ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧದ ಹಮ್ಮಿಕೊಂಡಿದ್ದ ಬಿಜೆಪಿ ಯುವ ಮೋರ್ಚಾ ರ್ಯಾಲಿ ತನ್ನ ಪ್ರಭಾವ ಬಿರುವಲ್ಲಿ ಸೋತಿದೆ ಎಂದು ಟೆಲಿಗ್ರಾಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಬಿಜೆಪಿ ಕಾರ್ಯಕರ್ತರ ಹತ್ಯೆ ಆರೋಪದ ಜೊತೆಗೆ ಪಾರದರ್ಶಕ ನೇಮಕಾತಿ ಪ್ರಕ್ರಿಯೆ, ಉದ್ಯೋಗಗಳು ಮತ್ತು ವಿವಿಧ ಪರೀಕ್ಷೆಗಳಿಗೆ ಹೆಚ್ಚಿನ ವಯಸ್ಸಿನ ಮಿತಿಯನ್ನು ಹೆಚ್ಚಿಸುವಂತಹ ಯುವ ಕೇಂದ್ರಿತ ಬೇಡಿಕೆಗಳ ಮೇಲೆ ಆಯೋಜಿಸಲಾಗಿದ್ದ ರ್ಯಾಲಿಯನ್ನು ನಾಲ್ಕು ಬಿಜಪಿ ಮುಖಂಡರ ನೇತೃತ್ವದಲ್ಲಿ ನಾಲ್ಕು ಕಡೆಗಳಲ್ಲಿ ಆಯೋಜಿಸಲಾಗಿತ್ತು.
ರಾಜ್ಯ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕೇಂದ್ರ ಕಚೇರಿ ಬಳಿ, ಬಂಗಾಳದ ಕೈಲಾಶ್ ವಿಜಯವರ್ಗಿಯಾ ನೇತೃತ್ವದಲ್ಲಿ ಹೇಸ್ಟಿಂಗ್ಸ್ನಲ್ಲಿರುವ ಪಕ್ಷದ ಕಚೇರಿ, ಬಿಜೆಪಿ ಯುವ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದ ಹೌರಾ ಮೈದಾನ ಮತ್ತು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ನೇತೃತ್ವದಲ್ಲಿ ಸಂತಾಗಾಚಿಗಳಲ್ಲಿ ರ್ಯಾಲಿ ಆಯೋಜಿಸಲಾಗಿತ್ತು.
ನಿನ್ನೆ ನಡೆದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದ ಭಾರತೀಯ ಜನತಾ ಯುವ ಮೊರ್ಚಾ ರ್ಯಾಲಿಗೆ (ನಬನ್ನಾ ಚಲೋ) ತೀವ್ರ ಪ್ರಚಾರ ನೀಡಲಾಗಿತ್ತು. ಆದರೆ ರ್ಯಾಲಿಯಲ್ಲಿ ಬಹಳ ಕಡಿಮೆ ಇದ್ದುದ್ದಲ್ಲದೇ, ನಿರೀಕ್ಷಿತ ಯಶಸ್ಸು ಗಳಿಸುವಲ್ಲಿ ಸಫಲವಾಗಿಲ್ಲ ಎಂದು ಪತ್ರಿಕೆ ಹೇಳಿದೆ.
ಇದನ್ನೂ ಓದಿ: ಕೊಲ್ಕತ್ತಾ: ಬಿಜೆಪಿ ಕಾರ್ಯಕರ್ತರ ಮೇಲೆ ಲಾಠೀ ಚಾರ್ಜ್, ಅಶ್ರುವಾಯು ಪ್ರಯೋಗ
ಪ.ಬಂಗಾಳ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯ ಮೂಲವೊಂದರ ಪ್ರಕಾರ ’ಮಧ್ಯಾಹ್ನದ ಹೊತ್ತಿಗೆ ತೇಜಸ್ವಿ ಸೂರ್ಯ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರಿಂದಲೂ ನಬನ್ನಾ ಚಲೋದಂತಹ ಹ್ಯಾಶ್ಟ್ಯಾಗ್ಗಳನ್ನು ತೀವ್ರಗೊಳಿಸಲು ಸಾಧ್ಯವಿಲ್ಲ ಎಂದು ನಮಗೆ ಸ್ಪಷ್ಟವಾಯಿತು” ಎಂದು ಕಾರ್ಯಕರ್ತರೊಬ್ಬರು ತಿಳಿಸಿದ್ದರು ಎನ್ನಲಾಗಿದೆ.
