- ಟಿ.ಎನ್.ಷಣ್ಮುಖ |
ಇತ್ತ ದಾವಣಗೆರೆಯ ಸೆರಗಿಗೂ, ಅತ್ತ ಚಿತ್ರದುರ್ಗದ ಚುಂಗಿಗೂ ಆತುಕೊಂಡಂತಿರುವ ಮಾಯಕೊಂಡದ ಎಲೆಕ್ಷನ್ ಕಣದಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಅದರಲ್ಲೂ ಬಿಜೆಪಿಗೆ ಮಾಯಕೊಂಡ ಬಿಸಿ ತುಪ್ಪದಂತಾಗಿದೆ. ಯಾಕಂದ್ರೆ ಬಿಜೆಪಿ ಅಲ್ಲಿ ಇಬ್ಬಿಬ್ಬರು ಬಂಡಾಯಗಾರರನ್ನು ಎದುರಿಸುವಂತಾಗಿದೆ. ಕಳೆದ ಬಾರಿ ಯಡಿಯೂರಪ್ಪ ಕೆಜೆಪಿ ಕಟ್ಟಿ, ಮಾಯಕೊಂಡದಿಂದ ಪ್ರೊ.ಲಿಂಗಪ್ಪನ ಕೈಗೆ ತೆಂಗಿನಕಾಯಿ ಕೊಟ್ಟು ಈಡುಗಾಡಿ ಹೊಡೆಯಲು ಹೇಳಿದ್ದರು. ಹಾಗಾಗಿ ಬಿಜೆಪಿ ಬಸವರಾಜ ನಾಯ್ಕ ಎಂಬ ಅಪರಿಚಿತನನ್ನು ಕಣಕ್ಕಿಳಿಸಿತ್ತು. ಆದರೆ ಈ ಸಲ ಕೆಜೆಪಿ ಬಿಜೆಪಿಯೊಳಗೆ ಐಕ್ಯಗೊಂಡಿದೆ. ಸೋ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಸವರಾಜ ನಾಯ್ಕನಿಗೆ ಟಿಕೇಟು ಕೊಡಬೇಕೊ ಅಥವಾ ಯಡಿಯೂರಪ್ಪನವರನ್ನು ನಂಬಿ ಈಡುಗಾಯಿ ಹೊಡೆದಿದ್ದ ಲಿಂಗಪ್ಪನಿಗೆ ಟಿಕೇಟು ಕೊಡಬೇಕೊ ಎಂಬ ಜಿಜ್ಞಾಸೆ ಆರಂಭದಿಂದಲೂ ಬಿಜೆಪಿಯನ್ನು ಹೈರಾಣು ಮಾಡಿತ್ತು. ಅದರ ನಡುವೆ ಎಚ್.ಆನಂದಪ್ಪ ಅನ್ನೋ ಮತ್ತೊಬ್ಬ ಗಿರಾಕಿ ಬಿಜೆಪಿ ಟಿಕೇಟಿಗೆ ತಾಲೀಮು ನಡೆಸಿದ್ದ.

