Homeಮುಖಪುಟನನ್ನ ನೆನಪಿನ ಚಿತ್ರಶಾಲೆಯಲ್ಲಿ ಗಾಂಧಿ - ಸುಭಾಷ್ ರಾಜಮನೆ

ನನ್ನ ನೆನಪಿನ ಚಿತ್ರಶಾಲೆಯಲ್ಲಿ ಗಾಂಧಿ – ಸುಭಾಷ್ ರಾಜಮನೆ

- Advertisement -
- Advertisement -

ಅನಕ್ಷರಸ್ಥರಾದ ನನ್ನ ತಂದೆ ತಾಯಿಗಳು ಅದು ಹೇಗೋ ಅಕ್ಷರ ಕಲಿಯಲು ನನ್ನನ್ನು ಶಾಲೆಗೆ ಸೇರಿಸಿದರು. ದನಗಳನ್ನು ಕಾಯುವುದಕ್ಕಿಂತ ಶಾಲೆಗೆ ಹೋಗುವುದೇ ಇನ್ನಿಲ್ಲದ ಖುಷಿ ಕೊಟ್ಟಿತು. ಶಾಲೆಯಲ್ಲಿ ಪಾಠಕ್ಕಿಂತ ಆಟಗಳೇ ಹೆಚ್ಚಾಗಿರುತ್ತಿದ್ದವು. ನಮ್ಮನ್ನು ಗಂಟೆಗಟ್ಟಲೆ ಆಟಕ್ಕೆ ಬಿಟ್ಟು ಮಾಸ್ತರರು ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಸೇರಿಕೊಂಡು ಹರಟೆಯಲ್ಲಿ ತನ್ಮಯರಾಗಿರುತ್ತಿದ್ದರು. ಸಾಮಾನ್ಯವಾಗಿ ಮುಖ್ಯೋಪಾಧ್ಯಾಯರ ಖೋಲಿಯ ಮುಂದೆ ನಮ್ಮನ್ನು ಅಡ್ಡಾಡಲು ಬಿಡುತ್ತಿರಲಿಲ್ಲ. ವಿದ್ಯಾರ್ಥಿಗಳಾದ ನಮಗೆ ಅಲ್ಲಿ ಒಳಗೆ ಪ್ರವೇಶವೂ ಇರುತ್ತಿರಲಿಲ್ಲ. ಅದರ ಮುಂದುಗಡೆಯಿಂದ ಹೋಗುವಾಗ ಮತ್ತು ಬರುವಾಗಲೆಲ್ಲ ಗೋಡೆಯ ಮೇಲೆ ತೂಗು ಹಾಕಲಾಗಿದ್ದ ಫೋಟೊಗಳು ಕಣ್ಣಿಗೆ ಬೀಳುತ್ತಿದ್ದವು. ನಮ್ಮ ಮನೆಯ ಗೋಡೆಯ ಮೇಲೆ ದೇವರ ಫೋಟೊಗಳಿದ್ದವು.

ನನಗೆ ಶಾಲೆಯಲ್ಲಿ ಕಾಣುತ್ತಿದ್ದ ಫೋಟೊಗಳು ಯಾರವು ಎಂಬುದನ್ನು ತಿಳಿಯುವ ಯಾವ ಕುತೂಹಲವೂ ಆ ವಯಸ್ಸಿನಲ್ಲಿ ಇದ್ದಿರಲಿಲ್ಲ. ಆ ಫೋಟೊಗಳಲ್ಲಿರುವ ವ್ಯಕ್ತಿಗಳಿಗೂ ಮತ್ತು ನಾವು ಓದುತ್ತಿರುವ ಶಾಲೆಗೂ ಇರುವ ಸಂಬಂಧವಾದರೂ ಏನೆಂಬುದನ್ನು ತಿಳಿದುಕೊಳ್ಳುವಷ್ಟು ಆಸಕ್ತಿಯೂ ಬೆಳೆದಿರಲಿಲ್ಲ. ಆಗಸ್ಟ್ ಹದಿನೈದರಂದು ಗೋಡೆಯ ಮೇಲಿದ್ದ ಫೋಟೊಗಳು ಕೆಳಗೆ ಇಳಿಯುತ್ತಿದ್ದವು. ನಾವು ಅವುಗಳ ಮೇಲಿದ್ದ ಧೂಳನ್ನು ಒರೆಸಬೇಕಾಗಿತ್ತು. ಊರಿನ ಗಣ್ಯರನ್ನು ಕರೆದು ಆ ಫೋಟೊಗಳಿಗೆ ಹೂಮಾಲೆಗಳನ್ನು ಹಾಕಿಸಿ ಪೂಜೆಯನ್ನು ಮಾಡಿಸಲಾಗುತ್ತಿತ್ತು. ನಮಗೆ ಕಲಿಸುತ್ತಿದ್ದ ಮಾಸ್ತರರು ಆ ದಿನ ಗಾಂಧಿ, ನೆಹರು, ಸರ್ದಾರ ಪಟೇಲ್, ಸುಭಾಷ್‍ಚಂದ್ರ ಬೋಸ್ ಮೊದಲಾದವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದನ್ನು ಆವೇಶದಿಂದ ಕೂಗಿ ಹೇಳುತ್ತಿದ್ದರು. ನಾವು ಬೆಳಗಿನ ಹೊಂಬಿಸಿಲಿನಲ್ಲಿ ಆ ಭಾಷಣಗಳಿಗೆ ಆಗಾಗ ಚಪ್ಪಾಳೆ ಹೊಡೆಯುತ್ತ ಕೂತಿರಬೇಕಾಗಿತ್ತು. ಪ್ರಾಯಶಃ ಗಾಂಧಿಜಿಯವರನ್ನು ನಾನು ಮೊದಲು ನೋಡಿದ್ದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹೂವುಗಳಿಂದ ಅಲಂಕೃತಗೊಂಡಿದ್ದ ಫೋಟೊದಲ್ಲಿಯೇ ಇದ್ದಿರಬಹುದು.

