ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ ‘SIR ವಿರೋಧಿ ಜನಜಾಗೃತಿ ಜಾಥಾ’ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು.
ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ ತಂಡವು, ಅಲ್ಲಿ ಯಶಸ್ವಿ ಪ್ರಚಾರ ಮತ್ತು ಸಭೆ ನಡೆಸಿತು. ನಂತರ ಆಲ್ದೂರಿಗೆ ತೆರಳಿ ಕರಪತ್ರಗಳನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು. ಅಲ್ಲಿಂದ ಸಂಜೆ ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ ಜಾಥಾ ನೇತೃತ್ವದ ತಂಡವು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಬಳಿಕ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿತು.
ರಕ್ತ ಕೊಟ್ಟೇವು, ಮತದಾನದ ಹಕ್ಕು ಕಳೆದುಕೊಳ್ಳುವುದಿಲ್ಲ: ಗೌಸ್ ಮೊಹಿದ್ದೀನ್ ಆಕ್ರೋಶ
ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ‘ಎದ್ದೇಳು ಕರ್ನಾಟಕ’ ಸಂಘಟನೆಯ ಮುಖಂಡರಾದ ಗೌಸ್ ಮೊಹಿದ್ದೀನ್, “ನಾವು ರಕ್ತ ಕೊಟ್ಟೇವು, ಆದರೆ ನಮ್ಮ ಮತದಾನದ ಹಕ್ಕನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳುವುದಿಲ್ಲ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಹಿಂದೆ ಮತದಾರರು ಸರ್ಕಾರವನ್ನು ಆಯ್ಕೆ ಮಾಡುತ್ತಿದ್ದರು. ಆದರೆ, ಈಗ ಸರ್ಕಾರವೇ ತನಗೆ ಬೇಕಾದ ಮತದಾರರನ್ನು ಆಯ್ಕೆ ಮಾಡಿಕೊಳ್ಳುವಂತಹ ವಿಪರ್ಯಾಸದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ನಾವು ಮತದಾನದ ಹಕ್ಕನ್ನು ಕಳೆದುಕೊಂಡರೆ, ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದರು.
ಪಶ್ಚಿಮ ಬಂಗಾಳದ ಉದಾಹರಣೆ ನೀಡಿದ ಅವರು, “ಅಲ್ಲಿ ಇದೇ ಕಾನೂನಿನಿಂದಾಗಿ ಸುಮಾರು 91 ಲಕ್ಷ ಜನರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಭವಿಷ್ಯದಲ್ಲಿ ಅವರು ಈ ದೇಶದ ನಾಗರಿಕರಲ್ಲ ಎಂದರೆ ಅವರು ಎಲ್ಲಿಗೆ ಹೋಗಬೇಕು? ದೇಶದ ಮೂಲ ನಿವಾಸಿಗಳಾದ ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಈ ‘SIR’ ಅನ್ನು ಜಾರಿ ಮಾಡಲಾಗುತ್ತಿದೆ. ಇದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡು ತಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳಬೇಕು ಹಾಗೂ ಜನಸಾಮಾನ್ಯರಲ್ಲಿ ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು” ಎಂದು ಮನವಿ ಮಾಡಿದರು.
ಜೂನ್ 20ರ ಬೆಂಗಳೂರು ಸಮಾವೇಶಕ್ಕೆ ಕರೆ
ಇದೇ ವೇಳೆ ಮಾತನಾಡಿದ ನಾಯಕರು, ಬರುವ 20ನೇ ತಾರೀಖಿನಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಭಾಗವಹಿಸಬೇಕು. ಆ ಮೂಲಕ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ದೇಶದ ನಾಗರಿಕರ ಶಕ್ತಿಯನ್ನು ತೋರ್ಪಡಿಸಿ, ತಕ್ಕ ಎಚ್ಚರಿಕೆ ನೀಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ರಾಧಾ ಸುಂದರೇಶ್, ಡಿಎಸ್ಎಸ್ ನಾಯಕರಾದ ಅಣ್ಣಯ್ಯ, ಮಂಜು, ಟಿಪ್ಪು ಸಮಿತಿಯ ರಾಜ್ಯಾಧ್ಯಕ್ಷರಾದ ಜಮ್ಶದ್ ಖಾನ್, ಮುನ್ನ ಕಡೂರು, ರಿಸ್ವನ್ ಖಾಲೀದ್ ಸೇರಿದಂತೆ ಪ್ರಮುಖ ಪ್ರಗತಿಪರ ಚಿಂತಕರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಜಾಥಾದ ನೇತೃತ್ವವನ್ನು ಸುರೇಶ್ ನಾಯ್ಕ್ ಮುನ್ನ ಕಡೂರು, ರಾಮು ಕೌಳಿ, ಸಂದೀಪ್ ಸುಮಂತ್ ರಾಜೀವ್ ಸರೋಜ ಮತ್ತು ಪವಿತ್ರ ವಹಿಸಿದ್ದರು.


