ಉತ್ತರಾಖಂಡದ ಹರಿದ್ವಾರದ ಕುಂಭಮೇಳದಲ್ಲಿ ಏಪ್ರಿಲ್ 10 ರಿಂದ 14 ರವರೆಗೆ ಭಾಗವಹಿಸಿದ್ದ 1,701 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಆರ್ಟಿ-ಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಟೆಸ್ಟ್ ವರದಿಗಳು ಐದು ದಿನಗಳ ಅವಧಿಯಲ್ಲಿ (ಏಪ್ರಿಲ್ 10 ರಿಂದ 14ರ ವರೆಗೆ) ಹರಿದ್ವಾರದಿಂದ ದೇವಪ್ರಯಾಗ್ವರೆಗೆ ನಡೆಯುತ್ತಿರುವ ಕುಂಭಮೇಳದಲ್ಲಿ ಮಾಡಲಾಗಿದೆ ಎಂದು ಹರಿದ್ವಾರ ಮುಖ್ಯ ವೈದ್ಯಕೀಯ ಅಧಿಕಾರಿ ಶಂಭು ಕುಮಾರ್ ಝಾ ಗುರುವಾರ ತಿಳಿಸಿದ್ದಾರೆ.
ಈಗ 1,701 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಹೆಚ್ಚಿನ ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸುವಂತೆ ತಿಳಿಸಲಾಗಿದೆ. ಜೊತೆಗೆ ಕುಂಭಮೇಳ ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆ 2,000ಕ್ಕೆ ಏರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೊರೊನಾ ನಡುವೆಯೂ ಕುಂಭಮೇಳ ಮುಂದುವರಿಯುತ್ತದೆ- ಅಧಿಕಾರಿಗಳ ಹೇಳಿಕೆ
ಕುಂಭಮೇಳ ಪ್ರದೇಶವು 670 ಹೆಕ್ಟೇರ್ ಪ್ರದೇಶದಲ್ಲಿ ಹರಿದ್ವಾರ, ಟೆಹ್ರಿ ಮತ್ತು ಡೆಹ್ರಾಡೂನ್ ಜಿಲ್ಲೆಗಳು ಮತ್ತು ಋಷಿಕೇಶ್ ಪ್ರದೇಶಗಳನ್ನು ಆವರಿಸಿದೆ.
ಏಪ್ರಿಲ್ 12 ರಂದು ಮತ್ತು ಏಪ್ರಿಲ್ 14 ರಂದು ನಡೆದ ಎರಡು ಶಾಹಿ ಸ್ನಾನಗಳಲ್ಲಿ ಭಾಗವಹಿಸಿದ 48.51 ಲಕ್ಷ ಜನರಲ್ಲಿ ಬಹುಪಾಲು ಜನರು ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಕಾಪಾಡುವುದು ಸೇರಿದಂತೆ ಕೊರೊನಾ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಿದ್ದಾರೆ.
ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದರೂ, ಈಗ ನಡೆಯುತ್ತಿರುವ ಕುಂಭಮೇಳವು ಏಪ್ರಿಲ್ 30 ರವರೆಗೆ ಮುಂದುವರಿಯುತ್ತದೆ. ಕೊರೊನಾ ಸೋಂಕುಗಳು ಹೆಚ್ಚುತ್ತಿರುವ ಕಾರಣ ಅದನ್ನು ಬೇಗನೆ ನಿಲ್ಲಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕುಂಭಮೇಳದ ’ಶಾಹಿ ಸ್ನಾನ’ದಲ್ಲಿ ದೈಹಿಕ ಅಂತರ ಅಸಾಧ್ಯ ಎಂದ ಅಧಿಕಾರಿಗಳು
ಬುಧವಾರ ಸಂಜೆ ವೇಳೆಗೆ ಉತ್ತರಾಖಂಡ ಸರ್ಕಾರ ಮತ್ತು ಧಾರ್ಮಿಕ ಮುಖಂಡರ ನಡುವೆ ಈ ಕಾರ್ಯಕ್ರಮವನ್ನು ರದ್ದುಗೊಳಿಸುವ ಬಗ್ಗೆ ಚರ್ಚೆ ನಡೆದು, ಎರಡು ವಾರಗಳ ಮುಂಚೆಯೇ ಕುಂಭಮೇಳವನ್ನು ನಿಲ್ಲಿಸಲು ನಿರ್ಧರಿಸಲಾಗಿದೆ ವರದಿಗಳು ಬಂದಿದ್ದವು. ಆದರೆ ಇದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.
ಈ ವರ್ಷ ಕೊರೊನಾ ಸಾಂಕ್ರಾಮಿಕದ ಮಧ್ಯೆ ಧಾರ್ಮಿಕ ಕಾರ್ಯಕ್ರಮವನ್ನು ನಿಲ್ಲಿಸದಿರುವ ನಿರ್ಧಾರದ ಬಗ್ಗೆ ರಾಷ್ಟ್ರವ್ಯಾಪಿ ಟೀಕೆಗಳು ಬಂದಿವೆ. ಕುಂಭಮೇಳದಲ್ಲಿ ಸಾಮಾನ್ಯವಾಗಿ ಗರಿಷ್ಠ ಜನಸಂದಣಿಯನ್ನು ಸೇರುತ್ತಿದೆ ಇದು ಕೊರೊನಾ ಹಾಟ್ಸ್ಪಾಟ್ ಆಗಲಿದೆ ಮತ್ತು ಇಲ್ಲಿ ಭಾಗವಹಿಸಿದವರು ಸೂಪರ್-ಸ್ಪ್ರೆಡರ್ ಆಗಬಹುದು ಎಂದು ವಿಮರ್ಶಕರು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಎರಡು ದಿನಗಳ ಹಿಂದೆ ಕುಂಭಮೇಳಕ್ಕೆ ಭೇಟಿ ನೀಡಿದ್ದ ಅಖಿಲೇಶ್ ಯಾದವ್ಗೆ ಕೊರೊನಾ ಸೋಂಕು