Homeಮುಖಪುಟಫೈಜ್ ಅಹಮದ್ ಫೈಜ್‍ರ ಹಮ್ ದೇಖೇಂಗೇ ಕವಿತೆಯೂ ವೈದಿಕಮಣಿಗಳ ಸಂಕುಚಿತ ಬುದ್ಧಿಯೂ

ಫೈಜ್ ಅಹಮದ್ ಫೈಜ್‍ರ ಹಮ್ ದೇಖೇಂಗೇ ಕವಿತೆಯೂ ವೈದಿಕಮಣಿಗಳ ಸಂಕುಚಿತ ಬುದ್ಧಿಯೂ

- Advertisement -
- Advertisement -

ಪಾಕಿಸ್ತಾನದ ಸುಪ್ರಸಿದ್ಧ ಕವಿ ಫೈಜ್ ಅಹಮದ್ ಫೈಜ್ ಅವರ ಕವಿತೆಯೊಂದರ ಕುರಿತು ವಿವಾದ ಭುಗಿಲೆದ್ದಿದೆ. ದೆಹಲಿಯ ಮಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ನಡೆಸಿದ್ದ ಅನಾಗರಿಕ ಹಲ್ಲೆ ದೌರ್ಜನ್ಯವನ್ನು ಖಂಡಿಸಿ, ಜಾಮಿಯಾ ವಿದ್ಯಾರ್ಥಿಗಳಿಗೆ ಸಹಾನುಭೂತಿ ವ್ಯಕ್ತಪಡಿಸಿ ಕಳೆದ ಡಿಸೆಂಬರ್ 17ರಂದು ಐಐಟಿ ಕಾನ್ಪುರ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಫೈಜ್ ಬರೆದಿದ್ದ “ಹಮ್ ದೇಖೇಂಗೇ” ಕವಿತೆಯನ್ನು ವಾಚಿಸಲಾಗಿತ್ತು. ಇನ್‍ಸ್ಪೈರ್ ಎಂಬ ವಿಜ್ಞಾನ ಕಾರ್ಯಕ್ರಮದಡಿ ಇದೇ ಐಐಟಿಯಲ್ಲಿ ಐದು ವರ್ಷಗಳ ಅವಧಿಗೆ ಕರಾರಿನ ಮೇಲೆ ಬೋಧಕನಾಗಿ 2016ರಲ್ಲಿ ನೇಮಕಗೊಂಡಿರುವ ವಸಿ ಶರ್ಮಾ ಎಂಬ ಪ್ರಾಧ್ಯಾಪಕ ಮತ್ತು ಇತರ 16 ಜನರು “ಹಮ್ ದೇಖೇಂಗೇ ಕವಿತೆ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸುತ್ತದೆ” ಎಂದು ಆಡಳಿತಾಂಗಕ್ಕೆ ದೂರು ಸಲ್ಲಿಸಿದ್ದರು. ಇದರ ಅನ್ವಯ ಆಡಳಿತಾಂಗವು ಆರು ಮಂದಿ ಪ್ರಾಧ್ಯಾಪಕರ ಸಮಿತಿಯೊಂದನ್ನು ನೇಮಿಸಿ ದೂರಿನ ಕುರಿತು ತನಿಖೆ ನಡೆಸಿ ದೂರಿನಲ್ಲಿ ಏನಾದರೂ ಹುರುಳಿದೆಯೋ ಎಂದು ವರದಿ ನೀಡಲು ತಿಳಿಸಿದೆ. ದ ಹಿಂದೂ ಪತ್ರಿಕೆಯಲ್ಲಿ ವರದಿಯಾದಂತೆ ಆಡಳಿತಾಂಗವು ಸ್ಪಷ್ಟಪಡಿಸಿರುವ ಪ್ರಕಾರ ತನಿಖಾ ಸಮಿತಿಯು ಕವಿತೆ ಹಿಂದೂ ವಿರೋಧಿಯೇ ಅಲ್ಲವೇ ಎಂಬ ಕುರಿತು ತನಿಖೆ ನಡೆಸುವುದಿಲ್ಲ, ಆದರೆ ಅದರ ಕುರಿತು ದೂರು ನೀಡಿರುವವರು ತಿಳಿಸಿರುವಂತೆ ಆ ಕವಿತೆಯನ್ನು ವಾಚಿಸಿದವರಲ್ಲಿ ದುರುದ್ದೇಶವಿತ್ತೇ ಎಂಬ ಕುರಿತು ವರದಿ ನೀಡುತ್ತದೆ.