ಕೊನೆಗೆ ಯಡಿಯೂರಪ್ಪನ ಪವರ್ರೇ ಗೆದ್ದು, ಕೆಜೆಪಿಯಿಂದ ಬಂದ ಲಿಂಗಪ್ಪನಿಗೇ ಟಿಕೇಟು ಸಿಗುವಂತಾಯ್ತು. ಇದರಿಂದ ಬಂಡೆದ್ದ ಬಸವರಾಜ ನಾಯ್ಕ ಮಹಿಮಾ ಪಟೇಲರ ಸಾರಥ್ಯದ ಜೆಡಿಯು ಹೊಕ್ಕು ಆ ಪಕ್ಷದ ಅಭ್ಯರ್ಥಿಯಾಗಿ ಬಿಜೆಪಿಯತ್ತ ಬಾಣ ನೆಟ್ಟಿದ್ದಾನೆ. ಇತ್ತ ಮತ್ತೋರ್ವ ಟಿಕೇಟ್ ಆಕಾಂಕ್ಷಿ ಆನಂದಪ್ಪ ಕೂಡಾ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾನೆ. `ಬಿಜೆಪಿ ನಮಗೆ ನಂಬಿಕೆ ದ್ರೋಹ ಮಾಡಿದೆ. ನಮ್ಮನ್ನು ರಾಜಕೀಯವಾಗಿ ತುಳಿಯಲು ಹವಣಿಸಿದೆ. ಹಾಗಾಗಿ ನಾವು ಆ ಪಾರ್ಟಿಯನ್ನು ಮಾಯಕೊಂಡದಲ್ಲಿ ನಿರ್ನಾಮ ಮಾಡ್ತೀವಿ’ ಅನ್ನೋ ಕಾಮನ್ ಸ್ಲೋಗನ್ ಇಟ್ಟುಕೊಂಡು ಇವರಿಬ್ಬರೂ ಬಬ್ರುವಾಹನ ಸ್ಟೈಲಿನಲ್ಲಿ ಅಬ್ಬರಿಸುತ್ತಿರೋದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಅದರಲ್ಲೂ ಹಾಲಿ ಜೆಡಿಯು ಅಭ್ಯರ್ಥಿಯಾಗಿರುವ ಬಸವರಾಜ ನಾಯ್ಕನ ಜೊತೆ ಬಿಜೆಪಿ ವರ್ತಿಸಿದ ರೀತಿ ಇದೆಯಲ್ಲ ಅದು, ಈ ಕ್ಷೇತ್ರದ ಬಹುಸಂಖ್ಯಾತ ಮತದಾರರಾದ ಲಂಬಾಣಿ ನಾಯ್ಕ ಮತಗಳನ್ನು ರೊಚ್ಚಿಗೆಬ್ಬಿಸಿದೆ. ಲಿಂಗಾಯತ ಮದಗಜ ಕಾದಾಟದ ನಡುವೆ ಒಬ್ಬ ಶೂದ್ರನನ್ನು ಬಲಿಕೊಟ್ಟ ಈ ವೃತ್ತಾಂತಕ್ಕೆ ಐದು ವರ್ಷಗಳ ಇತಿಹಾಸವಿದೆ. ದಾವಣಗೆರೆಯ ಕೇಸರಿ ಮೇಳದಲ್ಲಿ ತಾಳಮೇಳ ತಪ್ಪಿ ಒಂದು ದಶಕವೇ ಕಳೆದುಹೋಗಿದೆ. ಮಾಜಿ ತರ್ಕಾರಿ ಮಂತ್ರಿ ಎಸ್.ಎ.ರವೀಂದ್ರನಾಥನ ಕ್ಷೀಣಬಣ ಒಂದು ಕಡೆಗಾದರೆ, ಯಡ್ಯೂರಪ್ಪನವರ ಬಣ ಮತ್ತೊಂದು ಕಡೆ. ಸಂಸದ ಸಿದ್ದೇಶ್ವರ ಆದಿಯಾಗಿ ಬಹುತೇಕ ಹಾಲಿ, ಮಾಜಿ ಎಂಎಲ್ಎಗಳು ಯಡ್ಯೂರಪ್ಪನವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಸವರಾಜ ನಾಯ್ಕ ರವೀಂದ್ರನಾಥನ ಕಟ್ಟಾಳುವಾಗಿದ್ದ. 2013ರಲ್ಲಿ ಯಡಿಯೂರಪ್ಪ ಬಿಜೆಪಿ ಕಟ್ಟಿದಾಗ ರವೀಂದ್ರನಾಥ ಮಾಯಕೊಂಡದ ಬಿಜೆಪಿ ಟಿಕೇಟು ಕೊಡಿಸಿ ಕಾದಾಟಕ್ಕೆ ತಳ್ಳಿದ್ದು ಇದೇ ಬಸವರಾಜ ನಾಯ್ಕನನ್ನು.

