ಪಶ್ಚಿಮ ಉತ್ತರ ಪ್ರದೇಶದಲ್ಲಿ ಶನಿವಾರ ರಾತ್ರಿ ಚಲಿಸುತ್ತಿದ್ದ ರೈಲಿನಲ್ಲಿ ಮದರಸಾ ವಿದ್ಯಾರ್ಥಿಯೊಬ್ಬನ ಮೇಲೆ ಕುಡಿದ ಮತ್ತಿನಲ್ಲಿದ್ದ ಯುವಕರ ಗುಂಪೊಂದು ಹಲ್ಲೆ ನಡೆಸಿ, ಆತನ ಧಾರ್ಮಿಕ ಗುರುತನ್ನು ನಿಂದಿಸಿ, ಬಲವಂತವಾಗಿ ಮದ್ಯ ಕುಡಿಸಿರುವ ಘಟನೆ ನಡೆದಿದೆ.
ಸತ್ರಾಣ ಪ್ರದೇಶದ ದೇವ್ಲಿ ಖೇಡಾ ಗ್ರಾಮದ ನಿವಾಸಿ ಕಯೀಮ್ ಎಂಬುವರ ಮಗ ಮೊಹಮ್ಮದ್ ಮುಂತಾಜಿರ್ ಸಂತ್ರಸ್ತ ವಿದ್ಯಾರ್ಥಿ. ಈತ ಪ್ರಸ್ತುತ ಸಹಾರನ್ಪುರ ಜಿಲ್ಲೆಯ ದಾರುಲ್ ಉಲೂಮ್ ದೇವ್ಬಂದ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಖತೌಲಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾದ ಲಿಖಿತ ದೂರಿನ ಪ್ರಕಾರ, ಈ ಘಟನೆಯು ಮೀರತ್ ಕ್ಯಾಂಟ್ನಿಂದ ದೇವ್ಬಂದ್ಗೆ ಹೋಗುವ ಪ್ಯಾಸೆಂಜರ್ ರೈಲಿನಲ್ಲಿ ನಡೆದಿದೆ.
ಮುಂತಾಜಿರ್ ಶನಿವಾರ ಸಂಜೆ ಮೀರತ್ ಕ್ಯಾಂಟ್ನಲ್ಲಿ ರೈಲು ಹತ್ತಿದ್ದನು. ಆಗಲೇ ಬೋಗಿಯಲ್ಲಿ 10-12 ಯುವಕರು ಇದ್ದರು. ಅವರು ಬಹಿರಂಗವಾಗಿ ಮದ್ಯ ಸೇವಿಸುತ್ತಿದ್ದರು ಎಂದು ಆತ ತಿಳಿಸಿದ್ದಾನೆ. (ಇದು ಭಾರತೀಯ ರೈಲ್ವೆ ಕಾಯ್ದೆ 1989 ರ ಸೆಕ್ಷನ್ 145 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ).
ದೂರಿನ ಪ್ರಕಾರ, ರೈಲು ದೌರಾಲಾ ಮತ್ತು ಸಕೌತಿ ನಿಲ್ದಾಣಗಳ ನಡುವೆ ಚಲಿಸುತ್ತಿದ್ದಾಗ, ಯುವಕರು ಮುಂತಾಜಿರ್ನ ಸಾಂಪ್ರದಾಯಿಕ ಉಡುಪು ಮತ್ತು ಗಡ್ಡವನ್ನು ನೋಡಿ ಆತನೊಂದಿಗೆ ದುರ್ವರ್ತನೆ ತೋರಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯದ ಮತ್ತಿನಲ್ಲಿದ್ದ ಯುವಕರು ಆತನ ಗಡ್ಡವನ್ನು ಹಿಡಿದು ಕೋಮು ನಿಂದನೆ ಮಾಡಿದ್ದಾರೆ. “ಅವರು ನನಗೆ ಬಲವಂತವಾಗಿ ಮದ್ಯ ಕುಡಿಸಲು ಯತ್ನಿಸಿದರು. ನಾನು ಪ್ರತಿರೋಧಿಸಿದಾಗ ನನ್ನ ಮೇಲೆ ಹಲ್ಲೆ ನಡೆಸಿದರು” ಎಂದು ಮುಂತಾಜಿರ್ ದೂರಿನಲ್ಲಿ ತಿಳಿಸಿದ್ದಾನೆ.
ವಿದ್ಯಾರ್ಥಿ ಸುರಕ್ಷತೆಗಾಗಿ ಮತ್ತೊಂದು ಬೋಗಿಗೆ ಹೋಗಲು ಯತ್ನಿಸಿದಾಗ, ಯುವಕರು ಆತನನ್ನು ತಡೆದು ಆತನ ಬ್ಯಾಗ್ ಕಸಿದುಕೊಂಡಿದ್ದಾರೆ. ನಂತರ ಇಬ್ಬರು ಆರೋಪಿಗಳು ಆತನನ್ನು ಚಲಿಸುತ್ತಿದ್ದ ರೈಲಿನ ಕಿಟಕಿಯತ್ತ ಎಳೆದು ಹೊರಗೆ ಎಸೆಯಲು ಯತ್ನಿಸಿದ್ದಾರೆ.