ಹಲವು ಜಿಲ್ಲೆಗಳಿಂದ ಬರುವ ಕಾರ್ಯಕರ್ತರನ್ನು ಟಿಎಂಸಿ ಕಾರ್ಯಕರ್ತರು ತಡೆದರೂ 46,000 ಕ್ಕಿಂತ ಹೆಚ್ಚಿನ ಜನ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ ಎಂದು ಬಂಗಾಳ ಬಿಜೆಪಿ ಯುವ ವಿಭಾಗದ ರಾಜ್ಯ ಘಟಕದ ಮುಖ್ಯಸ್ಥ ಸೌಮಿತ್ರಾ ಖಾನ್ ಹೇಳಿಕೊಂಡಿದ್ದಾರೆ. ಆದರೆ ಪಕ್ಷದ ಇತರರು ಜನರನ್ನು ಸೇರಿಸುವುದು ಒಂದು ದೊಡ್ಡ ಸಮಸ್ಯೆಯೆಂದು ಒಪ್ಪಿಕೊಂಡಿದ್ದಾರೆ.
”ರ್ಯಾಲಿಯಲ್ಲಿ ಕಾರ್ಯಕರ್ತರನ್ನು ಸೇರಿಸುವ ಮೂಲ ಗುರಿ 2 ಲಕ್ಷಕ್ಕೆ ಇಟ್ಟುಕೊಳ್ಳಲಾಗಿತ್ತು. ಇದನ್ನು ಒಂದೆರಡು ದಿನಗಳ ಹಿಂದೆ ಅಧಿಕೃತವಾಗಿ 50,000ಕ್ಕೆ ಇಳಿಸಲಾಯಿತು. ಆದರೆ ವಾಸ್ತವದಲ್ಲಿ 15,000 ಜನ ಕೂಡ ಸೇರಲಿಲ್ಲ” ಎಂದು ರಾಜ್ಯ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆಗಳಿಂದ ಎಲ್ಲವೂ ಅಸ್ತವ್ಯಸ್ತ: ಪಶ್ಚಿಮ ಬಂಗಾಳ ಸರ್ಕಾರದ ಆತಂಕ
ನಬನ್ನಾ ಚಲೋ ರ್ಯಾಲಿ ವಿಫಲವಾಗಲು ಮೂಲ ಕಾರಣ ಅದು ಯೋಜಿತ ಕಾರ್ಯಕ್ರಮವಾಗಿರಲಿಲ್ಲ. ಜೊತೆಗೆ ನಬನ್ನಾವನ್ನು ನಿನ್ನೆ ಮುಚ್ಚಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಸ್ಯಾನಿಟೈಸೇಶನ್ ಮಾಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಚೇರಿಯೂ ಇರುವ ಸಚಿವಾಲಯವನ್ನು ಎರಡು ದಿನಗಳ ಅವಧಿಗೆ ಮುಚ್ಚಲಾಗಿತ್ತು.
ಪಶ್ಚಿಮ ಬಂಗಾಳ ಸಚಿವಾಲಯ ‘ನಬನ್ನಾ’ದ ಹೊರಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ವಿಭಾಗವು ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿ ಹಿಂಸಾತ್ಮಕ ರೂಪ ಪಡೆದಿತ್ತು. ನೂರಾರು ಬಿಜೆಪಿ ಕಾರ್ಯಕರ್ತರು-ಪೊಲೀಸರ ನಡುವೆ ಸಂಘರ್ಷ ಉಂಟಾಗಿ ಪೊಲೀಸರು ಲಾಠೀ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾದ್ದರು.
