ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆ ಮಥುರಾದಲ್ಲಿನ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿದ್ದ ಮನವಿಯನ್ನು ಮಥುರಾದ ಸಿವಿಲ್ ನ್ಯಾಯಾಲಯ ವಜಾಗೊಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ಪ್ರಾರ್ಥನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ 1991ರ ಅಡಿಯಲ್ಲಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿದೆ.
ಲಖನೌ ಹೈಕೋರ್ಟ್ ಮುಂದೆ ಅಯೋಧ್ಯ ಶೀರ್ಷಿಕೆ ಮೊಕದ್ದಮೆಯಲ್ಲಿ ವಾದಿಸಿದ ವಕೀಲರಲ್ಲಿ ಒಬ್ಬರಾದ ರಂಜನಾ ಅಗ್ನಿಹೋತ್ರಿ ಮೊಕದ್ದಮೆ ಹೂಡಿದ್ದರು. ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿರುವ ಸ್ಥಳದ ಮೇಲೆ ಮಾಲೀಕತ್ವವನ್ನು ಪಡೆಯಲು ಮತ್ತು ಮಸೀದಿಯನ್ನು ತೆಗೆಯಬೇಕೆಂದು ಕೋರಿ ಮೊಕದ್ದಮೆ ಹೂಡಿದ್ದರು.
ಇದನ್ನೂ ಓದಿ: ಮಥುರಾ: ಶ್ರೀಕೃಷ್ಣಾ ದೇವಾಲಯದ ಬಳಿಯ ಈದ್ಗಾ ಮಸೀದಿ ತೆರವಿಗೆ ಮೊಕದ್ದಮೆ ದಾಖಲು
Krishna Janmabhoomi Case : Mathura civil court dismisses the suit filed to remove Idgah Mosque alleging that it was built over Krishna Janmabhoomi.
Court cited the bar under the Places of Worship (Special Provisions) Act, 1991 to admit the suit.
— Live Law (@LiveLawIndia) September 30, 2020
ಕೆಲವು ಮುಸ್ಲಿಮರ ಸಹಾಯದಿಂದ ಈದ್ಗಾ ಟ್ರಸ್ಟ್, ಶ್ರೀಕೃಷ್ಣ ಜನಂಸ್ಥಾನ್ ಟ್ರಸ್ಟ್ ಮತ್ತು ದೇವರಿಗೆ ಸೇರಿದ ಭೂಮಿಯನ್ನು ಅತಿಕ್ರಮಣ ಮಾಡಿ ಈದ್ಗಾ ಮಸೀದಿ ನಿರ್ಮಿಸಿದೆ ಎಂದು ಮೊಕದ್ದಮೆಯಲ್ಲಿ ದೂರಲಾಗಿತ್ತು. ಶ್ರೀಕೃಷ್ಣನ ಜನ್ಮಸ್ಥಳವು ಟ್ರಸ್ಟ್ ರಚಿಸಿದ ಮಸೀದಿಯ ಕೆಳಗೆ ಇದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿತ್ತು.
ಅಲ್ಲದೆ ದೇವಾಲಯ ಆಡಳಿತ ಮಂಡಳಿಯಾಗಿರುವ ಶ್ರೀಕೃಷ್ಣ ಜನಂಸ್ಥಾನ್ ಸೇವಾ ಸಂಸ್ಥೆಯು ಆಸ್ತಿಯನ್ನು ಕಸಿದುಕೊಳ್ಳುವ ಉದ್ದೇಶದಿಂದ ಶಾಹಿ ಈದ್ಗಾ ಟ್ರಸ್ಟ್ನೊಂದಿಗೆ ಅಕ್ರಮ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಲಾಗಿತ್ತು.
ಮೊಕದ್ದಮೆಯನ್ನು ವಜಾಗೊಳಿಸಲು ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ (ಹಿರಿಯ ವಿಭಾಗ) ಪ್ರಾರ್ಥನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ 1991 ಅನ್ನು ಉಲ್ಲೇಖಿಸಿದೆ. ಬಾಬರಿ ಮಸೀದಿಯನ್ನು ಅಕ್ರಮವಾಗಿ ಉರುಳಿಸಿದ ನಂತರ ಈ ಕಾಯ್ದೆ ಜಾರಿಗೆ ಬಂದಿತ್ತು.
