ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಉಂಟಾದ ಮತಹರಣದ ವಿರುದ್ಧ ಕಾನೂನು ಸಮರ ನಡೆಸಲು ನಾಗರಿಕ ಸಂಘಟನೆಗಳು ಮುಂದಾಗಿವೆ.
ಆಗಸ್ಟ್ 25ರಂದು ಎಸ್ಐಆರ್ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ವಿರುದ್ದ ಎಫ್ಐಆರ್ ಬಿಡುಗಡೆ ಮಾಡಿರುವ ಸಂಘಟನೆಗಳು, ಇಡೀ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಕದವನ್ನೂ ತಟ್ಟಲಿದ್ದೇವೆ ಎಂದು ಘೋಷಿಸಿವೆ.
ಚುನಾವಣಾ ಆಯೋಗ ನಡೆಸಿರುವ ಎಸ್ಐಆರ್ ಪ್ರಕ್ರಿಯೆಯನ್ನಾಗಲೀ, ಅದು ನೀಡಿರುವ ಅಂಕಿ ಸಂಖ್ಯೆಯನ್ನಾಗಲೀ, ಅದರ ಹಿಂದಿರುವ ವಿವರಣೆಯನ್ನಾಗಲೀ ನಾವು ಒಪ್ಪಲು ಸಾಧ್ಯವಿಲ್ಲ. ಕರ್ನಾಟಕದ ನಾಗರಿಕ ಸಮಾಜ ಇದೊಂದು ದೋಷಭರಿತ ಅನಾಗರಿಕ ಪ್ರಕ್ರಿಯೆ ಎಂದು ಘೋಷಿಸುತ್ತದೆ ಮತ್ತು ತಿರಸ್ಕರಿಸುತ್ತದೆ ಎಂದು ಸಂಘಟನೆಗಳು ಹೇಳಿಕೊಂಡಿವೆ.
ಎಸ್ಐಆರ್ನಂತಹ ದೋಷ ಮತ್ತು ದುಷ್ಟತನದ ಪ್ರಕ್ರಿಯೆಯನ್ನು ರೂಪಿಸಿರುವ ಕೇಂದ್ರ ಚುನಾವಣಾ ಆಯೋಗ, ವಿಶೇಷವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಯನ್ನು ಕೊಡಬೇಕು ಎಂದು ಒತ್ತಾಯಿಸಿವೆ.
ಕೇಂದ್ರ ಚುನಾವಣಾ ಆಯುಕ್ತರು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಮಾಡಿರುವ ಕಾನೂನು ತಿದ್ದುಪಡಿಯೇ ದುರುದ್ದೇಷದಿಂದ ಕೂಡಿದೆ. ಇಬ್ಬರು ಆಳುವ ಪಕ್ಷದ ಮತ್ತು ಒಬ್ಬರು ವಿರೋಧ ಪಕ್ಷದ ಸದಸ್ಯರಿದ್ದು ಆಯ್ಕೆ ಮಾಡುವ ಸಮಿತಿ ನಿಷ್ಪಕ್ಷಪಾತಿಯಾಗಿ ಇರಲು ಸಾಧ್ಯವಿಲ್ಲ. ಇದನ್ನು ಈ ಹಿಂದಿನಂತೆ ಒಬ್ಬರು ಆಳುವ , ಒಬ್ಬರು ವಿರೋಧ ಪಕ್ಷದ ಹಾಗೂ ಒಬ್ಬರು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಇರುವ ಸಮಿತಿ ಆಯ್ಕೆ ಮಾಡುವ ವಿಧಾನಕ್ಕೆ ಮರಳಬೇಕು ಎಂದು ಆಗ್ರಹಿಸಿವೆ.
ಎಸ್ಐಆರ್ ಅಕ್ರಮ ಪ್ರಕ್ರಿಯೆಯನ್ನು ಖಂಡಿಸಿ ಸೆಪ್ಟೆಂಬರ್ 1ರಂದು ಸಂತ್ರಸ್ತರ ಸಾಕ್ಷ್ಯಗಳೊಂದಿಗೆ ‘ಎಲೆಕ್ಷನ್ ಕಮಿಷನ್ ಚಲೋ’ ನಡೆಸಲಾಗುತ್ತಿದೆ ಎಂದು ನಾಗರಿಕ ಸಂಘಟನೆಗಳು ಘೋಷಿಸಿದ್ದು, ಇಡೀ ಪ್ರಕ್ರಿಯೆ ಹೇಗೆ ತಪ್ಪಾದುದು ಎಂಬುವುದನ್ನು ಕೇವಲ ತರ್ಕದ ಮೂಲಕವಲ್ಲ, ಜೀವಂತ ಸಾಕ್ಷಿಗಳ ಸಮೇತ ಚುನಾವಣಾ ಆಯೋಗದ ಮುಂದೆ ತರಲಿದ್ದೇವೆ ಎಂದು ಸವಾಲು ಹಾಕಿವೆ.