ಪ್ರಾಯಶಃ ನಾನು ಮೂರನೆಯ ಅಥವಾ ನಾಲ್ಕನೆಯ ತರಗತಿಯಲ್ಲಿದ್ದಾಗ ಕನ್ನಡ ಪಠ್ಯಪುಸ್ತಕದಲ್ಲಿ ಗಾಂಧೀಜಿಯವರ ಬಾಲ್ಯದ ಜೀವನವನ್ನು ಆಧರಿಸಿದ ಒಂದು ಪಾಠವಿತ್ತು. ಉತ್ಸಾಹಶೀಲ ಶಿಕ್ಷಕರಾದ ಚಂದ್ರಶೇಖರ ಮೇಲಿನಮನಿಯವರು ಮೋಹನದಾಸ್ ಕರಮಚಂದ್ ಗಾಂಧೀಜಿ ಬಗ್ಗೆ ಅನೇಕ ಸಂಗತಿಗಳನ್ನು ವಿವರಿಸಿದರು. ಮೋಹನದಾಸ್ ಬಾಲ್ಯದಲ್ಲಿ ತನ್ನ ಮನೆಯಲ್ಲಿಯೇ ಚಿನ್ನವನ್ನು ಕದ್ದದ್ದು, ತನ್ನ ಗೆಳೆಯರೊಂದಿಗೆ ಸೇರಿಕೊಂಡು ಮಾಂಸ ತಿಂದದ್ದು, ಯಾರಿಗೂ ತಿಳಿಯದಂತೆ ಬೀಡಿ ಸೇದಿದ್ದು-ಇಂತಹ ಅನೇಕ ವಿಷಯಗಳನ್ನು ಹೇಳಿದರು. ನಂತರದಲ್ಲಿ ಮೋಹನದಾಸ್ ಸತ್ಯಹರಿಶ್ಚಂದ್ರ ನಾಟಕ ನೋಡಿ ಸತ್ಯವಂತನಾಗಲು ಪ್ರಯತ್ನಿಸಿದ್ದನ್ನು ನಮಗೆಲ್ಲ ನೀತಿಪಾಠವಾಗಿತ್ತು. ಆದರೆ ಮುಂದೆ ಗಾಂಧೀಜಿಯವರು ಮಾಂಸಾಹಾರವನ್ನು ಏಕೆ ತಿನ್ನಲಿಲ್ಲವೆಂಬುದು ಆಗ ನನಗೆ ಗೊತ್ತಾಗಲಿಲ್ಲ. ನಮ್ಮ ಮನೆಯಲ್ಲಿ ವಾರಕ್ಕೊಮ್ಮೆಯಾದರು ಮಾಂಸದ ಅಡುಗೆ ಇರುತ್ತಿತ್ತು. ಆದರೆ ನನಗೆ ಅದನ್ನು ಎಂದೂ ಬಿಡುವ ಮನಸ್ಸಾಗಲಿಲ್ಲ.

ನಾನು ಏಳನೆಯ ತರಗತಿಯಲ್ಲಿದ್ದಾಗ ಆಗಾಗ ಶಾಲೆಯನ್ನು ತಪ್ಪಿಸಬೇಕಾಗುತ್ತಿತ್ತು. ಜೂನ್-ಜುಲೈ ತಿಂಗಳು ಬಿತ್ತನೆಯ ಕಾಲವಾಗಿರುತ್ತಿತ್ತು. ಆಗಿನ ಕಾಲದಲ್ಲಿ ಅಷ್ಟೇನೂ ನೀರಾವರಿ ಇಲ್ಲದಿರುವ ಒಣ ಜಮೀನುಗಳಲ್ಲಿ ಜೋಳ ಬೆಳೆಯುವುದು ಮಾಮೂಲಾಗಿತ್ತು. ಜೋಳ ಬಿತ್ತನೆ ಮಾಡಿದ ಒಂದು ತಿಂಗಳಲ್ಲಿಯೇ ಎತ್ತುಗಳನ್ನು ಬಳಸಿ ಎಡೆಯನ್ನು ಹೊಡೆದು ಕಳೆನಾಶ ಮಾಡಬೇಕಾಗುತ್ತಿತ್ತು. ಜೋಳದ ಎರಡು ಸಾಲುಗಳ ನಡುವಿನ ಕಳೆಯನ್ನು ಕಿತ್ತಾಕುವ ಕೂರಿಗೆಯನ್ನು ಹಿಡಿದುಕೊಂಡು ಎತ್ತುಗಳೊಂದಿಗೆ ದಿನವೆಲ್ಲ ನಡೆದುಕೊಂಡು ಸಾಗಬೇಕು. ಈ ಕೆಲಸಕ್ಕಾಗಿ ಇಪ್ಪತ್ತು ರೂಪಾಯಿ ಕೂಲಿ ಸಿಗುತ್ತಿತ್ತು.

