ಚಾಮರಾಜನಗರ ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ವತಿಯಿಂದ ಪರಿಹಾರದ ಚೆಕ್ ವಿತರಿಸಿದ್ದಾರೆ. ರಾಜ್ಯ ಸರ್ಕಾರದ ದುರಾಡಳಿತ ಕಂಡು ಜನ ಆಕ್ರೋಶಗೊಂಡಿದ್ದಾರೆ. ಅವರ ಆಕ್ರೋಶಕ್ಕೆ ಹೆದರಿ ಬಿಜೆಪಿ ನಾಯಕರು ಜನರ ಬಳಿಗೆ ಹೋಗುತ್ತಿಲ್ಲ ಎಂದು ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
‘ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಕೇವಲ ಮೂರು ಜನ ಮೃತಪಟ್ಟರು ಎಂದು ಸರ್ಕಾರ ಆರಂಭದಲ್ಲಿ ಹೇಳಿತ್ತು. ಆದರೆ, ನಾವು ಇಲ್ಲಿಗೆ ಭೇಟಿ ನೀಡಿದಾಗ 28 ಮಂದಿ ಮೃತಪಟ್ಟಿದ್ದಾರೆ ಎಂಬುದು ಗೊತ್ತಾಯಿತು. ಇದನ್ನೆಲ್ಲ ಗಮನಿಸಿದ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ತಂಡ ಕಳುಹಿಸಿ ತನಿಖೆ ನಡೆಸಿದಾಗ ಒಟ್ಟು 36 ಮಂದಿ ಸತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ’ ಎಂದಿದ್ದಾರೆ.
’ಇಲ್ಲಿನ ಸಾವುಗಳು ಸರ್ಕಾರ ಮಾಡಿರುವ ಕೊಲೆ. ಈ ಕೊಲೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ವಿಪತ್ತು ನಿರ್ವಹಣಾ ನಿಧಿಯಿಂದ 4 ಲಕ್ಷ ಪರಿಹಾರ ಘೋಷಿಸಿ ನಂತರ ಹಿಂಪಡೆಯಿತು. ಆದರೆ ಸರ್ಕಾರದಿಂದ ಯಾರೂ ಇಲ್ಲಿಗೆ ಬಂದು ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬಲಿಲ್ಲ. ಅವರ ಕಷ್ಟ ಕೇಳಲಿಲ್ಲ. ಈ ಕೊಲೆಗಳಿಗೆ ಸರ್ಕಾರ ಹಾಗೂ ಚುನಾವಣಾ ಆಯೋಗವೇ ಕಾರಣ ಎಂದು ವಿವಿಧ ನ್ಯಾಯಾಲಯಗಳು ಹೇಳಿವೆ. ಇಷ್ಟಾದರೂ ಸರ್ಕಾರ ಇದಕ್ಕೆ ಕಾರಣರಾದ ಅಧಿಕಾರಿ, ಮಂತ್ರಿಗಳ ಮೇಲೆ ಕ್ರಮ ಕೈಗೊಳ್ಳಲಿಲ್ಲ ಎಂದರೆ ಈ ಸರ್ಕಾರ ಬದುಕಿದೆಯಾ, ಸತ್ತಿದೆಯಾ ಎಂಬುದನ್ನು ಜನರೇ ತೀರ್ಮಾನಿಸಬೇಕು’ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕೊರೊನಾ 2ನೇ ಅಲೆಗೆ 28 ವೈದ್ಯರು ಬಲಿ, ಇನ್ನು ಸಿಗದ ಪರಿಹಾರ
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಚಿನ್ನಪ್ಪನಪುರದೊಡ್ಡಿಯ ರಂಗಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ @DKShivakumar ಅವರು, ಮೃತರ ಪತ್ನಿ ಪುಷ್ಪಾ ರಂಗಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ₹1 ಲಕ್ಷ ಪರಿಹಾರದ ಚೆಕ್ ವಿತರಿಸಿದರು. pic.twitter.com/t61SoNMPfj
