ ನಿಂತಿದ್ದು, ವಿದ್ಯಾರ್ಥಿಗಳಿಗೆ ಶೂಗಳನ್ನ ಕೊಡದಿದ್ದದು ಕಾಣಲೇ ಇಲ್ಲ’, ಈಗ ಗ್ಯಾರಂಟಿಗಳ ಮೇಲೆ ಬಿದ್ದಿರುವ ಬಿಜೆಪಿ ಬಾಯಿಬಡುಕರ ಜೊತೆ ತಾವೂ ಸೇರಿಕೊಂಡು ಎಬ್ಬಿಸುತ್ತಿರುವ ಗಲಭೆ ನೋಡಿ, ಬಿಜೆಪಿಗಳು ಸೋತಿರುವುದು ಏಕೆಂದು ಅವಕ್ಕಿನ್ನೂ ಗೊತ್ತಾಗಿಲ್ಲವಲ್ಲಾ ಎಂದು ನಗುತ್ತಿದ್ದಾರಲ್ಲಾ, ಥೂತ್ತೇರಿ.

******

ಕನಸು ಮನಸ್ಸಿನಲ್ಲೂ ನಿರೀಕ್ಷೆ ಮಾಡದ ಫಲಿತಾಂಶದಿಂದ ಕಂಗಾಲಾದಂತೆ ಏನೇನೊ ಮಾತಾನಾಡುತ್ತಿರುವ ಕುಮಾರಣ್ಣನನ್ನು ಮಾತನಾಡಿಸಿ ಸಮಾಧಾನ ಹೇಳುವುದು ನಮ್ಮ ಕರ್ತವ್ಯವೆಂದು ತಿಳಿದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್: ’ನೇಗಿಲ ಹಿಡಿದಾ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ ಹೋ..’

“ಹಲೋ ಯಾರು?”

“ನಾನು ಸಾರ್ ಯಾಹೂ.”

“ಎಲ್ಲಿದ್ದಿರಿ ಯಾಹು? ಬನ್ರಿ ಮಾತಾಡನ.”

“ಭಾಳ ದೂರದಲ್ಲಿದ್ದಿನಿ ಸಾರ್. ನಿಮ್ಮ ಮೊಬೈಲ್ ರಿಂಗ್ ಟೋನ್ ಚನ್ನಾಗ್ಯದೆ ಸಾರ್.”

“ಅದು ಕುವೆಂಪು ಬರದ ಪದ ಕಂಡ್ರಿ.”

“ಕವನ ಸಾರ್ ಅದು. ಸಿ. ಅಶ್ವತ್ಥ ಪದ ಮಾಡಿದ್ರು. ಆದ್ರು ಕಾಲ ಏನು ಮಾಡತ್ತೆ ನೋಡಿ, ಆ ಕವನದ ಆಶಯನೆ ಹಾಳಾಯ್ತಲ್ಲ ಸಾ.”

“ಎಲ್ಲಿ ಹಾಳಾಗಿದೆರಿ?”

ಇದನ್ನೂ ಓದಿ: ಚಿಕ್ಕಮಗಳೂರು ಜನಕ್ಕೆ ಈ ಸೋಲು ಬೇಕಿತ್ತು ಸಾರ್!

“ಕುವೆಂಪು ಆ ಕವನ ಬರದದ್ದು ವಲ ಉಳೊ ರೈತನ್ನ ನೋಡಿ. ಆವುನು ಉಕ್ಕೆ ಗೆರೆಗೆ ನೆಟ್ಟಿದ್ದ ದೃಷ್ಟಿ ನೋಡಿ ಯೋಗಿ ಅಂದುಬುಟ್ರು. ಈಗ ನೋಡಿದ್ರೆ ಟ್ರಾಕ್ಟರಲ್ಲಿ ವಲ ಉಳುತಾ ಅವುನೆ.”

“ಅದರಲ್ಲಿ ಆಶ್ಚರ್ಯ ಪಡತಕ್ಕಂತದ್ದೇನಿದೇರಿ? ಜನರ ಶ್ರಮ ಸ್ವಲ್ಪ ಕಡಮೆ ಆಗಿದೆ. ದನಗಳೂ ಇಲ್ಲ. ಅದ್ಕೆ ಟಾಕ್ಟ್ರಲ್ಲಿ ಉಳುಮೆ ಮಾಡತಕ್ಕಂತ ಕೆಲಸ ಏನಿದೆ ಅದನ್ನ ಮಾಡ್ತ ಇದಾನೆ. ನಮಗೆ ಜಾಸ್ತಿ ಸೀಟುಗಳನ್ನ ಕೊಟ್ಟು ಸಮ್ಮಿಶ್ರ ಸರಕಾರದ ರೂವಾರಿ ಮಾಡಿದ್ದ ಮತದಾರ ಇವತ್ತು ಆಶೆ ಅಮಿಷಕ್ಕೆ ಬಲಿಯಾಗಿ ನಮಗೆ ಕೇವಲ 19 ಸ್ಥಾನ ಕೊಟ್ಟಿದ್ದಾನೆ. ಏನು ಮಾಡಕ್ಕಾಗತ್ತೆ ಹೇಳಿ ಕಾಲ ಬದಲಾಗುತ್ತೆ.”