ಒಂದು ದಿನ ಶಾಲೆಗೆ ಹೋಗದೆ ನಮ್ಮ ಊರಿನಿಂದ ನಾಲ್ಕೈದು ಕಿ.ಮೀ. ದೂರದ ಜಮೀನಿಗೆ ಎಡೆ ಹೊಡೆಯಲು ಹೋಗಿದ್ದೆ. ಮಧ್ಯಾಹ್ನದ ಹೊತ್ತಿಗೆ ನನ್ನ ಅಪ್ಪ ಸೈಕಲ್ ಹೊಡೆದುಕೊಂಡು ನನ್ನನ್ನು ಹುಡುಕಿಕೊಂಡು ಬಂದ. ಶಾಲೆಗೆ ಸಾಹೇಬರು ಬಂದಿದ್ದಾರೆಂದು, ಮೇಲಿನಮನಿ ಮಾಸ್ತರರು ನನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ ಎಂದ. ನಾನು ಎಡೆ ಹೊಡೆಯುವ ಕೆಲಸವನ್ನು ಬಿಟ್ಟು ಸೈಕಲ್ ಹೊಡೆದುಕೊಂಡು ಶಾಲೆಗೆ ಹೋದೆ. ನನ್ನಪ್ಪ ನನ್ನ ಪಾಲಿನ ಕೆಲಸವನ್ನು ಮುಂದುವರೆಸಿದ. ಶಾಲೆಗೆ ಗೈರುಹಾಜರಾಗಿದ್ದಕ್ಕೆ ಮಾಸ್ತರರಿಂದ ಹಿಗ್ಗಾಮುಗ್ಗಾ ಬೈಸಿಕೊಂಡೆ. ಸಾಹೇಬರು ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿದ್ದರು. ಆಗಾಗ ಸಾಹೇಬರು ಬಂದಾಗಲೆಲ್ಲ ಮಾಸ್ತರರು ಆತಂಕದಿಂದ ಓಡಾಡುತ್ತಿದ್ದರು. ಚಹಾ ತರಲು ಹೋದವನನ್ನು ಎಷ್ಟು ತಡವೆಂದು ಕಣ್ಣು ಕೆಂಪಾಗಿಸಿಕೊಂಡು ನೋಡುತ್ತಿದ್ದರು. ಮಾಸ್ತರರ ಉದ್ವೇಗ ಕಂಡು ನಾವು ಕೂಡ ಭಯಭೀತರಂತೆ ನಟಿಸುತ್ತಿದ್ದೆವು. ನಾನು ಹೋಗಿ ನನ್ನ ತರಗತಿಯಲ್ಲಿ ಎಲ್ಲರೊಂದಿಗೆ ಕುಳಿತುಕೊಂಡೆ. ತರಗತಿಗೆ ಬಂದ ಸಾಹೇಬರು ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದರು. ಸಾಹೇಬರು ಕೇಳುವ ಪ್ರಶ್ನೆಗಳಿಗೆ ಯಾರಿಗೆ ಉತ್ತರ ಗೊತ್ತಿರುತ್ತದೆಯೋ ಅವರು ಥಟ್ಟನೇ ಎದ್ದು ನಿಂತು ಉತ್ತರ ಹೇಳಬೇಕಾಗಿತ್ತು. ನಾನು ಅನೇಕ ಪ್ರಶ್ನೆಗಳಿಗೆ ಎದ್ದು ನಿಂತು ಕೈಕಟ್ಟಿಕೊಂಡು ಉತ್ತರಿಸಿದೆ. ಗಾಂಧೀಜಿಯವರ ಬಗ್ಗೆಯೇ ಹೆಚ್ಚು ಪ್ರಶ್ನೆಗಳಿದ್ದವು. ಗಾಂಧೀಜಿ ವಿಶೇಷ ವ್ಯಕ್ತಿಯೇ ಇರಬೇಕು ಅನ್ನಿಸಿತು.