ಮುಂತಾಜಿರ್ ಕೂಗಾಡಿದಾಗ ಬೋಗಿಯಲ್ಲಿದ್ದ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿ ಆತನನ್ನು ರಕ್ಷಿಸಿದ್ದಾರೆ. ಆರೋಪಿಗಳು ಸಕೌತಿ ನಿಲ್ದಾಣದಲ್ಲಿ ಇಳಿಯುವ ಮುನ್ನ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿ ಮುಂದಿನ ನಿಲ್ದಾಣವಾದ ಮುಜಫರ್ನಗರ ಜಿಲ್ಲೆಯ ಖತೌಲಿ ನಿಲ್ದಾಣದಲ್ಲಿ ಇಳಿದು ರೈಲ್ವೆ ಪೊಲೀಸ್ (ಜಿಆರ್ಪಿ) ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ದೂರು ಬಂದಿರುವುದನ್ನು ಖತೌಲಿ ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್ ಬಘೇಲ್ ಖಚಿತಪಡಿಸಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಖತೌಲಿ ವೃತ್ತದ ಸಕೌತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
“ವಿದ್ಯಾರ್ಥಿಯ ದೂರು ಸ್ವೀಕರಿಸಲಾಗಿದೆ. ನಾವು ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದೇವೆ, ಸಕೌತಿ ಮತ್ತು ಖತೌಲಿ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಹಾಗೂ ಆರೋಪಿಗಳನ್ನು ಗುರುತಿಸಲು ಯತ್ನಿಸುತ್ತಿದ್ದೇವೆ. ತನಿಖೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು” ಎಂದು ಬಘೇಲ್ ಹೇಳಿದ್ದಾರೆ.
ಈ ವರದಿ ತಯಾರಾಗುವವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಸಾರ್ವಜನಿಕರಿಗೆ ಗಾಯಗೊಳಿಸುವುದು, ಅಕ್ರಮ ಬಂಧನ, ಕಳವು ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಭಾರತಿಯ ನ್ಯಾಯ ಸಂಹಿತೆಯ (BNS) ಸೂಕ್ತ ಸೆಕ್ಷನ್ಗಳ ಅಡಿಯಲ್ಲಿ ಹಾಗೂ ರೈಲ್ವೆ ಆವರಣದಲ್ಲಿ ಮದ್ಯ ಸೇವಿಸಿದ್ದಕ್ಕಾಗಿ ರೈಲ್ವೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರ ಉದ್ದೇಶ ಮತ್ತು ಗುರುತು ಇನ್ನೂ ತಿಳಿದುಬಂದಿಲ್ಲ.
ರೈಲಿನಲ್ಲಿ ಭದ್ರತಾ ಲೋಪ
ಸಂಜೆ ವೇಳೆ ವಿಪರೀತ ಜನಸಂದಣಿ ಇರುವ ರೈಲಾಗಿದ್ದರೂ ಬೋಗಿಯಲ್ಲಿ ಯಾವುದೇ ಜಿಆರ್ಪಿ ಅಥವಾ ಆರ್ಪಿಎಫ್ ಗಸ್ತು ಸಿಬ್ಬಂದಿ ಇರಲಿಲ್ಲ ಎಂಬ ಗಂಭೀರ ಭದ್ರತಾ ಲೋಪವನ್ನು ಸಂತ್ರಸ್ತ ಬೆಟ್ಟುಮಾಡಿದ್ದಾನೆ. ರೈಲಿನಲ್ಲಿ ಅನೇಕ ಪ್ರಯಾಣಿಕರಿದ್ದರೂ ಆರೋಪಿಗಳು ಬಹಿರಂಗವಾಗಿ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ.
ಈ ಘಟನೆಯು ಮೀರತ್-ಮುಜಫರ್ನಗರ-ಸಹಾರನ್ಪುರ ಮಾರ್ಗದಲ್ಲಿ ಪ್ರಯಾಣಿಸುವ ಮದರಸಾ ವಿದ್ಯಾರ್ಥಿಗಳ ಭದ್ರತೆಯ ಬಗ್ಗೆ ಹೊಸ ಕಳವಳವನ್ನು ಹುಟ್ಟುಹಾಕಿದೆ. ದಾರುಲ್ ಉಲೂಮ್ ದೇವ್ಬಂದ್ ಅಧಿಕಾರಿಗಳು ಈ ಹಿಂದೆಯೂ ದೇವ್ಬಂದ್ ವಿದ್ಯಾರ್ಥಿಗಳ ಮೇಲಿನ ಇಂತಹ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಹಿಂದೆಯೂ ಈ ಸಂಸ್ಥೆಯ ವಿದ್ಯಾರ್ಥಿಗಳು ಧಾರ್ಮಿಕ ಉಡುಪಿನಲ್ಲಿ ಪ್ರಯಾಣಿಸುವಾಗ ಕಿರುಕುಳಕ್ಕೆ ಒಳಗಾಗಿದ್ದಾಗಿ ವರದಿ ಮಾಡಿದ್ದರು. ಹೀಗಾಗಿ ರೈಲು ಪ್ರಯಾಣದ ಸಮಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಸಂಸ್ಥೆಯ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಸಲಹೆ ನೀಡಿತ್ತು.
ಹಲ್ಲೆಯ ಸುದ್ದಿ ಹರಡುತ್ತಿದ್ದಂತೆ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್ (AIMIM) ಜಿಲ್ಲಾಧ್ಯಕ್ಷ ಇಮ್ರಾನ್ ಖಾಸಿಮಿ ತಮ್ಮ ಬೆಂಬಲಿಗರೊಂದಿಗೆ ಖತೌಲಿ ನಿಲ್ದಾಣಕ್ಕೆ ಆಗಮಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಮತ್ತು ರೈಲುಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಆಗ್ರಹಿಸಿದರು. ಗಸ್ತು ಹೆಚ್ಚಿಸುವಂತೆ ಮುಜಫರ್ನಗರ ಜಿಆರ್ಪಿ ಘಟಕಕ್ಕೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


