Homeಮುಖಪುಟನಮ್ಮನ್ನು ಎದುರು ಹಾಕಿಕೊಂಡರೆ ದಕ್ಕಿಸಿಕೊಳ್ಳುವುದು ನಿಮ್ಮಿಂದ ಸಾಧ್ಯವಿಲ್ಲ: ಸೆಂಥಿಲ್ ಬಾಲಾಜಿ ಬಂಧನದ ಕುರಿತು ಬಿಜೆಪಿಗೆ ತಮಿಳುನಾಡು...

ನಮ್ಮನ್ನು ಎದುರು ಹಾಕಿಕೊಂಡರೆ ದಕ್ಕಿಸಿಕೊಳ್ಳುವುದು ನಿಮ್ಮಿಂದ ಸಾಧ್ಯವಿಲ್ಲ: ಸೆಂಥಿಲ್ ಬಾಲಾಜಿ ಬಂಧನದ ಕುರಿತು ಬಿಜೆಪಿಗೆ ತಮಿಳುನಾಡು ಸಿಎಂ ಸ್ಟಾಲಿನ್ ಎಚ್ಚರಿಕೆ

ಗೋಡೆಗೆ ಎಸೆಯಲ್ಪಟ್ಟ ಚೆಂಡು ಮತ್ತೆ ಮುಖಕ್ಕೆ ಬಡಿಯುವ ರೀತಿಯಲ್ಲೇ ಒಬ್ಬೊಬ್ಬ ಡಿಎಂಕೆ ಕಾರ್ಯಕರ್ತನನ್ನು ಬೆಳೆಸಲಾಗಿದೆ ಎಂದು ಸ್ಟಾಲಿನ್ ಗುಡುಗಿದ್ದಾರೆ.

- Advertisement -
- Advertisement -

ತಮಿಳುನಾಡು ವಿದ್ಯುಚ್ಛಕ್ತಿ ಸಚಿವ ವಿ.ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬುಧವಾರ (ಜೂನ್ 14) ರಂದು ಬಂಧಿಸಿದೆ. ಈ ಕುರಿತು ಸಿಎಂ ಸ್ಟಾಲಿನ್ ವಿಡಿಯೋ ಭಾಷಣ ಮಾಡಿದ್ದಾರೆ. ಅದನ್ನು ಯುವ ಪತ್ರಕರ್ತ ಅಶೋಕ್ ಕುಮಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ.

ಸಚಿವ ಸೆಂಥಿಲ್ ಬಾಲಾಜಿ ಅವರಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನೀಡುತ್ತಿರುವ ಅನ್ಯಾಯದ ಹಿಂಸೆಗಳೆಲ್ಲವೂ ನಿಮಗೇ ಗೊತ್ತು. ಇದೊಂದು ಅಪ್ಪಟ ರಾಜಕೀಯ ಸೇಡಿಕ ಕೃತ್ಯ ಎಂಬುದರಲ್ಲಿ ಯಾರಿಗೂ ಎಳ್ಳಷ್ಟೂ ಸಂದೇಹವಿಲ್ಲ. 10 ವರ್ಷದ ಹಳೆದ ದೂರಿಗೆ ಈಗ ಬಂಧಿಸಿ 18 ಗಂಟೆಗಳ ಕಾಲ ಅಧಿಕಾರಿಗಳು ತಮ್ಮ ಕಷ್ಟಡಿಯಲ್ಲಿಟ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಹೀನಗೊಳಿಸಿ ಜೀವಕ್ಕೇ ಅಪಾಯವಾಗುವ ರೀತಿಯಲ್ಲಿ ಹೃಯಯ ಸಂಬಂಧಿ ಖಾಯಿಲೆಗೆ ಈಡುಮಾಡಿದ್ದಾರೆ ಎಂದರೆ ಇದಕ್ಕಿಂತ ಅಪ್ಪಟ ರಾಜಕೀಯ ಸೇಡು ಇರಲು ಸಾಧ್ಯವೇ?

