ಎಸ್ಐಆರ್ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ ಎಂದು ಮೌನವಾಗಿ ಕುಳಿತಿರುವ ಜನ ಕಾರಣವೇ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಕೇಳಿಕೊಳ್ಳಬೇಕಿದೆ ಎಂದು ಹಿರಿಯ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಎಸ್ಐಆರ್ (SIR) ವಿರೋಧಿಸಿ ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ನಡೆದ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಇಲ್ಲಿ ನೆರೆದಿರುವ ನಮ್ಮೆಲ್ಲರಿಗೂ ಈ ಸಮಸ್ಯೆಯ ತೀವ್ರತೆ ಗೊತ್ತಿದೆ. ನಮ್ಮ ಮೂಲಕ ಈ ಆತಂಕದ ವಿಚಾರ ರಾಜ್ಯದ ಪ್ರತಿ ಮನೆಗೂ ತಲುಪಬೇಕಿದೆ. ಮತದಾನದ ಮಹತ್ವ ನಮಗೆ ತಿಳಿದಿದೆ, ಆದರೆ ಮತ ಹಾಕದಂತೆ ಅಡ್ಡಿಪಡಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಕಡುಬಡವರ ಬಳಿ ಇಲ್ಲದ ದಾಖಲೆಗಳನ್ನು ಕೇಳುವ ಮೂಲಕ ಅವರನ್ನು ಮತದಾನಕ್ಕೆ ಅಯೋಗ್ಯರು ಎಂದು ಬಿಂಬಿಸಲಾಗುತ್ತಿದೆ. ನಾಗರಿಕ ಸಮಾಜದ ಒಬ್ಬ ವ್ಯಕ್ತಿಯಾಗಿ ತನ್ನ ಹಕ್ಕು ಚಲಾಯಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಎಸ್ಐಆರ್ನ ಅನಾಹುತಗಳು ಕೇವಲ ಒಬ್ಬರ ಸಮಸ್ಯೆಯಲ್ಲ, ಇದು ಇಡೀ ರಾಜ್ಯದ ಅಸ್ತಿತ್ವದ ಪ್ರಶ್ನೆಯಾಗಿದೆ ಎಂಬುವುದನ್ನು ನಾವು ಗಂಭೀರವಾಗಿ ಅರ್ಥ ಮಾಡಿಕೊಳ್ಳಬೇಕು” ಎಂದು ಎಚ್ಚರಿಸಿದರು.
ಮತದಾರರ ಹಕ್ಕುಗಳನ್ನು ಉಳಿಸಿಕೊಳ್ಳಲು ಆಯೋಜಿಸಲಾದ ಈ ಸಮಾವೇಶದ ಉದ್ದೇಶವನ್ನು ಎಲ್ಲರೂ ಅರಿತು ಸೂಕ್ತವಾಗಿ ಸ್ಪಂದಿಸಬೇಕಿದೆ ಎಂದು ಅವರು ಕರೆ ನೀಡಿದರು. ಇದೇ ವೇಳೆ ಮಾಧ್ಯಮಗಳ ಜವಾಬ್ದಾರಿಯನ್ನು ನೆನಪಿಸಿದ ಅವರು, “ಮಾಧ್ಯಮಗಳು ಮನಸ್ಸು ಮಾಡಿದರೆ ಎಸ್ಐಆರ್ನ ಅಪಾಯಗಳನ್ನು ಹಳ್ಳಿ-ಹಳ್ಳಿಗಳಿಗೂ ತಲುಪಿಸಬಲ್ಲವು. ಈ ವಿಷಯದಲ್ಲಿ ಮಾಧ್ಯಮದವರು ಹೆಚ್ಚಿನ ಕಾಳಜಿ ವಹಿಸಬೇಕು” ಎಂದು ಮನವಿ ಮಾಡಿದರು.
“ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಬೇಕು. ಸರ್ಕಾರ ನಮಗೆ ತಾಯಿಯಂತೆ ಜೊತೆ ನಿಲ್ಲಬೇಕು. ಪ್ರಜಾಪ್ರಭುತ್ವದಲ್ಲಿ ನಾವು ನಂಬಿರುವುದು ಸರ್ಕಾರ ಮತ್ತು ನ್ಯಾಯಾಂಗವನ್ನು ಮಾತ್ರ. ಅವರೇ ನಮ್ಮನ್ನು ಕೈಬಿಟ್ಟರೆ ನಾವು ಅನಾಥರಾಗುತ್ತೇವೆ. ಹಾಗಾಗಿ, ಜನರಿಗೆ ಈಗ ಸರ್ಕಾರದ ಬೆಂಬಲದ ಅವಶ್ಯಕತೆ ಇದೆ. ಪ್ರಜೆಗಳು ಪ್ರಾಮಾಣಿಕವಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮುಂದುವರಿಸಬೇಕು” ಎಂದು ಬಿ.ಟಿ. ಲಲಿತಾ ನಾಯ್ಕ್ ಒತ್ತಾಯಿಸಿದರು.
‘ಚುನಾವಣಾ ಆಯೋಗಕ್ಕೆ’ ಪ್ರತಿರೋಧ ಸಮಾವೇಶದ ಆಗ್ರಹಗಳು:
- ಅತಾರ್ತಿಕ ʼಲಾಜಿಕಲ್ ಡಿಸ್ಕ್ರಿಪೆನ್ಸಿʼ ಸಾಫ್ಟ್ವೇರ್ ಅನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು.
- ನೀವು ತಯಾರಿಸುವ ಮತದಾರರ ಪಟ್ಟಿಯ ಕರಡು ಪ್ರತಿಯನ್ನು (ಪರಿಶೀಲನೆಗೆ ಅವಕಾಶವಿರುವಂತೆ) ಕಂಪ್ಯೂಟರ್ ಓದುವ ಮಾದರಿಯಲ್ಲಿ ಕೊಡಬೇಕು.
- ಚುನಾವಣಾ ಮ್ಯಾನ್ಯೂಯಲ್ನಲ್ಲಿ ನೀಡಲಾಗಿರುವ ನಿರ್ದೇಶನದಂತೆ, ಕರಡು ಮತದಾರರ ಪಟ್ಟಿಯನ್ನು ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳನ್ನು ಕರೆದು ಸಾರ್ವಜನಿಕ ಪರಿಶೀಲನೆಗೆ ಮತ್ತು ತಿದ್ದುಪಡಿಗೆ ಒಳಪಡಿಸಬೇಕು.
- ಅಪೀಲ್ ಸಲ್ಲಿಸಲು ಕನಿಷ್ಠ ಆರು ತಿಂಗಳ ಸಮಯಾವಕಾಶ ನೀಡಲೇ ಬೇಕು.
‘ರಾಜ್ಯ ಸರಕಾರಕ್ಕೆ’ ಪ್ರತಿರೋಧ ಸಮಾವೇಶದ ಆಗ್ರಹಗಳು:
- ಸರಳ ವಿಧಾನ ಬಳಸಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ, ಚೆಕ್ ಲಿಸ್ಟ್ ರೀತಿ ಕೆಲಸ ಮಾಡುವ, ರಾಜ್ಯದ ಸ್ವಾಲಂಬಿ ಅರ್ಹ ಮತದಾರರ ಪಟ್ಟಿಯನ್ನು ತಯಾರಿಸಬೇಕು.
- ಅರ್ಹ ಮತದಾರರಿಗೆ ಗ್ಯಾರಂಟಿಯಾಗಿ ಸ್ಮಾರ್ಟ್ ಕಾರ್ಡ್ ವಿತರಿಸಬೇಕು.
- ಎಸ್ಐಆರ್ ಕೇಳುವ ದಾಖಲೆಗಳಲ್ಲದ ಅರ್ಹ ಮತದಾರರಿಗೆ ಸ್ಥಳದಲ್ಲೇ ಅಗತ್ಯ ದಾಖಲೆ ಒದಗಿಸಬೇಕು.