ನನ್ನ ಚಿಕ್ಕಪ್ಪನಾದ ರೋಹಿದಾಸ್ ಮನೆಯಲ್ಲಿ ನಾಟಕಗಳನ್ನು ಬರೆಯುತ್ತಿದ್ದ. ಆತ ಆಗಸ್ಟ್ ಹದಿನೈದರ ಸಲುವಾಗಿ ಸುಮಾರು ಹತ್ತಾರು ಪುಟಗಳ ಭಾಷಣವನ್ನು ಬರೆದು ಕೊಟ್ಟ. ಅದರಲ್ಲಿ ಗಾಂಧೀಜಿಯ ಬಗ್ಗೆ ಹೆಚ್ಚು ವಿವರಣೆಗಳಿದ್ದವು. ಅದನ್ನೆಲ್ಲ ಮತ್ತೆ ಮತ್ತೆ ಓದಿ ಕಂಠಪಾಠ ಮಾಡಿಕೊಂಡು ವೇದಿಕೆಯ ಮೇಲೆ ನಿಂತುಕೊಂಡು ಹೇಳಲು ಪರದಾಡುತ್ತಿದ್ದೆ. ಸ್ವಾತಂತ್ರ್ಯ ದಿನಾಚರಣೆ ಮುಗಿದಮೇಲೆ ಮತ್ತೆ ಗಾಂಧಿ, ನೆಹರು, ಸುಭಾಷಚಂದ್ರ ಭೋಸ್-ಇವರ ಫೋಟೊಗಳನ್ನು ಜೋಪಾನವಾಗಿ ಕೊಠಡಿಗೆ ಎತ್ತಿಕೊಂಡು ಹೋಗುವ ಕೆಲಸವೂ ಇರುತ್ತಿತ್ತು. ತಪ್ಪಿಸಿಕೊಂಡು ಮನೆಗೆ ಓಡಲು ಮಾಸ್ತರರು ಬಿಡುತ್ತಿರಲಿಲ್ಲ! ಹೀಗೆ ನಾನು ಬೆಳಗಾವಿ ಜಿಲ್ಲೆಯ ಅಥಣಿ ಸೀಮೆಯ ಗ್ರಾಮೀಣ ಪ್ರದೇಶದ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಗಾಂಧೀಜಿ ನನಗೆ ಪರಿಚಯವಾಗಿದ್ದು. ತೊಂಬತ್ತರ ದಶಕದ ಆರಂಭಿಕ ಕಾಲಘಟ್ಟದ ಶೈಕ್ಷಣಿಕ ಪಾಠಗಳಲ್ಲಿ ಹಾಗೂ ಮಾಸ್ತರರ ಭಾಷಣಗಳಿಂದ ಗಾಂಧೀಜಿ ಎಂದರೆ ಆಗಸ್ಟ್ 15 ಮತ್ತು ಅಕ್ಟೋಬರ್ 2 ರಂದು ಅವರ ಬಗ್ಗೆ ಏನಾದರು ಮಾತಾಡುವುದೆಂದು ಗೊತ್ತಾಯಿತು.ಆಗೆಲ್ಲ ನಮಗೆ ಕಲಿಸುತ್ತಿದ್ದ ಮಾಸ್ತರರೇ ಜ್ಞಾನದ ಗಣಿಗಳಾಗಿದ್ದರು. ಜಗತ್ತಿನ ಎಲ್ಲ ಜ್ಞಾನವೂ ಅವರ ಮೂಲಕವೇ ನಮ್ಮ ತಲೆಗೆ ಬರುತ್ತದೆ ಎಂದು ನಂಬಿದ್ದ ಕಾಲವೂ ಅದಾಗಿತ್ತು.

ಹೈಸ್ಕೂಲ್ ಮೆಟ್ಟಿಲು ಹತ್ತುವುದರೊಂದಿಗೆ ಒಂದಿಷ್ಟು ಪ್ರಶ್ನಿಸುವ ಮನೋಭಾವ ಬೆಳೆಯತೊಡಗಿತು. ಆಗ ಜನಪ್ರಿಯವಾಗಿದ್ದ ‘ದಿಕ್ಸೂಚಿ’, ‘ಸಂತೃಪ್ತಿ’ ಮತ್ತು ‘ಚುಟುಕು’ಗಳಂತಹ ಮಾಸಿಕಗಳ ಓದಿನೊಂದಿಗೆ ನನ್ನ ಸ್ವಂತ ಆಯ್ಕೆಯ ಓದು ಶುರುವಾಯಿತೆಂದು ಹೇಳಬಹುದು. ವಿರೇಂದ್ರ ಸಿಂಪಿ (ಸಿಂಪಿ ಲಿಂಗಣ್ಣನವರ ಮಗ) ಅವರು ‘ದಿಕ್ಸೂಚಿ’ಯಲ್ಲಿ ‘ವಿಚಾರಧಾರೆ’ ಎಂಬ ಅಂಕಣವನ್ನು ಬರೆಯುತ್ತಿದ್ದರು. ಒಮ್ಮೆ ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹಗಳ ಬಗ್ಗೆ ಬರೆದಿದ್ದರು. ಹಳ್ಳಿಗಾಡು ಪ್ರದೇಶದಲ್ಲಿ ಇಂತಹ ಅಲ್ಪ ಓದಿನ ಮೂಲಕವೇ ಜಗತ್ತನ್ನು ನೋಡುವ ಅವಕಾಶ ಸಿಗುತ್ತಿತ್ತು. ಬದುಕಿನ ದುರ್ಭರ ಜಂಜಾಟಗಳಲ್ಲಿ ಇಂತಹ ಪತ್ರಿಕೆಗಳೇ ಜ್ಞಾನದ ಬೆಳಕಿಂಡಿಗಳಾಗಿದ್ದವು. ಪ್ರಖ್ಯಾತ ಚಿತ್ರಕಲಾವಿದರಾದ ನಂದಲಾಲ್ ಬೋಸ್ ಅವರ ರೇಖೆಯಲ್ಲಿ ಅರಳಿದ ಗಾಂಧಿ ಚಿತ್ರವನ್ನು ನಾನು ಮೊದಲು ನೋಡಿದ್ದು ಕೂಡ ಇಂತಹ ಪತ್ರಿಕೆಯಲ್ಲಿಯೇ.
ನಾನು ಹೈಸ್ಕೂಲ್‍ನಲ್ಲಿ ಹತ್ತನೆಯ ತರಗತಿಯಲ್ಲಿದ್ದಾಗ ಗಂಗಾಧರ ಚಿತ್ತಾಲ ಅವರ ‘ಮಹಾತ್ಮ’ ಎಂಬ ಕವಿತೆಯೊಂದು ಪಠ್ಯವಾಗಿತ್ತು. ನಮಗೆ ಕನ್ನಡ ವಿಷಯವನ್ನು ಬೋಧಿಸುತ್ತಿದ್ದ ಕಲಕೇರಿ ಮಾಸ್ತರರು ಈ ಕವಿತೆಯನ್ನು ಓದಿ ಹೇಳಿದ ಪರಿಣಾಮದಿಂದ ನನ್ನ ನೆನಪಿನಲ್ಲಿದೆ.

