ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರಂ ಮತ್ತು ಕುಂಬಳೆ ಉಪಜಿಲ್ಲೆಗಳ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕ್ವಿಜ್ನಲ್ಲಿ ವಿ ವಿನಾಯಕ ದಾಮೋದರ ಸಾವರ್ಕರ್ ಕುರಿತಾದ ಪ್ರಶ್ನೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಸೋಶಿಯಲ್ ಸೈನ್ಸ್ ಕ್ಲಬ್ ಅಸೋಸಿಯೇಷನ್ ವತಿಯಿಂದ ಎಲ್ಪಿ ವಿಭಾಗದ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಈ ಕ್ವಿಜ್ನಲ್ಲಿ “ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆ ಪಡೆದ ಸ್ವಾತಂತ್ರ್ಯ ಹೋರಾಟಗಾರ ಯಾರು?” ಎಂದು ಐದನೇ ಟೈ-ಬ್ರೇಕರ್ ಪ್ರಶ್ನೆಯಾಗಿ ಕೇಳಲಾಗಿತ್ತು. ಇದಕ್ಕೆ ‘ವಿ.ಡಿ. ಸಾವರ್ಕರ್’ ಎಂಬ ಉತ್ತರವನ್ನು ನೀಡಲಾಗಿದ್ದು, “ಅತ್ಯಂತ ಕಠಿಣ ಶಿಕ್ಷೆ” ಎಂಬ ಪದಪ್ರಯೋಗವೇ ಪ್ರಮುಖ ಚರ್ಚೆ ಹಾಗೂ ಆಕ್ಷೇಪಕ್ಕೆ ಕಾರಣವಾಗಿದೆ.
ಈ ಕ್ವಿಜ್ಗೆ ಸರ್ಕಾರದ ಅಧಿಕೃತ ಮಾನ್ಯತೆ ಇಲ್ಲದಿದ್ದರೂ, ಪ್ರಶ್ನೆಪತ್ರಿಕೆಗಳು ಸಹಾಯಕ ಶೈಕ್ಷಣಿಕ ಅಧಿಕಾರಿಗಳ (AEO) ಕಚೇರಿಗಳ ಮೂಲಕ ಶಾಲೆಗಳಿಗೆ ವಿತರಣೆಯಾಗಿರುವುದು ತೀವ್ರ ಆಕ್ರೋಶಕ್ಕೆ ದಾರಿಕಲ್ಪಿಸಿದೆ. ಸ್ವಾತಂತ್ರ್ಯ ಹೋರಾಟದ ಸಮಗ್ರ ಇತಿಹಾಸವನ್ನು ಬೋಧಿಸುವ ಬದಲು ಕಿರಿಯ ಮಕ್ಕಳ ಮನಸ್ಸಿನಲ್ಲಿ ನಿರ್ದಿಷ್ಟ ಸೈದ್ಧಾಂತಿಕ ಹಿನ್ನೆಲೆಯ ನಾಯಕರನ್ನು ವೈಭವೀಕರಿಸುವ ಮತ್ತು ಸಾಪೇಕ್ಷ ವಿಚಾರಗಳನ್ನು ನೈಜ ಸತ್ಯವೆಂಬಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ವಿವಿಧ ಸಂಘಟನೆಗಳು ಕಟುವಾಗಿ ಆರೋಪಿಸಿವೆ.
ವಿವಾದ ತೀವ್ರಗೊಳ್ಳುತ್ತಿದ್ದಂತೆ ಸಿಪಿಎಂ ಯುವ ಘಟಕ ಡಿವೈಎಫ್ಐ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಯುಡಿಎಫ್ ಆಡಳಿತಾವಧಿಯಲ್ಲಿ ಶಿಕ್ಷಣ ಇಲಾಖೆಯ ಮೂಲಕ ಸಂಘ ಪರಿವಾರದ ಸಿದ್ಧಾಂತವನ್ನು ತೂರಿಸಲಾಗುತ್ತಿದೆ ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಸಂಜೀವ್ ಕಿಡಿಕಾರಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳದ ಸಾಮಾನ್ಯ ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅವರು, ಪ್ರಶ್ನೆಪತ್ರಿಕೆ ಸಿದ್ಧತೆ ಮತ್ತು ವಿತರಣೆಯಲ್ಲಿ ಶೈಕ್ಷಣಿಕ ಅಧಿಕಾರಿಗಳ ಪಾತ್ರದ ಕುರಿತು ಮಹಾನಿರ್ದೇಶಕರಿಂದ ತುರ್ತು ವರದಿ ಕೇಳಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.


