Homeಕಥೆ"ಗಂಧರ್ವಸೇನಾ ಸತ್ತಾಗ?" : ಪ್ರಸ್ತುತ ಯಾವುದೇ ವಿದ್ಯಮಾನಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ

“ಗಂಧರ್ವಸೇನಾ ಸತ್ತಾಗ?” : ಪ್ರಸ್ತುತ ಯಾವುದೇ ವಿದ್ಯಮಾನಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ

- Advertisement -
- Advertisement -

ರಾಜ ತನ್ನ `ಪರಿವಾರ’ ಸಮೇತ ಒಡ್ಡೋಲಗದಲ್ಲಿ ಬ್ಯುಸಿಯಾಗಿದ್ದ. ಅಷ್ಟೊತ್ತು ಮಿಸ್ಸಿಂಗ್ ಆಗಿದ್ದ ಮಂತ್ರಿ, ಜೋರಾಗಿ ರೋಧಿಸುತ್ತ ಕಣ್ಣೀರ ಧಾರೆ ಸುರಿಸುತ್ತ ಓಡೋಡಿ ಒಡ್ಡೋಲಗ ಪ್ರವೇಶಿಸಿದ. ಮಂತ್ರಿಯ ಸ್ಥಿತಿ ನೋಡಿ ರಾಜನಿಗೆ ಗಾಬರಿಯಾಯ್ತು. “ಏನಾಯ್ತು ಮಂತ್ರಪ್ಪ. ಅದ್ಯಾಕಿಂಗೆ ಸಣ್ಣಮಕ್ಕಳ ಥರ ಅತ್ಕೊಂಡು ಬತ್ತಾ ಇದೀಯ? ಮನೆಯಲ್ಲಿ ಹೆಂಡ್ರು, ಮಕ್ಕಳು ಕ್ಷೇಮವೆ” ರಾಜ ವಿಚಾರಿಸಿದ. “ಅಯ್ಯೋ ಏನಂಥಾ ಹ್ಯೇಳೋದು ಮಾರಾಜುರೆ. ಗಂಧರ್ವ ಸೇನಾ ಸತ್ತೋದ್ನಂತೆ!” ಮಂತ್ರಿ ತನ್ನ ಸಂಕಟದ ಮೂಲವನ್ನು ಮುಂದಿಟ್ಟ.

“ಅಯ್ಯಯ್ಯೋ, ಎಂಥಾ ಸುದ್ದಿ ಹ್ಯೇಳ್ತಾ ಇದೀಯ ಮಂತ್ರಪ್ಪ. ಗಂಧರ್ವ ಸೇನಾ ಸತ್ತೋದ್ನಾ!!!” ಈಗ ಮಹಾರಾಜ ಕೂಡಾ ಮಂತ್ರಿಗೆ ಕೋರಸ್ ಕೊಟ್ಟು ರೋಧಿಸಲು ಶುರು ಮಾಡಿದ. ರಾಜನೆ ಕಣ್ಣೀರಿಟ್ಟ ಮೇಲೆ ಕೇಳಬೇಕೆ. ಇಡೀ ಒಡ್ಡೋಲಗವೆ

“ಅಯ್ಯಯ್ಯೋ, ಗಂಧರ್ವ ಸೇನಾ ಹೋಗ್ಬುಟ್ಟೆಯಾ” ಎಂಬ ರೋಧನೆಯಲ್ಲಿ ಮುಳುಗಿಹೋಯ್ತು.

ಹಾರ್ಟ್ ಬ್ರೇಕಿಂಗ್ ಸುದ್ದಿ ಕೇಳಿದಮೇಲೆ ಒಡ್ಡೋಲಗ ನಡೆಸುವ ಯಾವ ಉಮೇದಿಯೂ ರಾಜನಿಗೆ ಉಳಿಯಲಿಲ್ಲ. ರಾಜ್ಯದಲ್ಲಿ ಇಪ್ಪತ್ತೊಂದು ದಿನಗಳ ಶೋಕಾಚರಣೆ ಘೋಷಿಸಿ, ದುಃಖತಪ್ತ ಮೋರೆಯಲ್ಲಿ ಅಂತಃಪುರದ ಕಡೆ ನಡೆದ.