ಫೈಜ್ ಅಹಮದ್ ಫೈಜ್ ಅವರ ಕವಿತೆಯ ಕುರಿತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ಇಂತಹ ತನಿಖೆಯನ್ನು ನಡೆಸುತ್ತಿರುವುದೇ ಹಾಸ್ಯಾಸ್ಪದ ಎಂಬ ಅಭಿಪ್ರಾಯವನ್ನು ದೇಶದ ಸಾಂಸ್ಕೃತಿಕ ಲೋಕದ ಹಲವಾರು ಗಣ್ಯರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿದೆ. ಫೈಜ್ ಅವರ ಬದುಕು, ಕಾವ್ಯದ ಅಲ್ಪಸ್ವಲ್ಪ ಪರಿಚಯವಿದ್ದವರಿಗೂ ಇಂತಹ ಆರೋಪ ಎಷ್ಟು ಬಾಲಿಶಃ ಎಂಬುದು ಅರ್ಥವಾಗುತ್ತದೆ.

ಹಮ್ ದೇಖೇಂಗೆ ಕವಿತೆಯಲ್ಲಿ ಏನಿದೆ?

ಫೈಜ್ ಅವರ ಹಮ್ ದೇಖೇಂಗೇ ಕವಿತೆ ಹಿಂದೂ ಧರ್ಮವನ್ನು ನಾಶ ಮಾಡಿ ಇಸ್ಲಾಂ ದೇಶವನ್ನು ಸ್ಥಾಪಿಸುವ ಕರೆ ನೀಡುವ ಕವಿತೆ ಎಂಬುದು ವಸಿ ಶರ್ಮನ ಮುಖ್ಯ ಆರೋಪ. ಅದಕ್ಕೆ ಅವನು ಈ ಕವಿತೆಯಲ್ಲಿ ಬರುವ ವಾಕ್ಯಗಳಲ್ಲಿನ ಕೆಲವು ಪದಗಳನ್ನು ಉಲ್ಲೇಖಿಸುತ್ತಾನೆ.
“ಜಬ್ ಅರ್ಜ್-ಎ-ಖುದಾ ಕೆ ಕಾಬೆ ಸೆ/ಸಬ್ ಬುತ್ ಉಠವಾಯೇ ಜಾಯೇಂಗೇ, ಹಮ್ ಅಹ್ಲ್-ಎ-ಸಫಾ ಮರ್ದೂದೆ ಹರಮ್/ಮಸನದ್ ಪೆ ಬಿಠಾಯೇ ಜಾಯೇಂಗೇ/ಸಬ್ ತಾಜ್ ಉಛಲೆ ಜಾಯೆಂಗೇ/ಸಬ್ ತಖ್ತ್ ಗಿರಾಯೇ ಜಾಯೆಂಗೆ/ಬಸ್ ನಾಮ್ ರಹೇಗಾ ಅಲ್ಲಾಹ್ ಕಾ” ಈ ಸಾಲುಗಳಲ್ಲಿ ಫೈಜ್ ಕವಿ ಎಲ್ಲಾ ವಿಗ್ರಹಗಳನ್ನು ನಾಶ ಮಾಡಿ ಕೇವಲ ಅಲ್ಲಾಹನ ಹೆಸರೊಂದೇ ಉಳಿಯುವ ಆ ದಿನವನ್ನು ನಾವು ನೋಡುತ್ತೇವೆ ಎಂದು ಹೇಳಿದ್ದಾನೆ ಹೀಗಾಗಿ ಇದು ನಮ್ಮ ಧರ್ಮವಿರೋಧಿ ಕವಿತೆಯಾಗಿದೆ ಎಂಬುದು ಶರ್ಮಾನ ವರಾತ. ಇವನ ವಾದವನ್ನು ನೋಡಿ ನಿಜಕ್ಕೂ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಈ ಶರ್ಮಾ ಈ ಹಿಂದೆ “ಲವ್ ಜಿಹಾದ್” ಬಗ್ಗೆಯೂ ಇಂತಹುದೇ ಆರೋಪಗಳನ್ನು ಮಾಡಿ ತನ್ನನ್ನು ತಾನು ಇಸ್ಲಾಮಿ ಜಿಹಾದಿಗಳ ವಿರುದ್ಧ ಧ್ವನಿ ಎತ್ತುತ್ತಿರುವ ಭಾರೀ ಪಂಡಿತ ಎಂದು ಬಿಂಬಿಸಿಕೊಂಡಿರುವಾತ.

