ಅಡ್ಮಿರಲ್ ಲಕ್ಷ್ಮೀನಾರಾಯಣ ರಾಮದಾಸ್, ಪಿವಿಎಸ್ಎಂ, ಎವಿಎಸ್ಎಂ, ವೀರಚಕ್ರ, ವಿಎಸ್ಎಂ, ಎಡಿಸಿ ಅವರು ಭಾರತೀಯ ನೌಕಾಸೇನೆಯ ಮಾಜಿ ಮಹಾದಂಡನಾಯಕರಾಗಿದ್ದು, ಮೊದಲ ಪ್ರಧಾನಿ ನೆಹರೂ ಅವರು ಲಾಠಿ ಹಿಡಿದು ಹಿಂಸಾನಿರತ ಗುಂಪನ್ನು ಚದರಿಸಿದ ಘಟನೆಯನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.
***
1947ರಲ್ಲಿ ನಾನು ಹದಿನಾಲ್ಕು ವರ್ಷದ ಹುಡುಗನಾಗಿದ್ದು, ದಿಲ್ಲಿಯಲ್ಲಿ ವಾಸಿಸುತ್ತಿದ್ದೆ. ದೇಶ ವಿಭಜನೆಯ ಯಾತನೆ ಮತ್ತು ಉದ್ವೇಗ ಹಾಗೂ ಸ್ವಾತಂತ್ರ್ಯದ ಭರವಸೆಯಲ್ಲಿ ನಾನಿದ್ದೆ. ನಾನು ನೌಕಾಪಡೆಗೆ ಸೇರಿದ್ದಕ್ಕೆ ಪ್ರೇರಣೆಯೇ ಅದು ದೇಶಸೇವೆಗೆ ಅವಕಾಶ ಒದಗಿಸಿ, ದೇಶ ಕಟ್ಟುವ ಕೆಲಸದಲ್ಲಿ ನೆರವಾಗಬಹುದೆಂಬ ನಿರೀಕ್ಷೆ. ನಾನು ಭಾರತದ ಕೊನೆಯ ವೈಸರಾಯ್ ಮತ್ತು ಮೊದಲ ಗವರ್ನರ್ ಜನರಲ್ ಆಗಿದ್ದ ಬರ್ಮಾದ ಲಾರ್ಡ್ ಲೂಯಿ ಮೌಂಟ್ಬ್ಯಾಟನ್ ಅವರ ಸ್ವಚ್ಛ, ಬಿಳಿ ಸಮವಸ್ತ್ರದಿಂದ ಸಂಪೂರ್ಣ ಮಂತ್ರಮುಗ್ಧನಾಗಿದ್ದೆ ಎಂಬುದನ್ನು ಒಪ್ಪಿಕೊಳ್ಳಬೇಕು. ನೆಹರೂ ಅವರನ್ನು ಅವರ ನಿಷ್ಕಳಂಕ ಚೂಡಿದಾರ್- ಕುರ್ತಾ ಮತ್ತು ವಿಶಿಷ್ಟ “ನೆಹರೂ” ಜ್ಯಾಕೆಟ್ನಲ್ಲಿ ನೋಡದಿರುವುದು ಸಾಧ್ಯವಿರಲಿಲ್ಲ- ಅದಕ್ಕೆ ಈ ದಿನಗಳಲ್ಲಿ ಬೇರೆಯೇ ಹೆಸರಿದೆ.
ನೆನಪಿನಲ್ಲಿ ಎದ್ದು ಕಾಣುವ ಆ ತಲೆಮಾರಿನ ನಾಯಕರ ಗುಣಗಳ ಕುರಿತು ಹಿಂತಿರುಗಿ ನೋಡಿದಾಗ ಒಂದು ಚಿತ್ರವನ್ನು ಅದೂ ತೀರಾ ಹತ್ತಿರದಿಂದ ನೋಡಿದ ಒಂದು ಚಿತ್ರವನ್ನು ನಾನೆಂದಿಗೂ ಮರೆಯಲಾರೆ. ಅದೆಂದರೆ “ಕಾರ್ಯಾಚರಣೆಯಲ್ಲಿ ನೆಹರೂ”.
ಆ ಭಯಾನಕ ದಿನಗಳ ಮೂರು ಚಿತ್ರಗಳು ನನ್ನ ಮನದಲ್ಲಿ ಅಚ್ಚೊತ್ತಿ ಉಳಿದಿವೆ-
– ನನ್ನ ಕಣ್ಣೆದುರೇ ಅಸಹಾಯಕ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಚೂರಿ ಇರಿತದ ಕ್ರೂರ ಘಟನೆ.