ಒಡ್ಡೋಲಗದಲ್ಲಿರಬೇಕಿದ್ದ ರಾಜ ಹೀಗೆ ಹೊತ್ತಲ್ಲದಹೊತ್ತಲ್ಲಿ ಅಂತಃಪುರಕ್ಕೆ ಧಾವಿಸಿದ್ದನ್ನು, ಅದರಲ್ಲು ದುಖತಪ್ತನಾಗಿ ರಾಣಿನಿವಾಸ ಹೊಕ್ಕಿದ್ದನ್ನು ನೋಡಿ ಅವನ ರಾಣಿಯರಿಗೆ ಅಚ್ಚರಿಯಾಯ್ತು. ಪಟ್ಟದರಸಿ ರಾಜನ ಬಳಿ ಬಂದು “ಯಾಕೆ ಮಾಸ್ವಾಮಿ, ಶ್ಯಾನೆ ಬ್ಯಾಸರದಲ್ಲಿ ಇದೀರಿ. ಮಟಮಟ ಮಧ್ಯಾನುವೆ ಮಂಚದ ಮನೆಯತ್ತ ಬಂದಿದೀರಿ. ಏನ್ಸಮಾಚಾರ?” ತುಸು ಅಳುಕಿನಲ್ಲೆ ಕೇಳಿದಳು. “ಏನಂಥಾ ಹ್ಯೇಳ್ಳಿ ಮಾರಾಣಿ, ಗಂಧರ್ವಸೇನಾ ಸತ್ತೋದ್ನಂತೆ” ರಾಜನ ಮಾತಿನ್ನು ಬಾಯೊಳಗೇ ಇತ್ತೇನೊ, ಮಹಾರಾಣಿ ದೊಪ್ಪನೆ ನೆಲಕ್ಕೆ ಕುಸಿದುಬಿದ್ದಳು. “ಏನಂದ್ರಿ ಪ್ರಭು, ಗಂಧರ್ವಸೇನ ಸತ್ತೋದ್ನ? ಅಯ್ಯೋ ದುರ್ವಿಧಿಯೇ?..!” ಮಹಾರಾಣಿ ಚಿತ್ರವಿಚಿತ್ರವಾಗಿ ರೋಧಿಸುತ್ತ ಕೋಣೆ ಹೊಕ್ಕು ರಾಜನ ಇನ್ನುಳಿದ ಮಡದಿಯರು, ಉಪಮಡದಿಯರಿಗೆ ಗಂಧರ್ವಸೇನಾ ಮೃತನಾದ ಸುದ್ದಿ ಅರುಹಿದಳು. ಇಡಿ ಅಂತಃಪುರವೆ ಶೋಕದ ಕಡಲಲ್ಲಿ ಮುಳುಗಿತು. ಕಿರಿಯರಸಿ ತನ್ನ ಖಾಸಗಿ ಕೋಣೆಯಲ್ಲಿ ಮುಸಿಮುಸಿ ಅಳುತ್ತಿರೋದನ್ನ ಕಂಡ ಆಕೆಯ ಸೇವಕಿಗೆ ಕುತೂಹಲ ಹೆಚ್ಚಾಗಿ ಕೇಳಿದಳು, “ಯಾಕೆ ರಾಣ್ಯವ್ವ ಹಿಂಗ ಅಳಾಕತ್ತಿದ್ದೀಯ? ಅಂತದ್ದೇನಾತಾ?”.

“ಏನಂಥಾ ಹ್ಯೇಳ್ಲೇ ಗೆಳತಿ, ಗಂಧರ್ವಸೇನಾ ಸತ್ತೋದ್ನಂತೆ!” ಕಿರಿಯರಸಿಯ ಶೋಕಸುದ್ದಿ ಕೇಳಿ ಸೇವಕಿಗು ಆಘಾತವಾಯ್ತು. “ಹೌದೇನೆ ನನ್ನವ್ವ. ಪಾಪಾ, ಹಿಂಗಾಗಬಾರದಿತ್ತು ಬಿಡು. ಅದಂಗಿರುಲಿ. ಈ ಗಂಧರ್ವಸೇನಾ ಯಾರು? ಅವ ನಿನುಗೆ, ಮಾರಾಜುಗೆ ಏನು ಸಮಂದ ಆಗಬೇಕಾ?” ಸೇವಕಿ ತನ್ನ ಅನುಮಾನ ತೆರೆದಿಟ್ಟಳು. ಕಿರಿಯರಸಿಗೆ ಜ್ಞಾನೋದಯ ಆದಂತಾಯ್ತು.