— Karnataka Congress (@INCKarnataka) June 27, 2021
’ವಿರೋಧ ಪಕ್ಷದ ಜವಾಬ್ದಾರಿ ಅರಿತು ನಾವು ಈ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಕೆಪಿಸಿಸಿ ಅಧ್ಯಕ್ಷನಾಗಿ ಎಲ್ಲ 36 ಸಂತ್ರಸ್ತರ ಕುಟುಂಬದವರನ್ನು ಭೇಟಿ ಮಾಡುತ್ತಿದ್ದೇನೆ. ಇವರನ್ನು ಸರ್ಕಾರ ಭೇಟಿ ಮಾಡುತ್ತದೆ ಎಂದು ಕಾದುನೋಡಿದೆ. ಆದರೆ ಅವರು ಭೇಟಿ ಮಾಡಲಿಲ್ಲ. ನಮ್ಮ ಮನಸ್ಸು ತಡೆಯಲಾಗದೆ ಇವರ ಕಷ್ಟ ಕೇಳಿ, ಪಕ್ಷದ ಪರವಾಗಿ 1 ಲಕ್ಷ ಪರಿಹಾರ ನೀಡಿ, ಅವರಿಗೆ ಧೈರ್ಯ ತುಂಬಲು ನಾವು ಇಲ್ಲಿಗೆ ಬಂದಿದ್ದೇವೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
’ಮುಖ್ಯಮಂತ್ರಿ ಯಡಿಯೂರಪ್ಪನವರು ಇಲ್ಲಿಗೆ ಬಂದು ಇವರನ್ನು ಭೇಟಿ ಮಾಡಲು ಆಗದಿದ್ದರೆ, ಮಿಕ್ಕ ಸಚಿವರುಗಳಿಗೆ ಏನಾಗಿತ್ತು? ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು, ಕೋವಿಡ್ ಉಸ್ತುವಾರಿ ಹೊತ್ತವರು ಯಾಕೆ ಬರಲಿಲ್ಲ? ಎಲ್ಲರೂ ಬೆಂಗಳೂರಿನಲ್ಲಿ ಪಾಲು ಬೇಕು ಅಂತಾರೆ. ಜನರ ದುಃಖ-ದುಮ್ಮಾನ ಅವರಿಗೆ ಬೇಕಿಲ್ಲ. ಕೋವಿಡ್ ನಿಂದ ಸತ್ತವರು 30 ಸಾವಿರ ಅಂತಾ ಸರ್ಕಾರ ಹೇಳುತ್ತಿದೆ. ಅದರೆ 3 ಲಕ್ಷ ಜನರ ಮರಣ ಪ್ರಮಾಣ ಪತ್ರ ಪಡೆಯಲಾಗಿದೆ. ಹೀಗಾಗಿ ಡೆತ್ ಆಡಿಟ್ ಆಗಬೇಕಿದೆ. ಈ ವಿಚಾರವಾಗಿ ಕಾಂಗ್ರೆಸ್ ವಿಧಾನಸೌಧದಲ್ಲಿ ಧ್ವನಿ ಎತ್ತಲಿದೆ’ ಎಂದಿದ್ದಾರೆ.
’ಕೊರೊನಾದಿಂದ ಮೃತಪಟ್ಟವರಿಗೆ, ಸಮಸ್ಯೆ ಎದುರಿಸಿದವರಿಗೆ ಧೈರ್ಯ ತುಂಬುವ ಕಾರ್ಯಕ್ರಮವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ರಾಜ್ಯದ ಉದ್ದಗಲಕ್ಕೂ ನಮ್ಮ ಕಾರ್ಯಕರ್ತರು ಮನೆ, ಮನೆಗೆ ಹೋಗಿ ಕೋವಿಡ್ ನಿಂದ ಮೃತಪಟ್ಟವರು, ಉದ್ಯೋಗ ಕಳೆದುಕೊಂಡವರು, ಸಂಕಷ್ಟಕ್ಕೆ ಸಿಲುಕಿದವರ ಮಾಹಿತಿ ಸಂಗ್ರಹಿಸಲಿದ್ದಾರೆ. ಅವರಿಗೆ ಪರಿಹಾರ ಕೊಡಿಸಲು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡವನ್ನು ‘ದಂಡುಪಾಳ್ಯದ ದಂಡಪಿಂಡ’ಗಳು ಎಂದ ದಿಗ್ವಿಜಯ ನ್ಯೂಸ್?: ಆಕ್ರೋಶ