ಕೊರೊನಾ ಸೋಂಕಿನ ಪ್ರಕರಣಗಳು ಸಾಪೇಕ್ಷವಾಗಿ ಕಡಿಮೆಯಾದ ಕಾರಣ, ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳಿಗೆ ವಿದಾಯ ಹೇಳುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ದಿಢೀರನೆ ಅಪಾರ್ಟ್ಮೆಂಟ್ ಒಂದರಲ್ಲಿ 103 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ ಅಲ್ಲೀಗ ಸಾಮೂಹಿಕ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಅಪಾಟ್ಮೆಂಟ್ ಸಂಕೀರ್ಣ ಒಂದರ 103 ನಿವಾಸಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ನಂತರ ಇಡೀ ಅಪಾರ್ಟ್ಮೆಂಟ್ ಅನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಜಿಲ್ಲಾ ಅಧಿಕಾರಿಗಳ ತಂಡದ ಪ್ರಕಾರ, ವಸತಿ ನಿಲಯದಲ್ಲಿ ಎರಡು ವಿವಾಹ ವಾರ್ಷಿಕೋತ್ಸವದ ಪಾರ್ಟಿಗಳನ್ನು ಆಯೋಜಿಸಿದ ಕೆಲವೇ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣವು ದಾಖಲಾಗಿದೆ. ದಕ್ಷಿಣ ಬೆಂಗಳೂರಿನ ಬಿಳಕೆಹಳ್ಳಿ ಪ್ರದೇಶದ ಎಸ್ಎನ್ಎನ್ ರಾಜ್ ಲೇಕ್ವ್ಯೂ ಅಪಾರ್ಟ್ಮೆಂಟ್ ಈಗ ಹೊಸ ಕೊರೊನಾ ವೈರಸ್ ಕ್ಲಸ್ಟರ್ ಆಗಿ ಹೊರಹೊಮ್ಮಿದೆ. ಜಿಲ್ಲಾಡಳಿತವು ಅಪಾಟ್ಮೆಂಟ್ ಸಂಕೀರ್ಣದಲ್ಲಿ ಕಳೆದ ವಾರದಿಂದ ಸಾಮೂಹಿಕ ಕೊರೊನಾ ಪರೀಕ್ಷೆಗೆ ಚಾಲನೆ ನೀಡಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಪೂರ್ಣಗೊಂಡ ಕೂಡಲೇ ಸಿಎಎ ಜಾರಿ: ಅಮಿತ್ ಶಾ
“ನಾವು ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆ ಕಂಡಿದ್ದೇವೆ – ಫೆಬ್ರವರಿ 11 ರಂದು 7 ಪ್ರಕರಣಗಳು, ಫೆಬ್ರವರಿ 12 ರಂದು 17 ಪ್ರಕರಣಗಳು ವರದಿಯಾಗಿವೆ. ಫೆಬ್ರವರಿ 13 ರಂದು ಬಿಬಿಎಂಪಿ ಹೆಚ್ಚಿನ ತನಿಖೆಗಾಗಿ ಅಪಾರ್ಟ್ಮೆಂಟ್ಗೆ ಧಾವಿಸಿ, ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಿದೆವು. 399 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. 1,190 ಜನರನ್ನು ಪರೀಕ್ಷಿಸಲಾಯಿತು, ಅದರಲ್ಲಿ 103 ಮಂದಿಗೆ ಸೋಂಕು ಧೃಡಪಟ್ಟಿದೆ. 103 ರಲ್ಲಿ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ “ಎಂದು ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎನ್ಡಿಟಿವಿನ ವರದಿ ಮಾಡಿದೆ.
“ಫೆಬ್ರವರಿ 6 ಮತ್ತು 7 ರಂದು ಎರಡು ವಾರ್ಷಿಕೋತ್ಸವದ ಪಾರ್ಟಿಗಳು ನಡೆದಿವೆ ಎಂದು ನಮಗೆ ಮಾಹಿತಿ ದೊರೆತಿದೆ” ಎಂದು ಅವರು ಹೇಳಿದರು.
ಪಾಸಿಟಿವ್ ಕಂಡುಬಂದವರಲ್ಲಿ ಹೆಚ್ಚಿನವರು 50 ಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ರೋಗಲಕ್ಷಣವಿಲ್ಲದವರು ಎಂದು ಪ್ರದೇಶದ ತನಿಖೆ ನಡೆಸುತ್ತಿರುವ ವೈದ್ಯಕೀಯ ಅಧಿಕಾರಿ ಡಾ.ಕೃಷ್ಣಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಫೈಜರ್ ಲಸಿಕೆ ಪಡೆದ 12,400 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢ!
ಅಪಾರ್ಟ್ಮೆಂಟ್ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ ಮತ್ತು ಪ್ರತಿ ನಿವಾಸಿಗಳಿಗೆ ಮುಂದಿನ ಸೂಚನೆ ಬರುವವರೆಗೂ ಹೋಂ ಐಸೋಲೇಷನ್ ಪಾಲಿಸಲು ಸೂಚಿಸಲಾಗಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ಬೊಮನಹಳ್ಳಿ ರಾಮಕೃಷ್ಣ ತಿಳಿಸಿದ್ದಾರೆ.
ಕಳೆದ ವರ್ಷ ಪ್ರತಿದಿನ ಒಂದು ಲಕ್ಷ ಪ್ರಕರಣಗಳನ್ನು ವರದಿ ಮಾಡುತ್ತಿದ್ದ ಭಾರತ, ಕಳೆದ ಕೆಲವು ದಿನಗಳಿಂದ 10,000 ಪ್ರಕರಣಗಳನ್ನು ದಾಖಲಿಸುತ್ತಿದೆ. ಅಮೆರಿಕ ನಂತರ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ದೇಶದಲ್ಲಿ ಇತ್ತೀಚೆಗೆ ಕಡಿಮೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರ್ಕಾರವು ಕಳೆದ ತಿಂಗಳು ಘೋಷಿಸಿತ್ತು.
ಆದರೂ, ವಿದೇಶದಲ್ಲಿ ಕೊರೊನಾ ರೂಪಾಂತರಿತ ತಳಿಗಳು ಕಂಡು ಬಂದ ಕಾರಣ ವೈರಸ್ ವಿರುದ್ಧ ಮುಂಜಾಗ್ರತಾ ಕ್ರಮ ಕೈಬಿಡದಂತೆ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಕರ್ನಾಟಕವು ಪ್ರಸ್ತುತ ಮಹಾರಾಷ್ಟ್ರ ಮತ್ತು ಕೇರಳದ ನಂತರದ ಮೂರನೇ ಅತಿ ಹೆಚ್ಚು ಕೊರೊನಾ ಬಾಧಿತ ರಾಜ್ಯವಾಗಿದೆ.
ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!