ಇದನ್ನೂ ಓದಿ: ಬಾಬರಿ ಮಸೀದಿ ದ್ವಂಸ ತೀರ್ಪು ಪ್ರಕಟಿಸಿದ ನ್ಯಾಯಾಲಯ: ಆರೋಪಿಗಳು ದೋಷಮುಕ್ತ
ಈ ಕಾಯ್ದೆಯ ಪ್ರಕಾರ, ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಸ್ವಾತಂತ್ರ್ಯದ ಸಮಯದಲ್ಲಿ ಹೇಗಿತ್ತೋ ಹಾಗೆ ಉಳಿಸುತ್ತದೆ. ಕಾಯ್ದೆ ಜಾರಿಗೆ ಬಂದ ನಂತರ ಪ್ರಾರ್ಥನಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವ ಯಾವುದೇ ಮನವಿಯನ್ನು ಯಾವುದೇ ನ್ಯಾಯಾಲಯವು ಒಪ್ಪಿಕೊಳ್ಳುವುದಿಲ್ಲ ಎಂದು ಕಾಯಿದೆಯ ಸೆಕ್ಷನ್ 4 ಹೇಳುತ್ತದೆ. ಈ ಹಿನ್ನೆಲೆ ನ್ಯಾಯಾಲಯವು ಈದ್ಗಾ ಮಸೀದಿ ತೆರವು ಅರ್ಜಿಯನ್ನು ಕಾನೂನಿನ ಪ್ರಕಾರ ವಜಾಗೊಳಿಸಿತು.
ಸದ್ಯ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಎಚ್ಪಿ ಕರಸೇವಕರ ನಾಚಿಕೆಗೇಡಿನ ಕೃತ್ಯಗಳಿಗೆ ನ್ಯಾಯಾಂಗದ ಅನುಮೋದನೆ, ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ ರಾಮ ಮಂದಿರವನ್ನು ನಿರ್ಮಿಸಲು ಅನುಮತಿ ಸಿಕ್ಕಿದೆ. ಜೊತೆಗೆ ಈಗ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನಲ್ಲಿ ಅಂದು ಹಿಂಸಾಚಾರವನ್ನು ಪ್ರಚೋದಿಸಿದ ಎಲ್ಲ ಆರ್ಎಸ್ಎಸ್ ನಾಯಕರನ್ನು ಖುಲಾಸೆಗೊಳಿಸಿದೆ. ಇದು ಹಿಂದೂ ಮೂಲಭೂತವಾದಿಗಳಲ್ಲಿ ನಿರ್ಭಯದ ಭಾವನೆಯನ್ನು ಸೃಷ್ಟಿಸಿದೆ.
ಈದ್ಗಾ ಮಸೀದಿಯನ್ನು ತೆರುವುಗೊಳಿಸುವ ಮೊದಲಿನ ಪ್ರಯತ್ನಕ್ಕೆ ಸೋಲಾಗಿದೆ. ಕಾನೂನು ಕೂಡ ಮಸೀದಿ ತೆರವಿಗೆ ಅನುಮತಿ ನೀಡುವುದಿಲ್ಲ. ಆದರೂ ಇವೆಲ್ಲದರ ನಡುವೆಯೂ ಹಿಂದುತ್ವ ಕಾರ್ಯಕರ್ತರು ಮಸೀದಿ ತೆರವಿಗೆ ಒತ್ತಾಯಿಸುತ್ತಿದ್ದಾರೆ.
ಪ್ರಸ್ತುತ ರಾಮ ಜನ್ಮಭೂಮಿಯ ಉತ್ಸಾಹವು ಕಳೆದಿದೆ ಹಾಗಾಗಿ ಈ ಮೊಕದ್ದಮೆಯು ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಪ್ರಚೋದಿಸಲು ಮತ್ತು ಸರ್ಕಾರದ ವೈಫಲ್ಯಗಳನ್ನು ಗಮನಿಸದಂತೆ ದೇಶದ ಜನರನ್ನು ಬೇರೆಡೆಗೆ ಸೆಳೆಯುವ ಮತ್ತೊಂದು ಪ್ರಚಾರ ಅಭಿಯಾನದ ಆರಂಭವನ್ನು ಸೂಚಿಸುತ್ತದೆ.