ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೋಬ್ಬರಿ 1.08 ಕೋಟಿ ಮತದಾರರ ಹೆಸರನ್ನು ಎಎಸ್ಡಿಡಿಒ (ASDDO) ಪಟ್ಟಿಗೆ ಸೇರಿಸಿ ಆತಂಕ ಸೃಷ್ಟಿಸಿದ್ದ ಚುನಾವಣಾ ಆಯೋಗ, ಈಗ ಆ ಪಟ್ಟಿಯ ಸಾರ್ವಜನಿಕ ಪ್ರಕಟಣೆಯ ವಿಷಯದಲ್ಲೂ ಸರಿಯಾದ ಕ್ರಮ ವಹಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆಯೋಗ ನೀಡಿರುವ ಅಧಿಕೃತ ಹೇಳಿಕೆ ಮತ್ತು ವಾಸ್ತವ ಸ್ಥಿತಿಯ ನಡುವೆ ಅಜಾಗಜಾಂತರ ವ್ಯತ್ಯಾಸವಿರುವುದು ಗೋಚರಿಸಿದೆ.
ಆಗಸ್ಟ್ 12ರಂದು ನಡೆದ ಚುನಾವಣಾಧಿಕಾರಿಗಳ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಅನ್ಬುಕುಮಾರ್, “ಎಎಸ್ಡಿಡಿಒ ಪಟ್ಟಿಯನ್ನು ಎಲ್ಲ ಬೂತ್ ಮಟ್ಟದ ಅಧಿಕಾರಿಗಳು (BLO), ಇಆರ್ಒ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳಿಗೆ ತಲುಪಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರತಿಯೊಂದು ಗ್ರಾಮ ಪಂಚಾಯತ್ ಭವನಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಈ ಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ಸೂಚಿಸಲಾಗಿದೆ” ಎಂದು ತಿಳಿಸಿದ್ದರು.
ಕ್ಷೇತ್ರ ಮಟ್ಟದಲ್ಲಿ ಪ್ರಕಟವಾಗಲೇ ಇಲ್ಲ ಪಟ್ಟಿ!
ಮುಖ್ಯ ಚುನಾವಣಾಧಿಕಾರಿಗಳ ಈ ಹೇಳಿಕೆಯ ಬೆನ್ನಲ್ಲೇ ‘ನಾಗರಿಕ ಮತಕಾವಲು ಸಮಿತಿ’ ಸೇರಿದಂತೆ ವಿವಿಧ ಜಾಗೃತ ಸಂಘಟನೆಗಳು ಪ್ರತ್ಯಕ್ಷ ಪರಿಶೀಲನೆಗೆ ಇಳಿದಿದ್ದವು. ಬೆಂಗಳೂರಿನ ಪದ್ಮನಾಭನಗರ, ಶಾಂತಿನಗರ ಸೇರಿದಂತೆ ತುಮಕೂರು, ಹಾಸನ, ಚಿಕ್ಕಮಗಳೂರು, ರಾಯಚೂರು ಸಹಿತ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸಿದ ಈ ಪರಿಶೀಲನೆ ವೇಳೆ ಇದುವರೆಗೆ ಯಾವುದೇ ಪಂಚಾಯತ್ನಲ್ಲಾಗಲಿ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಾಗಲಿ ಎಎಸ್ಡಿಡಿಒ ಪಟ್ಟಿಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಪ್ರಕಟಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ಶಾಶ್ವತವಾಗಿ ಒಂದೇ ವಿಳಾಸದಲ್ಲಿ ವಾಸಿಸುತ್ತಿರುವವರನ್ನೂ ‘ಶಾಶ್ವತ ಸ್ಥಳಾಂತರ’ ಅಥವಾ ‘ಗೈರು’ ಎಂದು ತಪ್ಪಾಗಿ ಎಎಸ್ಡಿಡಿಒ ಪಟ್ಟಿಗೆ ಸೇರಿಸಿರುವ ದೂರುಗಳು ರಾಜ್ಯಾದ್ಯಂತ ವ್ಯಾಪಕವಾಗಿವೆ. ಇಂತಹ ಸಂದರ್ಭದಲ್ಲಿ ಆ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಬದಲಿಗೆ ಮತದಾರರು ತಮ್ಮ ಹೆಸರು ಪರಿಶೀಲಿಸಿಕೊಂಡು ಆಕ್ಷೇಪಣೆ ಸಲ್ಲಿಸಲು ಇರುವ ಮೂಲಭೂತ ಹಕ್ಕು. ಆದರೆ ಪಟ್ಟಿಯೇ ಸಿಗದಿದ್ದ ಮೇಲೆ ಸಾಮಾನ್ಯ ಮತದಾರ ತನ್ನ ಹೆಸರು ಕಡಿತಗೊಂಡಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದಾದರೂ ಹೇಗೆ? ಅಯೋಗದ ವೆಬ್ಸೈಟ್ನಲ್ಲಿ ನೋಡಲು ಎಲ್ಲರಿಗೂ ಸಾಧ್ಯವಿಲ್ಲ ಎಂಬುದು ಆಯೋಗಕ್ಕೆ ತಿಳಿದಿಲ್ಲವೇ?
