ಪ್ಯಾಲೇಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿದ್ದ ಜೆಡಿಯುನ ಹಿರಿಯ ನಾಯಕ ಕೆಸಿ ತ್ಯಾಗಿ ಅವರು ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸ್ಥಾನಕ್ಕೆ ರಾಜೀವ್ ರಂಜನ್ ಪ್ರಸಾದ್ ಅವರನ್ನು ನೇಮಕ ಮಾಡಿದ್ದಾರೆ.
“ವೈಯಕ್ತಿಕ ಕಾರಣಗಳಿಗಾಗಿ ತ್ಯಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ” ಎಂದು ಪಕ್ಷವು ಹೇಳಿದ್ದರೂ, ಪ್ರಮುಖ ವಿಷಯಗಳ ಕುರಿತು ತ್ಯಾಗಿ ಅವರ ಹೇಳಿಕೆಗಳು ಜೆಡಿಯು ಮಿತ್ರಪಕ್ಷವಾದ ಬಿಜೆಪಿ ನಾಯಕತ್ವಕ್ಕೆ ಸರಿಹೋಗದ ಕಾರಣ ವರಿಷ್ಠರು ಅವರ ರಾಜೀನಾಮೆ ಪಡೆದಿದ್ದಾರೆ ಎನ್ನಲಾಗಿದೆ.
“ಜನತಾದಳ (ಯುನೈಟೆಡ್) ರಾಷ್ಟ್ರೀಯ ಅಧ್ಯಕ್ಷರಾದ ನಿತೀಶ್ ಕುಮಾರ್ (ಮುಖ್ಯಮಂತ್ರಿ, ಬಿಹಾರ) ಅವರು ರಾಜೀವ್ ರಂಜನ್ ಪ್ರಸಾದ್ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದ್ದಾರೆ. ವಕ್ತಾರ ಹುದ್ದೆಗೆ ಪಕ್ಷದಲ್ಲಿರುವ ಕೆ.ಸಿ. ತ್ಯಾಗಿ ಅವರು ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣದಿಂದ ಪಕ್ಷದ ವಕ್ತಾರ ಹುದ್ದೆಗೆ ಸ್ಥಾನ ನೀಡಲಾಗಿದೆ” ಎಂದು ಜೆಡಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜೆಡಿಯು ಬಿಡುಗಡೆ ಮಾಡಿರುವ ಪತ್ರದಲ್ಲಿ, ತ್ಯಾಗಿ ಅವರು ಈ ಹಿಂದೆಯೂ ಸಹ ಸಾಂಸ್ಥಿಕ ಜವಾಬ್ದಾರಿಯಿಂದ ಮುಕ್ತರಾಗಲು ವಿನಂತಿಸಿದ್ದರು ಎಂದು ಹೇಳಿದ್ದಾರೆ. “ಕಳೆದ ಕೆಲವು ತಿಂಗಳುಗಳಿಂದ ನಾನು ಟಿವಿ ಚರ್ಚೆಗಳಿಂದ ದೂರವಿರುವುದನ್ನು ನೀವು ಗಮನಿಸಿರಬೇಕು. ಬೇರೆ ಕೆಲಸದ ಕಾರಣದಿಂದ ನಾನು ವಕ್ತಾರ ಹುದ್ದೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಈ ಜವಾಬ್ದಾರಿಯಿಂದ ನನ್ನನ್ನು ಮುಕ್ತಗೊಳಿಸಿ. ಬಿಹಾರ ಸರ್ಕಾರದ ಸಾಧನೆಗಳ ಕುರಿತು ಪ್ರಚಾರಕ್ಕೆ ನಾನು ಲಭ್ಯವಿದ್ದೇನೆ” ಎಂದು ಅವರು ಬರೆದಿದ್ದಾರೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯ ನಂತರ ನರೇಂದ್ರ ಮೋದಿ ಸರ್ಕಾರವನ್ನು ಬೆಂಬಲಿಸಿದ ಪ್ರಮುಖ ಮಿತ್ರಪಕ್ಷಗಳಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಸೇರಿದೆ. ಆಡಳಿತಾರೂಢ ಎನ್ಡಿಎ ಬಣದಲ್ಲಿ ಸಮನ್ವಯತೆ ಕಾಯ್ದುಕೊಳ್ಳುವಂತೆ ಬಿಜೆಪಿಯು ಮಿತ್ರಪಕ್ಷಗಳನ್ನು ಕೇಳುತ್ತಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ, ವಕ್ಫ್ ತಿದ್ದುಪಡಿ ಮಸೂದೆ, ಏಕರೂಪ ನಾಗರಿಕ ಸಂಹಿತೆ ಮತ್ತು ಗಾಜಾದಲ್ಲಿನ ಯುದ್ಧದಂತಹ ಪ್ರಮುಖ ವಿಷಯಗಳ ಕುರಿತು ತ್ಯಾಗಿ ಅವರ ಟೀಕೆಗಳು ಜೆಡಿಯು ನಾಯಕರ ಕಣ್ಣು ಕೆಂಪಾಗುವಂತೆ ಮಾಡಿತು.