ನಿನ್ನ ನೆತ್ತರು ನೆಲಕೆ ಚೆಲ್ಲಿದಂದು
ಮಣ್ಣು ನಡುಗಿತು, ಹಗಲ ಹೂ ಬಾಡಿತು
ನರನು ಕೆರಳುವ ಹುಂಬ, ಬಾಳು ಯೂಪಸ್ತಂಭ
ಉತ್ತಮರ ಬಲಿ ಇಲ್ಲಿ-ಬಾನಾಡಿತು

ಕಲಕೇರಿ ಮಾಸ್ತರರು ಗಾಂಧೀಜಿಯವರ ಹತ್ಯೆಯನ್ನು ‘ನಿನ್ನ ನೆತ್ತರು ನೆಲಕೆ ಚೆಲ್ಲಿದಂದು/ ಮಣ್ಣು ನಡುಗಿತು, ಹಗಲಹೂ ಬಾಡಿತು’ಎಂಬ ಸಾಲುಗಳನ್ನು ಓದುವಾಗ ಭೂಮಿ-ಆಕಾಶ ಒಂದಾಗುವಂತೆ ತಮ್ಮ ಕೈಯನ್ನು ಚಾಚಿ ಅಭಿನಯಿಸಿ ತೋರಿಸಿದ್ದರು. ಅವರು ಕವಿತೆಯನ್ನೊ ಗದ್ಯಪಾಠವನ್ನೊ ಧ್ವನಿಪೂರ್ಣವಾಗಿ ಓದಿ ಅರ್ಥ ಹೇಳುವುದರ ಜೊತೆಯಲ್ಲಿಯೇ ಅದನ್ನು ಆಂಗಿಕವಾಗಿಯೂ ಅಭಿನಯಿಸುತ್ತಿದ್ದರು. ಇದರಿಂದಾಗಿ ಎಷ್ಟೋ ಕವಿತೆಯ ಸಾಲುಗಳು ನನ್ನ ನೆನಪಿನಲ್ಲಿ ಇಂದಿಗೂ ಉಳಿದುಕೊಂಡಿವೆ. ಹೀಗೆ ಕವಿತೆಯೊಂದರ ಮೂಲಕ ಗಾಂಧೀಜಿಯವರ ಪ್ರಭಾವ ಎಂತಹದ್ದು ಎಂಬುದು ನನ್ನ ಅರಿವಿಗೆ ಬಂದಿತು. ನಮ್ಮ ಬೀಳ್ಕೊಡುಗೆಯ ಸಮಾರಂಭದಲ್ಲಿ ಮೇಕನಮರ್ಡಿ ಮಾಸ್ತರರು ತಮ್ಮ ಭಾಷಣದಲ್ಲಿ ಓದಲೇಬೇಕಾದ ಪುಸ್ತಕಗಳಲ್ಲಿ ಗಾಂಧೀಜಿಯವರ ‘ಮೈ ಎಕ್ಸಪರಿಮೆಂಟ್ಸ್ ವಿತ್ ಟ್ರೂಥ್’ಆತ್ಮಕತೆಯು ಅತ್ಯಂತ ಮಹತ್ವದ್ದು ಎಂದು ಹೇಳಿದರು. ಅವರು ಬೇರೆ ಮಾಸ್ತರರಿಗಿಂತ ಭಿನ್ನವಾಗಿ ಆಲೋಚನೆ ಮಾಡುವವರಾಗಿದ್ದರು. ಅವರು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ತರಗತಿಯಲ್ಲಿ ಮತ್ತು ಭಾಷಣಗಳಲ್ಲಿ ಆಗಾಗ ಕೋಟ್ ಮಾಡುತ್ತಿದ್ದರು.

