Homeಮುಖಪುಟತೆಲಂಗಾಣ ಎನ್‌ಕೌಂಟರ್‌: ಸರಿಯೇ ತಪ್ಪೇ? ಪರ-ವಿರೋಧದ ಚರ್ಚೆಯಲ್ಲಿ ಜನ ಏನು ಹೇಳುತ್ತಾರೆ..

ತೆಲಂಗಾಣ ಎನ್‌ಕೌಂಟರ್‌: ಸರಿಯೇ ತಪ್ಪೇ? ಪರ-ವಿರೋಧದ ಚರ್ಚೆಯಲ್ಲಿ ಜನ ಏನು ಹೇಳುತ್ತಾರೆ..

- Advertisement -
- Advertisement -

ತೆಲಂಗಾಣದ ಪಶುವೈದ್ಯೆಯ ಅತ್ಯಚಾರ ಮತ್ತು ಕೊಲೆಯ ನಾಲ್ಕು ಆರೋಪಿಗಳನ್ನು ಹೈದರಾಬಾದ್‌ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಹಳಷ್ಟು ಜನ ಸಾಮಾನ್ಯರು ಇದನ್ನು ಸಂಭ್ರಮಿಸಿ ಇದರಿಂದ ಅತ್ಯಾಚಾರಗಳು ನಿಲ್ಲುತ್ತವೆ ಎಂದು ಭಾವಿಸಿದ್ದಾರೆ.

ಎನ್‌ ಕೌಂಟರ್‌ ಮಾಡಿದ ಹೈದರಾಬಾದ್‌ ಪೊಲೀಸರಿಗೆ ಪ್ರಶಂಸೆಗಳ ಸುರಿಮಳೆ ಲಭಿಸಿದೆ. ಅವರನ್ನು ಹೊತ್ತಿ ಮೆರವಣಿಗೆ ಮಾಡಿ, ಸಿಹಿ ತಿನ್ನಿಸಿ, ರಾಖೀ ಕಟ್ಟಿ, ಜೈಕಾರ ಕೂಗಲಾಗಿದೆ. ಕರ್ನಾಟಕ ಮೂಲಕ ಪೊಲೀಸ್ ಆದವರೊಬ್ಬರನ್ನು ಮೆಚ್ಚಿ ಹಲವು ಲೇಖನಗಳು ಪ್ರಕಟವಾಗಿವೆ.

ಆದರೆ ಇದು ಕಾಡಿನ ನ್ಯಾಯ, ಪ್ರಜಾಪ್ರಭುತ್ವದ ಮೇಲಿನ ಹಲ್ಲೆ, ತನಿಖೆ ಮಾಡಿ ಶಿಕ್ಷೆ ಕೊಡಬೇಕಾದ ನ್ಯಾಯಾಧೀಶರ ಕೆಲಸವನ್ನು ಪೊಲೀಸರು ಮಾಡಿದ್ದು ಸರಿಯಿಲ್ಲ, ಎನ್ ಕೌಂಟರ್‌ನಿಂದ ಅತ್ಯಾಚಾರಗಳು ನಿಲ್ಲುವುದಿಲ್ಲ ಎಂದು ಹಲವು ಮಾನವ ಹಕ್ಕು ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರ ಮತ್ತು ವಿರೋಧದ ಎರಡು ವಾದಗಳು ಕೆಳಗಿನಂತಿವೆ.

ಇದು ಉನ್ನಾವೋ ಅಥವಾ ಹೈದರಾಬಾದ್ ಆಗಿರಲಿ ಜನರು ಅತ್ಯಾಚಾರದ ವಿರುದ್ಧ ಕೋಪಗೊಂಡಿದ್ದಾರೆ. ಆದ್ದರಿಂದ ಜನರು ಎನ್‌ಕೌಂಟರ್ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಜನರು ನಂಬಿಕೆಯನ್ನು ಕಳೆದುಕೊಂಡಿರುವ ಬಗ್ಗೆಯೂ ಚಿಂತಿಸಬೇಕಾದ ಸಂಗತಿಯಾಗಿದೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಹೇಗೆ ಬಲಪಡಿಸುವುದು ಎಂಬುದರ ಕುರಿತು ಎಲ್ಲಾ ಸರ್ಕಾರಗಳು ಒಟ್ಟಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಅಭಿಪ್ರಾಯಪಟ್ಟಿದ್ದಾರೆ.

