ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಎಲ್ಲರ ಹುಬ್ಬೇರುವಂತೆ ಮಾಡಿದೆ. ಒಟ್ಟು ೨೮೮ ಸ್ಥಾನ ಹೊಂದಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಹಾಗೂ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಮಹಾಘಟಬಂಧನ್ ೧೫೮ ಕ್ಷೇತ್ರಗಳನ್ನು ಬಾಚಿಕೊಂಡಿದೆ. ಇತ್ತ ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿ ೧೦೦ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇತರೆ -೩೦ ಸ್ಥಾನ ಗೆದ್ದು ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಈಗ ಮಹಾರಾಷ್ಟ್ರದಲ್ಲಿ ಸಿಎಂ ಸ್ಥಾನ ಯಾವ ಪಕ್ಷಕ್ಕೆ ಹೋಗಲಿದೆ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಶಿವಸೇನೆ ಮಾತ್ರ ಚುನಾವಣೆ ಪೂರ್ವದಲ್ಲಿ ಮಾಡಿಕೊಂಡ ಮೈತ್ರಿಗೆ ಬದ್ಧರಾಗಿದ್ದು, ೫೦-೫೦ ಸಮಾನ ಅಧಿಕಾರ ಹಂಚಿಕೆಗೆ ಪಟ್ಟು ಹಿಡಿದಿದೆ. ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಮೈತ್ರಿಯ ನಿಯಮ ಮತ್ತು ರೂಪುರೇಷೆಗಳನ್ನು ನಾವೇ ನಿರ್ಧರಿಸುತ್ತೇವೆಂದು ಕಡ್ಡಿ ತುಂಡಾದಂತೆ ಹೇಳಿದೆ. ಈಗ ಮಹಾರಾಷ್ಟ್ರದಲ್ಲಿ ಸಿಎಂ ಗದ್ದುಗೆ ಯಾವ ಪಕ್ಷಕ್ಕೆ ಹೋಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಮತ್ತು ಶಿವಸೇನೆ ಮಹಾಮೈತ್ರಿ ಬಹುಮತ ಗಳಿಸುತ್ತಿದ್ದಂತೆ ಸಿಎಂ ಹುದ್ದೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಅಧಿಕಾರದ ಸಮಾನ ಹಂಚಿಕೆಯಾಗಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಮಾತನಾಡಿ, ಚುನಾವಣೆಗೆ ಮೊದಲು ಮಾಡಿಕೊಂಡಿದ್ದ ಮೈತ್ರಿಯಂತೆಯೇ ಸಾಗುತ್ತೇವೆ. ಸರ್ಕಾರದಲ್ಲಿ ಸಮಪಾಲು ಕೋರಿದ್ದೆವು. ಈಗ ೫೦:೫೦ ಸೂತ್ರದಂತೆ ಸರ್ಕಾರ ರಚನೆ ಆಗುತ್ತದೆ. ಪಕ್ಷದ ಸಾಧನೆ ತೆಗೆದು ಹಾಕುವಂಥದ್ದಲ್ಲ. ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ತಿಳಿಸಿದರು.
ಈ ಮಧ್ಯೆ ಲೋಕಸಭೆ ಮಾಜಿ ಸ್ಪೀಕರ್ ಡಾ.ಮನೋಹರ್ ಜೋಶಿ ಪ್ರತಿಕ್ರಿಯಿಸಿ, ಮಹಾರಾಷ್ಟ್ರದ ಮುಂದಿನ ಸಿಎಂ ಹುದ್ದೆ ಶಿವಸೇನೆಗೆ ಸಿಗಲಿದೆ ಎಂದಿದ್ದಾರೆ. ಅಲ್ಲದೇ ಕಳೆದ ೨೦೧೪ರ ಚುನಾವಣೆಯಲ್ಲಿ ೧೨೨ ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ, ಈ ಬಾರಿ ೧೦೨ ಸ್ಥಾನಗಳಲ್ಲಿ ವಿಜಯಿಯಾಗಿದೆ. ಇನ್ನು ಶಿವಸೇನೆ ೫೬ ಸ್ಥಾನಗಳಲ್ಲಿ ಗೆದ್ದಿದ್ದು, ಠಾಕ್ರೆ ಕುಟುಂಬದ ಕುಡಿಯನ್ನು ಸಿಎಂ ಮಾಡುತ್ತಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಇನ್ನು ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿ ೧೦೦ ಸ್ಥಾನ ಗೆದ್ದಿದೆ. ಒಟ್ಟಿನಲ್ಲಿ ೨೦೧೪ರಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಮತ್ತು ಶಿವಸೇನೆ, ಈ ಬಾರಿ ಮೈತ್ರಿ ಮೂಲಕ ಚುನಾವಣೆ ಎದುರಿಸಿದರೂ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಈ ಬಾರಿ ಬಿಜೆಪಿ ೧೬೪, ಶಿವಸೇನೆ ೧೨೬, ಕಾಂಗ್ರೆಸ್ ೧೪೭, ಎನ್ಸಿಪಿ ೧೨೧ ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.