ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ಮತ್ತು ಎಂಎಸ್ಪಿ ಖಾತ್ರಿಗಾಗಿ ನೂತನ ಕಾನೂನಿಗೆ ಆಗ್ರಹಿಸಿ 93 ದಿನಗಳಿಂದ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಯುವಜನರ ಕೊಡುಗೆಯನ್ನು ಗೌರವಿಸಿ ಫೆಬ್ರವರಿ 26 ರಂದು ಯುವ ಕಿಸಾನ್ ದಿನ ಆಚರಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಫೆಬ್ರವರಿ 26ರ ಯುವ ಕಿಸಾನ್ ದಿನದಂದು ಸಂಯುಕ್ತ ಕಿಸಾನ್ ಮೋರ್ಚಾದ ಎಲ್ಲಾ ವೇದಿಕೆಗಳು ಯುವಜನರಿಗಾಗಿ ಮೀಸಲಾಗಿರುತ್ತವೆ. ಅಂದು ಎಲ್ಲಾ ಕಾರ್ಯಕ್ರಮಗಳನ್ನು ಯುವಜನರೆ ನಿರ್ವಹಿಸುತ್ತಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಡಾ.ದರ್ಶನ್ ಪಾಲ್ ತಿಳಿಸಿದ್ದಾರೆ.
ಈಗಾಗಲೇ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದ ನೂರಾರು ಸಾಮಾಜಿಕ ಕಾರ್ಯಕರ್ತರು ದೆಹಲಿಯ ಗಡಿ ತಲುಪಿದ್ದು ಹೋರಾಟನಿರತ ರೈತರಿಗೆ ಬೆಂಬಲ ಸೂಚಿಸಿದ್ದಾರೆ. ಈ ದಕ್ಷಿಣ ಭಾರತದ ಯುವಜನರು ಸಹ ಯುವ ಕಿಸಾನ್ ದಿನದಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿದೆ.
ಅದೇ ರೀತಿಯಲ್ಲಿ ಫೆಬ್ರವರಿ 27 ಅನ್ನು ‘ಮಜ್ದೂರ್ ಕಿಸಾನ್ ಏಕ್ತಾ ದಿವಸ್’ (ರೈತ ಕಾರ್ಮಿಕರ ಐಕ್ಯತಾ ದಿನ) ಆಗಿ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ. ಅಂದು ಎಲ್ಲಾ ಕಾರ್ಮಿಕ ಸಂಘಟನೆಗಳೂ ಪ್ರತಿಭಟನಾ ಸ್ಥಳಗಳಗೆ ಬಂದು ಬೆಂಬಲ ಘೋಷಿಸಲಿದ್ದಾರೆ.
ಫೆಬ್ರವರಿ 27 ರಂದು ಗುರು ರವಿದಾಸರ ಜಯಂತಿ ಇದೆ. ಜೊತೆಗೆ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ರವರು ಹುತಾತ್ಮರಾದ ದಿನ. ಅಂದೇ ರೈತ ಕಾರ್ಮಿಕರ ಐಕ್ಯತಾ ದಿನವನ್ನು ಆಚರಿಲಸು ರೈತ ಮುಖಂಡರು ನಿರ್ಧರಿಸಿದ್ದಾರೆ.
ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ವಲಯ ಒಕ್ಕೂಟಗಳು ಮತ್ತು ಸಂಘಗಳ ಜಂಟಿ ವೇದಿಕೆಯು ಈ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ 2021 ಅನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ರೈತ ಹೋರಾಟವನ್ನು ಬೆಂಬಲಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂದು ದೇಶಾದ್ಯಂತ ಕಾರ್ಮಿಕರು ತಾವು ಕೆಲಸ ಮಾಡುವ ಸ್ಥಳದಲ್ಲಿಯೇ ಚಿಕ್ಕ ಚಿಕ್ಕ ರ್ಯಾಲಿಗಳು, ಧರಣಿಗಳು, ಮೆರವಣಿಗೆಗಳ ಮೂಳಕ ರೈತ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ.
INTUC, AITUC, HMS, CITU, AIUTUC, TUCC, SEWA, AICCTU, LPF, UTUC ಸಂಘಟನೆಗಳು ರೈತ ಕಾರ್ಮಿಕರ ಐಕ್ಯತಾ ದಿನದಲ್ಲಿ ಭಾಗವಹಿಸುವುದಾಗಿ ಘೋಷಿಸಿವೆ.
ಇದನ್ನೂ ಓದಿ: ಪಗಡಿ ಸಂಭಲ್ ದಿನ: ಸಿಂಘು ಗಡಿಗೆ ಹುತಾತ್ಮ ಭಗತ್ ಸಿಂಗ್ ಸಂಬಂಧಿಕರ ಭೇಟಿ, ರೈತ ಹೋರಾಟಕ್ಕೆ ಬೆಂಬಲ