ಇದು ಮಹಾನ್‌ ಕಾರ್ಯ, ಹೈದರಾಬಾದ್‌ ಪೊಲೀಸರಿಗೆ ಸೆಲ್ಯೂಟ್‌ ಎಂದು ಸೈನಾ ನೆಹ್ವಾಲ್‌ ಪ್ರತಿಕ್ರಿಯಿಸಿದ್ದಾರೆ.

ಈ ಘಟನೆಯಿಂದ ಉತ್ತರ ಪ್ರದೇಶ ಮತ್ತು ದೆಹಲಿಯ ಪೊಲೀಸರು ಸ್ಫೂರ್ತಿ ಪಡೆಯಬೇಕಾಗಿದೆ. ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ, ಆದರೆ ರಾಜ್ಯ ಸರ್ಕಾರ ನಿದ್ರಿಸುತ್ತಿದೆ. ದುರದೃಷ್ಟವಶಾತ್ ಇಲ್ಲಿ ಅಪರಾಧಿಗಳನ್ನು ರಾಜ್ಯ ಅತಿಥಿಗಳಂತೆ ಪರಿಗಣಿಸಲಾಗುತ್ತದೆ, ಯುಪಿಯಲ್ಲಿ ಜಂಗಲ್ ರಾಜ್ ಇದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ಕಾರಣವಿರಲೀ, ಪೊಲೀಸರ ಬಂದೂಕನ್ನು ಎಂದೂ ಬೆಂಬಲಿಸಬೇಡಿ.‌ ಪ್ರಭುತ್ವ ನಡೆಸುವ ಕೊಲೆಗಳಿಗೆ ಒಮ್ಮೆ ಸಾರ್ವಜನಿಕ ಸಮ್ಮತಿ ದೊರೆಯಲಾರಂಭಿಸಿತೆಂದರೆ ಪ್ರಭುತ್ವವನ್ನು ಪ್ರಶ್ನಿಸುವವರತ್ತ, ಟೀಕಿಸುವವರತ್ತ, ವಿರೋಧಿಸುವವರತ್ತ ಆ ಬಂದೂಕುಗಳು ತಿರುಗುತ್ತವೆ.
ಬಂದೂಕುಗಳಿಗೆ ಕೊಲ್ಲುವುದಷ್ಟೇ ಗೊತ್ತು.

ನಮ್ಮ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಪೊಲೀಸರು ಯಾವ ಕೆಲಸವನ್ನು ಮಾಡಬೇಕು, ನ್ಯಾಯಾಧೀಶರು ಯಾವ ಕೆಲಸವನ್ನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ. ಯಾರೊಬ್ಬರೂ ತಮ್ಮ ಮಿತಿಯನ್ನು ದಾಟಕೂಡದು.‌ ಕೋರ್ಟು ಮಾಡಬೇಕಾದ ಕೆಲಸವನ್ನು ಪೊಲೀಸರು ಮಾಡಲಾರಂಭಿಸಿದಾಗ ಅಲ್ಲಿ ಪ್ರಜಾತಂತ್ರ, ಸಂವಿಧಾನ ಯಾವುದೂ ಉಳಿದಿರುವುದಿಲ್ಲ. ಉಳಿಯುವುದು ಎಲ್ಲವನ್ನೂ ಪೊಲೀಸರೇ ನಿರ್ಧರಿಸುವ police state. ಇದು ಅತ್ಯಂತ ಅಪಾಯಕಾರಿ ಎಂದು ಶ್ರೀನಿವಾಸ ಕಾರ್ಕಳರವರು ಅಭಿಪ್ರಾಯಪಟ್ಟಿದ್ದಾರೆ.

ನಿರ್ಭಯಾ ಅವರ ತಾಯಿ ಆಶಾ ದೇವಿ “ಈ ಶಿಕ್ಷೆಯಿಂದ ನನಗೆ ತುಂಬಾ ಸಂತೋಷವಾಗಿದೆ. ಪೋಲಿಸರು ಒಂದು ದೊಡ್ಡ ಕೆಲಸ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನಾನು ಒತ್ತಾಯಿಸುತ್ತೇನೆ.” ಎಂದಿದ್ದಾರೆ.

