ಭಾರತೀಯ ನೌಕಾಪಡೆಯ ಆಹ್ವಾನದ ಮೇರೆಗೆ ಸಮರಾಭ್ಯಾಸದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಇರಾನ್ನ ಅತ್ಯಾಧುನಿಕ ಯುದ್ಧನೌಕೆ ಐಆರ್ಐಎಸ್ ದೆನಾ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆಸಿ ಅದನ್ನು ಮುಳುಗಿಸಿದೆ.
ಮಾರ್ಚ್ 4ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯಿಂದ ಸುಮಾರು 40 ನಾಟಿಕಲ್ ಮೈಲಿ ದೂರದಲ್ಲಿರುವ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಅಮೆರಿಕದ ಜಲಾಂತರ್ಗಾಮಿ ಟಾರ್ಪಿಡೊ ಬಳಸಿ ಈ ದಾಳಿ ನಡೆಸಿದೆ.
ಇರಾನ್ನ ಯುದ್ಧನೌಕೆಯು ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಭಾರತೀಯ ನೌಕಾಪಡೆಯ ‘ಮಿಲನ್ 2026’ ಮತ್ತು ಅಂತಾರಾಷ್ಟ್ರೀಯ ಫ್ಲೀಟ್ ರಿವ್ಯೂನಲ್ಲಿ ಭಾಗವಹಿಸಿ ಇರಾನ್ಗೆ ಮರಳುತ್ತಿತ್ತು. ಈ ತಂಡವನ್ನು ‘ಭಾರತದ ನೌಕಾಪಡೆಯ ಅತಿಥಿ’ ಎಂದು ಇರಾನ್ ಬಣ್ಣಿಸಿದೆ.
ದಾಳಿಯ ಸಮಯದಲ್ಲಿ ನೌಕೆಯಲ್ಲಿದ್ದ ಸುಮಾರು 130 ನೌಕಾ ಸಿಬ್ಬಂದಿಯ ಪೈಕಿ 87 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 32 ಸಿಬ್ಬಂದಿಯನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿದೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈ ದಾಳಿಯನ್ನು ದೃಢಪಡಿಸಿದ್ದು, ಎರಡನೇ ಮಹಾಯುದ್ಧದ ನಂತರ ಶತ್ರು ದೇಶದ ಯುದ್ಧನೌಕೆಯೊಂದನ್ನು ಟಾರ್ಪಿಡೊ ಮೂಲಕ ಮುಳುಗಿಸಿದ ಮೊದಲ ಘಟನೆ ಇದಾಗಿದೆ ಎಂದು ಹೇಳಿದ್ದಾರೆ.
ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಈ ದಾಳಿಯನ್ನು ‘ಸಮುದ್ರದಲ್ಲಿ ನಡೆದ ದೌರ್ಜನ್ಯ’ ಎಂದಿದ್ದು, ಈ ಕೃತ್ಯಕ್ಕಾಗಿ ಅಮೆರಿಕ ಭಾರೀ ಪಶ್ಚಾತ್ತಾಪ ಪಡಲಿದೆ ಎಂದು ಅವರು ಕಟುವಾಗಿ ಎಚ್ಚರಿಸಿದ್ದಾರೆ.

ಅಮೆರಿಕವು ಇರಾನ್ ವಿರುದ್ಧ ದಾಳಿ ನಡೆಸಲು ಭಾರತದ ಬಂದರುಗಳನ್ನು ಬಳಸಿಕೊಂಡಿದೆ ಎಂಬ ವರದಿಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಬಲವಾಗಿ ನಿರಾಕರಿಸಿದೆ. ಇಂತಹ ಸುದ್ದಿಗಳನ್ನು ‘ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ’ ಎಂದು ಎಂಇಎ ಫ್ಯಾಕ್ಟ್ಚೆಕ್ ಮೂಲಕ ಸ್ಪಷ್ಟಪಡಿಸಿದೆ.
ದಾಳಿಯ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸದ್ಯಕ್ಕೆ ಸಂಪೂರ್ಣ ‘ಮೌನ’ ಪಾಲಿಸಿದೆ. ಕೇಂದ್ರ ಸರ್ಕಾರ ಸಮತೋಲಿತ ರಾಜತಾಂತ್ರಿಕ ನಿಲುವನ್ನು ಅನುಸರಿಸುತ್ತಿದೆ. ಯಾವುದೇ ದೇಶದ ಪರವಾಗಿ ನೇರ ಹೇಳಿಕೆ ನೀಡದೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವರದಿಗಳು ಹೇಳಿದೆ.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದೆ. ಎಲ್ಲಾ ದೇಶಗಳು ಸಂಯಮದಿಂದ ವರ್ತಿಸಬೇಕು, ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಮತ್ತು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ವಿಚಾರದಲ್ಲಿ ಸರ್ಕಾರದ ಮೌನವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಇದು ಭಾರತದ ಇಂಧನ ಭದ್ರತೆ ಮತ್ತು ತೈಲ ಪೂರೈಕೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ್ ಅವರು ಈ ದಾಳಿಯನ್ನು ‘ಅರ್ಥಹೀನ ಮತ್ತು ಪ್ರಚೋದನಾತ್ಮಕ ಕೃತ್ಯ’ ಎಂದು ಖಂಡಿಸಿದ್ದಾರೆ. ಇದು ಜಾಗತಿಕ ಸಮುದ್ರ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


