ಬೀದಿ ನಾಟಕ ಮಾಡುತ್ತಿರುವಾಗಲೇ ಕೊಲೆಗೀಡಾದ ಸಫ್ದರ್ ಹಾಶ್ಮಿ ಎಂಬ ದಿಟ್ಟ ಹೋರಾಟಗಾರನ ಬದುಕು, ಹೋರಾಟ, ಸಾವಿನ ಚಿತ್ರಣವನ್ನು ಕನ್ನಡದಲ್ಲಿ ಕಟ್ಟಿಕೊಡುವ ಪ್ರಯತ್ನವಾಗಿ ‘ಹಲ್ಲಾ ಬೋಲ್’ ಪುಸ್ತಕ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ.
ಸಾಂಸ್ಕೃತಿಕ ಪ್ರತಿರೋಧದ ರೂಪಕವಾದ ಕಲಾವಿದ, ಜನಮ್ ತಂಡದ ಸ್ಥಾಪಕ ಸಫ್ದರ್ ಹಾಶ್ಮಿ ಅವರ ಬದುಕು, ಹೋರಾಟ ಕುರಿತು ಸುಧನ್ವ ದೇಶಪಾಂಡೆ ಪುಸ್ತಕ ರಚಿಸಿದ್ದರು. ಸಮುದಾಯ ರಂಗ ತಂಡದ ಲೇಖಕ ಎಂ.ಜಿ ವೆಂಕಟೇಶ್ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕ್ರಿಯಾ ಮಾಧ್ಯಮ ಪ್ರಕಟಿಸಿರುವ ಈ ಪುಸ್ತಕ ಇದೇ ಅಕ್ಟೋಬರ್ 30, ಸಂಜೆ 5 ಕ್ಕೆ ಆನ್ಲೈನ್ ವೆಬಿನಾರ್ ಮೂಲಕ ಬಿಡುಗಡೆಯಾಗಲಿದೆ.
ಖ್ಯಾತ ಚಲನಚಿತ್ರ ನಟ ಮತ್ತು ರಂಗಭೂಮಿ ಕಲಾವಿದ ನಸೀರುದ್ದೀನ್ ಶಾ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪುಸ್ತಕದ ಮೂಲ ಲೇಖಕ ಸುಧನ್ವ ದೇಶಪಾಂಡೆ ಕೃತಿಯ ಬಗ್ಗೆ ಮಾತನಾಡಲಿದ್ದಾರೆ. ಚಿತ್ರನಟ ಅಚ್ಯುತ್ ಕುಮಾರ್ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ. ಕನ್ನಡಕ್ಕೆ ಅನುವಾದಿಸಿರುವ ಲೇಖಕ ಎಂ.ಜಿ ವೆಂಕಟೇಶ್ ಪುಸ್ತಕ ಅನುವಾದದ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಸಾಹಿತಿ ಕುಂಇ ಸಮಾರೋಪ ಮಾತುಗಳನ್ನಾಡಲಿದ್ದಾರೆ.
ಸಫ್ದರ್ ಹಾಶ್ಮಿ ಬೀದಿ ನಾಟಕ ಮಾಡುವಾಗ ಗೂಂಡಾಗಳಿಂದ ಹಲ್ಲೆಗೊಳಗಾಗಿ ಸಾವಿಗೀಡಾದರು. ದೇಶದಲ್ಲಿ ಬೀದಿ ರಂಗಭೂಮಿಯ ಮೂಲಕ ಸಮಾಜದ ಸಮಸ್ಯೆಯನ್ನು ಎತ್ತಿ ತೋರಿಸಿದವರು. ಸಮಸಮಾಜದ ಕನಸಿದ್ದ ಹೋರಾಟಗಾರ ಎಂದು ಖ್ಯಾತಿಯಾಗಿದ್ದಾರೆ.