ನಾಳೆ ಯಾವುದೋ ಕೇಸಿನಲ್ಲಿ ನಿಮ್ಮನ್ನು ಪೊಲೀಸರು ಬಂಧಿಸುತ್ತಾರೆ. ನೀವೇ ಅಪರಾಧ ಎಸಗಿದ್ದೀರಿ ಎಂದು ಅವರೇ ತೀರ್ಮಾನಿಸುತ್ತಾರೆ‌. ಏನು ಶಿಕ್ಷೆ ಅಂತಲೂ ತೀರ್ಮಾನಿಸಿಬಿಡುತ್ತಾರೆ. ನಂತರ ಅವರೇ ಶಿಕ್ಷೆಯನ್ನೂ ನೀಡುತ್ತಾರೆ.‌ ಅಲ್ಲೇ ಡ್ರಾ, ಅಲ್ಲೇ ಬಹುಮಾನ ಅಂತ ಜನರೆಲ್ಲರೂ ಸಂಭ್ರಮಿಸುತ್ತಾರೆ.

ಇದನ್ನು ಬರ್ಬರ ಯುಗದ ನಡವಳಿಕೆ ಎನ್ನಬಹುದು ಅಷ್ಟೇ. ಇದರಿಂದ ಅತ್ಯಾಚಾರವೂ ಸೇರಿದಂತೆ ಬರ್ಬರತೆಗಳು ಹೆಚ್ಚಾಗಬಹುದೇ ವಿನಃ ಕಡಿಮೆಯಾಗುವುದು ಸಾಧ್ಯವಿಲ್ಲ.

ಗಮನಿಸಿ:
1. ಅತ್ಯಾಚಾರಕ್ಕೆ ಮರಣದಂಡನೆ/ಕಲ್ಲು ಹೊಡೆದು ಸಾಯಿಸಲಾಗುತ್ತದೆ ಎಂದು ಹೇಳಲಾಗುತ್ತಿರುವ ದೇಶಗಳಲ್ಲಿ ಅತ್ಯಾಚಾರ ಕಡಿಮೆಯಾಗಿದೆ ಎಂಬುದು ಸುಳ್ಳು. ಆ ದೇಶಗಳಲ್ಲಿ ಅತ್ಯಾಚಾರದ ದೂರು ನೀಡಿದ 40% ಮಹಿಳೆಯರಿಗೇ ಶಿಕ್ಷೆಯಾಗಿದೆ.
2. ಆರೋಪಿಗಳು ಬಲಾಢ್ಯರಾಗಿದ್ದಾಗ ಬಲಿಪಶುವಿನ ಮೇಲೆಯೇ ಗದಾಪ್ರಹಾರ ನಡೆಯುತ್ತದೆ. ಉನ್ನಾವ್ ಕೇಸಿನಲ್ಲಿ ನಡೆದಂತೆ. ಸಬಲಳಲ್ಲದ‌ ಉನ್ನಾವ್ ಸಂತ್ರಸ್ತೆಯನ್ನು ಜಾಮೀನು ಪಡೆದ ಆರೋಪಿಗಳು ಸುಟ್ಟು ಕೊಲ್ಲಲು ಯತ್ನಿಸಿ ಮೂರು ದಿನಗಳೂ ಆಗಿಲ್ಲ.
3. ಆರೋಪಿಗಳು ಗರೀಬರಿದ್ದರೆ ಅಲ್ಲಿ ಕಾಡಿನ ನ್ಯಾಯ ವಿಜೃಂಭಿಸುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಡಾ.ಎಚ್.ವಿ ಅಭಿಪ್ರಾಯಪಟ್ಟಿದ್ದಾರೆ.

ಚಿತ್ರನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿ ಈ ನಡೆ ಸ್ವಾಗತಾರ್ಹ, ಇಂತಹ ಕೆಲಸಗಳಿಗೆ ಏನು ಶಿಕ್ಷೆಯಾಗುವುದಿಲ್ಲ, ಕೋರ್ಟಿನಲ್ಲಿ ಸಮಯ ಹಾಳಾಗುತ್ತದೆ ಎಂಬ ಭಾವನೆಯಿದೆ. ಇದರಿಂದ ಕಾನೂನಿಗೆ ಬೆಲೆ ಬಂದಿದೆ. ಇದು ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ಕೊಟ್ಟಹಾಗೆ ಆಗಿದೆ.