ಆದರೆ ಯಾವಾಗ ಯಡಿಯೂರಪ್ಪ ಬಿಜೆಪಿಗೆ ವಾಪಾಸಾದರೋ ಆಗಿನಿಂದ ಅವರ ವಿರೋಧಿಗಳನ್ನು ವ್ಯವಸ್ಥಿತವಾಗಿ ಮಟ್ಟ ಹಾಕುತ್ತಾ ಬಂದರು. ಅಂಥಾ ಈಶ್ವರಪ್ಪನೇ ಥಂಡಾ ಹೊಡೆದು ರಾಯಣ್ಣ ಬ್ರಿಗೇಡ್ ನೆಪದಲ್ಲಿ ಟಿಕೇಟಿಗೆ ಹೆಣಗಾಡಬೇಕಾಯ್ತು. ಇತ್ತ ದಾವಣಗೆರೆಯಲ್ಲೂ ರವೀಂದ್ರನಾಥರ ಬಣದ ಮೇಲೆ ಅದೇ ದುಷ್ಮನಿಯ ಕಣ್ಣಿಟ್ಟ ಯಡಿಯೂರಪ್ಪ ಅವರ ಬೆಂಬಲಿಗರಿಗೆ ಬಿಸಿನೀರು ಬಿಡುತ್ತಾ ಬಂದರು. ರವೀಂದ್ರನಾಥಗೂ ಟಿಕೇಟ್ ತಪ್ಪಿಸಲು ಯಡ್ಯೂರಪ್ಪ ಯತ್ನಿಸಿದರಾದರೂ ಕಾಂಗ್ರೆಸ್ನ ಎಸ್.ಎಸ್.ಮಲ್ಲಿಕಾರ್ಜುನ್ಗೆ ಪ್ರಬಲ ಸ್ಪರ್ಧೆಯೊಡ್ಡುವಂತವರು ಬಿಜೆಪಿಯಲ್ಲಿ ಯಾರೂ ಇರದ ಕಾರಣ ರವೀಂದ್ರನಾಥ್ಗೆ ಟಿಕೇಟ್ ತಪ್ಪಿಸಲು ಸಾಧ್ಯವಾಗಲಿಲ್ಲ. ಆದರೆ ರವೀಂದ್ರನಾಥ್ ಮೇಲಿನ ಸಿಟ್ಟಿಗೆ ಬಸವರಾಜ ನಾಯ್ಕನಿಗೆ ಟಿಕೇಟ್ ತಪ್ಪಿಸಿ, ಕೆಜೆಪಿಯ ಲಿಂಗಪ್ಪನಿಗೆ ಬಿ ಫಾರಂ ದಯಪಾಲಿಸಿದ್ದಾರೆ. ಯಡ್ಯೂರಪ್ಪ-ರವೀಂದ್ರನಾಥ್ ಎಂಬ ಇಬ್ಬರು ಬಿಜೆಪಿ ಲಿಂಗವಂತರ ಕಾದಾಟಕ್ಕೆ ನಮ್ಮ ಬಸರಾಜ ನಾಯ್ಕ ಬಲಿಪಶು ಆಗುವಂತೆ ಆಯ್ತಲ್ಲ ಎಂಬ ಸಿಟ್ಟು ಈಗ ಲಂಬಾಣಿ ಜನರದ್ದು.
