ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಆರ್. ದೇವದಾಸ್ ಅವರ ವಾಗ್ದಂಡನೆಗೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ 2025ರ ಜೂನ್ 25ರಂದು ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಧರ್ಮಸ್ಥಳ ದೇವಾಲಯದ ಮುಖ್ಯಸ್ಥ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಡಾ. ಡಿ ವಿರೇಂದ್ರ ಹೆಗ್ಗಡೆ ಅವರ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದಕ್ಕಾಗಿ ಮತ್ತು ಆರೋಪಗಳನ್ನು ಮಾಡಿದ್ದಕ್ಕಾಗಿ ಹಿಂದುತ್ವ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಾಧೀಶ ದೇವದಾಸ್ ಅವರು 2025ರ ಜನವರಿ 20ರಂದು ಪೊಲೀಸರಿಗೆ ಆದೇಶಿಸಿದ್ದರು.
ಈ ಆದೇಶವು ಶಂಕಾಸ್ಪದವಾಗಿದೆ. ಇದರಿಂದಾಗಿ ರಾಜ್ಯಾದ್ಯಂತ ಆಯೋಜಿಸಲಾಗಿದ್ದ ನೂರಾರು ಪ್ರತಿಭಟನೆಗಳಿಗೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶದಿಂದಲೇ ಈ ಆದೇಶ ನೀಡಲಾಗಿದೆ. ಹಾಗಾಗಿ, ಆದೇಶ ನೀಡಿದ ನ್ಯಾಯಾಧೀಶ ದೇವದಾಸ್ ಅವರ ವಾಗ್ದಂಡನೆಯಾಗಬೇಕು. ಸೌಜನ್ಯ ಪ್ರಕರಣದ ವಿಚಾರಣೆಯಿಂದ ಅವರನ್ನು ವಜಾಗೊಳಿಸಬೇಕು ಎಂದು ರವಿಕೃಷ್ಣಾ ರೆಡ್ಡಿ ಒತ್ತಾಯಿಸಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿದೆ.
2012ರಲ್ಲಿ ಧರ್ಮಸ್ಥಳದ ಬಳಿ ವಿದ್ಯಾರ್ಥಿನಿ ಸೌಜನ್ಯ ಅವರನ್ನು ಅಪಹರಿಸಿ, ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು. ಸೌರ್ಜನ್ಯ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣದ ವಿರುದ್ಧ ಭಾರೀ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಪೊಲೀಸರು ಅಮಾಯಕ ಸಂತೋಷ್ ರಾವ್ ಅವರನ್ನು ಬಂಧಿಸಿದ್ದರು. ಆದರೆ, ಸೌಜನ್ಯ ಪ್ರಕರಣಕ್ಕೂ ಸಂತೋಷ್ ರಾವ್ಗೂ ಯಾವುದೇ ಸಂಬಂಧವಿಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಸಂತೋಷ್ ರಾವ್ ಅವರನ್ನು 2023ರಲ್ಲಿ ಪ್ರಕರಣದಿಂದ ಖುಲಾಸೆಗೊಳಿಸಿತ್ತು.
ಸಂತೋಷ್ ರಾವ್ ಖುಲಾಸೆಯಾದ ಬಳಿಕ, ಸೌಜನ್ಯ ಪ್ರಕರಣವನ್ನು ಮರುತನಿಖೆ ನಡೆಸಬೇಕು. ನೈಜ ಅಪರಾಧಿಗಳನ್ನು ಬಂಧಿಸಿ, ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕರಾವಳಿಯಾದ್ಯಂತ ಭಾರೀ ಪ್ರತಿಭಟನೆಗಳು ಭುಗಿಲೆದ್ದವು. ಈ ಪ್ರತಿಭಟನೆಗಳನ್ನು ಮಹೇಶ್ ಶೆಟ್ಟಿ ತಿಮರೋಡಿ ಮುನ್ನಡೆಸಿದ್ದರು.
ತಿಮರೋಡಿ ನೇತೃತ್ವದ ಪ್ರತಿಭಟನೆಗಳನ್ನು ಹತ್ತಿಕ್ಕಲು ಹಲವು ಪ್ರಯತ್ನಗಳು ನಡೆದಿತ್ತು. ಅವರ ವಿರುದ್ಧ 2023ರಲ್ಲಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ (SKDRDP) ಉದ್ಯೋಗಿ ಶೀನಪ್ಪ ಮತ್ತು ನಂದೀಶ್ ಕುಮಾರ್ ಜೈನ್ ಎಂಬವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ತಿಮರೋಡಿ ಅವರು ಈ ಹಿಂದೆ ಪ್ರತಿಭಟನೆಗಳನ್ನು ನಡೆಸದಂತೆ ವಿಧಿಸಲಾಗಿದ್ದ ಹೈಕೋರ್ಟ್ನ ತಡೆಯಾಜ್ಞೆಯನ್ನು ಉಲ್ಲಂಘಿಸಿದ್ದಾರೆ. ಧರ್ಮಸ್ಥಳ ಮತ್ತು ವಿರೇಂದ್ರ ಹೆಗ್ಗಡೆ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ವಿರುದ್ಧ ದೂರು ನೀಡಿದರೂ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು.
ಆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ದೇವದಾಸ್ ಅವರು, 2025ರ ಜನವರಿಯಲ್ಲಿ ತಿಮರೋಡಿ ವಿರುದ್ಧ ಆದೇಶ ನೀಡಿದ್ದರು. “ವಾಕ್ ಸ್ವಾತಂತ್ರ್ಯವು ಒಬ್ಬ ವ್ಯಕ್ತಿಯ ಘನತೆಗೆ ಧಕ್ಕೆ ತರುವಂತಿರಬಾರದು. ಮಹೇಶ್ ಶೆಟ್ಟಿ ತಿಮ್ಮರೋಡಿ ಅಥವಾ ಅವರ ಬೆಂಗಲಿಗರು ಹೆಗ್ಗದೆ ವಿರುದ್ಧ ಯಾವುದೇ ಹೇಳಿಕೆ ನೀಡಿದ್ದರೆ ಅಥವಾ ಅಂತಹ ಯಾವುದೇ ಅವಹೇಳನಕಾರಿ ಹೇಳಿಕೆಯನ್ನು ಪ್ರಕಟಿಸಿದ್ದರೆ ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು” ಎಂದು ನ್ಯಾಯಾಧೀಶರು ಹೇಳಿದ್ದರು.
ನ್ಯಾಯಾಧೀಶ ದೇವದಾಸ್ ಅವರ ಆದೇಶದ ವಿರುದ್ಧ ರವಿಕೃಷ್ಣಾ ರೆಡ್ಡಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. “ಸೌಜನ್ಯ ಪ್ರಕರಣದಲ್ಲಿ ಹೋರಾಟಗಾರರು ಮತ್ತು ಇತರರು ಸಭೆ ನಡೆಸಲು, ಪ್ರತಿಭಟನೆಗಳನ್ನು ಮಾಡಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಅದರ ಅನುಸಾರ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಲಾಗಿತ್ತು. ಆದರೆ, ನ್ಯಾಯಮೂರ್ತಿ ದೇವದಾಸ್ ಅವರು ನೀಡಿದ ತೀರ್ಪನ್ನು ಉಲ್ಲೇಖಿಸಿ ಪೊಲೀಸರು ಎಲ್ಲಾ ಪ್ರತಿಭಟನೆಗಳಿಗೆ ಅವಕಾಶ ನಿರಾಕರಿಸಿದ್ದಾರೆ. ಪ್ರತಿಭಟನೆ ನಡೆಸಿದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ರೆಡ್ಡಿ ಆರೋಪಿಸಿದ್ದಾರೆ.
ಕೆಳ ನ್ಯಾಯಾಲಯಗಳು, ವಿಶೇಷವಾಗಿ ಬೆಂಗಳೂರು ನಗರ ಸಿವಿಲ್ ನ್ಯಾಯಾಧೀಶ ಎಸ್. ನಟರಾಜ್ ನೀಡಿರುವ ತಾತ್ಕಾಲಿಕ ತಡೆಯಾಜ್ಞೆಗಳ ಕುರಿತು ಗಮನ ಸೆಳೆದಿರುವ ರವಿಕೃಷ್ಣಾ ರೆಡ್ಡಿ ಅವರು, “ಮಾರ್ಚ್ 21ರಂದು ದಾಖಲಾಗಿದ್ದ ಪ್ರಕರಣವೊಂದರಲ್ಲಿ, ನ್ಯಾಯಾಧೀಶ ನಟರಾಜ್ ಅವರು ಸೌಜನ್ಯ ಪ್ರಕರಣ ಮತ್ತು ಧರ್ಮಸ್ಥಳಕ್ಕೆ ಸಂಬಂಧಿಸಿದ 1,588 ಯೂಟ್ಯೂಬ್ ವಿಡಿಯೋಗಳನ್ನು, 645 ಇನ್ಸ್ಟಾಗ್ರಾಮ್ ವಿಡಿಯೋಗಳು ಮತ್ತು ಸ್ಲೈಡ್ಗಳು ಹಾಗೂ 633 ಫೇಸ್ಬುಕ್ ವಿಡಿಯೋಗಳು ಮತ್ತು ಸ್ಲೈಡ್ಗಳನ್ನು ತೆಗೆದುಹಾಕಲು ಆದೇಶ ಹೊರಡಿಸಿದ್ದಾರೆ. ಆದರೆ, 2,200ಕ್ಕೂ ಹೆಚ್ಚು ವಿಶಿಷ್ಟ ಯುಆರ್ಎಲ್ಗಳನ್ನು 24 ಗಂಟೆಗಳ ಒಳಗೆ ಪರಿಶೀಲಿಸಿ ಅವುಗಳ ಮಾನನಷ್ಟಕರ ಸ್ವರೂಪವನ್ನು ಖಚಿತಪಡಿಸಿಕೊಳ್ಳುವುದು ತಾಂತ್ರಿಕವಾಗಿ ಅಸಾಧ್ಯ” ಎಂದು ಹೇಳಿದ್ದಾರೆ.
ವಿರೇಂದ್ರ ಹೆಗ್ಗಡೆ ಪರವಾಗಿ ಕೆಲಸ ಮಾಡುತ್ತಿರುವ ಒಂದು ಗುಂಪಿನ ದಾವೆದಾರರು ಬಹು ರೀತಿಯ ಮೊಕದ್ದಮೆಗಳನ್ನು ದಾಖಲಿಸಿರುವುದು ಮತ್ತು ಅವೆಲ್ಲವನ್ನೂ ನ್ಯಾಯಾಧೀಶ ಎಸ್. ನಟರಾಜ್ ಅವರ ಪೀಠಕ್ಕೆ ನಿಗದಿ ಮಾಡುತ್ತಿರುವುದು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆಗಳ ನೋಂದಾವಣೆ ಕುರಿತು ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.
“ಸೌಜನ್ಯ ಪ್ರಕರಣದಲ್ಲಿನ ತಡೆಯಾಜ್ಞೆಗಳು ಮತ್ತು ಆದೇಶಗಳಲ್ಲಿ ನ್ಯಾಯಾಧೀಶ ಎಸ್. ನಟರಾಜ್ ಮತ್ತು ರಿಜಿಸ್ಟ್ರಿಯ ಪಾತ್ರದ ಬಗ್ಗೆ ತನಿಖೆ ನಡೆಸಲು ಹಾಗೂ ನ್ಯಾಯಮೂರ್ತಿ ದೇವದಾಸ್ ಅವರನ್ನು ಪದಚ್ಯುತಿಗೊಳಿಸಲು ‘ವಿಚಾರಣಾ ಆಯೋಗಗಳ ಕಾಯ್ದೆ-1951ರ ಅಡಿಯಲ್ಲಿ ತನಿಖಾ ಆಯೋಗವನ್ನು ಸ್ಥಾಪಿಸಬೇಕು” ಎಂದು ಮನವಿ ಮಾಡಿದ್ದಾರೆ.
ಗಮನಾರ್ಹವಾಗಿ, ಸೌಜನ್ಯ ಅತ್ಯಾಚಾರ, ಕೊಲೆ ಖಂಡಿಸಿ 2025ರ ಏಪ್ರಿಲ್ 6ರಂದು ಧರ್ಮಸ್ಥಳದಲ್ಲಿ ನಡೆಸಲು ಉದ್ದೇಶಿಸಿ ಪ್ರತಿಭಟನೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು.
ಪ್ರತಿಭಟನೆಗೆ ತಡೆ ನೀಡಬೇಕು ಎಂದು ಕೋರಿ ಧನಕೀರ್ತಿ ಆರಿಗ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಮುಂದಿನ ವಿಚಾರಣೆಯವರೆಗೂ ಪ್ರತಿಭಟನೆ ನಡೆಸದಂತೆ ತಾತ್ಕಾಲಿಕ ತಡೆ ನೀಡಿ ಆದೇಶಿಸಿತ್ತು.
ಇದಕ್ಕೂ ಮುನ್ನ, ಸೌಜನ್ಯಾಳ ನ್ಯಾಯಕ್ಕೆ ಆಗ್ರಹಿಸಿ ಮತ್ತು ಊಳಿಗಮಾನ್ಯ ದರ್ಪದ ವಿರುದ್ಧ ಆಯೋಜಿಸಿದ್ದ ಸಮಾನ ಮನಸ್ಕ ಸಾಹಿತಿ, ಚಿಂತಕರ ಹೋರಾಟದ ದಿಕ್ಸೂಚಿ ಸಭೆಗೆ ಅವಕಾಶ ನಿರಾಕರಿಸಲಾಗಿತ್ತು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದ 2025ರ ಮಾರ್ಚ್ 9ರಂದು ಆಯೋಜಿಸಿದ್ದ ಸಭೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ ಎಂಬ ಕಾರಣ ಕೊಟ್ಟು ಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಲಾಗಿತ್ತು.
ಆ ಬಳಿಕ, ಇದೇ ಸಭೆಯನ್ನು ಬೆಂಗಳೂರಿನ ಶೇಷಾದ್ರಿಪುರದ ಎಐಟಿಯುಸಿ ಸಭಾಂಗಣದಲ್ಲಿ ಮಾರ್ಚ್ 18ರಂದು ಆಯೋಜಿಸಲಾಗಿತ್ತು. ಆಗಲೂ ನ್ಯಾಯಾಲಯದ ನಿರ್ದೇಶನದ ಕಾರಣ ನೀಡಿ ಪೊಲೀಸರು ಅವಕಾಶ ನೀಡಿರಲಿಲ್ಲ.
ಸೌಜನ್ಯ: eedina.com & thenewsminute.com
ಕರ್ನಾಟಕದಲ್ಲಿ ಡಿಫೆನ್ಸ್ ಕಾರಿಡಾರ್ಗಳ ಸ್ಥಾಪನೆಗೆ ಮನವಿ; ರಕ್ಷಣಾ ಸಚಿವರನ್ನು ಭೇಟಿಯಾದ ಸಿದ್ದರಾಮಯ್ಯ