ಕಾನೂನಿನ ಅಡಿಗೆ ಹೋದವರಿಗೆ ಶಿಕ್ಷೆ ಆಗುತ್ತಿಲ್ಲ. ಅವರಿಗೆ ತಕ್ಕ ಶಾಸ್ತಿ ಆಗಿದೆ, ಭಗವಂತ ತಕ್ಕ ಪಾಠ ಕಲಿಸಿದ್ದಾನೆ. ಒಬ್ಬ ಆರೋಪಿ ತಪ್ಪು ಮಾಡಿದ್ದಾನೆ ಅಂತ ತಿಳಿದ ಕೂಡಲೇ ಅವನನ್ನು ಗಲ್ಲಿಗೇರಿಸಬೇಕು. ಇದರಿಂದ ಇತರರಿಗೆ ಭಯ ಆಗಬೇಕು. ಈ ಎನ್‌ ಕೌಂಟರ್‌ ನಮ್ಮ ಕಣ್ಣು ತೆರೆಸಿದೆ. ಇದು ಎಲ್ಲರಿಗೂ ಭಯ ಹುಟ್ಟಿಸಿದೆ. ಈ ರೀತಿಯ ಕಾನೂನು ಬರಬೇಕು ಎಂದು ಬಿಜೆಪಿ ನಾಯಕಿ ಮತ್ತು ಚಿತ್ರನಟಿ ಶೃತಿ ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಪ್ರಕ್ರಿಯೆಯಿಲ್ಲದೆ ಅತ್ಯಾಚಾರಿಗಳೆಲ್ಲರ ಎನ್ಕೌಂಟರ್ ನಡೆದರೆ, ಸಂಸತ್ತಿನ ಕನಿಷ್ಠ ನೂರಾದರೂ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ದೇಶದ ನೂರಕ್ಕೂ ಹೆಚ್ಚು ಮಠಗಳಿಗೆ ಹೊಸ ಉತ್ತರಾಧಿಕಾರಿಯ ನೇಮಕ, ಹಲವು ನ್ಯಾಯಪೀಠಗಳ ಮರುಭರ್ತಿಯೂ!’
ಸಾವಿರಾರು ಸರಕಾರಿ ಹುದ್ದೆಗಳಿಗೆ ಶೀಘ್ರ ಮರುನೇಮಕಾತಿ ನಡೆಯಲಿವೆ!
#ಒಂದುದೇಶಒಂದುನ್ಯಾಯ ಎಂದು ಖ್ಯಾತ ವ್ಯಂಗ್ಯ ಚಿತ್ರಕಾರ ದಿನೇಶ್ ಕುಕ್ಕಜಡ್ಕರವರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯ ಮತ್ತು ಶಿಕ್ಷೆ ಎಲ್ಲಿಂದ ಬರಬೇಕೋ ಅಲ್ಲೇ ತೀರ್ಮಾನವಾದರೆ ಅದಕ್ಕೊಂದು ಗೌರವ…!
ಇದು ನಮ್ಮ ನ್ಯಾಯ ವ್ಯವಸ್ಥೆಯ ಸೋಲು ಎಂದು ಸಮದ್‌ ಚೌದ್ರಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಈಗಿರುವ 539 ಸಂಸದರಲ್ಲಿ ಒಟ್ಟು 233 ಮಂದಿಗೆ ಕ್ರಿಮಿನಲ್ ಪ್ರಕರಣಗಳು ಇವೆ. ಅಂದರೆ ಶೇ.43ರಷ್ಟು ಮಂದಿ. ಕೇವಲ ಬಿಜೆಪಿ ಪಕ್ಷವೊಂದರಲ್ಲೇ 116 ಸಂಸದರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಒಟ್ಟು ಲೋಕಸಭೆಯ ಶೇ. 29ರಷ್ಟು ಸಂಸದರು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆಯಂಥ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಹೆಮ್ಮೆಯ ಹುಬ್ಬಳ್ಳಿ ಮೂಲದ ಅಧಿಕಾರಿ ವಿಶ್ವನಾಥ್ ಸಜ್ಜನವರನ್ನು ವಿಶೇಷ ಕರ್ತವ್ಯದ ಮೇಲೆ ಈಗಿಂದೀಗೇ ಲೋಕಸಭೆಗೆ ಕಳುಹಿಸಬೇಕು. 