ಈ ವಸಿ ಶರ್ಮಾ ಹೇಳಿಕೇಳಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿಕೊಂಡಿರುವಾತ. ಅವನು ಫೈಜ್ ಅವರಂತಹ ಮಹಾನ್ ಕವಿಗಳ ಕವಿತೆಗಳನ್ನು ಅವುಗಳಲ್ಲಿರುವ ಉಪಮೆ, ರೂಪಕಗಳನ್ನು ಅರ್ಥಮಾಡಿಕೋ ಎಂದರೆ ಅವನಿಗೆ ಅದು ಸುಲಭದ ಕೆಲಸವಲ್ಲ. ಅಷ್ಟಕ್ಕೂ ಮನಸ್ಸಿನಲ್ಲಿ ಮತೋನ್ಮಾದದ ವಿಷವನ್ನೇ ತುಂಬಿಕೊಂಡಿದ್ದಾಗಲಂತೂ ಯಾವುದೇ ಕವಿತೆ ಆಶಯಗಳೂ ಅರ್ಥವಾಗುವುದು ಕಷ್ಟ.
ಆದರೆ ಈ ಕವಿತೆ ಮತ್ತು ಇದರ ಬಗ್ಗೆ ವಸಿ ಶರ್ಮಾನಂತರವು ಎತ್ತಿರುವ ತಕರಾರು ಮತಾಂಧ ಮನಸ್ಸುಗಳ ಆಲೋಚನಾ ದಾಟಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಮಾತ್ರವಲ್ಲ ಈ ವಿವಾದದ ನಂತರದಲ್ಲಿ ದೇಶದ ಸಹಸ್ರಾರು ಜನರು ಫೈಜ್ ಎಂಬ ಮಹಾಕವಿಯ ಬದುಕನ್ನು ಮತ್ತು ಆತನ ಕವಿತೆಗಳನ್ನು ಹುಡುಕಿಕೊಂಡು ತಿಳಿದುಕೊಳ್ಳುವಂತಾಗಿದೆ.

ಹಮ್ ದೇಖೇಂಗೇ ಕವಿತೆಯನ್ನು ಫೈಜ್ ಅಹಮದ್ ಫೈಜ್ ಬರೆದಿದ್ದು 1979ರಲ್ಲಿ. ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್ ಬುಟ್ಟೋ ಅವರನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದ ಮಿಲಿಟರಿ ಜನರಲ್ ಜಿಯಾ ಉಲ್ ಹಕ್ ಕಟ್ಟರ್ ಪಂಥೀಯನಾಗಿದ್ದು ಇಡೀ ಪಾಕಿಸ್ತಾನವನ್ನು ಮತಾಂಧತೆಯೆಡೆಗೆ ದೂಡುತ್ತಿದ್ದ ಸನ್ನಿವೇಶದಲ್ಲಿ ಅವನ ದುರಾಡಳಿತದ ಅಂತ್ಯವನ್ನು ಬಯಸಿ ಫೈಜ್ ಬರೆದಿದ್ದ ಕವಿತೆಯೇ ‘ಹಮ್ ದೇಖೇಂಗೆ’. 