ಗೋ ಹತ್ಯೆಯಲ್ಲಿ ಭಾಗಿಯಾಗುವವರು ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತೆ ಘೋಷಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಉನ್ನಾವೊದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.
“ಎಂತಹ ಸ್ಥಿತಿಯಲ್ಲೂ ನಾವು ಹಸುಗಳನ್ನು ರಕ್ಷಿಸಿಯೇ ತಿರುತ್ತೇವೆ” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹೇಳಿದ್ದಾರೆ. “ಗೋಹತ್ಯೆ ಕೃತ್ಯದಲ್ಲಿ ಭಾಗಿಯಾಗುವವರು ಜೈಲಿಗೆ ಹೋಗುತ್ತಾರೆ. ಸರ್ಕಾರವು ಆರೋಪಿಗಳಿಗೆ ಕಠಿಣವಾದ ಶಿಕ್ಷೆ ಮತ್ತು ಕಠಿಣ ಕಾನೂನಿನ ಅಡಿಯಲ್ಲಿ ಶಿಕ್ಷಿಸುತ್ತದೆ’ ಎಂದು ಆದಿತ್ಯನಾಥ್ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
1955ರ ಉತ್ತರ ಪ್ರದೇಶ ಗೋಹತ್ಯೆ ನಿಷೇಧ ಕಾಯ್ದೆ ನಿಬಂಧನೆಗಳು “ಆಗಾಗ್ಗೆ ದುರ್ಬಳಕೆ” ಆಗುತ್ತಿವೆ ಎಂದು ಅಲಹಾಬಾದ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ ಒಂದು ದಿನದ ನಂತರ ಆದಿತ್ಯನಾಥ್ ಅವರ ಈ ಹೇಳಿಕೆ ಬಂದಿದೆ.
ಗೋಹತ್ಯೆ ಕಾಯ್ದೆಯನ್ನು ಬಳಸಿ ಮುಗ್ಧ ಜನರನ್ನು ಬಲಿಪಶುಗಳನ್ನಾಗಿಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು. ಕಾಯಿದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಗೋಹತ್ಯೆ ಮತ್ತು ಮಾಂಸ ಮಾರಾಟದ ಆರೋಪ ಹೊತ್ತ ವ್ಯಕ್ತಿಯ ಅರ್ಜಿ ಆಲಿಸುವಾಗ ನ್ಯಾಯಾಲಯ ಈ ಹೇಳಿಕೆ ನೀಡಿತ್ತು.
ಇದನ್ನೂ ಓದಿ: ಉತ್ತರಪ್ರದೇಶ ಗೋಹತ್ಯೆ ನಿಷೇಧ ಕಾಯ್ದೆ ಅಮಾಯಕರನ್ನು ಸಿಲುಕಿಸಲು ಬಳಸಲಾಗುತ್ತಿದೆ: ಹೈಕೋರ್ಟ್
ಹಲವು ಪ್ರಕರಣಗಳಲ್ಲಿ ಅಧಿಕಾರಿಗಳು ಪತ್ತೆ ಮಾಡಿದ ಮಾಂಸವನ್ನು ಯಾವುದೇ ರೀತಿಯ ವಿಶ್ಲೇಷಣೆ ಮಾಡದೆ ಹಾಗೂ ದೃಢೀಕರಿಸದೆ ಗೋಮಾಂಸ ಎಂದು ಭಾವಿಸಲಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸಿದ್ಧಾರ್ಥ ಅವರಿದ್ದ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು.
ನ್ಯಾಯಾಲಯದ ಹೇಳಿಕೆ ಬೆನ್ನಲ್ಲೇ ಮುಖ್ಯಮಂತ್ರಿಗಳು ಗೋವುಗಳನ್ನು ಉಳಿಸಲು ತಮ್ಮ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆಯೂ ಮಾತನಾಡಿದ್ದಾರೆ. “ಗೋವುಗಳನ್ನು ಸುರಕ್ಷಿತವಾಗಿಸಲು, ಪ್ರತಿ ಜಿಲ್ಲೆಯಲ್ಲೂ ಗೋಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಹಸುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ” ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಮಾತುಗಳನ್ನು ಎಂದು ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿದೆ.
ಮುಖ್ಯಮಂತ್ರಿ ಆದಿತ್ಯನಾಥ್ ಬಿಜೆಪಿಯ ಹಿಂದುತ್ವ ಅಜೆಂಡಾದ ಭಾಗವಾಗಿ ಗೋಹತ್ಯೆ ಮತ್ತು ಸಣ್ಣ ಪ್ರಮಾಣದ ಗೋಮಾಂಸ ವ್ಯಾಪಾರವನ್ನು ಹೆಚ್ಚಾಗಿ ಮುಸ್ಲಿಮರು ಮತ್ತು ದಲಿತರು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಜೂನ್ನಲ್ಲಿ ಉತ್ತರ ಪ್ರದೇಶ ಕ್ಯಾಬಿನೆಟ್ ಗೋಹತ್ಯೆಗೆ 10 ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು 5 ಲಕ್ಷ ರೂ.ವರೆಗೆ ದಂಡವನ್ನು ಹೆಚ್ಚಿಸುವ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದೆ.
ಉತ್ತರಪ್ರದೇಶ ಗೋಹತ್ಯೆ ತಡೆ ಕಾಯ್ದೆ, 1955 ಅನ್ನು ಜನವರಿ 6, 1956 ರಂದು ರಾಜ್ಯದಲ್ಲಿ ಜಾರಿಗೆ ತರಲಾಯಿತು. ಈ ಕಾಯ್ದೆಯನ್ನು 1958, 1961, 1979 ಮತ್ತು 2002 ರಲ್ಲಿ ತಿದ್ದುಪಡಿ ಮಾಡಲಾಗಿದೆ.
ಕೇಂದ್ರ ಸರ್ಕಾರವು 2017 ರ ಮೇ ತಿಂಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಿತ್ತು. ಕೇರಳ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಮತ್ತು ಸಿಕ್ಕಿಂ ಹೊರತುಪಡಿಸಿ ಭಾರತದ ಉಳಿದ ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ.