ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಖಾಸಗಿ ವಸತಿ ಶಾಲೆಯಲ್ಲಿ ಒಬ್ಬಳು ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ, ಮತ್ತೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲೆಯ ಮಾಲೀಕ ಹಾಗೂ ಪ್ರಾಂಶುಪಾಲೆಯಾಗಿರುವ ಆತನ ಪತ್ನಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಒಬ್ಬಳು ಬಾಲಕಿ ಮೇಲೆ ಅತ್ಯಾಚಾರವೆಸಗಿ, ಆಕೆಯ ಸಹೋದರಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಶಾಲೆಯ ಮಾಲೀಕ ಧನಂಜಯ ಹಾಗೂ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲೆಯಾಗಿರುವ ಧನಂಜಯನ ಪತ್ನಿ ಶೈಲಜಾಳನ್ನು ಬಂಧಿಸಲಾಗಿದೆ ಎಂದು ವರದಿಗಳು ಹೇಳಿವೆ.
ಅಕ್ಕ-ತಂಗಿ ವಸತಿ ಶಾಲೆಯಲ್ಲಿ 8 ಮತ್ತು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಫೆ.9ರಂದು ಧನಂಜಯ ಶಾಲೆಯ ಕೊಠಡಿಯೊಂದರಲ್ಲಿ ಅಕ್ಕನ ಮೇಲೆ ಎರಡು ಬಾರಿ ಅತ್ಯಾಚಾರವೆಸಗಿದ್ದ. ನಂತರ ತಂಗಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಶೌಚಾಲಯದಲ್ಲಿ ಅಡಗಿಕೂತು ತಪ್ಪಿಸಿಕೊಂಡಿದ್ದಾಳೆ ಎಂದು ವರದಿಗಳು ವಿವರಿಸಿವೆ.
ಪತ್ನಿಯಿಂದ ಪ್ರಕರಣ ಮುಚ್ಚಿ ಹಾಕಲು ಯತ್ನ
ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಶಾಲೆಯ ಪ್ರಾಂಶುಪಾಲೆಯಾಗಿರುವ ಆರೋಪಿಯ ಪತ್ನಿ ಶೈಲಜಾ ಯತ್ನಿಸಿದ್ದಳು. ಅತ್ಯಾಚಾರಕ್ಕೊಳಗಾದ ಬಾಲಕಿ ಗರ್ಭ ಧರಿಸದಂತೆ ನೋಡಿಕೊಳ್ಳಲು ವಾರಗಟ್ಟಲೆ ಆಕೆಗೆ ಬಲವಂತವಾಗಿ ಪರಂಗಿ ಹಣ್ಣು ತಿನ್ನಿಸಿದ್ದಳು. ನಡೆದ ವಿಷಯವನ್ನು ಯಾರಲ್ಲೂ ಹೇಳಬಾರದು. ಎಸ್ಎಸ್ಎಲ್ಸಿವರೆಗೆ ಯಾವುದೇ ಶುಲ್ಕ ಪಡೆಯದೆ ಓದಿಸುತ್ತೇವೆ, ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಬಾಲಕಿಗೆ ಆಮಿಷವೊಡ್ಡಿದ್ದಳು. ಅಲ್ಲದೆ, ಯಾರಲ್ಲಾದರು ವಿಷಯ ಹೇಳಿದರೆ ಫೇಲ್ ಮಾಡುವುದಾಗಿ ಬೆದರಿಸಿದ್ದಳು ಎಂದು ಆರೋಪಿಸಲಾಗಿದೆ.
ಪ್ರಕರಣ ನಡೆದ ದಿನದಿಂದ ಬಾಲಕಿಯರನ್ನು ಅವರ ಪಾಲಕರು ಭೇಟಿಯಾಗದಂತೆ ನೋಡಿಕೊಳ್ಳಲಾಗಿತ್ತು. ಮಕ್ಕಳು ಪ್ರವಾಸಕ್ಕೆ ತೆರಳಿದ್ದಾರೆ, ಪರೀಕ್ಷೆಗೆ ಓದಿಕೊಳ್ಳುತ್ತಿದ್ದಾರೆ ಎಂಬ ನೆಪಗಳನ್ನು ಹೇಳಿ ಅವರು ಪೋಷಕರ ಸಂಪರ್ಕಕ್ಕೆ ಸಿಗದಂತೆ ಮಾಡಲಾಗಿತ್ತು. ಕೊನೆಗೆ ಪಾಲಕರು ಒತ್ತಾಯ ಮಾಡಿದಾಗ 5 ನಿಮಿಷಗಳ ಕಾಲ ಮಾತ್ರ ಪೋಷಕರನ್ನು ಭೇಟಿಯಾಗಲು ಮಕ್ಕಳಿಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಮಕ್ಕಳು ನಡೆದ ವಿಷಯವನ್ನು ಪೋಷಕರಿಗೆ ತಿಳಿಸಿದ್ದರು. ಪೋಷಕರು ದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ಮಲಗುತ್ತಿದ್ದ ಕೊಠಡಿಗೆ ಬೋಲ್ಟ್- ಬೀಗವೇ ಇರಲಿಲ್ಲ ಎಂಬುವುದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿ ಧನಂಜಯ ಉದ್ದೇಶಪೂರ್ವಕವಾಗಿಯೇ ಕೊಠಡಿಯನ್ನು ಸುಲಭವಾಗಿ ಪ್ರವೇಶಿಸಲು ಈ ರೀತಿ ಮಾಡಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಬಾಲಕಿಯರ ಮೇಲೆ ದೌರ್ಜನ್ಯವೆಸಗಿದ ದಿನ ವಸತಿ ಶಾಲೆಯ ವಾರ್ಡನ್ ಆಗಿರುವ ತನ್ನ ಅತ್ತೆಯನ್ನು ಆರೋಪಿ ಮನೆಗೆ ಕಳುಹಿಸಿದ್ದ ಎಂದು ವರದಿಗಳು ಉಲ್ಲೇಖಿಸಿವೆ.
ಇಬ್ಬರು ಆರೋಪಿಗಳ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ಶಾಲೆಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ. ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಭೇಟಿ ಮಾಹಿತಿ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.


