ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ದೂರು ದಾಖಲಾಗಿರುವುದಕ್ಕೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ಇನ್ನೂ ಈ ದೇಶದಲ್ಲಿ ಇದೆ ಎನ್ನುವುದನ್ನು ಸರ್ಕಾರ ಮರೆಯಬಾರದು ಎಂದಿದ್ದಾರೆ.
ಮಾರ್ಚ್ 20 ರ ಶನಿವಾರದಂದು ನಡೆದ ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್ನಲ್ಲಿ ಭಾಗವಹಿಸಿ ಮಾತನಾಡಿದ್ದ ರಾಕೇಶ್ ಟಿಕಾಯತ್ ಅವರ ಮೇಲೆ ’ಪ್ರಚೋದನಾಕಾರಿ ಭಾಷಣ’ ಮಾಡಿದ್ದಾರೆ ಎಂಬ ಆರೋಪದಲ್ಲಿ ಶಿವಮೊಗ್ಗದಲ್ಲಿ ಪ್ರಕರಣದ ದಾಖಲಾಗಿದೆ.
“ಟಿಕಾಯತ್ ಅವರ ಮೇಲೆ ಕೇಸ್ ಹಾಕಿರುವುದು ವಿಷಾದನೀಯ. ಪ್ರಜಾಪ್ರಭುತ್ವ ಇನ್ನೂ ಈ ದೇಶದಲ್ಲಿ ಇದೆ ಎನ್ನುವುದನ್ನು ಮರೆಯಬಾರದು. ಈ ದೇಶದ ಜನರಿಗೆ ಅನ್ನ ಕೊಡುವವರು ರೈತರು. ಅಂತಹವರ ನೋವು ಅರಿತು ಪರಿಹಾರ ಒದಗಿಸಬೇಕಾದ್ದು ಸರ್ಕಾರದ ಜವಾಬ್ದಾರಿ. ಆದುದರಿಂದ ಏನೋ ತಪ್ಪು ಅಭಿಪ್ರಾಯದಿಂದ ಕೇಸ್ ದಾಖಲಾಗಿರಬಹುದು. ಅದನ್ನು ಕೂಡಲೆ ವಾಪಾಸ್ ಪಡೆಯುವ ಕಾರ್ಯವನ್ನು ಸರ್ಕಾರ ಮಾಡಬೇಕೆಂದು ಈ ಮೂಲಕ ಕರೆಕೊಡುತ್ತಿದ್ದೆವೆ” ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಇದನ್ನೂ ಓದಿ: ರೈತ ಮುಖಂಡ ರಾಕೇಶ್ ಟಿಕಾಯತ್ ವಿರುದ್ದ FIR: ಕೇಸು ರದ್ದು ಮಾಡಿ ಎಂದು ಕುಮಾರಸ್ವಾಮಿ ಆಗ್ರಹ
ಗುರುವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿ ರಾಕೇಶ್ ಟಿಕಾಯತ್ ವಿರುದ್ಧ ಎಫ್ಐಆರ್ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ನಿಜಕ್ಕೂ ಕೇಸು ದಾಖಲಿಸುವುದೇ ಆದರೆ ಬಿಜೆಪಿಯ ಎಷ್ಟು ನಾಯಕರ ಮೇಲೆ ಎಷ್ಟೆಷ್ಟು ಪ್ರಕರಣ ದಾಖಲಾಗಬೇಕಿತ್ತು..?” ಎಂದು ಪ್ರಶ್ನಿಸಿದ್ದರು.
“ಹೋರಾಟ ಮಾಡಲು ರೈತರು ದೆಹಲಿಗೇ ಬರಬೇಕಿಲ್ಲ, ದೆಹಲಿಯಂತೆ ಇಲ್ಲೇ ಹೋರಾಟ ಮಾಡಿ,” ಎಂಬ ಟಿಕಾಯತ್ ಹೇಳಿಕೆಯಲ್ಲಿ ಪ್ರಚೋದನೆ ಏನೂ ಇಲ್ಲ. ಇದರಲ್ಲಿ ತಪ್ಪು ಕಂಡವರದ್ದು ಗ್ರಹಿಕೆ ದೋಷವಷ್ಟೇ. ಹೋರಾಟ, ಹೋರಾಟಕ್ಕೆ ಕರೆ ನೀಡುವುದು ಸಂವಿಧಾನ ಬದ್ಧ. ಅವರು ಕೊಚ್ಚಿ ಎನ್ನಲಿಲ್ಲ, ಕೊಲ್ಲಿರಿ ಎನ್ನಲಿಲ್ಲ. ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು” ಎಂದು ಆಗ್ರಹಿಸಿದ್ದರು.
ರೈತ ಮುಖಂಡರು, ಪ್ರಗತಿಪರ ಚಿಂತಕರು, ಸಾಮಾಜಿಕ ಹೋರಾಟಗಾರರು ರೈತ ಮುಖಂಡ ಟಿಕಾಯತ್ ಮೇಲೆ ಎಫ್ಐಆರ್ ಹಾಕಿರುವುದಕ್ಕೆ ಸರ್ಕಾರವನ್ನು ಟೀಕಿಸಿದ್ದಾರೆ. ಪ್ರಚೋದನಕಾರಿ ಭಾಷಣ ಎನ್ನುವುದು ಸುಳ್ಳು ಎಂದಿದ್ದಾರೆ. ಪತ್ರಿಕಾಗೋಷ್ಠಿಗಳನ್ನು ನಡೆಸಿ, ಗೃಹ ಸಚಿವರಿಗೆ ಬಹಿರಂಗ ಪತ್ರಗಳನ್ನು ಬರೆದು ಕೇಸ್ ವಾಪಸ್ ಪಡೆಯಲು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾಯ್ದೆ ವಾಪಸಾತಿ ಮಾತನಾಡುತ್ತಿರುವ ಯುವಜನರು ಸರ್ಕಾರ ವಾಪಸಾತಿ ಮಾಡುತ್ತಾರೆ ಎಚ್ಚರ: ರಾಕೇಶ್ ಟಿಕಾಯತ್