ಹತ್ತನೇ ತರಗತಿ ಮುಗಿದ ನಂತರದಲ್ಲಿ ನಾನು ಪಿಯುಸಿ ಶಿಕ್ಷಣ ಪಡೆಯಲೆಂದು ಧಾರವಾಡಕ್ಕೆ ಹೋದೆ. ಅಲ್ಲಿ ‘ಸಮಾಜ ಪುಸ್ತಕಾಲಯ’ದಲ್ಲಿ ಮೊದಲು ಕೊಂಡ ಪುಸ್ತಕಗಳೆಂದರೆ ಗಾಂಧೀಜಿಯವರ ಆತ್ಮಕತೆ ಮತ್ತು ಅಂಬೇಡ್ಕರ್ ಅವರ ಜೀವನಚರಿತ್ರೆ. ಕೆಲವೇ ದಿನಗಳಲ್ಲಿ ಆತ್ಮಕತೆಯನ್ನು ಓದಿದೆ. ಅದರ ಕೆಲವು ಭಾಗಗಳು ಈಗಲೂ ನನ್ನ ನೆನಪಿನಲ್ಲಿವೆ. ಅದರಲ್ಲಿ ಗಾಂಧೀಜಿಯವರು ಜಾನ್ ರಸ್ಕಿನ್‍ನ ‘ಅನ್‍ಟು ದಿಸ್ ಲಾಸ್ಟ್’ ಎಂಬ ಕಿರುಹೊತ್ತಿಗೆಯನ್ನು ಓದಿ ಒಬ್ಬ ವೈದ್ಯ, ವಕೀಲ, ಕ್ಷೌರಿಕ, ಚಮ್ಮಾರ-ಇವರ ಎಲ್ಲ ಕೆಲಸಗಳೂ ಸಮಾನವಾದವು ಎಂದು ಪರಿಭಾವಿಸಿದರು; ತಾವು ವಕೀಲರಾಗಿದ್ದರೂ ಕೂಡ ತಮ್ಮ ಪಾದಗಳಿಗೆ ತಾವಾಗಿಯೇ ಜೋಡುಗಳನ್ನು ಹೊಲಿದುಕೊಂಡರು; ತಮ್ಮ ತಲೆಯನ್ನು ತಾನೇ ಕ್ಷೌರ ಮಾಡಿಕೊಂಡರು-ಇಂತಹ ಹಲವಾರು ಗುಣಗಳಿಂದ ಗಾಂಧೀಜಿ ನನ್ನ ಮೆಚ್ಚಿನ ವ್ಯಕ್ತಿಯಾಗಿದ್ದರು. ಅವರ ನಿಜವಾದ ಪ್ರಯೋಗಗಳು ದಕ್ಷಿಣ ಆಫ್ರಿಕಾದಲ್ಲಿಯೇ ಆರಂಭವಾದವು. ಅವಮಾನ, ಅಸಮಾನತೆ, ವರ್ಣಭೇದಗಳ ವಿರುದ್ಧ ತಮ್ಮ ಪ್ರತಿಭಟನೆಯ ಅಸ್ತ್ರಗಳನ್ನು ಸಮರ್ಥವಾಗಿ ಬಳಸಿದರು. ತಮ್ಮ ಹೋರಾಟದಲ್ಲಿ ಎಲ್ಲ ವರ್ಗದ ಜನರ ವಿಶ್ವಾಸವನ್ನು ಪಡೆದುಕೊಂಡರು. ಅದರ ಜೊತೆಯಲ್ಲಿಯೇ ತಮ್ಮನ್ನು ತಾವು ನಿರಂತರ ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳುತ್ತಲೇ ನಡೆದರು. ಆದ್ದರಿಂದ ನನಗೂ ಕೂಡ ಆ ವಯಸ್ಸಿನಲ್ಲಿ ಗಾಂಧೀಜಿ ಎಲ್ಲರಂತಲ್ಲ ಎಂಬ ಭಾವನೆ ಬೆಳೆಯಿತು.

ನನ್ನ ಸೋದರ ಮಾವನಾದ ನಾಮದೇವ ಟೋಣಪೆ ಅವರು ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ನೌಕರರಾಗಿದ್ದರು. ಅವರು ರಸ್ತೆಯಲ್ಲಿ ನಡೆದುಕೊಂಡು ಆಫೀಸಿಗೆ ಹೋಗುವಾಗ ದ್ವಿಚಕ್ರ ವಾಹನವೊಂದು ಅವರ ಕಾಲಿನ ಮೇಲೆ ಹಾಯ್ದು ಹೋಗಿತ್ತು. ಕಾಲಿಗೆ ಫ್ರ್ಯಾಕ್ಚರ್ ಆಗಿದ್ದರಿಂದ ಅವರನ್ನು ನೋಡಿಕೊಳ್ಳುವುದಕ್ಕಾಗಿ ನಾನು ಆಕಸ್ಮಿಕವಾಗಿ ಬೆಂಗಳೂರಿಗೆ ಬರಬೇಕಾಯಿತು. ಹಾಗೆ ಬಂದವನು ಪಿಯುಸಿ ಶಿಕ್ಷಣವನ್ನು ಇಲ್ಲಿಯೇ ಮುಂದುವರಿಸಿದೆ. ತರುವಾಯ ಸಂಜೆ ಹೊತ್ತು ಸದಾಶಿವ ನಗರದಲ್ಲಿದ್ದ ಕ್ಲಬ್‍ನಲ್ಲಿ ಪಾರ್ಟ್‍ಟೈಮ್ ಕೆಲಸವನ್ನು ಮಾಡಿಕೊಂಡು ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಎ ಪದವಿ ಓದಿದೆ. ಆಗ ‘ಗಾಂಧಿ ಅಧ್ಯಯನ ಕೇಂದ್ರ’ದವರು ಪದವಿ ವಿದ್ಯಾರ್ಥಿಗಳಿಗಾಗಿ ಗಾಂಧೀಜಿಯವರ ಜೀವನ, ಚಿಂತನೆ ಮತ್ತು ಮೌಲ್ಯಗಳ ಕುರಿತು ನಡೆಸುತ್ತಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗೆ ಅರ್ಜಿ ಸಲ್ಲಿಸುತ್ತಿದ್ದೆ. ಹಣದ ತೀವ್ರ ಕೊರತೆ ಇದ್ದದ್ದರಿಂದ ನಗದು ಬಹುಮಾನ ಇರುವ ಸ್ಪರ್ಧೆಗಳಲ್ಲಿಯೇ ಭಾಗವಹಿಸಲು ಆಸಕ್ತಿ ತೋರಿಸುತ್ತಿದ್ದೆ. ಗಾಂಧೀಜಿ ಬಗ್ಗೆ ಯಾವುದೇ ವಿಷಯ ನೀಡಿದರೂ ಪ್ರಬಂಧ ಬರೆದು ಬಹುಮಾನ ಪಡೆಯುವಷ್ಟು ಶಕ್ತನಾಗಿದ್ದೆ. ಸತತವಾಗಿ ಮೂರು ವರ್ಷವೂ ಮೊದಲ ಬಹುಮಾನಗಳನ್ನು ಪಡೆದುಕೊಂಡಿದ್ದೆ. ಬಹುಮಾನ ವಿತರಣೆಯ ಸಮಾರಂಭದಲ್ಲಿ ಪ್ರಬಂಧಗಳ ಮೌಲ್ಯಮಾಪಕರಾಗಿದ್ದ ನೀಲತ್ತಳ್ಳಿ ಕಸ್ತೂರಿ ಅವರು ನನ್ನ ಬರವಣಿಗೆಯ ಶೈಲಿಯನ್ನು ಮೆಚ್ಚಿಕೊಂಡಿದ್ದರು; ನನ್ನ ಬಳಿಗೆ ಬಂದು ಬರೆಯುವುದನ್ನು ನಿಲ್ಲಿಸಬೇಡಿ ಎಂದು ಕಿವಿಮಾತು ಹೇಳಿದ್ದರು.