1.08 ಕೋಟಿ ಜನರನ್ನು ಎಎಸ್ಡಿಡಿಒ ಎಂದು ಡಿಲೀಟ್ ಪಟ್ಟಿಯಲ್ಲಿ ಇಟ್ಟಿರುದು ಮತ್ತು 43.80 ಲಕ್ಷ ಜನರಿಗೆ ದಾಖಲೆ ಕೇಳಿ ನೋಟಿಸ್ ನೀಡುವುದನ್ನು ನಾವು ಒಪ್ಪುವುದಿಲ್ಲ ಎಂದು ನಾಗರಿಕ ಸಂಘಟನೆಗಳು ಹೇಳಿಕೊಂಡಿವೆ.
ಎಎಸ್ಡಿಡಿಒ ಪಟ್ಟಿಯ ಕುರಿತು ಆಕ್ಷೇಪ ಎತ್ತಿರುವ ಸಂಘಟನೆಗಳು, ಡಿಲೀಟ್ ಪಟ್ಟಿಯಲ್ಲಿರುವ 1.08 ಕೋಟಿ ಮತದಾರರ ಪೈಕಿ ಅಂದಾಜು 52 ಲಕ್ಷ ಮಂದಿ ಅರ್ಹರಿದ್ದಾರೆ ಎಂದು ಗಂಭೀರ ಆರೋಪ ಮಾಡಿವೆ.
ಇನ್ನು ಅನ್ಮ್ಯಾಪಿಂಗ್ ಮತ್ತು ಅನಾಮಲಿಸ್ ಹೆಸರಿನಲ್ಲಿ 43.80 ಲಕ್ಷ ಜನರಿಗೆ ನೋಟಿಸ್ ನೀಡುವುದನ್ನು ಕೂಡ ಸಂಘಟನೆಗಳು ವಿರೋಧಿಸಿವೆ.
“ಒಟ್ಟು 43 ಲಕ್ಷ ಜನರನ್ನು ಅನುಮಾನಾಸ್ಪದ ಮತದಾರರನ್ನಾಗಿ ಗುರುತಿಸಿದ್ದೀರಿ..ಯಾರಿವರು? ಇವರ ಬಗ್ಗೆ ನಿಮಗೆ ಅನುಮಾನ ಬರಲು ಕಾರಣವೇನು? ಪಟ್ಟಿಯನ್ನೇಕೆ ಬಿಡುಗಡೆ ಮಾಡುತ್ತಿಲ್ಲ? ಇವರು ಪರದೇಶಗಳಿಂದ ಬಂದವರಾ? ಇಲ್ಲ ಎಂದು ನೀವೇ ಹೇಳಿದ್ದೀರಿ. ಹಾಗಿದ್ದ ಮೇಲೆ ನಮ್ಮ ನಾಗರೀಕರನ್ನೇ ಈ ರೀತಿ ಅನುಮಾನಿಸಿ ಅವಮಾನಿಸುವುದು ಹೇಗೆ ಸರಿ? ನಾವೇಕೆ ಇದನ್ನು ಸಹಿಸಬೇಕು? ಎಂದು ಖಾರವಾಗಿ ಪ್ರಶ್ನಿಸಿವೆ.
ಮೂಲಗಳ ಪ್ರಕಾರ, ಚುನಾವಣಾ ಆಯೋಗ ಎಎಸ್ಡಿಡಿಒ ಎಂದು ಈಗಾಗಲೇ ಮತ ಪಟ್ಟಿಯಿಂದ ಹೊರಗಿಟ್ಟಿರುವ ಅರ್ಹ ಮತದಾರರನ್ನು ನ್ಯಾಯಾಲಯದ ಮುಂದೆ ತಂದು ಇಡೀ ಎಸ್ಐಆರ್ ಪ್ರಕ್ರಿಯೆಯ ಲೋಪಗಳ ವಿರುದ್ದ ಕಾನೂನು ಸಮರ ನಡೆಸಲು ಸಂಘಟನೆಗಳು ಸಿದ್ದತೆ ನಡೆಸಿವೆ.