1984ರಲ್ಲಿ ಫೈಜ್ ನಿಧನದ ಮರುವರ್ಷ ಅಂದರೆ 1985ರಲ್ಲಿ ಪಾಕಿಸ್ತಾನದ ಮಹಿಳೆಯರು ಸೀರೆ ಉಡುವಂತಿಲ್ಲ ಎಂಬ ಉಘಲಕ್ ಶಾಸನವನ್ನು ಜಿಯಾ ಉಲ್ ಹಕ್ ಘೋಷಿಸಿದ್ದ. ಈ ಶಾಸನವನ್ನು ಖಂಡಿಸಿ ಪಾಕಿಸ್ತಾನದ ಪ್ರಸಿದ್ಧ ಗಾಯಕಿ ಇಕ್ಬಾಲ್ ಬಾನೋ ಲಾಹೋರಿನ ಗಡಾಫಿ ಕ್ರೀಡಾಂಗಣದಲ್ಲಿ ಕಪ್ಪು ಸೀರೆಯುಟ್ಟುಕೊಂಡು ಬಂದು ಫೈಜ್ ಅವರ “ಹಮ್ ದೇಖೇಂಗೇ” ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿದ್ದರು. ಫೈಜ್ ಬರೆದ ಈ ಹಾಡಿನ ಗಾಯನವನ್ನು ಕೇಳಲೆಂದೇ ಅಂದು ಸುಮಾರು 50,000 ಜನರು ನೆರೆದಿದ್ದರು ಎಂದು ಹೇಳಲಾಗುತ್ತದೆ. ಹಾಡಿನುದ್ದಕ್ಕೂ ಕರತಾಡನ ಮಾಡುತ್ತಿದ್ದ ಜನರು ಹಾಡಿನ ಕೊನೆಯಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಕೂಗಿದ್ದರು. ಅಂದು ಇಕ್ಬಾಲ್ ಹಾಡಿದ್ದ ಈ ಗಾಯನದ ಧ್ವನಿಮುದ್ರಿಕೆಯನ್ನು ಹೇಗೋ ರಕ್ಷಿಸಿಕೊಂಡು ಬರಲಾಗಿದ್ದು ಇಂದಿಗೂ ಯೂಟ್ಯೂಬಿನಲ್ಲಿ ಕೇಳಲು ಲಭ್ಯವಿದೆ. ತದನಂತರದಲ್ಲಿ ಈ ಹಮ್ ದೇಖೇಂಗೇ ಕವಿತೆ ಒಂದು ಕ್ರಾಂತಿಗೀತೆಯಂತೆ ದಬ್ಬಾಳಿಕೆ ನಡೆಸುವ ಸರ್ಕಾರಗಳ ವಿರುದ್ಧದ ಹೋರಾಟಗಳಲ್ಲಿ ರಾಷ್ಟ್ರಗೀತೆಯಂತೆ ಹಾಡಲಾಗುತ್ತಿದೆ.

ವಾಸ್ತವದಲ್ಲಿ ಫೈಜ್ ಒಬ್ಬ ಎಡಪಂಥೀಯ ಕವಿ. ಅವರ ಪ್ರತಿ ಕವಿತೆಗಳಲ್ಲಿ ಪ್ರೇಮ ಮತ್ತು ಕ್ರಾಂತಿಯ ಸಂದೇಶಗಳ ಹೊರತಾಗಿರುವುದು ಏನೂ ಇಲ್ಲ. ಹಮ್ ದೇಖೇಂಗೇ ಕವಿತೆಯಲ್ಲಿ ಅವರು ಬಳಸಿರುವ ದೈವಿಕವಾದ ಪದಪುಂಜಗಳನ್ನು ಈ ಕವಿತೆಯ ಆಶಯ ಮತ್ತು ಅದು ಹುಟ್ಟಿದ ಸಂದರ್ಭದಿಂದ ಹೊರತಾಗಿ ನೊಡಹೋದರೆ ವಸಿ ಶರ್ಮಾನಂತಹ ಕೂಪಮಂಡೂಕಗಳ ಮಾತುಗಳಲ್ಲಿ ಸತ್ಯವಿದೆ ಅನಿಸಬಹುದು. ಮೇಲೆ ಉಲ್ಲೇಖಿಸಿರುವ ವಿವಾದಿತ ಸಾಲುಗಳಲ್ಲಿ ಕವಿ ಫೈಜ್ ಸರ್ವಾಧಿಕಾರಿ ಜಿಯಾ ಉಲ್ ಹಕ್‍ನನ್ನು ಧರೆಯ ಮೇಲಿನ ಪೊಳ್ಳುತನಗಳಿಗೆ ಹೋಲಿಸುತ್ತಾರೆ. ಸರ್ವಾಧಿಕಾರಿಗಳ ಸಿಂಹಾಸನಗಳು ಧರೆಗುರುಳುವ ಆ ದಿನ ದ್ರೋಹಿಗಳು ಎಂಬ ಹಣೆಪಟ್ಟಿ ಹಚ್ಚಿಕೊಂಡಿರುವ ನಿಜವಾದ ಹೃದಯವಂತು ಹಕ್ಕಿನ ಗದ್ದುಗೆ ಏರುತ್ತೇವೆ, ಬೂಟಾಟಿಕೆಯ ದೊರೆಗಳು ನಾಶವಾಗಿ ಅಂತಿಮವಾಗಿ ಸರ್ವಶಕ್ತನ ಹೆಸರೊಂದೇ ಉಳಿಯುತ್ತದೆ ಎಂಬುದು ಈ ಕವಿತೆಯ ಸಾಲುಗಳ ಸಾರ. ಇಲ್ಲಿ ಅಲ್ಲಾಹುವಿನ ಎಂಬ ಇಸ್ಲಾಂ ಧರ್ಮದ ದೇವರನ್ನು ಸೂಚಿಸುವ ಪದವನ್ನು ಫೈಜ್ ಬಳಸಿದ್ದಾರೆ ನಿಜ. ಆದರೆ ಫೈಜ್ ನಂಬುವ ಅಲ್ಲಾಹ್ ಯಾರು ಎಲ್ಲಿದ್ದಾನೆ ಎಂಬುದನ್ನು ಇದೇ ಕವಿತೆಯ ಮುಂದಿನ ಪ್ಯಾರಾದಲ್ಲಿರುವ ಸಾಲುಗಳು ತಿಳಿಸುತ್ತವೆ. ಅದರಲ್ಲಿ ಫೈಜ್ ಹೇಳುತ್ತಾರೆ “ಜೊ ನಾಮ್ ರಹೇಗಾ ಅಲ್ಲಾಹ್ ಕಾ/ ಜೊ ಗಾಯೆಬ್ ಭೀ ಹೇ ಜಾಜಿರ್ ಭೀ/ ಜೊ ಮಂಜಿರ್ ಭೀ/ಉಠ್ಠೇಗಾ ಅನಲ್ ಹಕ್ ಕಾ ನಾರಾ/ಜೊ ಮೈಂ ಭೀ ಹೂಂ ಓರ್ ತುಮ್ ಭೀ ಹೋ” ಇವುಗಳ ಭಾವಾರ್ಥ ಹೀಗಿದೆ: ಅಲ್ಲಾಹನ ಹೆಸರೊಂದೇ ಉಳಿಯುತ್ತದೆ, ನಾನು ಮತ್ತು ನೀನು ಇಬ್ಬರೂ ದೇವರ ಪ್ರೀತಿಗೆ ಪಾತ್ರರಾಗುವ ಆ ದಿನ ಅನಲ್ ಹಕ್‍ನ ಘೋಷ ಮೊಳಗಲಿದೆ, ಆ ದಿನ ನಾನು ಮತ್ತು ನೀನು ದೇವರಾಗಲಿದ್ದೇವೆ.

ಇದರ ಮೂಲಕ ಫೈಜ್ ಇಸ್ಲಾಂ ಮತಾಂಧತೆಯನ್ನು ಪ್ರಚುರಪಡಿಸುತ್ತಿಲ್ಲ ಬದಲಿಗೆ, ಜಗತ್ತಿನ ಎಲ್ಲಾ ಧರ್ಮಗಳ ಜನರು ಒಪ್ಪಿಕೊಂಡಿರುವ ಆಧ್ಯಾತ್ಮಿಕ ತತ್ವವನ್ನು ತಮ್ಮ ಕವಿತೆಯ ಮೂಲಕ ಹೇಳುತ್ತಿದ್ದಾರೆ. ಇಲ್ಲಿ ಫೈಜ್ ಬಳಸಿರುವ ‘ಅನಲ್ ಹಕ್” ಪದವನ್ನು ನೀಡಿದ್ದು ಧಾರ್ಮಿಕ ಮೂಲಭೂತವಾದಕ್ಕೆ ತನ್ನದೇ ರೀತಿಯಲ್ಲಿ ಸೆಡ್ಡು ಹೊಡೆದ ಸೂಫಿ ಪಂಥ. ಕ್ರಿ.