ದೇಶದಲ್ಲಿ ಕೊರೋನಾ ಸೃಷ್ಟಿಸಿರುವ ಆತಂಕವನ್ನು ನಿಭಾಯಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಲಾಕ್ಡೌನ್ನಿಂದ ಹಿರಿಯ ನಾಗರೀಕರು, ಕೂಲಿ ಕಾರ್ಮಿಕರು ಹಾಗೂ ಹಮಾಲಿಗಳು ಸಂಕಷ್ಟದಲ್ಲಿ ಸಿಲುಕಿದ್ದು ಸೂಕ್ತ ನೆರವು ಕಲ್ಪಿಸಬೇಕೆಂದು ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಒತ್ತಾಯಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು, ಹಮಾಲಿಗಳು ಸಂಕಷ್ಟದಲ್ಲಿದ್ದಾರೆ. ಅವರ ಸಂಕಟವನ್ನು ನಿವಾರಿಸುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು. ಆಸ್ಪತ್ರೆ ಸಿಬ್ಬಂದಿಗೆ ವಿಮೆ ಹಾಗೂ ಸುರಕ್ಷ ಸಾಧನ ನೀಡಬೇಕು ಎಂದು ಆಗ್ರಹಿಸಿದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಮಹೇಶ್ ಮಾತನಾಡಿ ಕೊರೋನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಅವಶ್ಯಕತೆ ಇದೆ, ಆದರೆ ಮಾಸ್ಕ್ ಸಿಗದಿದ್ದರೆ ಬಟ್ಟೆ ಬಳಸಬೇಕು, ರೋಗ ಹರಡದಂತೆ ಸಹಕರಿಸಬೇಕು ಎಂದು ತಿಳಿಸಿದರು.
ಖಾಸಗಿ ಕ್ಲಿನಿಕ್ಗಳ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಸೇವೆ ಸ್ಥಗಿತಗೊಳಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ, ಖಾಸಗಿ ಕ್ಲಿನಿಕ್ ಪ್ರಪಂಚದಲ್ಲೆಡೆ ಸ್ಥಗಿತಗೊಳಿಸಲಾಗಿದೆ. ವೈದ್ಯರಿಗೆ ಸೋಂಕು ತಗುಲಿದರೆ ಕಷ್ಟವಾಗಲಿದೆ, ಇಪ್ಪತ್ತು ಲಕ್ಷ ಜನರಿಗೆ ಒಂದು ಸಾವಿರ ವೈದ್ಯರಿದ್ದು, ಟೆಲಿ ಮೆಡಿಸನ್ ಮೂಲಕ ಚಿಕಿತ್ಸೆ ನೀಡಲಾಗುವುದು ಎಂದ ಅವರು, ಜನರಿಗೆ ತೊಂದರೆಯಾಗಬಾರದು ಎಂದು ಕ್ಲಿನಿಕ್ ಮುಚ್ಚುವ ನಿರ್ಧಾರ ಮಾಡಲಾಗಿದೆ ಎಂದರು.
ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ ಜನರು ಭೀತಿಯಿಂದ ಹೊರಬರುವಂತೆ ನೋಡಿಕೊಳ್ಳಬೇಕು. ಕಾಯಿಲೆಯು ವೈಜ್ಞಾನಿಕವಾಗಿ ಗುಣವಾಗುತ್ತದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಆದರೆ ಜನರಲ್ಲಿ ವಿಶ್ವಾಸ ತುಂಬಬೇಕಾಗಿರುವ ಜನಪ್ರತಿನಿಧಿಗಳು ಮತ್ತು ವೈದ್ಯರು ಅಡಗುತಾಣಗಳಲ್ಲಿ ಹುದುಗಿಕೊಂಡಿದ್ದಾರೆ. ಅವರು ಹೊರಬಂದು ಜನರಲ್ಲಿ ಆತ್ಮವಿಶ್ವಾಸ ತುಂಬಿದರೆ ಜನರು ಭಯದಿಂದ ಹೊರಬರಲು ಸಾಧ್ಯ ಎಂದು ಸಲಹೆ ಮಾಡಿದರು.
ಜಿಲ್ಲಾಡಳಿತ ಜನರ ಅಗತ್ಯಗಳೇನೆಂಬುದನ್ನು ಕಂಡುಕೊಳ್ಳಬೇಕು. ಈ ಮೂಲಕ ವಿಕೇಂದ್ರೀಕರಣದ ನೀರು, ಆಹಾರ ಮತ್ತು ಔಷಧಿಯಂತಹ ಅಗತ್ಯವಸ್ತುಗಳನ್ನು ವಿತರಣೆ ಮಾಡಿದರೆ ಜನರು ಗುಂಪುಗೂಡುವುದು ತಪ್ಪಿಸಬಹುದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬಹುದು. ಕೊರೊನ ಸೋಂಕನ್ನು ನಿಯಂತ್ರಿಸಬಹುದು. ಎಂದು ಹೇಳಿದರು.
ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಮಾತನಾಡಿ ಕೊರೋನಾದಿಂದ ಬೀಡಿ ಕಾರ್ಮಿಕ ಉದ್ಯಮ ಸಂಕಷ್ಟದಲ್ಲಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಅವರೇ ಸುರಕ್ಷಿತವಲ್ಲ. ಹಾಗಾಗಿ ಇಲಾಖೆ ಮೂಲಕ ಗ್ರಾಮಮಟ್ಟದಲ್ಲಿ ಹೊರಗಿನಿಂದ ಬಂದವರು ಯಾರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ, ದುಡಿಯುವ ವರ್ಗ ಸಂಕಷ್ಟದಲ್ಲಿ ಸಿಲುಕಿದೆ. ಜನರು ಮನೆಯಿಂದ ಹೊರ ಬಾರದಂತೆ ಅಗತ್ಯವಾದ ಆಹಾರ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ರೆಡ್ಕ್ರಾಸ್ ಸೊಸೈಟಿಯ ಚಂದ್ರ, ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಟೂಡಾ ಮಾಜಿ ಅಧ್ಯಕ್ಷ ರೆಡ್ಡಿಚಿನ್ನಯಲ್ಲಪ್ಪ, ಗಾಂಧಿವಾದಿ ಎನ್.ಬಸವಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ಮುಖಂಡ ಬೆಳ್ಳಿಲೊಕೇಶ್, ಸಿದ್ಧಗಂಗಾ ಆಸ್ಪತ್ರೆ ವ್ಯವಸ್ಥಾಪಕ ಡಾ.ಪರಮೇಶ್ ಇದ್ದರು.


