2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ದಕ್ಕಿದ 136 ಸ್ಥಾನಗಳ ಅಭೂತಪೂರ್ವ ಬಹುಮತಕ್ಕೆ ಪ್ರಮುಖ ಕಾರಣ ‘40% ಸರ್ಕಾರ’ ಮತ್ತು ‘ಪೇ ಸಿಎಂ’ ಅಭಿಯಾನಗಳು. ಬಿಜೆಪಿಯ ಭ್ರಷ್ಟಾಚಾರವನ್ನು ಅಸ್ತ್ರವಾಗಿಸಿಕೊಂಡು ಆಡಳಿತ ಹಿಡಿದ ಕಾಂಗ್ರೆಸ್ಗೆ, ಈಗ ಅದೇ ಭ್ರಷ್ಟಾಚಾರದ ಆರೋಪಗಳು ಹಾಗೂ ಸಚಿವ ಸಂಪುಟ ಸೇರ್ಪಡೆಯಲ್ಲಾದ ಎಡವಟ್ಟುಗಳು ಈಗ ತಿರುಗು ಬಾಣವಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪ ಎದುರಿಸಿ ಜುಲೈ 2024 ರಲ್ಲಿ ರಾಜೀನಾಮೆ ನೀಡಿದ್ದ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರನ್ನು, ಮತ್ತೆ ಸಂಪುಟಕ್ಕೆ ಸೇರಿಸಿಕೊಂಡ ಕಾಂಗ್ರೆಸ್ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮರುಸೇರ್ಪಡೆಯಾದ ಕೇವಲ 25 ದಿನಗಳ ಅಂತರದಲ್ಲಿ, ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಗೆ ಮಣಿದು ಅವರು ಮತ್ತೆ ರಾಜೀನಾಮೆ ನೀಡಬೇಕಾಗಿ ಬಂದಿರುವುದು ಆಡಳಿತಾರೂಢ ಕಾಂಗ್ರೆಸ್ ಅನ್ನು ತೀವ್ರ ಮುಜುಗರಕ್ಕೆ ಈಡುಮಾಡಿದೆ.
ಬಳ್ಳಾರಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಶಿಷ್ಟ ಪಂಗಡ (ST) ಸಮುದಾಯದ ಬಲವರ್ಧನೆಗೆ ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ನಾಗೇಂದ್ರ ಅವರ ಸಂಪುಟ ಸೇರ್ಪಡೆ ಅಗತ್ಯವಾಗಿತ್ತು ಎಂಬುದು ಪಕ್ಷದ ಆಂತರಿಕ ಲೆಕ್ಕಾಚಾರವಾಗಿತ್ತು.
ಎರಡನೇ ಬಾರಿಗೆ ರಾಜೀನಾಮೆ ನೀಡುವಾಗ ಭಾವುಕರಾದ ನಾಗೇಂದ್ರ, “ನಾನು ಯಾವುದೇ ತಪ್ಪು ಮಾಡಿಲ್ಲ, ಬೇಕೆಂದೇ ನನ್ನ ವಿರುದ್ಧ ರಾಜಕೀಯ ಸಂಚು ರೂಪಿಸಲಾಗಿದೆ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಂತಹ ಆರೋಪ ಹೊತ್ತಿರುವ ಬಿಜೆಪಿ ನಾಯಕರು ನನ್ನ ವಿರುದ್ಧ ಮಾತನಾಡುವುದು ವಿಪರ್ಯಾಸ,” ಎಂದು ಆಕ್ರೋಶ ಹೊರಹಾಕಿದ್ದಾರೆ. ಜತೆಗೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ‘ಜನತಾ ನ್ಯಾಯಾಲಯ’ಕ್ಕೆ ಹೋಗಲು ಸಿದ್ಧ ಎಂಬ ಸವಾಲನ್ನು ಎಸೆದಿದ್ದಾರೆ.