-ನಮ್ಮ ಬಂಗಾಳಿ ಮಾರ್ಕೆಟ್ ಮನೆಯ ಹೊರಗೆ ಉದ್ರಿಕ್ತ ಗುಂಪೊಂದು ನಮ್ಮ ಮನೆಯಲ್ಲಿ ಆಶ್ರಯ ಪಡೆದಿದ್ದ ನನ್ನ ತಂದೆಯವರ ಮಿತ್ರ ಹಾಗೂ ಸಹೋದ್ಯೋಗಿ ಗುಲಾಂ ಮೊಹಮ್ಮದ್ ಅವರನ್ನು ಹೊರಗೆ ಕಳುಹಿಸದಿದ್ದರೆ ತಂದೆಯವರಿಗೆ ಹಿಂಸಾಚಾರದ ಬೆದರಿಕೆ ಒಡ್ಡಿದ್ದು.
– ತನ್ನ ಸ್ವಂತ ಜೀವದ ಬೆದರಿಕೆಯನ್ನೂ ಲೆಕ್ಕಿಸದೆ ಪಂಡಿತ್ ನೆಹರೂ ಅವರು ಹಿಂಸಾನಿರತ ಉದ್ರಿಕ್ತ ಜನರ ಗುಂಪನ್ನು ಚದರಿಸಲು ಲಾಠಿ ಹಿಡಿದು ಧುಮುಕಿದ್ದು.
ಈ ಕೊನೆಯ ಘಟನೆಯನ್ನು ನೆನಪಿಸಿಕೊಳ್ಳಲು ನಾನು ಕೆಲವು ಸೆಕೆಂಡುಗಳನ್ನು ಕಳೆಯುತ್ತೇನೆ.
ನಾನು ಕನ್ನಾಟ್ ಸರ್ಕಸ್ನ ಅಗ್ನಿಶಾಮಕ ಠಾಣೆಯ ಎದುರಿದ್ದ ಕಟ್ಟಡವೊಂದರ ಮೊದಲ ಮಹಡಿಯಲ್ಲಿದ್ದ ನ್ಯೂ ಕ್ಯಾಂಬ್ರಿಡ್ಜ್ ಸ್ಕೂಲ್ನಿಂದ ಮನೆಗೆ ಮರಳುವ ಹಾದಿಯಲ್ಲಿದ್ದೆ. ಆಗ ಅಲ್ಲಲ್ಲಿ ಉದ್ರಿಕ್ತ ಮತ್ತು ಹಿಂಸಾಚಾರ ನಿರತ ಗುಂಪುಗಳಿರುತ್ತಿದ್ದವು. ಅಂತಹಾ ಒಂದು ಗುಂಪು ದಿಲ್ಲಿಯ ಹಲವಾರು ಜನರಿಗೆ ಪ್ರಿಯ ತಾಣವಾಗಿದ್ದ ಪ್ರಸಿದ್ಧ ಪುಸ್ತಕದಂಗಡಿಯಾಗಿದ್ದ ಎಸ್. ರಿಯಾಜುದ್ದೀನ್ ಎಂಡ್ ಸನ್ಸ್ನತ್ತ ಸಾಗುತ್ತಿತ್ತು.
ಏಕಾಏಕಿಯಾಗಿ ಒಂದು ಕೆನೆಬಣ್ಣದ ಅಂಬಾಸಿಡರ್ ಕಾರು ಬಂದು ನಿಂತಿತು, ಅದರ ಬಾಗಿಲು ತೆರೆಯಿತು ಮತ್ತು ನನ್ನನ್ನು ದಂಗುಬಡಿಸುವಂತಹ ಅಚ್ಚರಿಯಲ್ಲಿ ಕೆಡಹುವಂತೆ ಕೆಳಗಿಳಿದ ಜವಾಹರಲಾಲ್ ನೆಹರೂ ಅವರು ತನ್ನ ಕೈಯಲ್ಲಿದ್ದ ಲಾಠಿಯನ್ನು ಝಳಪಿಸುತ್ತಾ, ಹಿಂಸಾಚಾರ ನಿಲ್ಲಿಸುವಂತೆ ಕೂಗುತ್ತಾ ಗುಂಪಿನತ್ತ ಓಡಿದರು. ನಮ್ಮ ಪ್ರಧಾನಿಯವರೇ ಸ್ವಂತ ಭದ್ರತೆಯನ್ನು ಲೆಕ್ಕಿಸದೇ, ಯಾವುದೇ ಭದ್ರತೆ ಇಲ್ಲದೇ ಕಾರ್ಯಾಚರಣೆಗೆ ಧುಮುಕಿದ್ದನ್ನು ನೋಡಿ ದಂಗಾಗಿಹೋದೆ.
