ರಾಷ್ಟ್ರೀಯ ಕಾಮಧೇನು ಆಯೋಗ್ ಆಯೋಜಿಸಿರುವ ‘ಹಸು ವಿಜ್ಞಾನ’ ಕುರಿತ ಅಖಿಲ ಭಾರತ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಎಲ್ಲಾ ಉಪಕುಲಪತಿಗಳಿಗೆ ಸೂಚಿಸಿದೆ ಎಂದು ದಿ ವೈರ್ ಮತ್ತು ದಿ ಪ್ರಿಂಟ್ ವರದಿ ಮಾಡಿವೆ. ಇದಲ್ಲದೇ, ಈ ಪರೀಕ್ಷೆಗೆಂದು ಸಿದ್ಧಪಡಿಸಿದ ಪಠ್ಯಕ್ರಮವು ಸುಳ್ಳು ಮತ್ತು ಅರ್ಧ ಸತ್ಯಗಳಿಂದ ಕೂಡಿದೆ ಎಂದು ದಿ ವೈರ್ ಹೇಳಿದೆ.
ಕಾಮಧೇನು ಗೋ-ವಿಜ್ಞಾನ್ ಪ್ರಚಾರ್-ಪ್ರಸಾರ್ ಪರೀಕ್ಷೆ ಎಂದು ಕರೆಯಲ್ಪಡುವ ಈ ಆನ್ಲೈನ್ ಪರೀಕ್ಷೆಯು ಫೆಬ್ರವರಿ 25 ರಂದು ನಡೆಯಲಿದ್ದು, ಇದು ಸ್ವಯಂಪ್ರೇರಿತ ಪರೀಕ್ಷೆಯಾಗಿದ್ದು, ಪೂರ್ವ ನೋಂದಣಿ ಅಗತ್ಯವಿರುತ್ತದೆ. ಇದು ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಲ್ಲದವರಿಗೆ ಸಮಾನವಾಗಿ ತೆರೆದಿರುತ್ತದೆ. ಪ್ರಾಥಮಿಕ ವಿಭಾಗಗಳು (8 ನೇ ತರಗತಿಯವರೆಗೆ), ಮಾಧ್ಯಮಿಕ ವಿದ್ಯಾರ್ಥಿಗಳು (9 ನೇ ತರಗತಿಯಿಂದ 12 ರವರೆಗೆ), ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಅನಿವಾಸಿ ಭಾರತೀಯರು-ಹೀಗೆ ಐದು ವಿಭಾಗಗಳಿಗೆ ಪರೀಕ್ಷೆ ನಡೆಯಲಿದೆ. ಭಾಗವಹಿಸುವವರಿಗೆ ಪ್ರಮಾಣಪತ್ರ ನೀಡಲಾಗುವುದು.
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಮಧೇನು ಆಯೋಗ್ ಈ ಪರೀಕ್ಷೆಯನ್ನು ಸ್ಥಳೀಯ ಸರ್ಕಾರಿ ಮಟ್ಟದ ನೆರವಿನೊಂದಿಗೆ ಆಯೋಜಿಸಿದೆ ಎನ್ನಲಾಗಿದೆ.
ಈ ಪರೀಕ್ಷೆಗೆ ಮೊದಲ ಬಾರಿಗೆ ಅಧಿಸೂಚನೆ ನೀಡಿದಾಗ, ಈ ಪ್ರಕ್ರಿಯೆಗೆ “ಕೇಂದ್ರ ಶಿಕ್ಷಣ ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯ ಶಿಕ್ಷಣ ಮಂತ್ರಿಗಳು, ಎಲ್ಲಾ ರಾಜ್ಯಗಳ ಗೋ ಸೇವಾ ಆಯೋಗಗಳ ಅಧ್ಯಕ್ಷರು, ಎಲ್ಲಾ ರಾಜ್ಯಗಳ ಜಿಲ್ಲಾ ಶಿಕ್ಷಣ ಅಧಿಕಾರಿಗಳು, ಎಲ್ಲ ಪ್ರಾಂಶುಪಾಲರು ಭಾಗವಹಿಸುವ ಅಗತ್ಯವಿದೆ ಎಂದು ಕಾಮಧೇನು ಆಯೋಗ ಹೇಳಿತ್ತು. ಶಾಲೆಗಳು, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು, ಎನ್ಜಿಒಗಳು ಮತ್ತು ಹಸು ದಾನಿಗಳು, ಗೋಪ್ರೇಮಿಗಳು ಇದಕ್ಕೆ ಪ್ರಚಾರ ನೀಡಲು ಕೋರಲಾಗಿತ್ತು.
ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶಾಲೆಗಳು ಮತ್ತೆ ತೆರೆಯುವುದರಿಂದ ಈಗಾಗಲೇ 11 ತಿಂಗಳ ಅಂತರವನ್ನು ಹೊಂದಿರುವ ಶಾಲಾ ವಿದ್ಯಾರ್ಥಿಗಳು ತಮ್ಮ ಅವಧಿಯ ಪರೀಕ್ಷೆಗಳಿಗೆ ಹೆಚ್ಚು ಹತ್ತಿರವಾಗುತ್ತಾರೆ. ದೇಶಾದ್ಯಂತ, ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಹಾಜರಾಗಲು ಅಥವಾ ಭೌತಿಕ ತರಗತಿಗಳಿಗೆ ಮತ್ತೆ ಸೇರಲು ಹೆಣಗಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಈ ಪರೀಕ್ಷೆಗೆ ಹಾಜರಾಗಿ ಎಂದು ಒತ್ತಾಯಿಸಿದರೆ ಅವರು ಸಂದಿಗ್ಧತೆಗೆ ಒಳಗಾಗಲಿದ್ದಾರೆ.
ಜನವರಿ 18, 2021 ರಂದು, ಆಯೋಗ್ ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಅವರು ಶಿಕ್ಷಣ ರಾಜ್ಯ ಸಚಿವ ಸಂಜಯ್ ಧೋತ್ರಾಗೆ ಪತ್ರ ಬರೆದು ಪರೀಕ್ಷೆಗೆ “ವ್ಯಾಪಕ ಪ್ರಚಾರ” ನೀಡುವಲ್ಲಿ ಬೆಂಬಲ ಕೇಳಿದ್ದರು.
ಪರೀಕ್ಷೆಯಲ್ಲಿ “ಎಲ್ಲಾ ಬ್ಯೂರೋಗಳು, ಎಲ್ಲಾ ಸಂಬಂಧಿತ ಸಂಸ್ಥೆಗಳು ತಮ್ಮ ಸಂಸ್ಥೆಗಳನ್ನು ತಮ್ಮ ಆಡಳಿತಾತ್ಮಕ ನಿಯಂತ್ರಣದಲ್ಲಿಟ್ಟುಕೊಳ್ಳುವಂತೆ ಮತ್ತು ಅಗತ್ಯ ಸೂಚನೆಗಳನ್ನು ನೀಡುವಂತೆ” ಒತ್ತಾಯಿಸುವ ಶಿಕ್ಷಣ ಸಚಿವಾಲಯದ ಕಚೇರಿಯ ಜ್ಞಾಪಕ ಪತ್ರವನ್ನು ದಿ ವೈರ್ ಹೊಂದಿದೆ.
ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ವಿಸಿಗಳಿಗೆ “ಈ ಉಪಕ್ರಮಕ್ಕೆ ವ್ಯಾಪಕ ಪ್ರಚಾರ” ನೀಡುವಂತೆ ಹೇಳಿದ್ದರೂ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಒತ್ತಾಯಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಯುಜಿಸಿ ಅಡಿಯಲ್ಲಿ 1,000 ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ.
ದಿ ಪ್ರಿಂಟ್ ಪ್ರಕಾರ, ಯುಜಿಸಿ ಕಾರ್ಯದರ್ಶಿ, ವಿವಿಗಳು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ತಮ್ಮ ಅಡಿ ಬರುವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಬೇಕು ಎಂದು ಸೂಚಿಸಿದ್ದಾರೆ.
ವಿವಾದಾತ್ಮಕ ಪಠ್ಯಕ್ರಮ
ಪರೀಕ್ಷೆಯು ಹಸುಗಳ ಮೌಲ್ಯ ಮತ್ತು ಅವುಗಳ ಉಪ ಉತ್ಪನ್ನಗಳ ಗಮನವನ್ನು ಸೆಳೆಯಲು ಆದರ್ಶಪ್ರಾಯವಾಗಿದ್ದರೂ, ರಾಷ್ಟ್ರೀಯ ಕಾಮಧೇನು ಆಯೋಗ್ ಸಂಕಲಿಸಿದ ಈ ಪರೀಕ್ಷೆಯ ಪಠ್ಯಕ್ರಮವೇ ಹೆಚ್ಚು ಮೋಸಗೊಳಿಸುವ ಸಂಗತಿಯಾಗಿದೆ. ಭಾರತೀಯ ಹಸುಗಳ ಮೇಲೆ ಹಲವಾರು ಆಧಾರರಹಿತ ಸಂಗತಿಗಳನ್ನು ನೀಡುವ ಪಠ್ಯಕ್ರಮವನ್ನು ರೂಪಿಸಲಾಗಿದೆ.