ಆಯೋಗ ಸೂಚನೆ ನೀಡಿರುವುದಕ್ಕೂ, ಅದು ವಾಸ್ತವದಲ್ಲಿ ಜಾರಿಯಾಗಿರುವುದಕ್ಕೂ ಅಂತರವಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಾರ್ವಜನಿಕವಾಗಿ ಕೆಲವು ಪ್ರಶ್ನೆಗಳಿಗೆ ತಕ್ಷಣ ಸ್ಪಷ್ಟನೆ ನೀಡಬೇಕಿದೆ:
- ರಾಜ್ಯದ ಎಷ್ಟು ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಟ್ಟಿಯನ್ನು ಪ್ರಕಟಿಸಲಾಗಿದೆ?
- ಪಟ್ಟಿ ಪ್ರಕಟಿಸಲು ನಿಗದಿಪಡಿಸಿದ್ದ ಅಂತಿಮ ದಿನಾಂಕ ಯಾವುದು?
- ಪ್ರಕಟಿಸದ ಅಧಿಕಾರಿಗಳ ವಿರುದ್ಧ ಆಯೋಗ ಕೈಗೊಂಡ ಕ್ರಮವೇನು?
- ಈ ಸೂಚನೆ ಕೇವಲ ಕಾಗದದ ಮೇಲಷ್ಟೇ ಉಳಿದಿದೆಯೇ?
“ರಾಜಕೀಯ ಪಕ್ಷಗಳಿಗೆ ಪಟ್ಟಿ ಕೊಟ್ಟ ತಕ್ಷಣವೇ ಆಯೋಗ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. SIR ಪ್ರಕ್ರಿಯೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ರಾಜಕೀಯ ಪಕ್ಷಗಳ ಕೆಲಸವಲ್ಲ, ಅದು ಚುನಾವಣಾ ಆಯೋಗದ ಮೂಲಭೂತ ಕರ್ತವ್ಯ. ಆ.12ರಂದು ನೀಡಿದ ಸೂಚನೆಗಳು ತಳಮಟ್ಟಕ್ಕೆ ತಲುಪಿವೆಯೇ ಎಂಬುದನ್ನು ಆಯೋಗ ಬಹಿರಂಗಪಡಿಸಬೇಕು” ಎಂದು ನಾಗರಿಕ ಮತಕಾವಲು ಸಮಿತಿಯ ವರದರಾಜೇಂದ್ರ ಆಗ್ರಹಿಸಿದ್ದಾರೆ.
ಬೆಳಗಿನಿಂದ ಸಂಜೆಯವರೆಗೆ ಕಚೇರಿ ಅಲೆಯುವ ಸಾಮಾನ್ಯ ನಾಗರಿಕನ ಮತಹಕ್ಕನ್ನು ಕಸಿಯುವ ಇಂತಹ ಪ್ರಮಾದಗಳ ಬಗ್ಗೆ ಚುನಾವಣಾ ಆಯೋಗವು ತಕ್ಷಣವೇ ಎಚ್ಚೆತ್ತುಕೊಂಡು, ಪ್ರತಿಯೊಂದು ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಪಟ್ಟಿಯನ್ನು ಸಾರ್ವಜನಿಕವಾಗಿ ಲಭ್ಯಗೊಳಿಸಬೇಕಿದೆ.