ಇತ್ತೀಚೆಗೆ, ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಹೇಳಿಕೆಯನ್ನು ನೀಡಿದ ಸಂಸದರು ಮತ್ತು ಮಾಜಿ ಸಂಸದರಲ್ಲಿ ತ್ಯಾಗಿಯೂ ಸೇರಿದ್ದಾರೆ. “ನಾವು, ರಾಜಕೀಯ ಸ್ಪೆಕ್ಟ್ರಮ್ನ ಕೆಳಗಿನ ಸಹಿ ಮಾಡಲಾದ ಸಂಸದರು, ನಡೆಯುತ್ತಿರುವ ಜಿಯೋನಿಸ್ಟ್ ಆಕ್ರಮಣವನ್ನು ಮತ್ತು ಇಸ್ರೇಲ್ನಿಂದ ಪ್ಯಾಲೇಸ್ಟಿನಿಯನ್ ಜನರ ಘೋರ ನರಮೇಧವನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ. ಈ ಕ್ರೂರ ಆಕ್ರಮಣವು ಮಾನವೀಯತೆಯ ಅವಮಾನ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕಾನೂನು ಮತ್ತು ತತ್ವಗಳ ಸಂಪೂರ್ಣ ಉಲ್ಲಂಘನೆಯಾಗಿದೆ” ಎಂದು ಹೇಳಿಕೆಯಲ್ಲಿ ಇದ್ರೇಲ್ ಆಕ್ರಮಣಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ.
“ನ್ಯಾಯ ಮತ್ತು ಮಾನವ ಹಕ್ಕುಗಳ ಕಾರಣಕ್ಕಾಗಿ ಯಾವಾಗಲೂ ಹೋರಾಡುವ ರಾಷ್ಟ್ರವಾಗಿ, ಭಾರತವು ಈ ನರಮೇಧದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ” ಎಂದು ಹೇಳಿಯಲ್ಲಿದೆ. ಹಲವಾರು ವಿರೋಧ ಪಕ್ಷದ ರಾಜಕಾರಣಿಗಳಲ್ಲದೆ, ತ್ಯಾಗಿ ಕೂಡ ಈ ಹೇಳಿಕೆಗೆ ತಮ್ಮ ಸಹಮತ ವ್ಯಕ್ತಪಡಿಸಿ ಸಹಿ ಹಾಕಿದ್ದರು.
73ರ ಹರೆಯದ ತ್ಯಾಗಿ, ಹಲವು ವಿಚಾರಗಳಲ್ಲಿ ತಮ್ಮದೇ ಆದ ನಿಲುವು ತಳೆದು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ ಎಂದು ಜೆಡಿಯು ಮೂಲಗಳು ತಿಳಿಸಿವೆ. ಜೆಡಿಯು ಮತ್ತು ಅದರ ಮಿತ್ರ ಪಕ್ಷವಾದ ಬಿಜೆಪಿ ನಡುವೆ “ಗೊಂದಲ ಮತ್ತು ಅನಗತ್ಯ ಘರ್ಷಣೆಯನ್ನು ಸೃಷ್ಟಿಸುವ” ವಿವಾದಾತ್ಮಕ ವಿಷಯಗಳ ಬಗ್ಗೆ ಸಾರ್ವಜನಿಕ ಹೇಳಿಕೆಗಳನ್ನು ನೀಡುವ ಮೊದಲು ತ್ಯಾಗಿ ಸಮಾಲೋಚನೆ ನಡೆಸಬೇಕಿತ್ತು ಎಂದು ಪಕ್ಷದ ನಾಯಕತ್ವವು ಭಾವಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ; ‘ಕಾನೂನು ವ್ಯವಸ್ಥೆಯಲ್ಲಿ ನನಗೆ ನಂಬಿಕೆಯಿದೆ..’; ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಮೌನ ಮುರಿದ ಮಲಯಾಳಂ ನಟ ಜಯಸೂರ್ಯ


