ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ, ಕೊಲೆಯ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಸೈಬರಾಬಾದ್ ಪೊಲೀಸ್ ಮುಖ್ಯಸ್ಥ ಸಜ್ಜನಾರ್ ಕಾನೂನು ತನ್ನ ಕರ್ತವ್ಯವನ್ನು ನಿರ್ವಹಿಸಿದೆ ಎಂದು ಹೇಳಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆ ನಡೆದ ಎನ್ಕೌಂಟರ್ ಕುರಿತು ಮಾಹಿತಿ ನೀಡಲು ಎನ್ಕೌಟರ್ ನಡೆದ ಸ್ಥಳದಲ್ಲಿಯೇ ಪತ್ರಿಕಾಗೋಷ್ಟಿ ನಡೆಸಿದ ಅವರು ನಾಲ್ವರು ಆರೋಪಿಗಳು ನಮ್ಮ ಪೊಲೀಸರ ಗನ್ಗಳನ್ನು ಕಸಿದುಕೊಂಡರು. ಹಾಗಾಗಿ ನಾವು ಗುಂಡು ಹಾರಿಸಬೇಕಾಯಿತು ಎಂದಿದ್ದಾರೆ.
ಈ ನಡುವೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದು ಕೇಂದ್ರ ಗೃಹ ಇಲಾಖೆಗೂ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಬಂದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
10 ಜನ ಪೊಲೀಸ್ ಅಧಿಕಾರಿಗಳು ನಾಲ್ವರು ಆರೋಪಿಗಳೊಂದಿಗೆ ಘಟನೆಯನ್ನು ಮರುನಿರೂಪಿಸಲು ಮತ್ತು ಸಂತ್ರಸ್ತೆಯ ಕಳೆದುಕೊಂಡಿದ್ದ ಕೆಲ ವಸ್ತುಗಳನ್ನು ಹುಡುಕಲು ಸ್ಥಳಕ್ಕೆ ಹೋಗಿದ್ದೆವು. ಆಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರು. ಕಲ್ಲು ಕೋಲುಗಳಿಂದ ನಮ್ಮ ಮೇಲೆ ದಾಳಿ ಮಾಡಿದರು. ನಾವು ನಮ್ಮ ಪೊಲೀಸರಿಗೆ ಸಂಯಮದಿಂದಿರಲು ಸೂಚಿಸಿದ್ದೆವು. ಹಾಗೆಯೇ ಅವರಿಗೆ ಶರಣಾಗಲು ಎಚ್ಚರಿಕೆ ನೀಡಿದೆವು. ಆದರೆ ಅವರು ನಮ್ಮ ಎರಡು ಗನ್ಗಳನ್ನು ಕಿತ್ತುಕೊಂಡು ಪರಾರಿಯಾಗಲು ಪ್ರಯತ್ನಿಸಿದರು ಆಗ ನಾವು ಫೈರ್ ಮಾಡಬೇಕಾಯಿತು ಎಂದು ಮಾಹಿತಿ ನೀಡಿದ್ದಾರೆ.
ಇಂದು ಮುಂಜಾನೆ 5:30ರ ಸಮಯದಲ್ಲಿ ನಾವು ಅಲ್ಲಿಗೆ ಹೋಗಿದ್ದೆವು. ಅವರಿಗೆ ಕೈಕೊಳ ಹಾಕಿರಲಿಲ್ಲ. 10 ಸದಸ್ಯರ ತಂಡದಲ್ಲಿದ್ದ ಇಬ್ಬರು ಪೊಲೀಸರು ತಲೆಗೆ ಗಾಯಗಳಾಗಿವೆ ಎಂದು ಅವರು ಹೇಳಿದ್ದಾರೆ.
ಮುಹಮ್ಮದ್ ಆರಿಫ್ (26), ಜೊಲ್ಲು ಶಿವ (20), ಜೊಲ್ಲು ನವೀನ್ (20) ಮತ್ತು ಚಿಂತಕುಂಟ ಚೆನ್ನಕೇಶವುಲು (20) ಎನ್ಕೌಂಟರ್ ನಲ್ಲಿ ಹತರಾದ ಆರೋಪಿಗಳಾಗಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ನಡೆಸಿದ ವಿಚಾರಣೆಯಲ್ಲಿ ಹಲವು ವಿವರಗಳು ಬಹಿರಂಗಗೊಂಡಿವೆ ಎಂದು ಸಜ್ಜನಾರ್ ತಿಳಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸ್ ತಂಡವು ಆರೋಪಿಗಳನ್ನು ಕರೆದೊಯ್ದು ಸಂತ್ರಸ್ತೆಯ ಮೊಬೈಲ್ ಫೋನ್, ಪವರ್ ಬ್ಯಾಂಕ್ ಮತ್ತು ವಾಚ್ ಅನ್ನು ಸಂಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ.
“ಕಳೆದ ನಾಲ್ಕು ದಿನಗಳಲ್ಲಿ, ನಾವು ಡಿಎನ್ಎ ಪ್ರೊಫೈಲಿಂಗ್ ಮಾಡಿದ್ದೇವೆ, ಅಪರಾಧವನ್ನು ಸಾಬೀತುಪಡಿಸಲು ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ನಾಲ್ವರು ಹಾರ್ಡ್ಕೋರ್ ಆರೋಪಿಗಳು ಇತರ ಅಪರಾಧಗಳಲ್ಲಿಯೂ ಭಾಗಿಯಾದ ಶಂಕೆಯಿದೆ ಎಂದು ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಪೊಲೀಸರ ಈ ಕಟ್ಟುಕತೆಯನ್ನು ನಂಬುವುದು ಸಾಧ್ಯವಿಲ್ಲ. ಅತ್ಯಾಚಾರದ ಆರೋಪಿಗಳನ್ನು ಕೈಕೋಳ ತೊಡಿಸದೆಯೇ ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗಿದ್ದು ಕರ್ತವ್ಯಲೋಪ ಅಥವಾ ಪೂರ್ವನಿಯೋಜಿತ ಸಂಚು.