ಈ ಘಟನೆಯನ್ನು ತೇಜಸ್ವಿ ಸೂರ್ಯ ಖಂಡಿಸಿದ್ದರು. ’ಟಿಸಿಎಂ ಗೂಂಡಾಗಳು ನಮ್ಮ ಮೇಲೆ ಕಂಟ್ರಿ ಬಾಂಬ್ಗಳನ್ನು ಎಸೆದಿದ್ದಾರೆ. ಫ್ಯಾಸಿಸಂ ಅಂದರೆ ಇದೆ’ ಎಂದು ಟ್ವೀಟ್ ಮಾಡಿದ್ದರು. ಇದು ಬ್ಲಾಕ್ ಡೇ, ಪೊಲೀಸ್ ಠಾಣೆಗಳು ಮಮತಾ ಅವರ ಬಂಗಾಳದಲ್ಲಿ ಟಿಎಂಸಿ ಪಕ್ಷದ ಕಚೇರಿಗಳಾಗಿವೆ ಎಂದು ಟೀಕಿಸಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ತಮ್ಮ ಸರಣಿ ಟ್ವೀಟ್ಗಳಲ್ಲಿ “ಪಶ್ಚಿಮ ಬಂಗಾಳದಲ್ಲಿ ತನ್ನ ದಬ್ಬಾಳಿಕೆ ಮತ್ತು ರಕ್ತಸಿಕ್ತ ದುಷ್ಕೃತ್ಯದ ವಿರುದ್ಧ ಪ್ರತಿಭಟನೆ ನಡೆಸದಂತೆ ತಡೆಯುವ ಪ್ರಯತ್ನದಲ್ಲಿ ಮಮತಾ ಬ್ಯಾನರ್ಜಿಯ ಕಾರ್ಯಕರ್ತರು ಮತ್ತು ಅವರ ನೇತೃತ್ವದ ಸರ್ಕಾರದ ’ಯಂತ್ರೋಪಕರಣಗಳು’ ಬಿಜೆಪಿ ಕಾರ್ಯಕರ್ತರ ಮೇಲೆ ವಿವೇಚನಾರಹಿತ ಶಕ್ತಿಯನ್ನು ಬಿಚ್ಚಿಟ್ಟಿವೆ’ ಎಂದು ಆರೋಪಿಸಿದ್ದಾರೆ. ಅಧಿಕಾರದ ಇಂತಹ ದುರುಪಯೋಗವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಖಂಡನೀಯ ಎಂದಿದ್ದಾರೆ.
Mamata Banerjee’s karyakartas and the Gov machinery led by her have unleashed brute force upon BJP karyakartas in an attempt to prevent them from holding protests against her tyrannical & bloodied misrule in West Bengal. Such misuse of power is totally unacceptable & condemnable.
— Jagat Prakash Nadda (@JPNadda) October 8, 2020
ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫಿರ್ಹಾದ್ ಹಕೀಮ್ “ಬಿಜೆಪಿ ರಾಜಕೀಯ ಪಕ್ಷವಲ್ಲ. ಅದು ಭಯೋತ್ಪಾದನೆಯ ಪಕ್ಷ…. ಇದು ಉತ್ತರ ಪ್ರದೇಶದಿಂದ ತನ್ನ ಮಾದರಿಯನ್ನು ಬಂಗಾಳಕ್ಕೆ ಆಮದು ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.
ಒಟ್ಟಾರೆ, ನೂತನವಾಗಿ ಬಿಜೆಪಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಗಳಾಗಿ ನೇಮಕವಾದವರು ಮೊದಲ ರ್ಯಾಲಿಯಲ್ಲೇ ತಮ್ಮ ಪ್ರಭಾವ ಬೀರಲು ವಿಫಲರಾಗಿರುವುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆ ಸಾಕ್ಷಿಯಾಗಿದೆ ಎಂದು ಅಲ್ಲಿಯ ರಾಜ್ಯ ಬಿಜೆಪಿ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