ಸೆಂಥಿಲ್ ಬಾಲಾಜಿ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಅವರ ವಿರುದ್ಧ ನ್ಯಾಯಾಲಯದ ತೀರ್ಪಿದ್ದರೆ ಅಧಿಕಾರಿಗಳು ಧಾರಾಳವಾಗಿ ಅವರ ವಿಚಾರಣೆ ನಡೆಸಲಿ. ನಾನು ಅದನ್ನು ಯಾವಾಗಲೂ ಬೇಡ ಎನ್ನುವುದಿಲ್ಲ. ಅದನ್ನು ತಪ್ಪು ಎಂದು ನಾನು ಹೇಳುವುದಿಲ್ಲ. ಓಡಿ ಬಚ್ಚಿಟ್ಟುಕೊಳ್ಳುವಷ್ಟು ಸೆಂಥಿಲ್ ಬಾಲಾಜಿ ಸಾಧಾರಣ ವ್ಯಕ್ತಿಯೂ ಅಲ್ಲ. ಬದಲಾಗಿ ಜನರಿಂದ ಆಯ್ಕೆಯಾದ ಶಾಸಕ. ಅದೂ ಐದು ಬಾರಿ ಶಾಸಕರಾಗಿ ಆಯ್ಕೆಯಾದವರು. ಎರಡನೇ ಬಾರಿ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿನಿತ್ಯ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅಂತಹ ವ್ಯಕ್ತಿಯನ್ನು ಉಗ್ರಗಾಮಿಯ ರೀತಿಯಲ್ಲಿ ಕೂಡಿಹಾಕಿ ವಿಚಾರಣೆ ನಡೆಸಬೇಕಾದ ಅಗತ್ಯವೇನಿದೆ?

ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಇಟ್ಟಾಗ ಅವರಿಗೆ ವಿಚಾರಣೆಗೆ ಸೆಂಥಿಲ್ ಬಾಲಾಜಿ ಎಲ್ಲ ಸಹಕಾರ ನೀಡಿದ್ದರು. ಯಾವುದೇ ದಾಖಲೆಗೆ ಸಂಬಂಧಿಸಿದಂತಹ ಪ್ರಶ್ನೆಗಳಿಗೆ ವಿವರಣೆ ನೀಡಿದ್ದರು. ಆನಂತರವೂ 18 ಗಂಟೆಗಳ ಕಾಲ ಅವರನ್ನು ಕೂಡಿಹಾಕಲಾಗಿತ್ತು. ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಿರಲಿಲ್ಲ. ಕೊನೆಯದಾಗಿ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟು ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ಅತ್ಯಗತ್ಯ ಎಂಬುದು ಖಾತ್ರಿಯಾದ ಮೇಲೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ವಿಚಾರದಲ್ಲೂ ಅಧಿಕಾರಿಗಳು ಅಲಕ್ಷ್ಯ ತೋರಿದ್ದರೆ, ಅದು ಅವರ ಜೀವಕ್ಕೇ ಅಪಾಯವಾಗಿ ಪರಿಣಮಿಸಿರುತ್ತಿತ್ತು.

ಇಂತಹದ್ದೊಂದು ವಿಚಾರಣೆ ನಡಸಲು ಈಗೇನು ದಿಢೀರ್ ತುರ್ತು? ಈ ದೇಶವೇನು ಈಗ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿದೆಯೇ? ಜಾರಿ ನಿರ್ದೇಶನಾಲಯದ ನಡವಳಿಕೆಯನ್ನು ಗಮನಿಸಿದರೆ ಈ ಸಂದೇಹ ಸ್ಪಷ್ಟವಾಗುತ್ತದೆ. ಸರಳವಾಗಿ ಹೇಳಬೇಕು ಅಂದ್ರೆ ಕೇಂದ್ರ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮುಂದಾಳತ್ವದಲ್ಲಿ ಅವರ ರಾಜಕಾರಣವನ್ನು ನಡೆಸುತ್ತಿದೆ. ಜನರ ನಡುವಿನ ರಾಜಕಾರಣಕ್ಕೆ ಬಿಜೆಪಿ ತಯಾರಿದ್ದಂತೆ ಕಾಣಿಸುತ್ತಿಲ್ಲ. ಬಿಜೆಪಿಯನ್ನು ನಂಬಲು ಜನರೂ ಸಹ ತಯಾರಿಲ್ಲ. ಜನರಿಗೋಸ್ಕರ ರಾಜಕಾರಣ ಮಾಡಿದರೆ ಮಾತ್ರ ಜನ ಬಿಜೆಪಿಯನ್ನು ನಂಬುತ್ತಾರೆ, ಹಾಗೆ ನೋಡಿದ್ರೆ ಬಿಜೆಪಿ ರಾಜಕಾರಣ ಎಂಬುದು ಖಡಾಖಂಡಿತವಾಗಿ ಜನವಿರೋಧಿ ರಾಜಕಾರಣ ಎಂಬುದರಲ್ಲಿ ಸಂಶಯವಿಲ್ಲ.