“ಇಂತ ಸೋಲಿಗೆ ನೀವು ಕಂಡುಕೊಂಡ ಉತ್ತರ ಏನು ಸಾರ್?”

“ಉತ್ತರ ಕಣ್ಣಿಗೆ ಕಾಣ್ತಯಿದೆಯಲ್ರೀ. ನನ್ನ ಪಂಚರತ್ನ ನೋಡಿ ಕಾಂಗ್ರೆಸ್ಸಿನವರು ಗ್ಯಾರಂಟಿ ಅನವುನ್ಸ್ ಮಾಡಿದ್ರು. ಅದೂಅಲ್ಲದೆ ಮೂರು ಸಾವುರ ಎರಡು ಸಾವುರ ಉಡುಗೊರೆ ಕೊಟ್ಟವರೆ ಬೇಕಿದ್ರೆ ತನಿಖೆ ಮಾಡಲಿ.”

“ನೀವು ಏನೂ ಕೊಡಲಿಲ್ವ ಸಾರ್?”

“ನಮ್ಮತ್ರ ದುಡ್ಡಿದ್ರೆ ತಾನೆ ಕೊಡದು?”

“ಸಾರ್ ಈ ಚುನಾವಣೆಲಿ ಯಲ್ರು ಯಲ್ಲಾನು ಕೊಟ್ಟವುರೆ. ನಾನೇ ನೋಡಿದಂಗೆ ನಿಮ್ಮ ಮತ್ತೆ ದೇವೇಗೌಡ್ರ ಸಭೆಗೆ ಜನ ತರೊದಕ್ಕೆ ನಿಮ್ಮ ಪಕ್ಷದ ಎಮ್ಮೆಲ್ಲೆ ಮತ್ತೆ ಲೀಡ್ರುಗಳು ಕೂಡ ಕೊಟ್ರು. ಇನ್ನ ಚುನಾವಣೆ ಹಿಂದಿನ ದಿನ ಮನೆ ಮನೆಗೆ ನುಗ್ಗಿ ಕೊಟ್ರು. ಕಾಂಗ್ರೆಸ್ಸು ಹಂಗೆ ನೋಡಿದ್ರೆ ಕಡಿಮೆ ಕೊಡ್ತು. ಇನ್ನ ಬಿಜೆಪಿಗಳಂತೂ ಲೆಕ್ಕವಿಲ್ಲದೆ ಕೊಟ್ರು. ಜನ ಯಲ್ಲಾರತ್ಲೂ ಈಸಗಂಡು ಮಾಡದ್ನೆ ಮಾಡಿದ್ರು.”

“ನಮ್ಮವರು ದುಡ್ಡು ಹಂಚಿಲ್ಲ ಕಂಡ್ರಿ.”

“ಸಾರ್ ನಮ್ಮನೆಲಿ ಏಳು ಓಟಿದ್ದೊ. ಏಳು ಓಟಿಗೆ ಹತ್ತುವರೆ ಸಾವುರ ಕೊಟ್ಟು ಹೋದ್ರು ಗೊತ್ತ ಸಾರ್?”

“ಅಂಗಾದ್ರೆ ನೀವೂ ದುಡ್ಡು ತಗಂಡರೇನ್ರಿ?”

“ನಾವು ತಗಂಡ್ರೆ ಬರಿಯಕ್ಕಾಗತ್ತ ಸಾರ್?”

“ನಾವು ಗಿಫ್ಟ್ ಕೊಟ್ಟಿಲ್ಲ, ಕೂಪನ್ನು ಕೊಟ್ಟಿಲ್ಲ.”

“ಹಿಂದೆ ಕೊಟ್ಟ ದಾಖಲೆ ಇದೆ ಸಾರ್. ಹಂಚಕ್ಕಾಗದೆ ಉಳದ ದಾಸ್ತಾನಿನ ಫೋಟೊ ಇದೆ.”

“ಅದು ಹಳೆದು, ಈಗಿನ ಕತೆ ಹೇಳ್ರಿ.”