ಶ. 922ರಲ್ಲಿ ಪರ್ಷಿಯಾದ ಅನುಭಾವಿ ಸೂಫಿ ಸಂತ ಮನ್ಸೂರ್ ಅಲ್ ಹಲ್ಲಾಝ್ ಈ ‘ಅನಲ್ ಹಕ್’ ಎಂಬ ನುಡಿಗಟ್ಟನ್ನು ಸೂಫಿ ಸಾಹಿತ್ಯದಲ್ಲಿ ಬಳಕೆಗೆ ತಂದ ಕಾರಣದಿಂದ ಆತನನ್ನು “ಧರ್ಮದ್ರೋಹ”ದ ಆರೋಪದಲ್ಲಿ ಗಲ್ಲಿಗೇರಿಸಲಾಗಿತ್ತು. ಯಾಕೆಂದರೆ ಈ ನುಡಿಗಟ್ಟಿನ ಮೂಲಕ ಸೂಫಿ ಕವಿ ಹೇಳಿದ್ದು ನಾನು ಮತ್ತು ದೇವರು ಬೇರೆ ಅಲ್ಲ, ನಾನೇ ಸತ್ಯ, ನಾನೇ ದೇವರು, ನಮ್ಮ ಅಹಂನ್ನು ಕಳಚಿಕೊಂಡು, ನಮ್ಮೊಳಗಿನ ಅಂತಿಮ ಸತ್ಯವನ್ನು ಕಂಡುಕೊಳ್ಳುವ ಮೂಲಕವೇ ದೇವರನ್ನು ಕಂಡುಕೊಳ್ಳಬೇಕು ಎಂದು. ಆ ಸ್ಥಿತಿಯೇ ಅನಲ್ ಹಕ್ ಎನ್ನಲಾಗಿದೆ. ಆದರೆ ದೇವರೆಂದರೆ ಇದು, ಧರ್ಮವೆಂದರೆ ಇದು ಎಂದು ಬರೆದುಕೊಂಡು ಕುಳಿತವರಿಗೆ ಈ ತತ್ವವನ್ನು ಅರಗಿಸಿಕೊಳ್ಳುವುದು ಕಷ್ಟ. ಮನ್ಸೂರ್ ಬರೆಯುತ್ತಾನೆ, “ಹೃದಯದ ಕಣ್ಣಿನಿಂದ ನನ್ನ ದೇವರನ್ನು ನಾನು ನೋಡಿದೆ, ಆಗ ನಾನು ಕೇಳಿದೆ “ನೀನು ಯಾರು”, ಅದಕ್ಕವನುತ್ತರಿಸಿದ “ನೀನು”. ಇದನ್ನೇ ಅಲ್ಲವೇ ನಮ್ಮ ಕಬೀರನೂ ಹೇಳಿದ್ದು, ಶಿಶುನಾಳ ಶರೀಫರೂ ಹೇಳಿದ್ದು? ಹಾಗಿದ್ದ ಮೇಲೆ ಹಿಂದೂ ಧರ್ಮದ ವಿರೋಧದ ಪ್ರಶ್ನೆ ಎಲ್ಲಿ ಬರುತ್ತದೆ? ಫೈಜ್ ತಮ್ಮ ಕವಿತೆಯಲ್ಲಿ ಮಾರ್ದನಿಸಿದ ಮನ್ಸೂರನ ಸೂಫಿ ತತ್ವ ಬೇರೆಯಲ್ಲ ಉಪನಿಷತ್ತುಗಳಲ್ಲಿ ಹೇಳಲಾದ ಅದ್ವೈತ ತತ್ವ ಬೇರೆಯಲ್ಲ. ನಮ್ಮ ನೋಡುವ ಕಣ್ಣು, ಸ್ವೀಕರಿಸುವ ಒಳಗಣ್ಣು ಹೃದಯಗಳು ಪರಿಶುದ್ಧವಾಗಿದ್ದರೆ ಇದನ್ನು ಅರಿಯುವುದು ಕಷ್ಟವೇನಲ್ಲ ಆದರೆ ವೈದಿಕ ವಿಷಜಂತು ವಸಿ ಶರ್ಮಾನಂತ ಮತಾಂಧರಿಗೆ ಪ್ರತಿಯೊಂದೂ ಹಿಂದು ಧರ್ಮ ವಿರೋಧಿಯಾಗಿಯೇ ಕಾಣಿಸುವುದು, ಫೈಜ್ ಕವಿತೆಯನ್ನು ಹಾಡುವ, ಅದನ್ನು ಸಮರ್ಥಿಸುವ ಪ್ರತಿಯೊಬ್ಬರೂ ಐಸಿಸ್‍ನ ಸಮರ್ಥಕರಂತೆ ತೋರುತ್ತಿರುವುದು ಅಚ್ಚರಿಯೂ ಅಲ್ಲ ಹೊಸ ವಿಷಯ ಅಂತೂ ಅಲ್ಲವೇ ಅಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...