ಶಾಮನೂರು ದಣಿಗಳನ್ನು ವಿಪರೀತ ವಿರೋಧ ಮಾಡಿಕೊಂಡಿದ್ದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ ಕಳೆದ ಎಲೆಕ್ಷನ್ನಲ್ಲೇ ಟಿಕೇಟು ಮಿಸ್ ಮಾಡಿಕೊಳ್ಳಬೇಕಿತ್ತು. ಆದರೆ ಹೈಕಮಾಂಡ್ ತಂತ್ರಗಾರಿಕೆ ಬಳಸಿ ಟಿಕೇಟ್ ಗಿಟ್ಟಿಸಿದ್ದಲ್ಲದೆ ಬಿಜೆಪಿ-ಕೆಜೆಪಿ ಕಾದಾಟದ ನಡುವೆ ಗೆದ್ದು ಶಾಸಕನೂ ಆಗಿದ್ದ. ಆಮೇಲೆ ಆತ ಕ್ಷೇತ್ರದತ್ತ ಮುಖ ಮಾಡಿ ನೋಡಿದವನಲ್ಲ. ತನಗೆ ಮಂತ್ರಿಗಿರಿ ಕೊಡಲಿಲ್ಲ ಅಂತ ವಿಧಾನಸೌಧದ ಮುಂದೆ ಧರಣಿ ಕೂತು ನಗೆಪಾಟಲಿಗೆ ಈಡಾದ ಶಿವಮೂರ್ತಿ ನಾಯ್ಕನ ಬೆಂಬಲಕ್ಕೆ ಅವನ ಕ್ಷೇತ್ರದಿಂದ ಒಬ್ಬನೇ ಒಬ್ಬ ಕಾರ್ಯಕರ್ತನೂ ಬರಲಿಲ್ಲ ಎಂದಮೇಲೆ ಅವನ ಜನಪ್ರಿಯತೆ ಇನ್ನೆಂತದ್ದಿರಬೇಡ. ಅದೇ ಕಾರಣಕ್ಕೆ ಈ ಸಲ ಶಿವಮೂರ್ತಿ ನಾಯ್ಕನಿಗೆ ಖೊಕ್ ಕೊಟ್ಟು ಆನಗೋಡು ಜಿಲ್ಲಾ ಪಂಚಾಯ್ತಿ ಮೆಂಬರು ಬಸವರಾಜನಿಗೆ ಟಿಕೇಟ್ ನೀಡಲಾಗಿದೆ. ಈ ಬಸವರಾಜ, ಹಾಲಿ ಸಮಾಜ ಕಲ್ಯಾಣ ಮಂತ್ರಿ ಎಚ್.ಆಂಜನೇಯರ ಖಾಸಾ ಅಳಿಯ. ಅದಕ್ಕಿಂತಲೂ ಮುಖ್ಯವಾಗಿ ಕ್ಷೇತ್ರದಲ್ಲಿ ಜನರ ಒಡನಾಟ ಉಳಿಸಿಕೊಂಡಿರುವಾತ. ಬಸವರಾಜ್ ಅಭ್ಯರ್ಥಿಯಾಗಿರೋದ್ರಿಂದ ಬಂಡಾಯದಿಂದ ಬೆಂಡಾಗಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ.

ಮಾಯಕೊಂಡದಲ್ಲಿ 52 ಸಾವಿರದಷ್ಟಿರುವ ಲಿಂಗಾಯತ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇವೆಯಾದರೂ, ಹೆಚ್ಚೂಕಮ್ಮಿ ಸಮಪ್ರಮಾಣದಲ್ಲಿರುವ ಇತರೆ ಜಾತಿಗಳ ಮತಗಳೂ ನಿರ್ಣಾಯಕ. ಮಾದಿಗ, ಲಂಬಾಣಿ ಮತ್ತು ನಾಯಕ ಜಾತಿಯ ತಲಾ 40 ಸಾವಿರ ಮತಗಳು ತಮ್ಮ ಪೊಲಿಟಿಕಲ್ ಅಸ್ಮಿತೆಯ ಮಹತ್ವವನ್ನು ಸಾರಿ ಹೇಳುತ್ತವೆ. ಕೈ ಪಾರ್ಟಿಯ ಬಸವರಾಜ ಮತ್ತು