ಒಂದೆಡೆ ದೇಶದಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿದೆ. ದೇಶ ವೈದ್ಯಕೀಯ ಸಲಕರಣೆ ಮತ್ತು ಜೀವ ರಕ್ಷಕಗಳ ಕೊರತೆ ಎದುರಿಸುತ್ತಿದೆ. ಉಚಿತ ವೈದ್ಯಕೀಯ ಸೌಲಭ್ಯ ನೀಡುವಂತೆ ಜನ ಆಗ್ರಹಿಸುತ್ತಿದ್ದಾರೆ. ಕೊರೋನಾ ಮಹಾಮಾರಿ ವೈದ್ಯಕೀಯ ಸಿಬ್ಬಂದಿಗಳನ್ನು, ಐಎಎಸ್ ಅಧಿಕಾರಿಗಳನ್ನು ಕೂಡ ಬಿಡದೇ ವ್ಯಾಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೂಡಲೇ ಸಾಕಷ್ಟು ವೈದ್ಯಕೀಯ ಸಲಕರಣೆಗಳ ಒದಗಿಸಲು ಮುಂದಾಗಬೇಕಿದ್ದ ಪ್ರಧಾನಿಗಳು ಒಗ್ಗಟ್ಟಿನ ಮಂತ್ರದ ಹೆಸರಲ್ಲಿ ಜನರ ಜೀವವನ್ನು ಸಾವಿನೆಡೆಗೆ ತಳ್ಳುತ್ತಿದ್ದಾರೆ.
ಕೋವಿಡ್ -19 ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ದಿನ ಚಪ್ಪಾಳೆ ತಟ್ಟಲು ಮೋದಿ ಕೋರಿದ್ದರು. ನಮ್ಮ ರಾಜ್ಯದ ರಾಜ್ಯಪಾಲರಾದ ವಜುಭಾಯಿ ವಾಲಾ ಸೇರಿದಂತೆ ಅನೇಕ ಶಾಸಕರು, ಸಚಿವರು, ಸಂಸದರು ಸಾಮಾಜಿಕ ಅಂತರವನ್ನು ಉಲ್ಲಂಘಿಸಿ ಮೋದಿಯ ಚಪ್ಪಾಳೆಯ ಕರೆಯಿಂದಾಗಿ ಬೀದಿಗಿಳಿದಿದ್ದರು. ಮನೆಯ ಬಾಲ್ಕನಿಯ ಮುಂದೆ ನಿಂತು ಚಪ್ಪಾಳೆ ತಟ್ಟಿ ಎಂದಿದ್ದಕ್ಕೆ ಈ ರೀತಿಯ ಮೂರ್ಖತನವನ್ನು ಜನ ಪ್ರದರ್ಶಿಸಿದ್ದರು.
ಸಾಮಾಜಿಕ ಅಂತರವನ್ನು ದೇಶದಾದ್ಯಂತ ಉಲ್ಲಂಘಿಸಿ. ಬೀದಿಯಲ್ಲಿ ಜಾಥಾ ಮಾಡಿ ತಟ್ಟೆ ಜಾಗಟೆಗಳನ್ನು ಬಡಿದಾಗಲಾದರೂ ದೇಶದ ಪ್ರಧಾನಿ ಮೋದಿಯವರು ಇದೆ ರೀತಿಯ ಇನ್ನೊಂದು ಕರೆ ಕೊಡುವ ಮುನ್ನ ಯೋಚಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಭಾರತದಲ್ಲಿ 4067 ಪ್ರಕರಣಗಳು ಬೆಳಕಿಗೆ ಬಂದಿವೆ. 109 ಮಂದಿ ಮೃತಪಟ್ಟಿದ್ದಾರೆ. ದಿನದಿಂದ ದಿನಕ್ಕೆ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಹೀಗಿದ್ದ ಪರಿಸ್ಥಿಯಲ್ಲಿ ಮತ್ತೆ ಮನೆ ಮುಂದೆ ದೀಪಗಳನ್ನು ಬೆಳಗಲು ಹೇಳಿದರೆ ಜನರು ಏನು ಮಾಡಬಹುದು ಎಂಬ ಊಹೆ ಪ್ರಧಾನಿ ಮೋದಿಯವರಿಗೆ ಇರಬೇಕಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅವಶ್ಯಕತೆ ಮತ್ತು ಅನಿವಾರ್ಯತೆ ಇರುವ ಸಂದರ್ಭದಲ್ಲಿ ಈ ರೀತಿಯ ಕರೆ ಕೊಡುವುದು ಎಷ್ಟು ಸರಿ?
ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆಯಲು ಕರೆಕೊಟ್ಟಾಗ ಅನೇಕರು ಬೀದಿಗಿಳಿದು ಜಾಗಟೆ ಬಡಿದು ಸಾಮಾಜಿಕ ಅಂತರ ಉಲ್ಲಂಘಿಸಿದ್ದರು. ಆಗಲಾದರೂ ಪ್ರಧಾನಿಯವರು ಎಚ್ಚೆತ್ತುಕೊಳ್ಳಬೇಕಿತ್ತು
ಮತ್ತೆ ದೀಪದ ಹಚ್ಚುವ ಕರೆಗೆ ಅನೇಕರು ಪಟಾಕಿ ಹಚ್ಚಿದರು. ಸಾಮಾಜಿಕ ಅಂತರ ಉಲ್ಲಂಘಿಸಿದರು. ಜನರಿಗೆ ಅನ್ನುವುದೊ ? ಪ್ರಧಾನಿಯವರಿಗೊ ? #covidindia pic.twitter.com/dnQIMlhQ1a
— Raksha Ramaiah ?? (@RakshaRamaiah) April 6, 2020
ಕೊನೆಗೂ ಪರಿಸ್ಥಿತಿ ಕೈಮೀರಿತು. ಕೆಲವು ಜನ ದೀಪ ಹಚ್ಚುವುದರ ಬದಲು ದೊಂದಿ ಹಿಡಿದು ಬೀದಿಗಿಳಿದರು. ಮನಸೋ ಇಚ್ಛೆ ಪಟಾಕಿ ಸಿಡಿಸಿದರು. ಗುಂಪು ಗುಂಪಾಗಿ ಸೇರಿ ಬೆಂಕಿ ಹಾಕಿ ಕೂಗಾಡಿದರು. ಒಟ್ಟಿನಲ್ಲಿ ಲಾಕ್ಡೌನ್ನ ಮುಖ್ಯ ಉದ್ದೇಶ ಸಾಮಾಜಿಕ ಅಂತರದಲ್ಲಿರಬೇಕಾದುದ್ದನ್ನು ಮಣ್ಣು ಪಾಲು ಮಾಡಿದರು. ಇದಕ್ಕೆ ನಾವು ಯಾರನ್ನು ದೂರೋಣ?
ಪ್ರಧಾನಿಗಳು ವೈದ್ಯಕೀಯ ಅಗತ್ಯಗಳೆಡೆ ಗಮನ ನೀಡಬೇಕು. ಜನರನ್ನು ರಕ್ಷಣೆ ಮಾಡಬೇಕು. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿ ಹೇಳಬೇಕು. ಜಾಗೃತಿ ಮೂಡಿಸುವ ಬದಲಾಗಿ ಒಂದರ ಮೇಲೊಂದು ಕರೆ ಕೊಡುವುದು ಎಷ್ಟು ಸರಿ ? ದೇಶದ ಜನರನ್ನು ನಿಯಂತ್ರಿಸುವುದು ಎಷ್ಟು ಕಷ್ಟ ಎಂದು ಅರಿತ ಮೇಲು ದೇಶದ ಪ್ರಧಾನಿಯವರು ಹೀಗೆ ಮಾಡುತ್ತಾರೆ ಎಂದರೆ ಏನನ್ನುವುದು? ಇದು ಪ್ರಧಾನಿಯವರ ಮೂರ್ಖತನವೋ ಅಥವಾ ಜನರ ಮೂರ್ಖತನವೋ?
(ಲೇಖಕರು ಸಾಮಾಜಿಕ ಕಾರ್ಯಕರ್ತರು. ಅಭಿಪ್ರಾಯಗಳು ವಯಕ್ತಿಕವಾದವುಗಳು)
ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