ಖ್ಯಾತ ಸುದ್ದಿ ಪೋರ್ಟಲ್ ಸ್ಕ್ರಾಲ್.ಇನ್ ಸಂಪಾದಕರಾದ ಸುಪ್ರಿಯಾ ಶರ್ಮಾ ಮತ್ತು ನರೇಶ್ ಫರ್ನಾಂಡಿಸ್ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಅಲಹಾಬಾದ್ ಹೈಕೋರ್ಟ್ ಅವರ ಬಂಧನಕ್ಕೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಅನಿಲ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು, “ಪ್ರಕರಣದ ಸಂಗತಿಗಳು, ಸನ್ನಿವೇಶಗಳನ್ನು ಪರಿಗಣಿಸಿ ಮತ್ತು ಅರ್ಜಿದಾರರು ಪ್ರಕಟಣೆಗೆ ಸಂಬಂಧಿಸಿದ ಸಂದರ್ಶನದ ಆಡಿಯೊ ರೆಕಾರ್ಡಿಂಗ್ ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ. ಅದರಲ್ಲಿರುವ ವಿಷಯಗಳು ಪ್ರಕಟಣೆಯಲ್ಲಿ ಪ್ರತಿಫಲಿಸುತ್ತವೆ.
ಹಾಗಾಗಿ ತನಿಖೆಯನ್ನು ಒದಗಿಸುವ ಮೂಲಕ ಈ ಅರ್ಜಿಯನ್ನು ವಿಲೇವಾರಿ ಮಾಡುವುದು ಸೂಕ್ತವೆಂದು ನಾವು ಭಾವಿಸುತ್ತೇವೆ. ಪ್ರಕರಣವು ಅದರ ತಾರ್ಕಿಕ ತೀರ್ಮಾನಕ್ಕೆ ಬರಲಿದೆ. ಆದರೆ ಸೆಕ್ಷನ್ 173 (2) ಸಿಆರ್ಪಿಸಿ ಅಡಿಯಲ್ಲಿ, ಅವರು ತನಿಖೆಯಲ್ಲಿ ಸಹಕರಿಸಿದರೆ ಪೊಲೀಸ್ ವರದಿಯನ್ನು ಸಲ್ಲಿಸುವವರೆಗೆ ಅರ್ಜಿದಾರರನ್ನು ಮೇಲಿನ ಪ್ರಕರಣದಲ್ಲಿ ಬಂಧಿಸಬಾರದು” ಎಂದು ಹೇಳಿದೆ.
ಆದರೆ, ನ್ಯಾಯಾಲಯವು ಅವರ ವಿರುದ್ಧ ಎಫ್ಐಆರ್ ರದ್ದುಗೊಳಿಸಲು ನಿರಾಕರಿಸಿದೆ.
ಇದನ್ನೂ ಓದಿ: “ಎಷ್ಟು ಸಾಧ್ಯವೋ ಅಷ್ಟು ಕೇಸ್ ಜಡಿದುಬಿಡಿ!” : ಪತ್ರಕರ್ತರ ಮೇಲಿನ ಪ್ರಭುತ್ವದ ದಮನಕ್ಕೆ ಪರಿಹಾರವೇನು?
ಪ್ರಧಾನಿ ನರೇಂದ್ರ ಮೋದಿ ತಮ್ಮ ವಾರಣಾಸಿ ಕ್ಷೇತ್ರದಲ್ಲಿ ದತ್ತು ಪಡೆದ ಡೊಮರಿ ಗ್ರಾಮದಲ್ಲಿನ ಜನರ ಕಳಪೆ ಜೀವನದ ಪರಿಸ್ಥಿತಿಗಳನ್ನು ದಿ ಸ್ಕ್ರೋಲ್ ವರದಿ ಮಾಡಿತ್ತು. ಇದಕ್ಕಾಗಿ ಸಂಪಾದಕರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
“ಲಾಕ್ಡೌನ್ ಸಮಯದಲ್ಲಿ ಜನರು ಹಸಿವಿನಿಂದ ಬಳಲುತ್ತಿದ್ದರು” ಎಂಬ ಶೀರ್ಷಿಕೆಯ ವರದಿಯಲ್ಲಿ, ಲಾಕ್ಡೌನ್ ಸಮಯದಲ್ಲಿ ಜನರು ಆಹಾರ ಅಥವಾ ಪಡಿತರ ಕೊರತೆ ಸೇರಿದಂತೆ ತೀವ್ರ ಸಂಕಷ್ಟಗಳನ್ನು ಎದುರಿಸಿದ್ದಾಗಿ ಮಾಲಾ ಎಂಬುವವರು ಹೇಳಿದ್ದಾರೆಂದು ಶರ್ಮಾ ಉಲ್ಲೇಖಿಸಿದ್ದರು.