“ರಾಮಾಯಣದ ಉತ್ತರಕಾಂಡದಲ್ಲಿ ಶಂಬೂಕನ ಹತ್ಯೆ ಮಾಡಲಾಗಿದೆ. ಆದರೆ ಈ ಯುಗದಲ್ಲಿ ಶಂಬೂಕನ ಹತ್ಯೆ ನಡೆಸಲಾಗದು, ಅವರ ರಕ್ಷಣೆಗಾಗಿಯೇ ಸಂವಿಧಾನವಿದೆ, ನ್ಯಾಯದೇವತೆ ಇದ್ದಾಳೆ ಎಂದು ನಾನು ಭಾವಿಸುತ್ತೇನೆ. ಇಂದು ಶಂಬೂಕನ ಹತ್ಯೆ ಮಾಡಲಾಗದು ಎಂದು ನಾನು ವಿಪಕ್ಷಗಳ ಗಮನಕ್ಕೆ ತರಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.
“ಶೂದ್ರರು, ದಲಿತರು, ಮಹಿಳೆಯರು, ಮುಖ್ಯವಾಗಿ ಆದಿವಾಸಿಗಳು, ಅಲ್ಪಸಂಖ್ಯಾತರು ಸ್ವತಂತ್ರವಾಗಿ ಬದುಕಲೇ ಬಾರದು ಎಂಬ ಮನುಸ್ಮೃತಿಯ ಒಂದು ಪದ್ಧತಿಯನ್ನು ಇಟ್ಟುಕೊಂಡವರು ಬಿಜೆಪಿಗರು, ಆದರೆ ಇಂತಹ ಯುಗದಲ್ಲಿ ಅಂತಹ ಕೃತ್ಯಕ್ಕೆ ಅವಕಾಶ ಕೊಡುವುದಿಲ್ಲ. ಸಂವಿಧಾನ ನಮ್ಮ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆಯಿದೆ” ಎಂದಿದ್ದಾರೆ.
ಬಿ.ನಾಗೇಂದ್ರ ಅವರು ಈಗ ರಾಜೀನಾಮೆ ನೀಡಿ ಮಾಧ್ಯಮದವರ ಮುಂದೆ ಇದನ್ನೆಲ್ಲ, ಬಾಬಾ ಸಾಹೇಬ್, ಸಂವಿಧಾನ ಎಂಬ ಮಾತುಗಳನ್ನು ಹೇಳುವ ಬದಲು, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮ್ಮ ಪಕ್ಷ ಹಿರಿಯ ನಾಯಕರ ಬಳಿ ನಾನು ಶಾಸಕನಾಗಿಯೇ ಮುಂದುವರೆಯುತ್ತೇನೆ, ನನಗೆ ಸಚಿವ ಸ್ಥಾನ ಬೇಡ, ಪಕ್ಷದ ಈ ನಿರ್ಧಾರದಿಂದ ಪ್ರತಿಪಕ್ಷಕ್ಕೆ ಲಾಭವಾಗಲಿದೆ, ನಾನು ಜನರ ಮೇಲೆ ವಿಶ್ವಾಸ ಇಟ್ಟಿದ್ದೇನೆ. ಅವರು ನನ್ನ ಕೈಬಿಡುವುದಿಲ್ಲ ಎಂದು ಹೇಳಿದ್ದರೆ ಇಷ್ಟೆಲ್ಲಾ ನಡೆಯುತ್ತಿರಲೇ ಇಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಬಿಜೆಪಿಗೆ ಅಸ್ತ್ರವಾದ ಬಿ.ನಾಗೇಂದ್ರ ವಿಚಾರ:
ಪ್ರತಿಪಕ್ಷ ಬಿಜೆಪಿಗೆ ಬಿ.ನಾಗೇಂದ್ರ ಅವರ ಸಂಪುಟ ಮರುಸೇರ್ಪಡೆಯೇ ಪ್ರಮುಖ ಅಸ್ತ್ರವಾಗಿ ದೊರೆಯಿತು ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇದ್ದಿದ್ದರೆ, ಇತ್ತೀಚಿನ ಅಧಿವೇಶನವು ಅತ್ಯಂತ ಸುಗಮವಾಗಿ ನಡೆಯುವ ಸಾಧ್ಯತೆಯಿತ್ತು. ಆದರೆ, ಈ ನಿರ್ಧಾರದಿಂದಾಗಿ ಇಡೀ ಅಧಿವೇಶನ ಗದ್ದಲ, ಸಭಾತ್ಯಾಗ ಮತ್ತು ಗೊಂದಲಗಳಲ್ಲೇ ಮುಕ್ತಾಯವಾಯಿತು. ಈ ವಿಫಲತೆಗೆ ಪ್ರತಿಪಕ್ಷ ಬಿಜೆಪಿಯಷ್ಟೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವೂ ಸಮಾನ ಹೊಣೆಯಾಗಿದೆ.
ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪಕ್ಷಕ್ಕೆ, ಪ್ರಕರಣದ ತನಿಖೆ ಸಂಪೂರ್ಣಗೊಳ್ಳುವ ಮುನ್ನವೇ ಸಚಿವ ಸ್ಥಾನ ನೀಡಿದ್ದು ನೈತಿಕ ನೆಲೆಗಟ್ಟಿನಲ್ಲಿ ಸಾರ್ವಜನಿಕ ಸಮ್ಮತಿಯನ್ನು ಕಳೆದುಕೊಳ್ಳುವಂತೆ ಮಾಡಿತು. ರಾಜಕೀಯ ವಿಶ್ಲೇಷಕರ ಪ್ರಕಾರ, ತನಿಖಾ ಹಂತದಲ್ಲಿದ್ದ ಮತ್ತು ಇಡೀ ಆಡಳಿತಕ್ಕೆ ಕಪ್ಪುಚುಕ್ಕೆಯಾಗಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಮತ್ತೆ ಸಂಪುಟಕ್ಕೆ ತಂದದ್ದು ಕಾಂಗ್ರೆಸ್ ತನ್ನ ಕೈಯಾರೆ ತಾನೇ ಮಾಡಿಕೊಂಡ ಸ್ವಯಂಕೃತ ಅಪರಾಧ.
ಮಹಿಳೆಯರಿಗಿಲ್ಲ ಸಚಿವ ಸ್ಥಾನ:
ಸಂಪುಟ ವಿಸ್ತರಣೆ ಮತ್ತು ನಿಗದಿ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಎಸಗಿದ ಮತ್ತೊಂದು ದೊಡ್ಡ ಪ್ರಮಾದವೆಂದರೆ ಮಹಿಳಾ ನಾಯಕತ್ವದ ಕಡೆಗಣನೆ. ಸಂಸತ್ನಲ್ಲಿ ಮಹಿಳಾ ಮಸೂದೆಗೆ ದೊಡ್ಡ ಧ್ವನಿಯಾಗಿರುವ ಕಾಂಗ್ರೆಸ್, ಕರ್ನಾಟಕ ಸರ್ಕಾರದ 34 ಸಚಿವರ ಸಂಪುಟದಲ್ಲಿ ಒಬ್ಬೇ ಒಬ್ಬ ಮಹಿಳಾ ಶಾಸಕಿಗೆ ಸಚಿವೆ ಸ್ಥಾನ ನೀಡದಿರುವುದು ಮಹಿಳಾ ಪರ ಕಾಳಜಿಯನ್ನು ಪ್ರಶ್ನಿಸುವಂತೆ ಮಾಡಿದೆ.