‘ದೇಸಿ’ ಹಸುಗಳು ಮತ್ತು ‘ವಿಲಕ್ಷಣ’ ಹಸುಗಳು ಎಂದು ವಿಭಾಗಿಸುವ ಪಠ್ಯಕ್ರಮವು, ಪ್ರತಿಯೊಂದು ಅಂಶದಲ್ಲೂ, ಹಸುವಿನ ಉಪಉತ್ಪನ್ನಗಳ ಆರೋಗ್ಯ ಪ್ರಯೋಜನಗಳಿಂದ ಹಿಡಿದು ಒಟ್ಟಾರೆ ವರ್ತನೆಯವರೆಗೆ, ಮೊದಲಿನದು ಅಂದರೆ ದೇಸಿ ಹಸು ಶ್ರೇಷ್ಠವಾದುದು ಎನ್ನುತ್ತದೆ.
ಭಾರತೀಯ ಹಸುವಿನ ಹಾಲಿನ ಬಣ್ಣವು “ತಿಳಿ ಹಳದಿ ಬಣ್ಣದ್ದಾಗಿರುವುದರಿಂದ ಅದರಲ್ಲಿ ಚಿನ್ನದ ಕುರುಹುಗಳಿವೆ” (ಇದು ಜರ್ಸಿ ಹಸು ಹೊಂದಿಲ್ಲ) ಎಂದು ಸಹ ಹೇಳುತ್ತದೆ.
ಅನೇಕ ಸಂಶೋಧಕರು ಇದನ್ನು ಅಲ್ಲಗಳೆದಿದ್ದಾರೆ. ಭಾರತೀಯ ಹಸುಗಳು ನೈರ್ಮಲ್ಯವನ್ನು ಕಾಪಾಡಿಕೊಳ್ಳುತ್ತವೆ, “ಕೊಳಕು ಸ್ಥಳಗಳಲ್ಲಿ ಕುಳಿತುಕೊಳ್ಳಲಾರವು ಸಾಕಷ್ಟು ಗಟ್ಟಿಮುಟ್ಟಾದ ಮತ್ತು ಬುದ್ಧಿವಂತ” ಈ ಹಸುಗಳು ಎಂದು ಪಠ್ಯಕ್ರಮವು ಹೇಳುತ್ತದೆ. ಆದರೆ ಜರ್ಸಿ ಹಸು ಸೋಮಾರಿಯಾಗಿದೆ ಮತ್ತು ರೋಗಗಳಿಗೆ ಗುರಿಯಾಗುತ್ತದೆ ಎಂದು ವಿವರಿಸಲಾಗಿದೆ.
ಎಲ್ಲಾ ಮಾನವ ಮತ್ತು ಬೆಳೆ ರೋಗಗಳನ್ನು ಹಸುವಿನ ಉಪಉತ್ಪನ್ನದಿಂದ ಗುಣಪಡಿಸಲಾಗುತ್ತದೆ ಎಂದು ಪಠ್ಯಕ್ರಮವು ಹಲವಾರು ಬಾರಿ ಹೇಳುತ್ತದೆ. ಇದು ಗೋಮಾಂಸ ಸೇವನೆಗಾಗಿ ಹಸುವಿನ ಹತ್ಯೆಗೆ ತಡೆಯಾಗಿ ಕರ್ಮವನ್ನು ತರುತ್ತದೆ ಮತ್ತು ಅಂತಿಮವಾಗಿ ಗೋಹತ್ಯೆಯನ್ನು ಭೂಕಂಪಗಳಿಗೆ ಜೋಡಿಸುವ ಸಂಪೂರ್ಣ ಆಧಾರರಹಿತ ಮತ್ತು ಅವೈಜ್ಞಾನಿಕ ಸಮರ್ಥನೆಯೊಂದಿಗೆ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: ಬಿಜೆಪಿಯವರನ್ನು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಡಿ- ನರೇಶ್ ಟಿಕಾಯತ್


