ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ಕರೆ ನೀಡಲಾಗಿರುವ ರೈಲ್ ರೋಕೋ ಚಳವಳಿಯ ಹಿನ್ನೆಲೆಯಲ್ಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ 20 ಹೆಚ್ಚುವರಿ ರೈಲ್ವೆ ಸಂರಕ್ಷಣಾ ವಿಶೇಷ ಪಡೆ (ಆರ್ಪಿಎಸ್ಎಫ್) ಪಡೆಗಳನ್ನು ರೈಲು ಇಲಾಖೆ ನಿಯೋಜಿಸಿದೆ.
ಇಂದು (ಫೆಬ್ರವರಿ 18) ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ದೇಶಾದ್ಯಂತ ರೈಲು ತಡೆ ನಡೆಸುವ ಮೂಲಕ ಹೋರಾಟ ತೀವ್ರಗೊಳಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾದ ಡಾ. ದರ್ಶನ್ ಪಾಲ್ ಪತ್ರಿಕಾ ಪ್ರಕಟಣೆಯಲ್ಲಿ ಫೆಬ್ರವರಿ 10 ರಂದು ತಿಳಿಸಿದ್ದರು.
ಪ್ರತಿಭಟನೆಯ ನೇತೃತ್ವ ವಹಿಸುತ್ತಿರುವ ರೈತ ಸಂಘಗಳ ಒಕ್ಕೂಟ ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್ಕೆಎಂ) ಕಳೆದ ವಾರ ರೈಲ್ವೆ ತಡೆಯನ್ನು ಘೋಷಿಸಿ, ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಗೆ ಒತ್ತಾಯಿಸಿತ್ತು.
ರೈಲ್ವೆ ಸಂರಕ್ಷಣಾ ಪಡೆ ಮಹಾನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, “ಶಾಂತಿ ಕಾಪಾಡುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ನಾವು ಜಿಲ್ಲಾಡಳಿತಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಎಲ್ಲಾ ಸ್ಥಳದಲ್ಲಿ ಒಂದೊಂದು ನಿಯಂತ್ರಣ ಕೊಠಡಿ ಇರುತ್ತವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ’ನಾವಿಬ್ಬರು ನಮಗಿಬ್ಬರು’ ಹೇಳಿಕೆಗೆ ’ಗೊ ಕೊರೊನಾ ಗೊ’ ಖ್ಯಾತಿಯ ಸಚಿವ ಅಠಾವಳೆ ಹೇಳಿದ್ದೇನು?
“ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಮತ್ತು ಇತರ ಕೆಲವು ಪ್ರದೇಶಗಳು ನಮ್ಮ ಕೇಂದ್ರಬಿಂದುವಾಗಿರುತ್ತವೆ. ರೈಲ್ವೆ ಸಂರಕ್ಷಣಾ ವಿಶೇಷ ಪಡೆ (ಆರ್ಪಿಎಸ್ಎಫ್) ನ 20 ಪಡೆಗಳನ್ನು (ಸುಮಾರು 20,000 ಸಿಬ್ಬಂದಿ) ಈ ಪ್ರದೇಶಗಳಲ್ಲಿ ನಿಯೋಜಿಸಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
“ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ನಾವು ಪ್ರತಿಭಟನಾಕಾರರ ಮನವೊಲಿಸಲು ಬಯಸುತ್ತೇವೆ. ನಮಗೆ ನಾಲ್ಕು ಗಂಟೆಗಳ ಅವಕಾಶ ಇದೆ ಮತ್ತು (ರೈಲ್ ರೋಕೋ) ಶಾಂತಿಯುತವಾಗಿ ನಡೆಯಬೇಕೆಂದು ನಾವು ಬಯಸುತ್ತೇವೆ” ಎಂದು ರೈಲ್ವೆ ಸಂರಕ್ಷಣಾ ಪಡೆ ಮಹಾನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ.
ಪಂಜಾಬಿನಲ್ಲಿ ಕಳೆದ ಸೆಪ್ಟಂಬರ್ 25 ರಿಂದ ರೈಕ್ ರೋಕೋ ಚಳುವಳಿ ಆರಂಭವಾಗಿತ್ತು. ಮುಖ್ಯಮಂತ್ರಿಗಳ ಮನವಿ ಹಿನ್ನೆಲೆಯಲ್ಲಿ ರೈಲ್ ರೋಕೋ ನಿಲ್ಲಿಸಲಾಗಿತ್ತು. ಆದರೆ ಸಂಯುಕ್ತ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿಯು ಇನ್ನು ರೈಲ್ ರೋಕೋವನ್ನು ಮುಂದುವರೆಸಿದೆ. ಈಗ ಮತ್ತೆ ಸಂಯುಕ್ತ ಕಿಸಾನ್ ಮೋರ್ಚಾ ಇಂದು (ಫೆ.18) ದೇಶಾದ್ಯಂತ ರೈಲ್ ರೋಕೋಗೆ ಕರೆ ನೀಡಿದೆ.
ರಾಜ್ಯದಲ್ಲಿಯೂ ರೈಲ್ ರೋಕೋ
ದೇಶಾದ್ಯಂತ ಫೆ.18ರಂದು ಮಧ್ಯಾಹ್ನ 12ರಿಂದ 3ರವರೆಗೆ ರೈಲು ತಡೆ ಚಳವಳಿಗೆ ಕರೆ ನೀಡಲಾಗಿದೆ. ಆ ಪ್ರಕಾರವಾಗಿಯೇ ರಾಜ್ಯದಲ್ಲೂ ರೈಲು ತಡೆದು ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದೆಂದು ರೈತ ಸಂಘಟನೆಗಳ ಸಂಯುಕ್ತ ಹೋರಾಟದ ಸಂಯೋಜಕರಾದ ಬಯ್ಯಾರೆಡ್ಡಿ, ಕೋಡಿಹಳ್ಳಿ ಚಂದ್ರಶೇಖರ್, ಗುರುಪ್ರಸಾದ್ ಕೆರೆಗೋಡು, ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದಿನ ಸರ್ಕಾರದ ಮೇಲೆ ತೈಲ ಬೆಲೆ ಹೆಚ್ಚಳದ ಹೊಣೆ ಹೊರಿಸಿದ ಪ್ರಧಾನಿ