ಕರ್ನಾಟಕ ಸಂಗೀತದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ಸ್ಯಾಕ್ಸೋಫೋನ್ ಕಲಾವಿದ, ಪದ್ಮಶ್ರೀ ಪುರಸ್ಕೃತ ಕದ್ರಿ ಗೋಪಾಲನಾಥ್ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕದ್ರಿ ಗೋಪಾಲನಾಥ್ ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ಇಹಲೋಕ ತ್ಯಜಿಸಿದರು.
ಡಿಸೆಂಬರ್ 11, 1950ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಜೀಪ ಮೂಡ ಗ್ರಾಮದ ಮಿತ್ತಿಕೆರೆ ಎಂಬಲ್ಲಿ ಕದ್ರಿ ಜನಿಸಿದರು. ಬಾಲ್ಯದಿಂದಲೇ ಸಂಗೀತದತ್ತ ಒಲವು ಹೊಂದಿದ್ದರು. ತಂದೆಯೂ ಸಹ ಸಂಗೀತಗಾರರಾಗಿದ್ದರು. ಹೀಗಾಗಿ ತಮದೆಯೇ ಗೋಪಾಲನಾಥ್ ಅವರಿಗೆ ಗುರುಗಳಾಗಿದ್ದರು. ಕರ್ನಾಟಕ ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಗೋಪಾಲನಾಥ್, ಸ್ಯಾಕ್ಸೋಪೋನ್ ವಾದಕರಾಗುವ ಮೂಲಕ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದರು. ಅಷ್ಟೇ ಅಲ್ಲ, ಕರ್ನಾಟಕ ಸಂಗೀತವನ್ನು ವಿಶ್ವದಾದ್ಯಂತ ಮನೆಮಾತಾಗಿಸಿದರು.
ಗೋಪಾಲನಾಥ್ ಅವರು ತಮ್ಮ ಮೊದಲ ಸ್ಯಾಕ್ಸೋಪೋನ್ ವಾದಕ ಕಾರ್ಯಕ್ರಮವನ್ನು ಮದ್ರಾಸಿನ ಚೆಂಬೈ ಮೆಮೋರಿಯಲ್ ಟ್ರಸ್ಟ್ ನಲ್ಲಿ ನಡೆಸಿದ್ದರು. ನಂತರ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಸಿಂಗಪೂರ್, ಜರ್ಮನಿ, ಕತಾರ್, ಬಹರೇನ್, ಶ್ರೀಲಂಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಕಚೇರಿ ನಡೆಸಿದ್ದರು. ಸ್ಯಾಕ್ಸೋಪೋನ್ ಮಾಂತ್ರಿಕನಿಗೆ ಕೇಂದ್ರ ಸಾಹಿತ್ಯ ನಾಟಕ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಕಲೈಮಾಮಣಿ ಪ್ರಶಸ್ತಿ, ನಾದ ಗಂಧರ್ವ ನಾದಕಲಾ ರತ್ನ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸೇರಿಂದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಈಗ ಸ್ಯಾಕ್ಸೋಪೋನ್ ಮಾಂತ್ರಿಕ ತಮ್ಮ ಸ್ವರಯಾತ್ರೆಯನ್ನು ಮುಗಿಸಿದ್ದಾರೆ. ಕದ್ರಿ ಗೋಪಾಲನಾಥ್, ಪತ್ನಿ, ಮಗ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಎ.ಆರ್ ರೆಹಮಾನ್ ಸೇರಿದಂತೆ ಅನೇಕ ಗಣ್ಯರು ಮತ್ತು ಬಂಧು-ಮಿತ್ರರು ಕದ್ರಿ ಅಗಲಿಕೆಗೆ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.