ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯು ಅ. 21 ರಂದು ನಡೆಯಲಿದ್ದು ಅಂದೇ ಸತರಾ ಲೋಕಸಭಾ ಕ್ಷೇತ್ರದ ಉಪಚುನಾವಣೆಯೂ ನಡೆಯಲಿದೆ. ಈ ಕುರಿತು ಚುನಾವಣಾ ರ್ಯಾಲಿಯಲ್ಲಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಜನರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯವಾದಿ ಕಾಂಗ್ರೇಸ್ (ಎನ್ಸಿಪಿ) ಪಕ್ಷದ ಮುಖ್ಯಸ್ಥ ಶರದ್ ಪವಾರ್ ಈ ಹಿಂದೆ ಸತರಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ತಪ್ಪು ಮಾಡಿದ್ದೆನೆ ಎಂದು ಒಪ್ಪಿಕೊಂಡಿದ್ದಾರೆ.
ಇದಕ್ಕೂ ಮೊದಲು ಪ್ರಧಾನಿ ಮೋದಿಯವರು ಚುನಾವಣಾ ರ್ಯಾಲಿಯಲ್ಲಿ “ಈ ಕ್ಷೇತ್ರದಲ್ಲಿ ಎನ್ಸಿಪಿಯು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಧೈರ್ಯ ಸಹ ಹೊಂದಿಲ್ಲ” ಎಂದು ಶರದ್ ಪವಾರ್ರವರನ್ನು ಉದ್ದೇಶಿಸಿ ಟೀಕಿಸಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್ಸಿಪಿ ಪಕ್ಷವು ಶಿವಾಜಿ ಮಹಾರಾಜ ವಂಶಸ್ಥ ‘ಉದಯರಾಜೆ ಭೋಸಲೆ’ ಅವರನ್ನು ಸತರಾ ಸಂಸದೀಯ ಸ್ಥಾನದಿಂದ ಕಣಕ್ಕಿಳಿಸಿತ್ತು. ಈ ಸ್ಥಾನವನ್ನು ಗೆದ್ದ ಭೋಸಲೆಯವರು ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದರು. ಇದು ಅವರು ಪಕ್ಷಕ್ಕೆ ಮಾಡಿದ್ದ ದೊಡ್ಡ ದ್ರೊಹವಾಗಿದೆ ಎಂದು ಪವಾರ್ ಹೇಳಿದ್ದಾರೆ.
ಸುರಿಯುತ್ತಿರುವ ಮಳೆಯು ನಮಗೆ ಆರ್ಶಿವಾದ ಮಾಡುತ್ತಿದೆ. ಅ.21 ರ ನಂತರ ಸತರಾದಲ್ಲಿ ಪವಾಡ ನಡೆಯಲಿದೆ ಎಂದೂ ಸಹ ಹೇಳಿದ್ದಾರೆ. ಇವರು ಮಳೆಯಲ್ಲಿಯೂ ಬಿಡದೇ ಭಾಷಣ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಬಹುಮೆಚ್ಚಿಗೆಯನ್ನು ಪಡೆದಿದೆ.
ಶರದ್ ಪವಾರ್ರವರು ಮಳೆಯನ್ನು ಲೆಕ್ಕಿಸದೇ ಭಾಷಣ ಮಾಡುತ್ತಿದ್ದಾರೆ. ಇದು ಒಬ್ಬ ಮನುಷ್ಯ ನಾಶವಾಗಬಹುದು ಆದರೆ ಸೋಲಪ್ಪಿಕೊಳ್ಳುವುದಿಲ್ಲ ಎಂಬುದನ್ನು ತೋರಿಸುತ್ತದೆ. ಅವರ ಹೋರಾಟದ ಸ್ಫೂರ್ತಿಗೆ ನನ್ನದೊಂದು ಸಲಾಂ. ಮಹಾರಾಷ್ಟ್ರ ಮುಂದಿನ ಪೀಳಿಗೆಗೆ ಇದು ಸ್ಫೂರ್ತಿಯಾಗಲಿದೆ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಭೋಸಲೆ ವಿರುದ್ಧ ಎನ್ಸಿಪಿ ಶ್ರೀನಿವಾಸ್ ಪಾಟೀಲ್ ಅವರನ್ನು ಕಣಕ್ಕಿಳಿಸಿದ್ದೇವೆ ಎಂದು ಪವಾರ್ ಹೇಳಿದ್ದಾರೆ.