ಸೈದ್ಧಾಂತಿಕವಾಗಿ, ರಾಜಕೀಯವಾಗಿ ಚುನಾವಣೆಯಲ್ಲಿ ಎದುರುಗೊಳ್ಳಲು ಶಕ್ತಿ ಇಲ್ಲದೆ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಮೂಲಕ ಹೆದರಿಸಿ ಬ್ಯ್ಲಾಕ್ ಮೇಲ್ ರಾಜಕಾರಣ ಮಾಡುವುದು ಬಿಜೆಪಿ ಮಾದರಿ. ಇದೊಂದೇ ಅವರಿಗೆ ಗೊತ್ತಿರುವ ಏಕೈಕ ಮಾದರಿ. ಇಂತಹ ಪ್ರಜಾಪ್ರಭುತ್ವ ವಿರೋಧಿ ಮಾದರಿಯನ್ನೇ ಬಿಜೆಪಿ ಭಾರತದಾದ್ಯಂತ ಫಾಲೋ ಮಾಡ್ತಾ ಇದೆ. ಒಂದೇ ಸ್ಕ್ರಿಪ್ಟನ್ನ ಬೇರೆ ಬೇರೆ ಬಿಜೆಪಿಯೇತರ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಡಬ್ಬಿಂಗ್ ಮಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ವಿರೋಧಿ ಮಾಡುತ್ತಿದೆಯಾ, ಹಾಗಾದರೆ ಆ ಪಕ್ಷದ ಮುಖ್ಯಸ್ಥರಾದ ಸಂಜಯ್ ರಾವತ್ ಅವರನ್ನು ಬಂಧಿಸಬೇಕು. ಎಎಪಿ ಪಕ್ಷ ಬಿಜೆಪಿಯನ್ನು ವಿರೋಧಿಸುತ್ತಿದೆಯಾ? ಹಾಗಾದ್ರೆ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಬೇಕು. ರಾಷ್ಟ್ರೀಯ ಜನತಾದಳ ವಿರೋಧಿಸುತ್ತಿದೆಯಾ? ಹಾಗಾದ್ರೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಸಂಬಂಧಿಸಿದ ಎಲ್ಲ ಜಾಗಗಳಲ್ಲೂ ರೈಡ್ ಮಾಡಬೇಕು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರೋಧಿಸ್ತಾ ಇದ್ದಾರ? ಹಾಗಾದ್ರೆ ಅವರ ಪಕ್ಷದ ಎಲ್ಲ ನಾಯಕರ ಮನೆ ಕಚೇರಿಗಳ ಮೇಲೆ ರೈಡ್ ಮಾಡಬೇಕು.

ಕರ್ನಾಟಕದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನೂ ಹೀಗೆ ಸೇಡಿನ ಕಾರಣಕ್ಕೆ ಬಿಜೆಪಿ ಬಂಧಿಸಿತ್ತು. ಆದರೆ, ಅವರು ಜನರ ನಡುವೆ ರಾಜಕಾರಣ ಮಾಡಿ ಅವರಿಂದಲೇ ಆಯ್ಕೆಯಾಗಿ ಈಗ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ಬಂಧಿಸಿದ್ದರು. ತೆಲಂಗಾಣದಲ್ಲಿ ಸಿಎಂ ಆಪ್ತರ ಮನೆಗಳ ಮೇಲೆ ರೈಡು, ಛತ್ತೀಸ್‌ಘಡದಲ್ಲಿ ಸಿಎಂ ಆಪ್ತರ ಮನೆಗಳ ಮೇಲೆ ರೈಡ್ ಮಾಡಲಾಯ್ತು. ಆದರೆ, ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲೆಲ್ಲ ರೈಡ್ ನಡೆಯಲ್ಲ. ಯಾಕಂದ್ರೆ ಅಲ್ಲೆಲ್ಲ ಅಧಿಕಾರದಲ್ಲಿರುವವರು ಶುದ್ಧಹಸ್ತರಾದ ಬಿಜೆಪಿ ಅಲ್ಲವೇ??