ಪ್ರೈಮರಿಯಿಂದ ಗ್ರ್ಯಾಜುಯೇಶನ್‍ವರೆಗೂ ನನಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಗಾಂಧಿ ಬೇರೆ ಬೇರೆ ಸ್ವರೂಪಗಳಲ್ಲಿ ನನ್ನ ತಿಳಿವಿಗೆ ಬಂದ ಪರಿ ಇದಾಗಿದೆ. ಇಷ್ಟೆಲ್ಲ ಬರೆಯುವಾಗಲೂ ಇಂದಿನ ವರ್ತಮಾನದ ನೆಲೆಯಲ್ಲಿಯೇ ಭೂತಕಾಲದ ನೆನಪುಗಳನ್ನು ಕೆದಕಿ ತೆಗೆಯುತ್ತೇವೆ. ಆ ನೆನಪುಗಳಲ್ಲಿ ಎಷ್ಟೋ ಸಂಗತಿಗಳು ಮಸುಕಾಗಿರುವ ಸಾಧ್ಯತೆಗಳಿರುತ್ತವೆ. ಬದುಕಿನ ಕಾಲಪ್ರವಾಹದಲ್ಲಿ ಗಾಂಧಿ ಚಿಂತನೆಗಳ ಕೇಂದ್ರಿತ ನನ್ನ ಗ್ರಹಿಕೆಗಳು ಬದಲಾಗುತ್ತಲೇ ಬಂದಿವೆ. ಇತ್ತೀಚಿನ ವರ್ಷಗಳಲ್ಲಿ ಅದೇಕೆ ನಾನು ಓದುತ್ತಿದ್ದ ಶೈಕ್ಷಣಿಕ ಪಠ್ಯಗಳಲ್ಲಿ ದಲಿತರ ಸಮಾನತೆ, ಸ್ವಾತಂತ್ರ್ಯ ಮತ್ತು ಹಕ್ಕುಗಳಿಗಾಗಿ ಅವಿರತ ಹೋರಾಟ ನಡೆಸಿದ ಅಂಬೇಡ್ಕರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ-ಮೊದಲಾದವರ ಬಗ್ಗೆ ಪಾಠಗಳಿರಲಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಮತ್ತೆ ಮತ್ತೆ ಕಾಡಿದೆ. ಅಂದು ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಗಾಂಧೀಜಿಯ ಬಗ್ಗೆ ಉತ್ಸಾಹ ಮತ್ತು ಆವೇಶದಿಂದ ಮಾತಾಡುವಂತೆಯೇ ಅಂಬೇಡ್ಕರರ ಬಗ್ಗೆ ಏಕೆ ಮಾತನಾಡುತ್ತಿರಲಿಲ್ಲ ಎಂದು ನನಗೆ ನಾನೇ ಪ್ರಶ್ನಿಸಿಕೊಳ್ಳುವಂತಾಗಿದೆ. ಇಂತಹ ಸಾಂಸ್ಕøತಿಕ ರಾಜಕಾರಣಗಳು ಎಗ್ಗಿಲ್ಲದೇ ನಡೆಯುತ್ತಿರುತ್ತವೆ. ಮುಂದೆ ನಾನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನಾಗಿ ನೇಮಕವಾದ ಮೇಲೆ ನನ್ನೊಳಗಿನ ಗಾಂಧಿ ಚಿಂತನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದೇನೆ. ಅಂಬೇಡ್ಕರ್ ವಿಚಾರಧಾರೆಗಳ ಮಹತ್ವವನ್ನೂ ಮನಗಾಣಿಸಲು ಪ್ರಯತ್ನ ಪಟ್ಟಿದ್ದೇನೆ.