233 ಮಂದಿ‌ ಸಂಸದರಿಗೆ ಅವರು ಎದುರಿಸುತ್ತಿರುವ ಪ್ರಕರಣಗಳ ತೀವ್ರತೆ ಅನುಸಾರ ಶಿಕ್ಷೆ ಕೊಡಲು ಪರವಾನಗಿ ಕೊಡಬೇಕು. ಸೌದಿ ಅರೇಬಿಯಾದ ನ್ಯಾಯ ವ್ಯವಸ್ಥೆಯ ಹಾಗೆ ಕೆಲವರ ಕೈ ಕತ್ತರಿಸಬೇಕು, ಕೆಲವರ ಕಾಲು ತೆಗೆಯಬೇಕು, ಕೆಲವರ ಕಿವಿಮೂಗು ಕೊಯ್ದು ಬಿಡಬೇಕು. ಅತ್ಯಾಚಾರ, ಭಯೋತ್ಪಾದನೆ, ಕೊಲೆ ಆರೋಪಿ ಎಂಪಿಗಳ ಮೇಲೆ ಗುಂಡು ಹಾರಿಸಿ ಸಾಯಿಸಬೇಕು. ಹೇಗೂ ಲೋಕಸಭಾ ಅಧಿವೇಶನ ನಡೀತಾ ಇದೆಯಲ್ಲ‌. ನ್ಯಾಯಾಲಯಗಳ ಬದಲು ಪೊಲೀಸರೇ ನ್ಯಾಯವನ್ನು ತೀರ್ಮಾನಿಸಬೇಕು ಎಂಬುದು ನಮ್ಮ ನಿಲುವಾದರೆ ಅದು ಲೋಕಸಭೆಯಿಂದ ಶುರುವಾಗಿ, ವಿಧಾನಸಭೆಗಳಲ್ಲೂ ಆಗಿ ನಂತರ ಬೀದಿಗೆ ಬರುವಂತಾಗಬೇಕಲ್ಲವೇ? ಎಂದು ದಿನೇಶ್ ಕುಮಾರ್ ದಿನೂರವರ ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ಪ್ರಿಯಾಂಕಾ ಅತ್ಯಾಚಾರ ಮತ್ತು ಭರ್ಬರ ಹತ್ಯೆ ನಿಜಕ್ಕೂ ತಲೆ ತಗ್ಗಿಸುವಂತಾದ್ದೇ. ಆದರೆ ಆರೋಪಿಗಳನ್ನು ಪೊಲೀಸರು ನಿಜವಾಗಿಯೂ ಅಪರಾಧಿಗಳು ಎಂದು ಪ್ರತಿಪಾದಿಸುವುದಾದರೂ ಹೇಗೆ? ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಾದದ್ದೂ ನ್ಯಾಯವೇ? ಎನ್ಕೌಂಟರ್ ನಿಂದ ಏನು ಸಂದೇಶ ದೊರಕಿದಂತಾಗುತ್ತದೆ? ನನ್ನ ಪ್ರಕಾರ ಸಾರ್ವಜನಿಕರ ಹೇಳಿಕೆಗಳನ್ನು ಗಮನಿಸಿದರೆ ನ್ಯಾಯಾಲಯದಲ್ಲಿ ಶಿಕ್ಷೆ ಆಗಬಹುದಾದರೂ ತಡವಾಗಬಹುದು, ನ್ಯಾಯಾಲಯದಲ್ಲಿ ಆರೋಪಿಗಳಿಗೆ ಜಾಮೀನು ಸಿಗಬಹುದು ಇತ್ಯಾದಿಗಳನ್ನು ಗಮನಿಸಿದರೆ, ಕಾನೂನು ಪಾಲನೆ ಮಾಡಬೇಕಾದ ಪೊಲೀಸರಿಗೆ ನ್ಯಾಯಾಲಯದ ಬಗ್ಗೆ ನಂಬಿಕೆ ಇಲ್ಲ ಎನ್ನುವುದು ಸ್ಪಷ್ಟ. ಸ್ಪಷ್ಟವಾದ ಪ್ರಥಮ ವರ್ತಮಾನ ವರದಿ, ಚಾರ್ಜ್ ಶೀಟ್ ಸಲ್ಲಿಕೆಗಳನ್ನು ಪೊಲೀಸರು ಪ್ರಾಮಾಣಿಕವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದರೆ, ನ್ಯಾ ಮರೀಚಿಕೆಯಾಗುವುದು ಸಾಧ್ಯವೇ ಇರದು. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಇನ್ನು ಮುಂದಿನ ದಿನಗಳಲ್ಲಿ ಇಡಿ, ಐಡಿ, ಮತ್ತು ಪೊಲೀಸರೇ ನ್ಯಾಯ ತೀರ್ಮಾನ ಮಾಡುವ ದಿನಗಳು ದೂರವಿಲ್ಲ. – ಜಯಶೇಖರ್ ಮಡಪ್ಪಾಡಿ, ಪತ್ರಕರ್ತರು ಕುಮದಾಪುರ