“ಈಗಿನ ಕತೆ ಏನು ಅಂದ್ರೇ, ನೀವು ಕಾಂಗ್ರೆಸ್ ಮೇಲೆ ದಾಳಿ ಮಾಡದಕಿಂತ, ಐದು ವರ್ಷ ಭಯಾನಕ ಸರಕಾರ ನಡೆಸಿದೊರ ಮೇಲೆ ಕಣ್ಣಿಡಬೇಕಿತ್ತು. ಅವರ ಅಕ್ರಮ ಬಯಲು ಮಾಡಬೇಕಿತ್ತು. ಅದು ಬುಟ್ಟು ಕಾಂಗ್ರೆಸ್ ಮೇಲೆ ದಾಳಿ ಮಾಡಿದ್ರಿ ಸಾರ್. ಕಾಂಗ್ರೆಸ್ಸು ಅದು ಏನೇ ಆಗಿರ್ಲಿ ದೇವೆಗೌಡ್ರನ್ನ ಪ್ರಧಾನಿ ಮಾಡಿತ್ತು. ನಿಮ್ಮನಮ್ಮೆ ಮುಖ್ಯಮಂತ್ರಿ ಮಾಡಿತ್ತು. ಆದ್ರು ನೀವು ಕಾಂಗ್ರೆಸ್ಸನ್ನ ಟೀಕುಸ್ತಿರಿ, ಹೀಯಾಳುಸ್ತಿರಿ. ಈಗ್ಲು ನೋಡಿ ದೇಶದ ವಿರೋಧ ಪಕ್ಷಗಳೆಲ್ಲಾ ಒಂದಾಗಿ ಪಾರ್ಲಿಮೆಂಟ್ ಭವನದ ಉದ್ಘಾಟನೆ ಬಹಿಷ್ಕರಿಸಿ ದೂರ ಇದ್ರೆ, ದೇವೇಗೌಡ್ರು ಇಂತ ಸ್ಥಿತಿಲಿ ಹೋಗಿ ಭಾಗವಹಿಸಿದ್ರು. ನಿಮಗೆ 19 ಸೀಟು ಬಂದಿರಕ್ಕೆ ಇಲ್ಲೂ ಉತ್ತರ ಸಿಗತ್ತೇ ಅಲ್ವಾ ಸಾರ್.”

“ರೀ ನಮ್ಮ ತಂದೆ ಸರಿಯಾಗೆ ಹೇಳ್ಯವುರಲ್ಲವೇನ್ರಿ? ಈ ದೇಶದ ಪಾರ್ಲಿಮೆಂಟ್ ಕಟ್ಟದ ಏನಿದೆ ಅದು ಆರೆಸ್ಸೆಸ್ಸ್ ಕಚೇರಿಯಲ್ಲ, ಅದ್ಕೆ ಹೋಯ್ತಿನಿ ಅಂತ. ಹೋದ್ರು ಅದು ತಪ್ಪ?”

“ಆರೆಸ್ಸೆಸ್ ಕಚೇರಿಯಲ್ಲ ಸರಿ. ಆದ್ರೆ ಉದ್ಘಾಟಿಸಿದವರು ಆರೆಸ್ಸೆಸ್ಸಿನವರು. ಅಲ್ಲಿ ಪಾರ್ಲಿಮೆಂಟ್ ಸದಸ್ಯರಿಗಿಂತ ಜಗದ್ಗುರುಗಳು ಅನ್ನಿಸಿಕೊಂಡೋರು ಜಾಸ್ತಿ ಜಮಾಯಿಸಿದ್ರು. ಅಂದ್ರೇನು ನೀವು ದೇಶದ ಬಿಜೆಪಿಯ ಬಿ ಟೀಮು ಅಂತ ತೋರಿಸಿಗಂಡ್ರಲ್ಲವಾ ಸಾರ್? ಕಾಂಗ್ರೆಸ್ಸಿನ ಸಿ ಟೀಮಾಗಾದ್ರು ಕಾಣಸಿಗಂಡಿದ್ರೆ ಇನ್ನೊಸಿ ಸೀಟು ಬರವು.”

“ನೋಡ್ರಿ ಯಾಹೂ, ನಾವು ಯಾರಿಗೂ ಬಿ ಟೀಮು, ಸಿ ಟೀಮಾಗಿ ಕೆಲಸ ಮಾಡಲಿಲ್ಲ. ಪೂರ್ಣ ಪ್ರಮಾಣದಲ್ಲಿ ಮೆಜಾರಿಟಿಗೆ ಬರತಕ್ಕಂತ ಪ್ರಣಾಳಿಕೆ ತಯಾರು ಮಾಡಿ ಜನತೆ ಮುಂದೆ ಇಟ್ಟೊ. ಕಾಂಗ್ರೆಸ್ಸಿನ ಅಕ್ರಮದಿಂದ ಸೋತಿದ್ದಿವಿ. ಮುಂದೆ ಏನಾಗತ್ತೆ ನೋಡ್ತಾಯಿರಿ.”