ಅರ್ಹ ಮತ್ತು ಅನುಭವಿ ಮಹಿಳಾ ಶಾಸಕಿಯರಿದ್ದರೂ, ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅವರಿಗೆ ಮಂತ್ರಿಗಿರಿ ನೀಡದೆ, ಆರೋಪ ಎದುರಿಸುತ್ತಿದ್ದ ಶಾಸಕನಿಗೆ ಆದ್ಯತೆ ನೀಡಿದ್ದು ಸಾರ್ವಜನಿಕವಾಗಿ ಮತ್ತು ಮಹಿಳಾ ಸಂಘಟನೆಗಳ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ತನ್ನದೇ ಆಡಳಿತಾವಧಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ದಾರಿ ತಪ್ಪಿದೆ. ಸಂಪುಟದಲ್ಲಿ ಸೂಕ್ತ ಮಹಿಳಾ ಪ್ರಾತಿನಿಧ್ಯ ನೀಡದಿರುವುದು ಒಂದೆಡೆಯಾದರೆ, ಭ್ರಷ್ಟಾಚಾರ ಆರೋಪಿತ ನಾಯಕರನ್ನು ಧಾವಂತದಿಂದ ಮತ್ತೆ ಮಂತ್ರಿ ಮಾಡಿ ಅಧಿವೇಶನ ಬಲಿಯಾಗುವಂತೆ ಮಾಡಿದ್ದು ಕಾಂಗ್ರೆಸ್ ಮಾಡಿಕೊಂಡ ಮತ್ತೊಂದು ಎಡವಟ್ಟು.
ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬಂತೆ, ಈಗಲಾದರೂ ಬಿ.ನಾಗೇಂದ್ರ ಅವರಿಂದ ತೆರವಾಗಿರುವ ಸ್ಥಾನಕ್ಕೆ ಮಹಿಳೆಯರಿಗೆ ಅವಕಾಶ ಕೊಡುವ ಮೂಲಕ, ಕಾಂಗ್ರೆಸ್ ಎದುರಿಸುತ್ತಿರುವ ಅಪವಾದಗಳಿಂದ ಸ್ವಲ್ಪ ಮಟ್ಟಿಗಾದರೂ ಹೊರಬರಲು ಪ್ರಯತ್ನಿಸಬೇಕಿದೆ. ಇಲ್ಲದಿದ್ದರೆ ಸಾರ್ವಜನಿಕ ವಲಯದಲ್ಲಿ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರವನ್ನು “ನಮಸ್ತೆ ಸದಾ ವತ್ಸಲೆ ಮಾತೃಭೂಮೇ” ಸಿದ್ದಾಂತ ಮತ್ತೊಂದು ಮಾದರಿ ಎಂದು ಹೇಳುತ್ತಿರುವುದನ್ನು ಸ್ವತಃ ಸರ್ಕಾರವೇ ಒಪ್ಪಿಕೊಂಡತಾಗುತ್ತದೆ. ಈ ವಿಷಯದಲ್ಲಿ KPCCಯ ಮೌನ ಸಮಂಜಸವಲ್ಲ ಅನ್ನಿಸುತ್ತಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ದಕ್ಕಿದ 136 ಸ್ಥಾನಗಳ ಅಭೂತಪೂರ್ವ ಬಹುಮತಕ್ಕೆ ಪ್ರಮುಖ ಕಾರಣ ‘40% ಸರ್ಕಾರ’ ಮತ್ತು ‘ಪೇ ಸಿಎಂ’ ಅಭಿಯಾನಗಳು. ಬಿಜೆಪಿಯ ಭ್ರಷ್ಟಾಚಾರವನ್ನು ಅಸ್ತ್ರವಾಗಿಸಿಕೊಂಡು ಆಡಳಿತ ಹಿಡಿದ ಕಾಂಗ್ರೆಸ್ಗೆ ಈಗ ಅದೇ ಭ್ರಷ್ಟಾಚಾರದ ಆರೋಪಗಳು ಹಾಗೂ ಸಚಿವ ಸಂಪುಟ ಸೇರ್ಪಡೆಯಲ್ಲಾದ ಎಡವಟ್ಟುಗಳು ತಿರುಗು ಬಾಣವಾಗಿದೆ.