ಹೀಗೆ ನಡೆದಂತೆ, ನಾನು ಚಿಕ್ಕದೊಂದು ಭೇಟಿಗಾಗಿ ಮುಂಬಯಿಗೆ ಹೋಗಿದ್ದವನು ಮಹಮ್ಮದಾಲಿ ರಸ್ತೆಯಲ್ಲಿದ್ದಾಗ ದಿಲ್ಲಿಯ ಬಿರ್ಲಾ ಭವನದಲ್ಲಿ ರಾಷ್ಟ್ರಪಿತ ಗಾಂಧೀಜಿಯವರ ಹತ್ಯೆಯಾದ ಸುದ್ದಿ ಬಂತು. ವ್ಯಾಪಾರಿಗಳು ತರಾತುರಿಯಲ್ಲಿ ಅಂಗಡಿ ಬಾಗಿಲುಗಳನ್ನು ಮುಚ್ಚುವುದನ್ನು ಮತ್ತು ಜನರು ಯದ್ವಾತದ್ವಾ ಓಡುವುದನ್ನು ಕಂಡೆ. ಗಾಂಧೀಜಿಯವರನ್ನು ಕೊಂದದ್ದು ಒಬ್ಬ ಹಿಂದೂ ಎಂದು ಆಕಾಶವಾಣಿಯಲ್ಲಿ ಮಾತನಾಡಿದ ಪ್ರಧಾನಿ ನೆಹರೂ ಮತ್ತೆ ಮತ್ತೆ ಹೇಳಿದ್ದನ್ನು ಕೇಳಿ ನಮಗೆಷ್ಟು ಸಮಾಧಾನವಾಯಿತು ಎಂಬುದನ್ನು ನೆನಪಿಸಿಕೊಳ್ಳಬಲ್ಲೆ. ಇದರಿಂದ ಅವರು ಅಲ್ಪಪಸಂಖ್ಯಾತ ಸಮುದಾಯದ ಮೇಲೆ ಕೋಪ ಸ್ಫೋಟಗೊಂಡು ಹಿಂಸಾಚಾರ ನಡೆಯದಂತೆ ಅವರು ಖಾತರಿಪಡಿಸಿದ್ದರು. ಇದಕ್ಕೆ ತೀಕ್ಷ್ಣವಾದ ಪ್ರಸಂಗಾವಧಾನತೆ ಮತ್ತು ನಮ್ಮ ದೇಶದ ಜಾತ್ಯಾತೀತ ಸ್ವರೂಪದ ರಕ್ಷಣೆಯ ಅಗತ್ಯದ ಕುರಿತು ಆಳವಾದ ನಂಬಿಕೆಯ ಅಗತ್ಯವಿತ್ತು.
ನಾನು ವರ್ಷಗಳ ಹಿಂದೆ ಕಣ್ಣುತಿರುಗಿಸಿ ನೋಡಿದಾಗ, ಅದರಲ್ಲೂ ಮುಖ್ಯವಾಗಿ ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಗಮನಿಸಿದಾಗ ಅದನ್ನು 1947ರ ಅತ್ಯಂತ ಸ್ಫೋಟಕ ಪರಿಸ್ಥಿತಿಗೆ ಹೋಲಿಸುವುದು ಕಷ್ಟವಲ್ಲ. 2020ರಲ್ಲಿ ಯಾವುದೇ ರಾಜಕೀಯ ನಾಯಕರು ಹಿಂಸಾಚಾರವನ್ನಾಗಲೀ, ನಂತರದಲ್ಲಿ ದೇಶಕ್ಕೆ ಆಳವಾದ ಹಾನಿಯುಂಟುಮಾಡುವ ವಿಭಜನೆಯನ್ನಾಗಲೀ ದೈಹಿಕವಾಗಿ ನಿಯಂತ್ರಿಸಲು ವೈಯಕ್ತಿಕವಾಗಿ ಹಾಜರಿರಲಿಲ್ಲ.
ನಿಜವಾದ ನಾಯಕರೆಂದರೆ, ದಾರ್ಶನಿಕತೆ ಮತ್ತು ಧೈರ್ಯ ಹೊಂದಿರುವವರು. ಪಂಡಿತ್ಜೀ ಅವರು ಈ ಗುಣಗಳ ಮಾದರಿಯಾಗಿದ್ದಾರೆ.
ಅನುವಾದ: ನಿಖಿಲ್ ಕೋಲ್ಪೆ
ಇದನ್ನೂ ಓದಿ: ವಿಚ್ಛಿದ್ರಕಾರಿ ಅಜೆಂಡಾ ತಡೆಯಲು ಮುಂದಾಗಿ: ಮೋದಿಗೆ ನೌಕಾಪಡೆ ಮಾಜಿ ಮುಖ್ಯಸ್ಥ ಎಲ್. ರಾಮದಾಸ್ ಪತ್ರ