“ಏನಾಗಬಹುದು ಸಾರ್?”

“ಅದನ್ನ ಈಗ್ಲೆ ಹೇಳಕ್ಕೆ ಬರಲ್ಲ. ಕೇವಲ 16 ಸೀಟು ಎಂ.ಪಿಗಳು ಗೆದ್ದಿದ್ದಕ್ಕೆ ದೇವೇಗೌಡ್ರನ್ನ ಕರದು ಈ ದೇಶದ ಪ್ರಧಾನಿ ಮಾಡಿದ್ರು. ಅದಕ್ಕೂ ಹಿಂದೆ ನಮ್ಮ ತಂದೆ ನಿಂತ ಎರಡೂ ಕ್ಷೇತ್ರದಲ್ಲಿ ಸೋತಿದ್ರು. ನಮ್ಮ ಭಾಗಕ್ಕೆ ಇನ್ನೇನು ಎಲ್ಲಾ ಮುಗುದೋಯ್ತು ಅಂತ ಭಾವನೆ ಪಡತಿದ್ದ ಕಾಲ ಅದು. ಮುಂದೆ ಏನಾಯ್ತು ನಿಮಗೆ ಗೊತ್ತಿದೆ.”

“ಸರಿ ನೀವು 19 ಸೀಟು ಮಡಿಕಂಡು ಏನಾಯ್ತಿರಿ?”

“ಮುಂದಿನ ಲೋಕಸಭಾ ಚುನಾವಣೆವರಿಗೆ ಮಾತ್ರ ಈ ಸರಕಾರ ಇರದು.”

“ಅಮ್ಯಾಲೇನಾಗುತ್ತೆ ಸಾರ್?”

“ಅದನ್ನು ಈಗ್ಲೆ ಹೇಳಕ್ಕೆ ಬರಲ್ಲ.”

“ನೀವು ಇಬ್ರಾಹಿಂ ಅವರನ್ನ ಅಧ್ಯಕ್ಷನನ್ನಾಗಿ ಮಾಡಬಾರದಿತ್ತು ಸಾರ್. ನೀವೇ ಆಗಿದ್ರೆ ಇನ್ನ ಜಾಸ್ತಿ ಸೀಟು ಬರ್ತಿದ್ದೊ.”

“ನಮ್ಮ ತಂದೆಗೇಳಿದೆ ಕಂಡ್ರಿ, ಅವುರು ಕೇಳಲಿಲ್ಲ. ಮುಸ್ಲಿಂ ಓಟು ಬತ್ತವೆ ಅಂದ್ರು, ಅವು ಬರಲಿಲ್ಲ.”

“ನಿಜ ಸಾರ್ ರಾಮನಗರದಲ್ಲಿ ನೋಡಿ ಒಂದು ಓಟೂ ಬರಲಿಲ್ಲ. ಅದ್ಕೆ ನಿಖಿಲ್ ಸೋತಿದ್ದು.”

“ರಾಮನಗರದಲ್ಲಷ್ಟೇ ಅಲ್ಲ, ಯಲ್ಲಾ ಕಡೆನು ಮುಸ್ಲಿಮರ ಓಟು ನಮಗೆ ಬರಲಿಲ್ಲ. ಅದ್ಕೆ 19 ಸೀಟು ಬಂದಿದ್ದು.”

“ಮತ್ತೆ ಕಾಂಗ್ರೆಸ್ ಅಕ್ರಮ ನಡಸ್ತು ಅಂದ್ರಿ?”

“ಅದೂ ನ್ಯಡಿತು.”

“ಇದ್ಯಾವುದೂ ನಿಜ ಅಲ್ಲ ಸಾರ್. ನಿಮಗೆ ಜನ ಯಾವತ್ತು ಮೆಜಾರಿಟಿ ಕೊಡಲ್ಲ. ಯಲ್ಲಾ ನಿಮ್ಮ ಭ್ರಮೆ. ಜನ ಈ ಸಾರಿ ಕಾಂಗ್ರೆಸ್ಸಿನವುರು ನಿಮ್ಮ ಮನೆ ಬಾಗಿಲಿಗೆ ಬರದಂಗೆ, ಬಿಜೆಪಿಗಳು ಆಪರೇಷನ್ ಮಾಡದಂಗೆ ಓಟು ಮಾಡ್ಯವುರೆ. ಅಲ್ವೆ ಸಾರ್?”

“ನೋಡ್ತಯಿರಿ ಮುಂದೆ ನೂರ ಹತ್ತೊಂಬತ್ತು ಬರಲಿಲ್ಲ ಅಂದ್ರೆ ನನ್ನ ಪಾರ್ಟಿನೆ ವಿಸರ್ಜನೆ ಮಾಡ್ತಿನಿ.”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...