ಭಾರತ ಒಕ್ಕೂಟದಲ್ಲಿ ಇಂತಹ ರಾಜ್ಯಗಳೂ ಇವೆ ಎಂಬ ವಿಷಯವೇ ಪಾಪ ಸಿಬಿಐ ಐಟಿ ಮತ್ತು ಇಡಿ ಅಧಿಕಾರಿಗಳಿಗೆ ಗೊತ್ತೇ ಇಲ್ಲ. ಬಿಜೆಪಿ ಪಕ್ಷವನ್ನು ವಿರೋಧಿಸುವ ಎಲ್ಲ ಪ್ರಮುಖ ನಾಯಕರುಗಳ ಮನೆಗಳ ಒಳಗೂ ಬಿಜೆಪಿ ಪ್ರಾಯೋಜಿತ ಸಂಸ್ಥೆಗಳು ರೈಡ್ ಮಾಡಿಯಾಯ್ತು. ಇಲ್ಲ ಅಂದ್ರೆ ಎಡಿಎಂಕೆ ಪಕ್ಷದ ನಾಯಕರ ರೀತಿಯ ಗುಲಾಮರಿಗೆ ಈ ರೈಡ್ ಭಯ ತೋರಿಸಿ ಮಂಡಿಯೂರಿಸಿಬಿಡ್ತಾರೆ. ಬಿಜೆಪಿ ಅಧಿಕಾರಕ್ಕೆ ಬರುವ ಮುಂಚಿನ 10 ವರ್ಷದಲ್ಲಿ ಜಾರಿ ನಿರ್ದೇಶನಾಲಯ ಒಟ್ಟಾರೆ ಮಾಡಿದ ರೈಡುಗಳ ಸಂಖ್ಯೆ ಕೇವಲ 112 ಮಾತ್ರ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದೇ ಸಂಸ್ಥೆ ವಿರೋಧ ಪಕ್ಷಗಳ ನಾಯಕರ ವಿರುದ್ಧ ಕನಿಷ್ಟ 3000 ರೈಡ್ ಮಾಡಿದ್ದಾರೆ.

ಆದರೆ, ಈ ರೈಡುಗಳ ಪೈಕಿ ವಿರೋಧ ಪಕ್ಷಗಳ ನಾಯಕರುಗಳ ವಿರುದ್ಧ ಆರೋಪ ಸಾಬೀತಾಗಿರುವುದು ಕೇವಲ ಶೇ. 0.05 ಮಾತ್ರ. ಮತ್ತಂತೆ ಎಲ್ಲ ರೈಡುಗಳನ್ನು ಕೇವಲ ಹೆದರಿಸಲು ಬ್ಲ್ಯಾಕ್‌ಮೇಲ್ ಮಾಡಲೆಂದೆ ನಡೆಸಲಾಗಿದೆ. ಹೀಗೆ ರೈಡ್ ಬೆದರಿಕೆಗಳಿಗೆ ಒಳಗಾಗಿ ಬಿಜೆಪಿಗೆ ಸೇರ್ಪಡೆಯಾದ ನಾಯಕರು ಪುರುಷೋತ್ತಮರಾಗಿ ಬಿಡುತ್ತಾರೆ. ಅಂತಹ ಪುರುಷೋತ್ತಮರುಗಳ ಮೇಲಿನ ಪ್ರಕರಣಗಳೆಲ್ಲ ಕೈಬಿಡಲಾಗಿದೆ ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅಷ್ಟೇ ಏಕೆ ತಮಿಳುನಾಡಿನ ಎಡಿಎಂಕೆ ಪಕ್ಷವೇ ಅದಕ್ಕೊಂದು ಉತ್ತಮ ಉದಾಹರಣೆ. ಇಂತಹ ರೈಡುಗಳ ನಿಜವಾದ ಉದ್ದೇಶ ಕೂಡ ಇದೆ ಆಗಿದೆ.

