1952 ರ ಸಿನಿಮಾ ಛಾಯಾಗ್ರಹಣ ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿ ತರಲು ಹೊರಟಿರುವ ಒಕ್ಕೂಟ ಸರ್ಕಾರದ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ಕೇಂದ್ರ ಕಾನೂನು ಸಚಿವರಿಗೆ ಪತ್ರ ಬರೆದಿದ್ದಾರೆ.
ಈ ಕಾಯ್ದೆಯ ಕುರಿತು ಮಧ್ಯಪ್ರವೇಶಿಸುವಂತೆ ಕೋರಿ ತಮಿಳುನಾಡು ಚಲನಚಿತ್ರ ನಿರ್ಮಾಪಕರ ಸಂಘ ಸ್ಟಾಲಿನ್ ಅವರನ್ನು ಸೋಮವಾರ ಭೇಟಿಯಾಗಿ ಮನವಿ ಪತ್ರ ನೀಡಿದ್ದರು. ಇದಾದ ಬಳಿಕ ಒಕ್ಕೂಟ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವ್ಡೇಕರ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ.
’ಸಿನಿಮಾಟೋಗ್ರಾಫರ್ಸ್ ಅಮೆಂಡ್ಮೆಂಟ್ ಬಿಲ್ 2021 (ತಿದ್ದುಪಡಿ) ಮಸೂದೆಯೂ, ಚಲನಚಿತ್ರೋದ್ಯಮದ ಮನಸ್ಸಿನಲ್ಲಿ ಮಾತ್ರವಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ಸಮಾಜದ ಎಲ್ಲ ಉತ್ತಮ ವರ್ಗಗಳಲ್ಲೂ ಗಂಭೀರ ಆತಂಕಗಳಿಗೆ ಕಾರಣವಾಗಿದೆ’ ಎಂದು ಸ್ಟಾಲಿನ್ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಿತ್ರರಂಗದ ಅಭಿವ್ಯಕ್ತಿಯನ್ನೇ ಕಿತ್ತುಕೊಳ್ಳುವ ಕೇಂದ್ರದ ಹೊಸ ಕಾನೂನು: ಕಮಲ್ ಹಾಸನ್ ಸೇರಿ ಚಿತ್ರತಾರೆಯರ ವಿರೋಧ
கருத்துச் சுதந்திரத்தைப் பறிப்பது ஜனநாயகத்தை வலுவிழக்கச் செய்யும்; அது அரசியலமைப்புச் சட்டத்துக்கே எதிரானது!#CinematographBill2021-ஐ திரும்பப் பெற வலியுறுத்தி ஒன்றிய சட்ட அமைச்சர் @rsprasad & தகவல் மற்றும் ஒலிபரப்புத் துறை அமைச்சர் @PrakashJavdekar-க்கு
கடிதம் எழுதியுள்ளேன். pic.twitter.com/aDaV9ehtbX— M.K.Stalin (@mkstalin) July 6, 2021
“ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಸಿನಿಮಾಟೋಗ್ರಾಫರ್ಸ್ ಕಾಯ್ದೆಯ ಸೆಕ್ಷನ್ 5 (ಎ) ನಲ್ಲಿ ಉಲ್ಲೇಖಿಸಿರುವ ಎಲ್ಲಾ ಮಾನದಂಡಗಳನ್ನು ಪೂರೈಸಿದ ಬಳಿಕ ಚಲನಚಿತ್ರಗಳಿಗೆ ಪ್ರಮಾಣ ಪತ್ರ ನೀಡುತ್ತದೆ. ಕೆಲವು ನಿಗದಿತ ಮಾನ್ಯತೆಗಳ ಆಧಾರದ ಮೇಲೆ ಚಲನಚಿತ್ರದ ಪ್ರಮಾಣ ಪತ್ರವನ್ನು ತಿರಸ್ಕರಿಸಲು ಈ ಕಾಯಿದೆಯು ಅವಕಾಶ ನೀಡುತ್ತದೆ” ಎಂದು ಸ್ಟಾಲಿನ್ ಬರೆದಿದ್ದಾರೆ.
ಹೊಸ ತಿದ್ದುಪಡಿ ಮಸೂದೆಯು ಸೆನ್ಸಾರ್ ಬೋರ್ಡ್ ಪ್ರಮಾಣಪತ್ರದ ನಂತರವೂ ಚಿತ್ರ ಬಿಡುಗಡೆಯನ್ನು ತಡೆಯುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಸಿನಿಮಾಟೋಗ್ರಾಫರ್ಸ್ ತಿದ್ದುಪಡಿ ಮಸೂದೆ 2021 ರ ಸೆಕ್ಷನ್ 5B(1) ಪ್ರಖಾರ ರಾಷ್ಟ್ರೀಯ ಭದ್ರತೆ, ಸಮಾಜದ ಶಾಂತಿ, ಮತ್ತು ಮಿತ್ರ ದೇಶಗಳ ನಡುವಿನ ಸಂಬಂಧಗಳ ಕಾರಣಕ್ಕಾಗಿ ಚಿತ್ರ ಬಿಡುಗಡೆಯನ್ನು ತಡೆಯುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.
ಈಗಾಗಲೇ ಸೆನ್ಸಾರ್ ಬೋರ್ಡ್ನಿಂದ ಪ್ರಮಾಣಪತ್ರವನ್ನು ಪಡೆದಿರುವ ಚಲನಚಿತ್ರಗಳನ್ನು ಮತ್ತೊಮ್ಮೆ ಸೆನ್ಸಾರ್ ಮಾಡುವ ಅವಕಾಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ 2000 ದಲ್ಲಿ ಆದೇಶಿಸಿತ್ತು. ಅದರಲ್ಲಿ ಸುಪ್ರೀಂ ಕೋರ್ಟ್ CBFC ತೀರ್ಮಾನವೇ ಅಂತಿಮ. ಸೆನ್ಸಾರ್ ಬೋರ್ಡ್ ತೀರ್ಮಾನವನ್ನು ನಿರಾಕರಿಸುವ ಅಥವಾ ಪುನರ್ ವಿಮರ್ಶಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲವೆಂದು ಆದೇಶ ನೀಡಿತ್ತು. ಆದರೆ ಹೊಸ ತಿದ್ದುಪಡಿ ಮಸೂದೆಯು ಸೆನ್ಸಾರ್ ಬೋರ್ಡ್ ತೀರ್ಮಾನವನ್ನು ಅಸಿಂಧುಗೊಳಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಒಂದು ವೇಳೆ ಹೊಸ ಮಸೂದೆ ಜಾರಿಗೆ ಬಂದರೆ ಕೇಂದ್ರ ಯಾವುದೇ ಕಾರಣವನ್ನೂ ನೀಡದೆ ಚಿತ್ರ ಬಿಡುಗಡೆಯನ್ನು ತಡೆಯಬಹುದಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಸಿನಿಮಾಟೋಗ್ರಾಫರ್ಸ್ ಅಮೆಂಡ್ಮೆಂಟ್ ಬಿಲ್ 2021ಕ್ಕೆ ದೇಶಾದ್ಯಂತ ಚಿತ್ರತಾರೆಯರಿಂದ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ವಿಚ್ಛೇದನದ ನಂತರ ಅಮಿರ್ ಖಾನ್-ಕಿರಣ್ ರಾವ್ ಭಾವನಾತ್ಮಕ ವಿಡಿಯೋ ಸಂದೇಶ