`ಹೌದು ಯಾರು ಈ ಗಂಧರ್ವಸೇನ? ನಾನ್ಯಾಕಿಷ್ಟು ಅಳ್ತಾ ಇದೀನಿ’. ತನ್ನ ಗೊಂದಲ ಬಗೆಹರಿಸಿಕೊಳ್ಳಲು ಪಟ್ಟದರಸಿಯ ಬಳಿ ಬಂದು ಗಂಧರ್ವಸೇನನ ಬಗ್ಗೆ ವಿಚಾರಿಸಿದಳು. ಆಕೆಗೂ ನಯಾಪೈಸೆಯ ಮಾಹಿತಿಯಿಲ್ಲ. ಆದರು ಲೀಟರುಗಟ್ಟಲೆ ಕಣ್ಣೀರು ಸುರಿಸಿ ರೋಧಿಸಿದ್ದಾಗಿತ್ತು. ರಾಜನ ಮುಂದೆ ನಿಂತ ಆಕೆ

“ಮಾರಾಜ, ಆಗ್ಲೆ ಗಂಧರ್ವಸೇನ ಸತ್ತೋದ ಅಂದ್ರಲ್ಲ, ಯಾರು ಆ ಪುಣ್ಯಾತ್ಮ? ನಿಮ್ಮ ಆತ್ಮೀಯ ಗೆಣೆಕಾರನೆ, ಹತ್ತಿರದ ಸಮಂಧಿಕನೆ?”. ಇನ್ನೂ ಶೋಕಸಾಗರದಲ್ಲೆ ಬಡಿದಾಡುತ್ತ ಬಿದ್ದುಕೊಂಡಿದ್ದ ರಾಜನಿಗೆ ರಾಣಿಯ ಪ್ರಶ್ನೆ ಕೇಳಿ ಜ್ಯೋತಿಯೊಂದು ದಿಗ್ಗನೆ ಜ್ವಲಿಸಿದಂತಾಯ್ತು. `ಅರೆರೆ, ಹೌದಲ್ಲವಾ? ಯಾರು ಈ ಗಂಧರ್ವಸೇನಾ? ಮಂತ್ರಿಯನ್ನು ವಿಚಾರಿಸದೆ ಇಷ್ಟು ವ್ಯರ್ಥವಾಗಿ ರೋಧಿಸಿದೆನಲ್ಲ. ಅವನನ್ನೆ ಕೇಳಿಬಿಡೋಣ’ ರಾಜನ ಸ್ವಗತ ಥಟ್ಟನೆ ಅನುಷ್ಟಾನಕ್ಕೆ ಬಂದು ಮಂತ್ರಿಗೆ ಕರೆ ಹೋಯ್ತು.

ಮಂತ್ರಿ ಆಗಮಿಸಿದ. “ಅಲ್ಲಾ ಮಂತ್ರಪ್ಪ, ಅವಾಗ್ಲೆ ಗಂಧರ್ವಸೇನಾ ಸತ್ತೋದ ಅಂತ ಗೋಳಾಡ್ತಾ ಹ್ಯೇಳಿದ್ಯಲ್ಲಪ್ಪ, ಯಾರು ಆ ಗಂಧರ್ವಸೇನ?”. “ಗೊತ್ತಿಲ್ಲ ಮಾಸ್ವಾಮಿ” ಮಂತ್ರಿ ಪ್ರಾಮಾಣಿಕವಾಗಿ ನುಡಿದ, “ಒಡ್ಡೋಲುಗಕ್ಕೆ ತಡವಾಯ್ತು ಅಂತ ಓಡೋಡಿ ಬರ್ತಿದ್ನಾ, ಅವಾಗ ಅಗಸೆ ಬಾಗುಲತ್ರ ನಮ್ಮ ಸೇನಾಧಿಪತಿ ಅತ್ಕಂಡು ನಿಂತಿದ್ದ. ಏನಾಯ್ತು ಅಂತ ಕೇಳಿದ್ದುಕ್ಕೆ, ಗಂಧರ್ವಸೇನ ಸತ್ತೋದ ಅಂತ ಹ್ಯೇಳಿ ಜೋರಾಗಿ ಅತ್ತ. ಅದುಕ್ಕೆ ನಾನೂ ಅಳ್ತಾ ಬಂದು ನಿಮುಗೆ ಸುದ್ದಿ ಮುಟ್ಟಿಸಿದೆ ಆಟೆಯ”.

