ಅಫ್ಘಾನಿಸ್ತಾನದ ಗುರುದ್ವಾರದಲ್ಲಿ ಸಿಲುಕಿರುವ 200 ಸಿಖ್ಖರನ್ನು ಒಳಗೊಂಡಂತೆ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೋಮವಾರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸ್ಥಳಾಂತರ ಕಾರ್ಯದಲ್ಲಿ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದಾರೆ.
ರಾಜಧಾನಿ ಕಾಬೂಲ್ ತಾಲಿಬಾನ್ ಕೈಗೆ ಸಿಲುಕುವ ಮುನ್ನ ಅಧ್ಯಕ್ಷ ಅಶ್ರಫ್ ಘನಿ ದೇಶವನ್ನು ತೊರೆದಿದ್ದರಿಂದ ಅಫ್ಘಾನಿಸ್ತಾನವು ಅನಿಶ್ಚಿತತೆಯಲ್ಲಿ ಸಿಲುಕಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ” ತಾಲಿಬಾನ್ ಸ್ವಾಧೀನದ ನಂತರ ಅಫ್ಘಾನಿಸ್ತಾನದ ಗುರುದ್ವಾರದಲ್ಲಿ ಸಿಲುಕಿರುವ ಸುಮಾರು 200 ಸಿಖ್ಖರು ಸೇರಿದಂತೆ ಎಲ್ಲಾ ಭಾರತೀಯರನ್ನು ತಕ್ಷಣವೇ ಸ್ಥಳಾಂತರಿಸಲು ವ್ಯವಸ್ಥೆ ಮಾಡಲು ನಾನು ಸಚಿವ ಡಾ.ಎಸ್.ಜೈಶಂಕರ್ ಅವರನ್ನು ಒತ್ತಾಯಿಸುತ್ತೇನೆ. ಅವರ ಸುರಕ್ಷಿತ ಸ್ಥಳಾಂತರಕ್ಕೆ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ನನ್ನ ಸರ್ಕಾರ ಸಿದ್ಧವಿದೆ” ಎಂದಿದ್ದಾರೆ.
ಇದನ್ನೂ ಓದಿ: ಕಾಬೂಲ್ ಪ್ರವೇಶಿಸಿದ ತಾಲಿಬಾನ್: ರಾಜೀನಾಮೆಯತ್ತ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ
Urge @DrSJaishankar, MEA, GoI, to arrange for immediate evacuation of all Indians, including around 200 Sikhs, stuck in a Gurudwara in Afghanistan after the #Taliban takeover. My govt is willing to extend any help needed to ensure their safe evacuation. @MEAIndia
— Capt.Amarinder Singh (@capt_amarinder) August 16, 2021
ಭಾನುವಾರ ಕೂಡ ಈ ಕುರಿತು ಟ್ವೀಟ್ ಮಾಡಿದ್ದ ಅಮರಿಂದರ್ ಸಿಂಗ್,” ಅಫ್ಘಾನಿಸ್ತಾನವು ತಾಲಿಬಾನ್ ವಶಕ್ಕೆ ಹೋಗಿದ್ದು ನಮ್ಮ ದೇಶಕ್ಕೆ ಒಳ್ಳೆಯಲ್ಲ. ಇದು ಭಾರತದ ವಿರುದ್ಧ ಚೀನಾ ಮತ್ತು ಪಾಕ್ ನಂಟು ಬಲಪಡಿಸುತ್ತದೆ. (ಚೀನಾ ಈಗಾಗಲೇ ಉಯ್ಘರ್ ಮೇಲೆ ದಾಳಿ ನಡೆಸಲು ಸೇನೆಯ ಸಹಾಯವನ್ನು ಕೋರಿದೆ). ಈ ಸೂಚನೆಗಳು ಉತ್ತಮವಾಗಿಲ್ಲ, ನಮ್ಮ ಎಲ್ಲ ಗಡಿಗಳಲ್ಲಿ ನಾವೀಗ ಹೆಚ್ಚು ಜಾಗರೂಕರಾಗಿರಬೇಕು” ಎಂದಿದ್ದರು.
Afghanistan’s fall to #Taliban doesn’t augur well for our country. It’ll strengthen the Sino-Pak nexus against India (China has already sought militia’s help on Uyghur). The signs are not at all good, we need to be extra vigilant now at all our borders.
— Capt.Amarinder Singh (@capt_amarinder) August 15, 2021
ಶನಿವಾರ, ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯು, “ಅಫ್ಘಾನಿಸ್ತಾನದಲ್ಲಿ ವಾಸಿಸುವ ಸಿಖ್ಖರ ಸುರಕ್ಷತೆಯನ್ನು ಒಕ್ಕೂಟ ಸರ್ಕಾರ ಖಾತರಿಪಡಿಸಬೇಕು. ಭಾರತಕ್ಕೆ ಬರಲು ಬಯಸುವ ಸಿಖ್ಖರನ್ನು ಕರೆತರಲು ಬೇಷರತ್ತಾದ ವ್ಯವಸ್ಥೆ ಮಾಡಬೇಕು” ಎಂದು ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿತ್ತು.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಹೆಚ್ಚಳ: ರಾಯಭಾರಿ ಕಚೇರಿ ಸಿಬ್ಬಂದಿ ಭಾರತಕ್ಕೆ ವಾಪಾಸ್!