ಬಿಜೆಪಿಯ ಲಿಂಗಪ್ಪ ಇಬ್ಬರೂ ಮಾದಿಗ ಸಮುದಾಯದವರು. ಆದರೆ ಈ ಮತಗಳ ಮೇಲೆ ಮಂತ್ರಿ ಆಂಜನೇಯರ ಬಿಗಿ ಪ್ರಭಾವ ಇರೋದ್ರಿಂದ ಅವು ಕಾಂಗ್ರೆಸ್ಗೆ ಹರಿದು ಬರೋದ್ರಲ್ಲಿ ಸಂಶಯವಿಲ್ಲ. ಅದೂಅಲ್ಲದೇ, ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ದಲಿತ ವಿರೋಧಿ ನಡವಳಿಕೆ ಹೆಚ್ಚಾಗುತ್ತಿರೋದ್ರಿಂದ ದಲಿತರ ಮತಗಳು ಬಿಜೆಪಿಗೆ ಹೋಗೋದೆ ಡೌಟು. ಇನ್ನು ಬಸವರಾಜ ನಾಯ್ಕನಿಗೆ ಟಿಕೇಟು ತಪ್ಪಿಸಿದ ಬಿಜೆಪಿಯ ಆಂತರಿಕ ಗುದಮುರಗಿ ವಿರುದ್ಧ ಸಿಡಿದೆದ್ದಿರುವ ಲಂಬಾಣಿ ಮತಗಳು ಜೆಡಿಯು ಬಸವರಾಜ ನಾಯ್ಕ, ಜೆಡಿಎಸ್ನ ಶೀಲಾ ನಾಯ್ಕ ನಡುವೆ ಹಂಚಿಹೋಗುವುದರ ನಡುವೆ `ಅಹಿಂದ’ ಹಾದಿಗುಂಟ ಕಾಂಗ್ರೆಸ್ಸನ್ನೂ ಎಡತಾಕಲಿವೆ. ಪಾರಂಪರಿಕ ಬಿಜೆಪಿ ಮತಗಳೂ ಆನಂದಪ್ಪನ ಬಂಡಾಯ ಸ್ಪರ್ಧೆಯಿಂದ ಮುಕ್ಕಾಗಲಿವೆ. ನಾಯಕ ಜನಾಂಗದ ಮತಗಳಂತೂ ಕಾಂಗ್ರೆಸ್ ಹಸ್ತದಲ್ಲಿ ಭದ್ರವಾಗಿವೆ. ಮಾಯಕೊಂಡದ ಲಿಂಗಾಯತ ಮತಗಳ ಮೇಲೆ ಯಡಿಯೂರಪ್ಪನ ಖದರ್ರು ಇರೋದಕ್ಕಿಂತ ಶಾಮನೂರು ಧಣಿಗಳ ಛಾಪು ಇದೆ. ಹಾಗಾಗಿ ಏನಿಲ್ಲವೆಂದರೂ ಅವುಗಳಲ್ಲಿ ಕನಿಷ್ಠ ಅರ್ಧದಷ್ಟಾದರು ಕಾಂಗ್ರೆಸ್ಗೆ ಬರಲಿವೆ. ಜೊತೆಗೆ, ಸಾಧು ಲಿಂಗಾಯತರ ರವೀಂದ್ರ ನಾಥ ಪಕ್ಷದೊಳಗೆ ಯಡಿಯೂರಪ್ಪನ ಪ್ರಭಾವ ಕುಗ್ಗಿಸಲು ಆತನ ಶಿಷ್ಯನ ವಿರುದ್ಧ ಕರಾಮತ್ತು ಮಾಡುವ ಸಾಧ್ಯತೆಯೂ ಕಾಣುತ್ತಿದೆ. ಹಾಗೇನಾದರು ಆದಲ್ಲಿ ಕಾಂಗ್ರೆಸ್ ಸೇರುವ ಲಿಂಗಾಯತರ ಮತಗಳ ಪ್ರಮಾಣದಲ್ಲಿ ಮತ್ತಷ್ಟೂ ಏರಿಕೆಯಾಗಲಿದೆ. ಈ ಸಮೀಕರಣವನ್ನೆಲ್ಲ ತಾಳೆ ಹಾಕಿ ನೋಡಿದರೆ ಮಾಯಕೊಂಡದಲ್ಲಿ ಕಾಂಗ್ರೆಸ್ ಅಧಿಕಾರವೇ ಮುಂದುವರೆಯುವ ಲಕ್ಷಣಗಳೇ ದಟ್ಟವಾಗಿವೆ. ಫಲಿತಾಂಶದ ದಿನ ಸ್ಪಷ್ಟ ಉತ್ತರ ಸಿಗಲಿದೆ.