ನಾನು ಹಂಪಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ “ಕನ್ನಡ ವಿಮರ್ಶೆಯಲ್ಲಿ ಜಾತಿ ಪ್ರಶ್ನೆಯ ಆಯಾಮಗಳು” ಎಂಬ ವಿಷಯದಲ್ಲಿ ಪಿಎಚ್‍ಡಿ ಮಾಡುವಾಗ ಸಾಹಿತ್ಯ ಪಠ್ಯಗಳ ನಿಕಟ ಓದು ಶುರುವಾಯಿತು. ಸೃಜನಶೀಲ ಸಾಹಿತ್ಯ ಮತ್ತು ವಿಮರ್ಶೆಯನ್ನು ಕೂಡ ಶ್ರೇಣೀಕೃತ ಜಾತಿ ವ್ಯವಸ್ಥೆಯು ನಿಯಂತ್ರಿಸಿರುವ ಸಾಂಸ್ಕøತಿಕ ರಾಜಕಾರಣವನ್ನು ಸೂಕ್ಷ್ಮವಾಗಿ ಮತ್ತು ನಿಕಟವಾಗಿ ಗಮನಿಸಲು ಸಾಧ್ಯವಾಯಿತು. ಅಂಬೇಡ್ಕರ್ ಅವರನ್ನು ಓದದೆ ಗಾಂಧೀಜಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದು ಎನ್ನಿಸಿತು. ಅಂಬೇಡ್ಕರ್ ಅವರನ್ನು ಓದಿದ ಮೇಲೆ ಗಾಂಧಿ ಚಿಂತನೆಗಳ ಮಿತಿಗಳು ಅರಿವಾಗತೊಡಗಿದವು. ಗಾಂಧಿವಾದಿಗಳು ಮೊದಲಿನಿಂದಲೂ ಗಾಂಧೀಜಿಯವರನ್ನು ಬಹುತೇಕವಾಗಿ ವೈಭವೀಕರಣ ಮಾಡುತ್ತಲೇ ಬಂದಿದ್ದಾರೆ. ಇಂದಿನ ಸಮಕಾಲೀನ ಸನ್ನಿವೇಶದಲ್ಲೂ ಗಾಂಧಿ ಚಿಂತನೆಗಳ ಸಾಧ್ಯತೆಗಳನ್ನು ತಾತ್ವಿಕವಾಗಿ ನೋಡದೇ ‘ಸ್ವಚ್ಛ ಭಾರತ’ ಎಂಬುದಕ್ಕಷ್ಟೆ ಸೀಮಿತಗೊಳಿಸಲಾಗಿದೆ. ವಾಸ್ತವವಾಗಿ ಗಾಂಧಿ ಚಿಂತನೆಗಳ ಮೂಲಕ ಜಾತೀಯತೆ, ಅಸ್ಪøಶ್ಯತೆ, ಅಸಮಾನತೆ, ಲಿಂಗ ತಾರತಮ್ಯತೆ, ಅನಕ್ಷರತೆ, ಮೌಢ್ಯತೆಗಳನ್ನು ನಿವಾರಿಸುವ ದೊಡ್ಡ ಅಭಿಯಾನಗಳು ನಡೆಯಬೇಕಿತ್ತು. ಆದರ್ಶದ ಆರಾಧನೆಯಲ್ಲಿ ನಿಜವಾದ ಮೌಲ್ಯಗಳನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಲಾಗಿದೆ.

ಬಾಬಾಸಾಹೇಬ ಅಂಬೇಡ್ಕರ್ ಮತ್ತು ರಾಮಮನೋಹರ ಲೋಹಿಯಾ ಅವರು- ಗಾಂಧೀಜಿ ಬದುಕಿದ್ದಾಗಲೇ ಅವರನ್ನು ನಿಷ್ಠುರವಾದ ವಿಮರ್ಶೆಗೆ ಗುರಿಪಡಿಸುತ್ತಲೇ ತಮ್ಮ ನಿಲುವುಗಳನ್ನು ನಿರ್ಭಿಡೆಯಾಗಿ ಅಭಿವ್ಯಕ್ತಿಸುತ್ತಿದ್ದರು. ಇಂದು ಯಾವುದೇ ಬಗೆಯ ಚಿಂತನೆಗಳನ್ನು ನಿಕಷಕ್ಕೆ ಒಡ್ಡಿ ನೋಡುವ ಅಧ್ಯಯನಶೀಲ ಮನಸ್ಸುಗಳ ಅಗತ್ಯವಿದೆ. ಮೂಲಭೂತವಾದ, ಕೋಮುವಾದ ಮತ್ತು ಜಾತಿವಾದಗಳು ದೇಶದ ಅಭಿವೃದ್ಧಿ ಪಥದಲ್ಲಿ ದೊಡ್ಡ ಗೋಡೆಗಳಾಗಿ ನಿಂತಿವೆ. ಅದರಲ್ಲೂ ಈ ದೇಶದಲ್ಲಿ ಜಾತಿಗಳು ಮಾಡಿದಷ್ಟು ಗಾಯವನ್ನು ಬೇರೆ ಯಾವುದು ಮಾಡಿರಲಾರದು. ಈ ನಿಟ್ಟಿನಲ್ಲಿ ಗಾಂಧೀಜಿಯವರ ಚಿಂತನೆಗಳನ್ನು ತಾತ್ವಿಕವಾಗಿ ಮತ್ತು ವಸ್ತುನಿಷ್ಠವಾಗಿ ನೋಡುವ ಅಗತ್ಯವಿದೆ. ಹಾಗಂತ ಗಾಂಧೀಜಿಯವರನ್ನು ಸಂಪೂರ್ಣವಾಗಿ ನಿರಾಕರಿಸಬೇಕಾಗಿಲ್ಲ ಹಾಗೂ ಅತಿಯಾದ ವೈಭವೀಕರಣವನ್ನೂ ಮಾಡಬೇಕಿಲ್ಲ.

ಗಾಂಧಿಯನ್ನು ಕೊಂದ ಮತಾಂಧತೆಯಿಂದ ಗಳಿಸಿದ್ದಾದರೂ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...