  2. ಉನ್ನಾವೊ ಅಪರಾದಿ ಎಲ್ಲವೂ ಸಾಬಿತಾದರೂ ಎನ್ ಕೌಂಟರ್ ಆಗಿಲ್ಲ ಯಾಕೆ?
    ಅದೇ ರೀತಿ ಕಾಶ್ಮೀರದ ಹುಡುಗಿಯ ಅತ್ಯಾಚಾರ ದ ಅಪರಾಧಿ ಗಳಿಗೂ ಆಗಿಲ್ಲ ಯಾಕೆ?
    ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣ ದಲ್ಲೂ ಶಿಕ್ಷೆಯಾಗಿಲ್ಲ ಯಾಕೆ?

  3. ಮರಣ ದಂಡನೆಯ ಬಗೆಗೆ ಚರ್ಚೆಗಳಾಗುತ್ತಿವೆ. ಯಾವುದೇ ವಿಚಾರಣೆ ಇಲ್ಲದೆ ನಾಲ್ವರಿಗೆ ಮರಣ ದಂಡಣೆ ಕೊಡಲಾಗಿದೆ.
    ಒಟ್ಟಾರೆ ನ್ಯಾಯಾಂಗವನ್ನು ಈ ಬೆಳವಣಿಗೆಯಲ್ಲಿ ಬದಿಗೊತ್ತಲಾಗಿದೆ.ಜುಡಿಶಿಯರಿ ಇದನ್ನು ಹೇಗೆ ಬಗೆಯುವುದೆಂಬುದನ್ನು ನೋಡಬೇಕು.
    ರೇಪಿನಂತ ಕಡುಕೇಡು ಮಾಡಿದವರನ್ನು ದಂಡಿಸಬೇಕೆ ಹೊರತು ಇವರ ಹೆತ್ತವರು, ಒಡಹುಟ್ಟಿದವರು ಯಾವ ಬಗೆಯಲ್ಲೂ ನೋವಿಗೆ ಒಳಗಾಗದಂತೆ ದಂಡಿಸುವ ದಾರಿಗಳಿದ್ದರೂ ಅವನ್ನು ಕಡೆಗಣಿಸಿ, ಮರಣದಂಡಣೆಗೀಡುಮಾಡುವುದು ಸರಿಯಲ್ಲ.
    ರೇಪುಮಾಡಿದವರನ್ನು ಕೆಲವು ನಾಡುಗಳಲ್ಲಿರುವಂತೆ ನೂರು/ಇನ್ನೂರು ವರುಶಗಳ ದಂಡನೆಗೆ ಒಳಪಡಿಸಿ, ಅಲ್ಲಿಯವರೆಗೆ ಅವರಿಂದ ಸೆರೆಮನೆಯಲ್ಲೇ ಯಾವುದೇ ಹಕ್ಕು ಕೊಡದೇ ದುಡಿಸಿ ದಂಡಿಸಬಹುದಾದ ನಡೆಬಗ್ಗೆ ನೋಡಬಹುದೇನೋ.
    ಈ ನಡುವೆ, ರೇಪುಮಾಡಿದವರ ಪಾಲಿನ ಸೊತ್ತನ್ನು ಈ ಬಗೆಯ ನೋವಿಗೀಡಾದವರಿಗೆ ಹಂಚುವಂತೆ ಮಾಡುವ ನಡೆಬಗೆಯೂ ಹೆಜ್ಜೆಇಡಬಹುದು.

  4. ಯಾರು ಏನೇ ಹೇಳಲಿ. ಕಾನೂನು ಪ್ರಕಾರ ಅದು ತಪ್ಪೇ ಆಗಿದ್ದುರೂನೂ ಹೈದರಾಬಾದ್ ಪೋಲಿಸ್ ರ ಕೆಲಸ ಪ್ರಶಂಸೆಗೆ ಅರ್ಹ. ಬರ್ಬರ ಅತ್ಯಾಚಾರ ನಡೆದಿದೆ, ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇನ್ಯಾಕೆ ಜೈಲು – ಬಿರಿಯಾನಿ – ಕೋರ್ಟ್ ಅಂತೆಲ್ಲಾ ಟೈಂ ವೇಷ್ಟ್?. ಇದು ಸರಿಯಲ್ಲ ಅಂತಹ ವಾದಿಸುವವರ ಮನೆಯ ಹೆಣ್ಣುಮಗೂಗೆ ಹೀಗೆ ಆದರೆ ಅರ್ಥ ವಾಗತ್ತೋ ಏನೋ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...