ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ.
“ಬಿಜು ಬಾಬು ಅವರು ನಮಗೆ ಯಾವಾಗಲೂ ಒಬ್ಬ ಉನ್ನತ ಮಟ್ಟದ ರಾಜನೀತಿಜ್ಞರಾಗಿದ್ದರು ಮತ್ತು ಮುಂದೆಯೂ ಹಾಗೆಯೇ ಇರುತ್ತಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ” ಎಂದು ದುಬೆ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
“ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ, ಅದರಲ್ಲೂ ವಿಶೇಷವಾಗಿ ಬಿಜು ಪಟ್ನಾಯಕ್ ಅವರ ವಿಷಯದಲ್ಲಿ ಹೀಗಾಗಿದೆ” ಎಂದು ದುಬೆ ತಿಳಿಸಿದ್ದಾರೆ. “ಮೊದಲನೆಯದಾಗಿ, ಈ ಹೇಳಿಕೆಯು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನೆಹರೂ ಅವರ ಬಗ್ಗೆ ನಾನು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಬಿಜು ಬಾಬು ಅವರಿಗೆ ಸಂಬಂಧಿಸಿದ್ದು ಎಂದು ತಪ್ಪಾಗಿ ಗ್ರಹಿಸಲಾಗಿದೆ” ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ಕಲ್ ದಿವಸದ ಅಂಗವಾಗಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರಿಗೆ ನೀಡಿದ ಸಂದೇಶದಲ್ಲಿ, ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರನ್ನು ರಾಷ್ಟ್ರ ನಿರ್ಮಾಣದ ಬದ್ಧತೆಗಾಗಿ ಶ್ಲಾಘಿಸಿದ ನಂತರ ದುಬೆ ಈ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಧಾನಿಯವರು ಬಿಜು ಪಟ್ನಾಯಕ್ ಅವರನ್ನು ಧೈರ್ಯ ಮತ್ತು ಶಕ್ತಿಯ ಸಂಕೇತವೆಂದು ಬಣ್ಣಿಸಿದ್ದು, ಅವರ ಬಹುಮುಖ ವ್ಯಕ್ತಿತ್ವವು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದು ಎಂದಿದ್ದಾರೆ.
ಮಾರ್ಚ್ 27ರಂದು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜಾರ್ಖಂಡ್ನ ಗೊಡ್ಡಾ ಕ್ಷೇತ್ರದ ಬಿಜೆಪಿ ಸಂಸದ ದುಬೆ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಅಮೆರಿಕದ ಬೆಂಬಲದೊಂದಿಗೆ ಮತ್ತು ಸಿಐಎ ಏಜೆಂಟ್ಗಳ ಸಹಯೋಗದೊಂದಿಗೆ ಚೀನಾ ವಿರುದ್ಧ 1962ರ ಯುದ್ಧವನ್ನು ಮಾಡಿದ್ದರು ಎಂದು ಆರೋಪಿಸಿದ್ದರು. ಅಲ್ಲದೆ, ಆಗಿನ ಒಡಿಶಾ ಮುಖ್ಯಮಂತ್ರಿಯಾಗಿದ್ದ ಬಿಜು ಪಟ್ನಾಯಕ್ ಅವರು ಅಮೆರಿಕ ಸರ್ಕಾರ, ಸಿಐಎ ಮತ್ತು ನೆಹರೂ ನಡುವೆ ಒಂದು “ಸಂಪರ್ಕ ಕೊಂಡಿ”ಯಾಗಿದ್ದರು ಎಂದಿದ್ದರು.
ಮತ್ತೊಂದು ಗಂಭೀರ ಆರೋಪ ಮಾಡಿದ್ದ ದುಬೆ, ಬಿಜು ಪಟ್ನಾಯಕ್ ಅವರು ಒಡಿಶಾದ ಚಾರ್ಬಾಟಿಯಾ ವಾಯುನೆಲೆಯಿಂದ ಅಮೆರಿಕದ ‘ಯು-2’ ಗೂಢಚಾರಿ ವಿಮಾನಗಳ ಕಾರ್ಯಾಚರಣೆಗೆ ಸಿಐಎಗೆ ನೆರವಾಗಿದ್ದರು ಮತ್ತು 1963ರಿಂದ 1979ರವರೆಗೆ ಆ ನೆಲೆಯಲ್ಲಿ ಭಾರತದಲ್ಲಿ ಅಮೆರಿಕದ ಮಿಲಿಟರಿ ಉಪಸ್ಥಿತಿಗೆ ಅವಕಾಶ ನೀಡಲಾಗಿತ್ತು ಎಂದು ದೂರಿದ್ದರು. ದುಬೆ ಅವರ ಈ ಹೇಳಿಕೆಗಳು ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ಸ್ವತಃ ಬಿಜೆಪಿ ಪಕ್ಷದ ಒಳಗೂ ಅವರ ಸಹೋದ್ಯೋಗಿಗಳು ಈ ಮಾತುಗಳನ್ನು ‘ಅಸಂಬದ್ಧ’ ಎಂದು ಕರೆದಿದ್ದರು.
ಬಿಜು ಪಟ್ನಾಯಕ್ ಅವರ ಕಿರಿಯ ಪುತ್ರ ಮತ್ತು ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ದುಬೆ ಹೇಳಿಕೆಗಳನ್ನು ಖಂಡಿಸುತ್ತಾ, ಅವರಿಗೆ ‘ಮಾನಸಿಕ ವೈದ್ಯರ ಅಗತ್ಯವಿದೆ’ ಎಂದು ಲೇವಡಿ ಮಾಡಿದ್ದರು. ಅಷ್ಟೇ ಅಲ್ಲದೆ, ದುಬೆ ಅವರ ಹೇಳಿಕೆ ವಿರೋಧಿಸಿ, ಬಿಜೆಡಿ ಸಂಸದ ಸಾಸ್ಮಿತ್ ಪಾತ್ರ ಅವರು ದುಬೆ ನೇತೃತ್ವದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಗೆ ರಾಜೀನಾಮೆ ನೀಡಿದ್ದರು.
ಬಿಜು ಪಟ್ನಾಯಕ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಕುಟುಂಬದವರಾದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಅವರು, ಪಟ್ನಾಯಕ್ ಅವರ ದೇಶಪ್ರೇಮದ ಬಗ್ಗೆ ಅಪಪ್ರಚಾರ ಮಾಡುವುದು ‘ಕಾಲ್ಪನಿಕ ಮತ್ತು ಸಂಪೂರ್ಣವಾಗಿ ಹಾಸ್ಯಾಸ್ಪದ’ ಎಂದು ಹೇಳಿದ್ದರು.
ಪಕ್ಷಾತೀತವಾಗಿ ರಾಜಕೀಯ ನಾಯಕರು ಕೂಡ ಬಿಜು ಪಟ್ನಾಯಕ್ ವಿರುದ್ಧದ ಹೇಳಿಕೆಗಳನ್ನು ಖಂಡಿಸಿದ್ದರು.


