ತುಮಕೂರಿನ ಗುಬ್ಬಿ ತಾಲ್ಲೂಕು ತಿಪ್ಪೂರಿನಲ್ಲಿ ಬಡ ಮಹಿಳೆ ಸಿದ್ದಮ್ಮನಿಗೆ ಸೇರಿದ್ದ ಸುಮಾರು 200 ತೆಂಗು ಅಡಿಕೆ ಮರಗಳನ್ನು ನೆಲಕ್ಕುರುಳಿಸಿದ್ದ ತಹಶೀಲ್ದಾರ್ ಕ್ರಮ ಖಂಡಿಸಿ ತಿಪ್ಪೂರಿನಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ನಾಗೇಶ್ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕಡಿದು ಬಿದ್ದ ಮರಗಳನ್ನು ಟ್ರಾಕ್ಟರ್ಗೆ ತುಂಬಿಕೊಂಡು ಮೆರವಣಿಗೆ ಮೂಲಕ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸುರಿದು ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ.
ನಾಗೇಶ್ರವರು ಮಾತನಾಡಿ “ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೀರಿ, ರೈತರ ಹೆಸರಿನಲ್ಲಿ ಬಜೆಟ್ ಮಂಡಿಸುತ್ತೇವೆ ಎಂದು ಹಸಿರು ಟವೆಲ್ ಹಾಕಿಕೊಂಡವರು ರೈತರಿಗೆ ಕೊಡುವ ಗೌರವ ಇದೇನಾ? ಇನ್ನು ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಯಾಕೆ ಬಂದಿಲ್ಲ? ಈ ಪರಿಸ್ಥಿತಿ ಬರಬಾರಿದಿತ್ತು. ಈ ಕೂಡಲೇ ತಹಶೀಲ್ದಾರ್ರನ್ನು ವಜಾ ಮಾಡುವಂತೆ ಮನವಿ ಮಾಡುತ್ತೇವೆ” ಎಂದಿದ್ದಾರೆ.
ಇದನ್ನೂ ಓದಿ: ತೆಂಗು-ಅಡಿಕೆ ತೋಟ ಕಳೆದುಕೊಂಡ ಸಿದ್ದಮ್ಮನಿಗೆ ಮೊದಲು ಪರಿಹಾರ ಕೊಡಿ, ನಂತರ ತನಿಖೆ ಮಾಡಿ
ಒಂದು ವಾರದವರೆಗೆ ಗಡುವು ನೀಡುತ್ತೇವೆ. ಕೂಡಲೇ ಆ ಮಹಿಳೆಗೆ 50 ಲಕ್ಷ ಪರಿಹಾರ ಕೊಡಬೇಕು. ಇಲ್ಲದಿದ್ದಲ್ಲೇ ಗುಬ್ಬಿ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.