ತಮಿಳುನಾಡಿನಲ್ಲಿ ಗುಲಾಮಿ ನಾಯಕ ಯಡಪ್ಪಾಡಿ ಪಳನಿಸ್ವಾಮಿ ನೇತೃತ್ವದಲ್ಲಿ ಎಡಿಎಂಕೆ ಎಂಬ ಒಂದು ಪಕ್ಷ ಇದೆ. ಈ ಇಡೀ ಪಕ್ಷವನ್ನೇ ತನ್ನ ಗುಲಾಮರನ್ನಾಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇದೇ ಬಿಜೆಪಿ ಸರ್ಕಾರ 2016-17 ಮತ್ತು 2018ರಲ್ಲಿ ಅನೇಕ ರೈಡುಗಳನ್ನು ನಡೆಸಿತ್ತು. ರೈಡು ನಡೆಸಿದ್ದು ಓಕೆ. ಈ ಪೈಕಿ ಯಾವುದಾದರು ಪ್ರಕರಣವನ್ನು ನ್ಯಾಯಾಲಯದ ಬಾಗಿಲಿಗೆ ಒಯ್ದರಾ? ಚಾರ್ಚ್‌‌ಶೀಟ್ ದಾಖಲು ಮಾಡಿದ್ರಾ? ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದ್ರಾ? ಅಂತ ನೋಡಿದ್ರೆ ಅದ್ಯಾವುದನ್ನೂ ಮಾಡಲಿಲ್ಲ.

ತಮಿಳುನಾಡಿನ ಲೋಕಾಯುಕ್ತ ಇಲಾಖೆಯಲ್ಲಿ ಎಡಿಎಂಕೆ ಪಕ್ಷದ ಅನೇಕ ಮಾಜಿ ಸಚಿವರು ಶಾಸಕರ ಮೇಲೆ ದೂರುಗಳಿವೆ. ಈ ಪೈಕಿ ಅನೇಕ ಸಚಿವರ ಮನೆಗಳ ಮೇಲೆ ನಾವು ರೈಡು ಮಾಡಿ ಪ್ರಕರಣಗಳನ್ನು ದಾಖಲಿಸುತ್ತಿದ್ದೇವೆ. ಈ ಬಗ್ಗೆ ವಿಚಾರಣೆ ನಡೆಸಲು ಈ ಜಾರಿ ನಿರ್ದೇಶನಾಲಯ ಸಿಬಿಐ ಏಕೆ ಬರುತ್ತಿಲ್ಲ? ಈ ಬಗ್ಗೆ ಎಲ್ಲ ದಾಖಲೆಗಳನ್ನೂ ನೀಡಲು ನಾವು ಸಿದ್ದರಿದ್ದೇವೆ. ಹೀಗಾಗಿ ಎಡಿಎಂಕೆ ನಾಯಕರ ಮನೆಗಳ ಮೇಲೂ ರೈಡು ನಡೆಸಲು ಇವರು ಸಿದ್ದರಿದ್ದಾರ?