ಕೂಡಲೆ ಸೇನಾ ಅಧಿಪತಿಗೆ ಕರೆ ಹೋಯ್ತು. “ಏನಯ್ಯಾ ಸೇನಾಧಿಪತಿ, ಮಾಮಂತ್ರಿ ಹತ್ರ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ಗೋಳಾಡಿದ್ಯಂತಲ್ಲ. ಯಾರಯ್ಯ ಆ ಗಂಧರ್ವ ಸೇನಾ?”.

“ಗೊತ್ತಿಲ್ಲ ಮಾಪ್ರಬು. ಬ್ಯೆಳಿಗ್ಗೆ ಅಗಸೆ ಬಾಗುಲತ್ರ ನಿಂತಿದ್ನಾ, ಊರುಗುಡಿ ಪೂಜಾರಪ್ಪ ಅತ್ಕಂತ ಗುಡಿ ಕಡೆ ಹ್ವೊಂಟಿದ್ದ. ಯಾಕಪ್ಪಾ ಅಂತ ಕ್ಯೇಳಿದ್ದುಕ್ಕೆ, ಗಂಧರ್ವಸೇನ ಸತ್ತೋದ ಅಂತ ಹೊಯ್ಕೊಂತ ಹ್ವೋದ. ಅದುಕ್ಕೆ ನಾನುವೆ ಅತ್ಕಂತ ನಿಂತಿದ್ದೆ” ಸೇನಾಧಿಪತಿ ಕೊಟ್ಟ ಮಾಹಿತಿ ಇಷ್ಟು. ಕೂಡಲೇ ಪೂಜಾರಪ್ಪನಿಗೆ ರಾಜನ ಕರೆ ಹೋಯ್ತು.

“ಏನು ಅಯ್ನೋರೆ, ಬ್ಯೆಳಿಗ್ಗೆ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ಅಳ್ತಿದ್ರಂತಲ್ಲ. ಯಾರು ಆ ಗಂಧರ್ವಸೇನಾ?” ರಾಜ ಪ್ರಶ್ನಿಸಿದ.

“ಗೊತ್ತಿಲ್ಲ ಮಾರಾಜ. ಬ್ಯೆಳಿಗ್ಗೆ ದ್ಯೇವುಸ್ಥಾನುಕ್ಕೆ ಪೂಜೆಗೆ ಅಂತ ಹೊಂಟ್ನಾ. ನನ್ನ ಹೆಂಡ್ರು ಸಿಕ್ಕಾಪಟ್ಟೆ ಅಳ್ತಾ ಇದ್ಳು. ಕ್ಯೇಳಿದ್ದುಕ್ಕೆ ಗಂಧರ್ವಸೇನ ಸತ್ತೋದ ಅಂದ್ಲು. ಅದುಕ್ಕೆ ನಾನೂ ಅತ್ಕಂತ ಹೊಂಟಿದ್ದೆ” ಪೂಜಾರಪ್ಪ ಪ್ರತಿಕ್ರಿಯಿಸಿದ.

ಯಥಾ ಪ್ರಕಾರ ಪೂಜಾರಪ್ಪನ ಹೆಂಡತಿಯನ್ನು ಕರೆದು ಕೇಳಲಾಯ್ತು. “ನನಿಗೆ ಗೊತ್ತಿಲ್ಲ ಸ್ವಾಮಿ. ಬೆಳಿಗ್ಗೆ ಮೈಲಿಗೆ ಬಟ್ಟೆ ಇಸ್ಕೊಂಡು ಹೋಗಕ್ಕೆ ಅಂತ ಅಗಸರವನ ಹೆಂಡತಿ ಬಂದಿದ್ಳಾ, ಅವುಳು ತುಂಬಾ ಗೋಳಾಡ್ತಾ ಗಂಧರ್ವಸೇನ ಸತ್ತೋದ ಅಂತ ಹ್ಯೇಳಿದ್ಳು. ಅದುಕ್ಕೆ ನಾನೂ ಅತ್ತೆ.”