ಆದರೆ, ತಾನು ವಾರಣಾಸಿ ನಗರ ಪುರಸಭೆಯಲ್ಲಿ ಹೊರಗುತ್ತಿಗೆ ನೈರ್ಮಲ್ಯ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದ ಅವರು, ಲಾಕ್ಡೌನ್ ಸಮಯದಲ್ಲಿ ತಾನು ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ ಎಂದು ಹೇಳುತ್ತಿದ್ದಾರೆ.
ಶರ್ಮಾ ಅವರೊಂದಿಗಿನ ಸಂದರ್ಶನವನ್ನು ನೆನಪಿಸಿಕೊಂಡ ಮಾಲಾ ದೇವಿ, “ಅವರು ನನ್ನನ್ನು ಲಾಕ್ ಡೌನ್ ಬಗ್ಗೆ ಕೇಳಿದರು; ನಾನು ಅಥವಾ ನನ್ನ ಕುಟುಂಬದ ಯಾರೊಬ್ಬರೂ ಯಾವುದೇ ಸಮಸ್ಯೆಗಳನ್ನು ಎದುರಿಸಲಿಲ್ಲ ಎಂದು ನಾನು ಅವರಿಗೆ ಹೇಳಿದ್ದೆ” ಎಂದು ಹೇಳಿದರು.
ಇದನ್ನೂ ಓದಿ: ಸರ್ವಾಧಿಕಾರಿ ಹಿಡಿತದಲ್ಲಿ ನಲುಗುತ್ತಿರುವ ಆಫ್ರಿಕಾದ ಎರಿಟ್ರಿಯಾ ದೇಶದ ಪತ್ರಕರ್ತರು, ಬರಹಗಾರರು
ಎಫ್ಐಆರ್ನಲ್ಲಿ ಮಾಲಾ ದೇವಿ, “ನಾನು ಮತ್ತು ಮಕ್ಕಳು ಹಸಿವಿನಿಂದ ಬಳಲುತ್ತಿದ್ದೇವೆ ಎಂದು ಹೇಳುವ ಮೂಲಕ, ಸುಪ್ರಿಯಾ ಶರ್ಮಾ ನನ್ನ ಬಡತನ ಮತ್ತು ನನ್ನ ಜಾತಿಯನ್ನು ಗೇಲಿ ಮಾಡಿದ್ದಾರೆ. ಅವರು ನನ್ನ ಭಾವನೆಗಳನ್ನು ನೋಯಿಸಿದ್ದಾರೆ” ಎಂದು ಹೇಳಿದರು.
ಸೆಕ್ಷನ್ 269, 501 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ದೂರು ನೀಡಿದ ಮಹಿಳೆಯು ಎಫ್ಐಆರ್ನಲ್ಲಿ ತಮ್ಮ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಆರೋಪಗಳನ್ನು ನಿರಾಕರಿಸಿದ ಸುಪ್ರಿಯಾ ಶರ್ಮಾ, “ಸಂದರ್ಶನದ ಆಡಿಯೊ ರೆಕಾರ್ಡಿಂಗ್ ಮಾಡಿರುವುದಾಗಿ, ಕೆಲವು ವ್ಯಕ್ತಿಗಳ ವಾಸ್ತವಿಕ ಸ್ಥಿತಿಯನ್ನು ತೋರಿಸಲು ಸಾರ್ವಜನಿಕ ಹಿತಾಸಕ್ತಿಯಿಂದ ಇದನ್ನು ಪ್ರಕಟಿಲಾಗಿದೆ” ಎಂದು ಹೇಳಿದ್ದಾರೆ.
“ಮಾಲಾ ದೇವಿಯವರ ಹೇಳಿಕೆಗಳನ್ನು ನಿಖರವಾಗಿ ವರದಿ ಮಾಡಲಾಗಿದೆ. ಇದು ಸ್ವತಂತ್ರ ಮತ್ತು ದಿಟ್ಟತನದ ಪತ್ರಿಕೆಗೆ ಬೆದರಿಕೆಯೊಡ್ಡುವ ಪ್ರಕರಣವಾಗಿದೆ” ಎಂದು ಸ್ಕ್ರಾಲ್.ಇನ್ ಹೇಳಿಕೆ ನೀಡಿದೆ.
ಇದನ್ನೂ ಓದಿ: ಕಾನೂನಿನ ದುರುಪಯೋಗ: ಸ್ಕ್ರೋಲ್.ಇನ್ ಸಂಪಾದಕರ ಮೇಲಿನ FIR ರದ್ಧತಿಗೆ ಅರ್ಜಿ