ಎಡಿಎಂಕೆ ಪಕ್ಷದ ಈ ಎಲ್ಲ ಭ್ರಷ್ಟ ಹೆಗ್ಗಣಗಳನ್ನೇ ಕೇಂದ್ರ ಸಚಿವ ಅಮಿತ್ ಶಾ ಕಳೆದ ತಿಂಗಳು ದೆಹಲಿಯಲ್ಲಿ ಭೇಟಿಯಾಗಿದ್ದು. ಇಂತಹ ಅಮಿತ್ ಶಾ ಭ್ರಷ್ಟಾಚಾರದ ವಿರುದ್ಧ ತಮಿಳುನಾಡಿಗೆ ಬಂದು ಮಾತನಾಡಿ ಹೋಗಿದ್ದಾರೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಮರಣದ ನಂತರ ಇಡೀ ಎಡಿಎಂಕೆ ಪಕ್ಷವನ್ನು ತನ್ನ ಗುಲಾಮರನ್ನಾಗಿಸಿಕೊಳ್ಳುವ ಸಲುವಾಗಿ ಬಿಜೆಪಿ ಸಿಬಿಐ, ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡಿತ್ತು. ಪರಿಣಾಮ ಇದೀಗ ಅವರೂ ಹೆದರಿದ್ದು, ಬಿಜೆಪಿಯ ಕಾಲಿನ ಅಡಿಗೆ ಬಿದ್ದಿದ್ದಾರೆ. ಇಂತಹ ಎಡಪ್ಪಾಡಿ ಪಳನಿಸ್ವಾಮಿ ಸಚಿವ ಸೆಂಥಿಲ್ ಬಾಲಾಜಿ ಬಗ್ಗೆ ಆರೋಪಿಸುತ್ತಾರೆ.

ಆದ್ರೆ, 2021ರ ತನಕ ಅವರೇ ಅಧಿಕಾರದಲ್ಲಿದ್ದರು. ಆಗೆಲ್ಲ ಏಕೆ ಇವರ ಮೇಲೆ ರೈಡು ಮಾಡಲಿಲ್ಲ. ಈಗ ಬಾಯಿಗೆ ಬಂದಂತೆ ಮಾತನಾಡುತ್ತಿರುವವರನ್ನು ಆಗ ರೈಡು ಮಾಡದಂತೆ ತಡೆದದ್ದಾವುದೂ ಏನು? 4000 ಕೋಟಿ ರೂ ಮೌಲ್ಯದ ಟೆಂಡರ್ ಅನ್ನು ತಮ್ಮ ಕುಟುಂಬಸ್ಥರಿಗೆ ನೀಡಲು ಮುಂದಾಗಿ ಕೊನೆಗೆ ನ್ಯಾಯಾಲಯವೇ ಮಧ್ಯಪ್ರವೇಶಿಸಿ ತನಿಖೆಯನ್ನು ಸಿಬಿಐಗೆ ವಹಿಸಿದ್ದು ಇದೇ ಎಡಪ್ಪಾಡಿ ಪಳನಿಸ್ವಾಮಿ ವಿರುದ್ದವೇ ಅಲ್ವ? ಕೂಡಲೇ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ‌ಗೆ ಓಡಿದ ಅಯೋಗ್ಯ ಶಿಖಾಮಣಿ ಈ ಪಳನಿಸ್ವಾಮಿ. ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ಅರ್ಹತೆಯೂ ಇಲ್ಲ.

ಪಳನಿಸ್ವಾಮಿ ರೀತಿಯ ಎಡಿಎಂಕೆ ಗುಲಾಮರ ರೀತಿಯಲ್ಲೇ ಉಳಿದ ಪಕ್ಷಗಳನ್ನೂ ಬಿಜೆಪಿ ಎಣಿಸುತ್ತಿದೆ. ಆದರೆ, ಡಿಎಂಕೆ ಎದುರು ಬಿಜೆಪಿಯ ಇಂತಹ ಯಾವುದೇ ಆಟ ನಡೆಯುವುದಿಲ್ಲ. ಇವರ ಗೊಡ್ಡು ಬೆದರಿಕೆಗಳಿಗೆಲ್ಲ ಡಿಎಂಕೆ ಹೆದರುವ ಪ್ರಶ್ನೆಯೇ ಇಲ್ಲ. ಗೋಡೆಗೆ ಎಸೆಯಲ್ಪಟ್ಟ ಚೆಂಡು ಮತ್ತೆ ಮುಖಕ್ಕೆ ಬಡಿಯುವ ರೀತಿಯಲ್ಲೇ ಒಬ್ಬೊಬ್ಬ ಡಿಎಂಕೆ ಕಾರ್ಯಕರ್ತನನ್ನು ಬೆಳೆಸಲಾಗಿದೆ.