ರಾಜನಿಗೆ ಕುತೂಹಲ ಅದೆಷ್ಟು ಹೆಚ್ಚಾಗಿಹೋಯ್ತೆಂದರೆ, ಈ ಸಲ ಅಗಸರವನ ಹೆಂಡತಿಯನ್ನು ಕರೆಸುವ ತಾಳ್ಮೆಯೂ ಇಲ್ಲದೆ, ತನ್ನ `ಪರಿವಾರ’ ಸಮೇತ ಅಗಸನ ಮನೆಯತ್ತ ನಡೆದ. ಮನೆಯಲ್ಲಿ ದಂಪತಿ ಇರಲಿಲ್ಲ, ಕಾಯಕದ ಸಲುವಾಗಿ ಹೊಳೆದಂಡೆ ಬಳಿ ಹೋಗಿದ್ದರು. ಅಲ್ಲಿಗೇ ಸವಾರಿ ಹೊರಟಿತು. ಕೊನೆಗೂ ಆ ಹೆಂಗಸು ಸಿಕ್ಕಳು. “ಏನಮ್ಮಾ, ಬ್ಯೆಳಿಗ್ಗೆ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ತುಂಬಾ ಅಳ್ತಿದ್ದ್ಯಂತೆ. ಯಾರು ಆ ಪುಣ್ಯಾತ್ಮ?” ಮಹಾರಾಜ ಪ್ರಶ್ನಿಸಿದ.“ಅಯ್ಯಾ ಸಾಮಿ, ಮೊನ್ನೆಯಿನು ಅರಾಮಾಗಿದ್ದ ಸಾಮಿ. ಬಾಳ ಪಿರೂತಿಯಿಂದ ಸಾಕಿದ್ದೆ. ನಿನ್ನೆ ನಮ್ಮುನ್ನೆಲ್ಲ ಬಿಟ್ಟೋದ. ನ್ಯೆನಿಸಿಕಂಡ್ರೆ ಅಳು ಬತ್ತದೆ ಸಾಮಿ” ಮತ್ತೆ ಆ ಹೆಂಗಸಲ್ಲಿ ದುಖ ಉಮ್ಮಳಿಸಿತು, ಕಣ್ಣೀರಿಡಲು ಶುರು ಮಾಡಿದಳು.

“ಯಾರಮ್ಮ, ನಿನ್ನ ಮಗನಾ ಅವನು?” ರಾಜ ಪ್ರಶ್ನಿಸಿದ.

“ಮಗನಿಗಿಂತ ಜಾಸ್ತಿ ಪಿರೂತಿಯಿಂದ ಸಾಕಿದ್ದೆ ಸಾಮಿ. ನನ್ನ ಕತ್ತೆಯ ಹೆಸ್ರು ಅದು?.!!!”

ಆ ಹೆಂಗಸಿನ ಉತ್ತರ ಕೇಳಿಸಿಕೊಂಡ ತರುವಾಯ ಅಲ್ಲಿ ನೆರೆದಿದ್ವರಿಗೆಲ್ಲ ತಮ್ಮ ಮುಠ್ಠಾಳತನದ ಅರಿವಾಗಿ ಮೂರ್ಛೆ ಹೋಗುವುದೊಂದು ಬಾಕಿ. ಇಪ್ಪತ್ತೊಂದು ದಿನ ಶೋಕಾಚಾರಣೆ ಘೋಷಿಸಿದ್ದ ರಾಜ ಮೆತ್ತಗೆ ಅಲ್ಲಿಂದ ನುಣುಚಿಕೊಂಡು ಅರಮನೆಯತ್ತ ದೌಡಾಯಿಸಿದ.

(ಸೂಚನೆ: ಇದೊಂದು ಬಂಗಾಳಿ ಜನಪದ ಕಥೆ. ಪ್ರಸ್ತುತ ಯಾವುದೇ ವಿದ್ಯಮಾನ, ವ್ಯಕ್ತಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...