ರಾಜ್ಯ ಸರ್ಕಾರವೂ ಜನರ ನೆರವಿಗೆ ನಿಲ್ಲದೆ ತನ್ನ ಪಾಲಿನ ತೆರಿಗೆ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಈ ಕೂಡಲೇ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆ ಇಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ “ಬೈಕ್ ತಳ್ಳು” ಎಂಬ ವಿನೂತನ ಪ್ರತಿಭಟನೆ ನಡೆಸಿದರು.
ಪಕ್ಷದ ಬೆಂಗಳೂರು ನಗರ ಅಧ್ಯಕ್ಷ, ಮೋಹನ್ ದಾಸರಿ ಮಾತನಾಡಿ, ’ಮನೆಮುರುಕ ಕೇಂದ್ರದ ಬಿಜೆಪಿ ಹಾಗೂ ರಾಜ್ಯ ಸರ್ಕಾರದ ನಿರ್ಧಾರಗಳಿಂದ ಯಾರ ಮನೆಯೂ ಉದ್ದಾರವಾಗಿಲ್ಲ, ಎಲ್ಲಾ ಹಂತದಲ್ಲೂ ಜನ ಸಾಮಾನ್ಯರ ಕತ್ತು ಹಿಸುಕಿ ಕೊಲ್ಲಲಾಗುತ್ತಿದೆ. ಭಾರತದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಬೆಲೆಗೆ ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿ ಜನರನ್ನು ದೋಚಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ದೆಹಲಿ V/s ಉತ್ತರ ಪ್ರದೇಶ: ಸರ್ಕಾರಿ ಶಾಲೆಗಳ ವಾಸ್ತವತೆ ಬಿಚ್ಚಿಡಲು ಆಪ್ ಅಭಿಯಾನ
’ಕಳೆದ ವರ್ಷ ಇದೇ ಹೊತ್ತಿನಲ್ಲಿ ಕಚ್ಚಾತೈಲದ ಬೆಲೆ 62 ಡಾಲರ್ ಇತ್ತು, ಈಗ 40 ಡಾಲರ್ಗೆ ಇಳಿದಿದೆ ಆದರೂ ಪೆಟ್ರೋಲ್ ಬೆಲೆ ಮಾತ್ರ 86 ರೂಪಾಯಿಗಿಂತ ಹೆಚ್ಚಿದೆ. ಪ್ರಗತಿ ಸಾಧಿಸಿ ಮುಂದಕ್ಕೆ ಹೋಗುತ್ತಿದ್ದ ದೇಶವನ್ನು ಮೋದಿ- ಅಂಬಾನಿ-ಅದಾನಿ ಜೋಡಿ ಹಿಂದಕ್ಕೆ ತಳ್ಳುತ್ತಿದೆ’ ಎಂದು ಮೋಹನ್ ದಾಸರಿ ಕಿಡಿಕಾರಿದರು.
’ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಪೆಟ್ರೋಲ್ ಅನ್ನು 40 ರೂಪಾಯಿಗೆ ನೀಡಬಹುದು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಅಲ್ಲದೇ ಕಚ್ಚಾ ತೈಲವನ್ನು ಸಂಸ್ಕರಿಸಲು ಕೇವಲ 30 ರೂಪಾಯಿ ಖರ್ಚಾಗುತ್ತದೆ ಎಂದಿದ್ದಾರೆ. ಆದರೂ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿರುವ ಸರ್ಕಾರಕ್ಕೂ ಕಳ್ಳನಿಗೂ ಏನು ವ್ಯತ್ಯಾ”
ಎಂದು ಕಟುವಾಗಿ ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ ಪ್ರತಿಭಟನಾಕಾರರು, ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕಣ್ಣು, ಕಿವಿ ಏನೂ ಕೇಳಿಸದ ಕಾರಣ ನಮ್ಮ ಪ್ರತಿಭಟನೆ ಅವರಿಗೆ ಕೇಳಿಸುವುದಿಲ್ಲ. ಹಾಗಾಗಿ ನಾವು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜ್ಯದ ಪಾಲಿನ ತೆರಿಗೆಯನ್ನಾದರೂ ಕಡಿಮೆ ಮಾಡಿ ಎಂದು ಆಗ್ರಹಿಸುತ್ತಿದ್ದೇವೆ ಎಂದರು.
ಇದನ್ನು ಓದಿ: ದೆಹಲಿ V/s ಉತ್ತರ ಪ್ರದೇಶ: ಮಾದರಿ ಶಾಲೆ ಚರ್ಚೆಗೆ ಬಾರದ ಉತ್ತರ ಪ್ರದೇಶ ಸಚಿವ!