ನಿನ್ನೆಯಿಂದ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಾಡಿಸುತ್ತಿದ್ದೇನೆ. ಡಿಎಂಕೆ ಪಕ್ಷದ ಹಲವು ಸಹೋದರರು ನಮ್ಮ ನಾಯಕರಾದ ದಿವಂಗತ ಮಾಜಿ ಸಿಎಂ ಕರುಣಾನಿಧಿ ಅವರ ಹಳೆಯ ವಿಡಿಯೋವೊಂದನ್ನು ಶೇರ್ ಮಾಡುತ್ತಿದ್ದಾರೆ. “ನನ್ನನ್ನು ಯಾರೂ ಹೊಡೆಯಲಾಗಲ್ಲ. ನೆನಪಿಟ್ಟುಕೋ ನಾನು ತಿರುಗಿ ಹೊಡೆದರೇ ನಿಮ್ಮಿಂದ ಅದನ್ನು ತಡೆದುಕೊಳ್ಳುವುದು ಸಾಧ್ಯವಾಗಲ್ಲ” ಎಂದು ಕಲೈಜ್ಞರ್ ಮಾತನಾಡಿದ್ದ ವಿಡಿಯೋ ಒಂದು ಈಗ ವೈರಲ್ ಆಗುತ್ತಿದೆ.

ಅಂತಹ ಓರ್ವ ನಾಯಕನಿಂದ ಬೆಳೆಸಲ್ಪಟ್ಟವರು ನಾವು. ಇಂತಹ ಎಷ್ಟೋ ಗೊಡ್ಡು ಬೆದರಿಕೆಗಳನ್ನು ಎದುರುಗೊಂಡವರು ನಾವು. ನಮಗೆಂದು ಪ್ರತ್ಯೇಕ ರಾಜಕೀಯ ಸಿದ್ದಾಂತ ನೀತಿ ನಿಯಮಗಳಿವೆ. ಮತೀಯವಾದ, ಜಾತೀವಾದ, ಸನಾತನವಾದ, ಹುಟ್ಟಿನಿಂದ ಶ್ರೇಷ್ಟ ಕನಿಷ್ಟ, ಮೇಲು ಕೀಳು ಎಂಬಂತಹ ಮಾನವ ಸಮ ಸಮಾಜಕ್ಕೆ ವಿರೋಧವಾದ ಮೂಢನಂಬಿಕೆಗಳಿಗೆ ವಿರುದ್ಧವಾದವರು ನಾವು.

ಇಂತಹ ಸಮಾಜ ವಿರೋಧಿ ಶಕ್ತಿಗಳನ್ನು ರಾಜಕೀಯ ಕಣದಲ್ಲಿ ಎದುರುಗೊಳ್ಳುವುದೇ ನಮ್ಮ ವಾಡಿಕೆ. ವಾದ-ವಿವಾದಗಳಿಗೆ ನಾವು ತಯಾರಾಗಿದ್ದೇವೆ. ಆದರೆ, ಅದನ್ನು ಬಿಟ್ಟು ಹೆದರಿಸಿ ಬೆದರಿಸಿ ನಮ್ಮ ಗೆಲ್ಲಲು ಮುಂದಾದರೆ ಯಾರ ಎದುರು ತಲೆಬಾಗಿಸುವ ಪ್ರಶ್ನೆಯೇ ಇಲ್ಲ. ಬದಲಾಗಿ ತಲೆ ಎತ್ತಿ ನಿಲ್ಲುತ್ತೇವೆ. ಮುಖಾಮುಖಿ ಎದುರುಗೊಳ್ಳುತ್ತೇವೆ.

