ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ 6,500 ಕೋಟಿ ಲೋನ್ ಹಗರಣ ಸಂಬಂಧ ಮುಂಬೈನ ಆರ್ಥಿಕ ಅಪರಾಧ ವಿಭಾಗ ಪೊಲೀಸರು, ಎಚ್ಡಿಐಎಲ್ ನಿರ್ದೇಶಕ ಸರಾಂಗ್ ಮತ್ತು ರಾಕೇಶ್ ವಾಧವನ್ ರನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.
ಪಿಎಂಸಿ ಬ್ಯಾಂಕ್ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ, ಭಾರತೀಯ ರಿಸರ್ವ್ ಬ್ಯಾಂಕ್ ಆಡಳಿತಗಾರರನ್ನು ನೇಮಕ ಮಾಡಿತ್ತು. ಆಡಳಿತಗಾರ ದಾಖಲಿಸಿದ ದೂರಿನ ಆಧಾರದ ಮೇರೆಗೆ ಮುಂಬೈನ ಆರ್ಥಿಕ ಅಪರಾಧ ವಿಭಾಗ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆರೋಪಿಗಳ ವಿರುದ್ಧ ಕಾರ್ಯಾಚರಣೆಗಿಳಿದಿದ್ದ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ ಉನ್ನತಾಧಿಕಾರಿಗಳ ವಿರುದ್ಧ 4,355 ಕೋಟಿ ರೂ. ವಂಚನೆ ಆರೋಪವಿದೆ.
ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ಗೆ ಸೇರಿದ ಆರು ಅಧಿಕಾರಿಗಳು 21,049 ನಕಲಿ ಖಾತೆಗಳನ್ನು ಹೊಂದಿದ್ದರು. ಆರ್ ಬಿಐಗೆ 10 ವರ್ಷಗಳ ಕಾಲ ತಪ್ಪು ವರದಿ ಸಲ್ಲಿಕೆ ಮಾಡಿದ್ದರು. ಬ್ಯಾಂಕ್ ಸಾಲ ಮುಚ್ಚಿಡಲು ನಕಲಿ ಖಾತೆಗಳನ್ನು ತೆರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2008 ರಿಂದ 2019 ರ ಆಗಸ್ಟ್ ವರೆಗೆ ಪಿಎಂಸಿ ಅಧಿಕಾರಿಗಳು ಆರ್ ಬಿಐಗೆ ತಪ್ಪು ಮಾಹಿತಿ ನೀಡುತ್ತಾ ಬಂದಿದ್ದಾರೆ. ಬ್ಯಾಂಕ್ ಅಧ್ಯಕ್ಷ ವಾರಮ್ ಸಿಂಗ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಹಾಗೂ ಇತರೆ ಬ್ಯಾಂಕ್ ಅಧಿಕಾರಿಗಳನ್ನೂ ದೂರಿನಲ್ಲಿ ಹೆಸರಿಸಲಾಗಿದೆ. ಅಪರಾಧ, ನಂಬಿಕೆ ಉಲ್ಲಂಘನೆ, ನಕಲಿ ದಾಖಲೆ ಮತ್ತು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಟ್ಯಂತರ ರೂಪಾಯಿ ಸಾಲ ಮರು ಪಾವತಿ ಮಾಡದೇ ಸಾಲ ವಸೂಲಿಯಾಗಿಲ್ಲ ಎಂದು ಆರ್ಬಿಐಗೆ ತಪ್ಪು ಮಾಹಿತಿ ನೀಡಿದ್ದಾರೆ. ಪಿಎಂಸಿ ಬ್ಯಾಂಕ್ನಲ್ಲಿ ಸಾವಿರಾರು ಮಂದಿ ಕೋಟ್ಯಂತರ ರೂ. ಠೇವಣಿ ಇಟ್ಟಿದ್ದು ಅಧಿಕಾರಿಗಳೇ ವಂಚನೆ ಮಾಡಿದ್ದಾರೆ. ಮುಂಬೈ ಮೂಲದ ಎಚ್ಡಿಐಎಲ್ ಕಂಪನಿ ಸಹ ಪಿಎಂಸಿ ಬ್ಯಾಂಕ್ನಿಂದ 6,500 ಕೊಟಿ ರೂ. ಸಾಲ ಪಡೆದಿದೆ. ಎಚ್ ಡಿಐಎಲ್ ಸಾಲವನ್ನು ಮರು ಪಾವತಿ ಮಾಡಿಲ್ಲ. ಹೀಗಾಗಿ ಅವ್ಯವಹಾರ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.