ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ) ಕಂಡುಬಂದಿದೆ ಎಂಬ ತಾಂತ್ರಿಕ ನೆಪವೊಡ್ಡಿ ಆಯೋಗವು ಈ ನೋಟಿಸ್ ನೀಡಿದೆ.
ಕೇಂದ್ರ ಸರ್ಕಾರದ ಆರ್ಥಿಕ ಮತ್ತು ಆಡಳಿತಾತ್ಮಕ ನೀತಿಗಳನ್ನು ಸದಾ ದತ್ತಾಂಶಗಳ ಸಮೇತ ಕಟುವಾಗಿ ವಿಮರ್ಶಿಸುವ ದೇಶದ ಪ್ರಮುಖ ಚಿಂತಕರೊಬ್ಬರ ಮತದಾನದ ಹಕ್ಕನ್ನೇ ‘ತಾಂತ್ರಿಕ ದೋಷ’ದ ಹೆಸರಲ್ಲಿ ಸಂಶಯಾಸ್ಪದ ವ್ಯಾಪ್ತಿಗೆ ತಂದಿಟ್ಟಿರುವುದು ಈ ಇಡೀ ಪ್ರಕ್ರಿಯೆಯ ಉದ್ದೇಶದ ಮೇಲೆಯೇ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ದೇಶದ ಪ್ರಭಾವಿ ವ್ಯಕ್ತಿಗಳು ಮತ್ತು ಸಾಂವಿಧಾನಿಕ ಜಾಗೃತಿಯುಳ್ಳ ನಾಗರಿಕರಿಗೇ ಈ ರೀತಿಯ ನೋಟಿಸ್ಗಳು ಬಂದು, ಅವರು ಕಚೇರಿಗಳಿಗೆ ಅಲೆದು ಪೌರತ್ವ ಸಾಬೀತುಪಡಿಸುವ ಸ್ಥಿತಿ ನಿರ್ಮಾಣವಾಗಿರುವಾಗ, ಯಾವುದೇ ಧ್ವನಿಯಿಲ್ಲದ ಸಾಮಾನ್ಯ ಬಡವರು ಮತ್ತು ಶ್ರಮಿಕರ ಸ್ಥಿತಿ ಏನು ಎಂಬ ಆತಂಕ ವ್ಯಕ್ತವಾಗಿದೆ.
ಸಾಫ್ಟ್ವೇರ್ ಅಲ್ಗಾರಿದಮ್ಗಳ ಸಣ್ಣಪುಟ್ಟ ದೋಷಗಳನ್ನು ಅಥವಾ ದಶಕಗಳ ಹಿಂದಿನ ದಾಖಲೆಗಳ ವ್ಯತ್ಯಾಸವನ್ನು ಮುನ್ನೆಲೆಗೆ ತಂದು ‘ತಾರ್ಕಿಕ ಅಸಂಗತತೆ’ ಎಂದು ವರ್ಗೀಕರಿಸುತ್ತಿರುವ ಚುನಾವಣಾ ಆಯೋಗದ ಈ ವೈಖರಿಯು, ಅರ್ಹ ನಾಗರಿಕರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ತಂತ್ರವೇ ಎಂಬ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದೆ.