ನಾವು ಕೇವಲ ಅಧಿಕಾರಕ್ಕಾಗಿ ಮಾತ್ರ ಪಕ್ಷವನ್ನು ನಡೆಸುವವರಲ್ಲ, ಸಿದ್ದಾಂತಕ್ಕಾಗಿ ನಡೆಸುವವರು. ನಾವು ನಂಬಿದ ಸಿದ್ದಾಂತಗಳನ್ನು ಉಳಿಸಿಕೊಳ್ಳುವ ಸಲುವಾಗಿಯೇ ನಾವು ಕೊನೆಯವರೆಗೆ ಹೋರಾಡುತ್ತೇವೆ. ದ್ರಾವಿಡ ಮುನ್ನೇಟ್ರ ಕಳಗಂ ಇತಿಹಾಸವೇ ಇದಕ್ಕೆ ಸಾಕ್ಷಿ. ಅದಿಪತ್ಯ ಮನಸ್ಥಿತಿಯೊಂದಿಗೆ ನಮ್ಮನ್ನು ಎದುರಿಸಿದರೆ, ನಾವು ಸೈದ್ಧಾಂತಿಕ ಪಡೆಯ ಜೊತೆಗೆ ಅದನ್ನು ತಡೆಯುತ್ತೇವೆ. ಹಿಂದಿ ವಿರೋಧಿ ಹೋರಾಟ, ಎಮರ್ಜೆನ್ಸಿ ಕಾಲ ಎಂದು ನಾವು ನಡೆಸದ ಹೋರಾಟಗಳಿಲ್ಲ. ಕಳೆದೊಂದು ಶತಮಾನಗಳಿಂದ ಡಿಎಂಕೆ ನಡೆಸಿದ ಹೋರಾಟಗಳ ತೀವ್ರತೆ ಏನು ಎಂದು ಒಮ್ಮೆಯಾದರೂ ಇತಿಹಾಸದ ಪುಟಗಳನ್ನು ತಿರುವಿ ನೋಡಿ. ಇಲ್ಲಾಂದ್ರೆ ದೆಹಲಿಯಲ್ಲಿರುವ ನಿಮ್ಮ ಹಿರಿಯ ನಾಯಕರ ಬಳಿ ಕೇಳಿ ತಿಳಿದುಕೊಳ್ಳಿ.

ನಮ್ಮನ್ನು ಸುಮ್ಮನೆ ಎದುರುಹಾಕಿಕೊಳ್ಳಬೇಡಿ. ಡಿಎಂಕೆ ಪಕ್ಷವನ್ನೋ, ನಮ್ಮ ಪಕ್ಷದ ಕಾರ್ಯಕರ್ತರನ್ನೋ ಒಮ್ಮೆ ಎದುರು ಹಾಕಿಕೊಂಡರೆ ಅದನ್ನು ದಕ್ಕಿಸಿಕೊಳ್ಳುವುದು ನಿಮ್ಮಿಂದ ಸಾಧ್ಯವಿಲ್ಲ. ನಮಗೂ ಎಲ್ಲ ರೀತಿಯ ರಾಜಕಾರಣ ಗೊತ್ತು. ಇದು ಬೆದರಿಕೆ ಅಲ್ಲ, ಎಚ್ಚರಿಕೆ! ಹೀಗಾಗಿ ಒಕ್ಕೂಟ ಸರ್ಕಾರವನ್ನು ಮುನ್ನಡೆಸುವ ಜವಾಬ್ದಾರಿಯಲ್ಲಿರುವ ಬಿಜೆಪಿ ಸ್ವಲ್ಪವಾದರೂ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ನಿರ್ವಹಿಸಲಿ. ಇಂತಹ ಗೊಡ್ಡು ಬೆದರಿಕೆಗಳನ್ನು ನಿಲ್ಲಿಸಲಿ ಎಂದು ನಾನು ಕೇಳಿಕೊಳ್ಳುತ್ತೇನೆ.

ನನ್ನ ಜೀವಕ್ಕೂ ಮಿಗಿಲಾದ ಕಲೈಜ್ಞರ್ ಕರುಣಾನಿಧಿ ಅವರ ಪ್ರೀತಿಯ ಸಹೋದರರೆ ನಿಮಗಾಗಿ ನಾನಿದ್ದೇನೆ. ನನಗಾಗಿ ನೀವಿದ್ದೀರಿ. ಧನ್ಯವಾದಗಳು.

ಇದನ್ನೂ ಓದಿ: ಇ.ಡಿ. ವಶಕ್ಕೆ ತಮಿಳುನಾಡು ಸಚಿವ ಬಾಲಾಜಿ; ದುರುದ್ದೇಶಪೂರಿತ ಎಂದ ಡಿಎಂಕೆ, ಕಾಂಗ್ರೆಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...