ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಮತ್ತು ಇತರ ಮೂವರ ವಿರುದ್ಧ ದಾಖಲಾದ, ‘ಶಾಂತಿ ಕದಡುವ ಭೀತಿ’ಯ ಆರೋಪದ ವಿಚಾರಣೆಯನ್ನು ಉತ್ತರ ಪ್ರದೇಶದ ಮಥುರಾದ ನ್ಯಾಯಾಲಯವು ಮಂಗಳವಾರ ಕೈಬಿಟ್ಟಿದೆ. ನಿಗದಿತ ಆರು ತಿಂಗಳೊಳಗೆ ಅವರ ವಿರುದ್ಧದ ವಿಚಾರಣೆಯನ್ನು ಪೂರ್ಣಗೊಳಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಪ್ರತಿವಾದಿ ವಕೀಲರು ತಿಳಿಸಿದ್ದಾರೆ.
ಯುಪಿಯ ಹತ್ರಾಸ್ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು ಅಕ್ಟೋಬರ್ 5 ರಂದು ತೆರಳಿದ್ದ ಸಿದ್ದೀಕ್ ಕಪ್ಪನ್ ಅವರನ್ನು, ದಾರಿ ಮಧ್ಯದಲ್ಲಿ ಪಿಎಫ್ಐ ಜೊತೆಗೆ ಸಂಪರ್ಕವಿದೆ ಎಂದು ಶಂಕಿಸಿ ಬಂಧಿಸಲಾಗಿತ್ತು. ಅವರ ಜೊತೆಗೆ ಅವರೊಂದಿಗೆ ಇದ್ದ ಮೂವರನ್ನೂ ಬಂಧಿಸಲಾಗಿತ್ತು.
ಇದನ್ನೂ ಓದಿ: ಪ್ರತಿಭಟಿಸುವುದು ಭಯೋತ್ಪಾದನೆಯಲ್ಲ ಎಂದ ದೆಹಲಿ ಹೈಕೋರ್ಟ್: ಸ್ವಾಗತಿಸಿದ ನ್ಯಾಯವಾದಿಗಳು ಮತ್ತು ಕಾನೂನು ತಜ್ಞರು
ಅವರ ಭೇಟಿಯಿಂದಾಗಿ, ಶಾಂತಿ ಕದಡುವ ಅಪಾಯವಿದೆ ಎಂಬ ಕಾರಣ ನೀಡಿ ಬಂಧಿಸಲಾಗಿತ್ತು. ಆದರೆ ನಂತರ ದೇಶದ್ರೋಹ ಮತ್ತು ಭಯೋತ್ಪಾದನಾ-ವಿರೋಧಿ ಕಾನೂನು(ಯುಎಪಿಎ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆಯ ಆರೋಪಗಳನ್ನು ಹೊರಿಸಲಾಗಿತ್ತು.
ಕಾನೂನಿನಡಿಯಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುವ ಮಿತಿ ಮುಗಿದ ಕಾರಣ, ನಾಲ್ವರು ಆರೋಪಿಗಳ ವಿರುದ್ಧದ ವಿಚಾರಣೆಯನ್ನು ಕೈಬಿಡಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ಆದೇಶದಲ್ಲಿ ತಿಳಿಸಿದ್ದಾರೆ.
ಇಂದು ಮಾಧ್ಯಮದ ಜೊತೆ ಮಾತನಾಡಿದ ಪತ್ರಕರ್ತ ಸಿದ್ದೀಕ್ ಕಪ್ಪನ್, “ನಾನು ಇನ್ನೂ ನಮ್ಮ ಸಂವಿಧಾನವನ್ನು ನಂಬಿದ್ದೇನೆ, ಆದರೆ ನ್ಯಾಯವನ್ನು ವಿಳಂಬ ಮಾಡಲಾಗಿದೆ. ಇದು ನಕಲಿ ಪ್ರಕರಣ, ಸಂಪೂರ್ಣ ನಕಲಿ ಪ್ರಕರಣ” ಎಂದು ಹೇಳಿದ್ದಾರೆ.
‘I still believe in our constitution but this is justice delayed. This is fake case, completely fake case’
Kerala journalist Siddique Kappan after Mathura court dropped bailable offences against him. #siddiquekappan pic.twitter.com/3c957h4iBs— Kitty Behal (@kittybehal10) June 16, 2021
ಇದೇ ವೇಳೆ ಮತ್ತೊಬ್ಬ ಆರೋಪಿ ಮಾತನಾಡಿ, “ನಮಗೆ ಯಾರೊಂದಿಗೂ ಸಂಪರ್ಕವಿಲ್ಲ, ನಕಲಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಯೋಗಿ ಸರ್ಕಾರ ಸರ್ವಾಧಿಕಾರ ನಡೆಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
153 ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ), 295 ಎ (ಧಾರ್ಮಿಕ ಭಾವನೆಗಳನ್ನು ನೋಯಿಸುವ), 124 ಎ (ದೇಶದ್ರೋಹ), ಐಪಿಸಿಯ 120 ಬಿ (ಪಿತೂರಿ), ಯುಎಪಿಎ 17/18 (ಭಯೋತ್ಪಾದಕ ಕೃತ್ಯಕ್ಕಾಗಿ ಹಣವನ್ನು ಸಂಗ್ರಹಿಸುವುದು) ಮತ್ತು ಐಟಿ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಆರೋಪಿಗಳು ಕಳೆದ ಅಕ್ಟೋಬರ್ 7 ರಿಂದ ಜೈಲಿನಲ್ಲಿದ್ದಾರೆ.
ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರು ಪಿಎಫ್ಐ ಜೊತೆ ಸಂಪರ್ಕ ಹೊಂದಿದ್ದಾರೆ ಮತ್ತು ಹತ್ರಾಸ್ನಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ರೊನಾಲ್ಡೊ ಮಾಡಿದ ಒಂದು ಸಣ್ಣ ಕೆಲಸಕ್ಕೆ 4 ಬಿಲಿಯನ್ ಡಾಲರ್ ಕಳೆದುಕೊಂಡ ಕೋಕೊ-ಕೋಲಾ
ಸಿದ್ದಿಕ್ ಕಪ್ಪನ್ ಪ್ರಕರಣದಲ್ಲಿ ಆರೋಪಿ ಪದ ಬಳಸುವಂತಿಲ್ಲ. ಅವ್ರು ಆಪಾಧಿತರು.