ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಬ್ರಾಹ್ಮಣರ ಮತಗಳ ಮೇಲೆ ಕಣ್ಣಿಟ್ಟು ಅವರನ್ನು ಓಲೈಸಲು ಪ್ರಯತ್ನಿಸುತ್ತಿರುವ ಬಿಜೆಪಿ ಮತ್ತು ಇತರ ಪಕ್ಷಗಳನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. “ಬ್ರಾಹ್ಮಣ ಸಮುದಾಯದ ಮೇಲೆ ಇಷ್ಟೊಂದು ಪ್ರೀತಿ ಇದ್ದರೆ ಅವರನ್ನೇ ಯಾಕೆ ಮುಖ್ಯಮಂತ್ರಿಯಾಗಿ ಬಿಂಬಿಸಬಾರದು” ಎಂದು ಶನಿವಾರ ಅದು ಕೇಳಿದೆ.
ಬ್ರಾಹ್ಮಣರನ್ನು ಓಲೈಸಲು ಈ ಪಕ್ಷಗಳು ಎಲ್ಲಾ ರೀತಿಯ ನಾಟಕಗಳನ್ನು ಆಡುತ್ತಿವೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ನ ಮಾಧ್ಯಮ ಸಂಚಾಲಕ ಲಾಲನ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದು, “ಕಾಂಗ್ರೆಸ್ ಉತ್ತರ ಪ್ರದೇಶಕ್ಕೆ ಗರಿಷ್ಠ ಸಂಖ್ಯೆಯ ಬ್ರಾಹ್ಮಣ ಮುಖ್ಯಮಂತ್ರಿಗಳನ್ನು ನೀಡಿದೆ” ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 5 ರಿಂದ ಉತ್ತರಪ್ರದೇಶದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳಲ್ಲಿ “ಉನ್ನತ ವರ್ಗ”ಕ್ಕಾಗಿ ಸರಣಿ ಸಮಾವೇಶಗಳನ್ನು ಆಯೋಜಿಸುವುದಾಗಿ ಬಿಜೆಪಿ ಗುರುವಾರ ಘೋಷಿಸಿತ್ತು. ಈ ಹಿಂದೆ, ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಕೂಡ ಇದೇ ರೀತಿಯ ಸಮಾವೇಶಗಳನ್ನು ಘೋಷಿಸಿದ್ದವು.
ಇದನ್ನೂ ಓದಿ: ಬ್ರಾಹ್ಮಣ್ಯದ ಉಗಮ ಮತ್ತು ಹೂರಣ: ಅಂದು-ಇಂದು – ಜಿ ಎನ್ ನಾಗರಾಜ್
“ಬಿಜೆಪಿ, ಬಿಎಸ್ಪಿ ಮತ್ತು ಎಸ್ಪಿಗೆ ಬ್ರಾಹ್ಮಣರ ಮೇಲೆ ತುಂಬಾ ಪ್ರೀತಿ ಇದ್ದರೆ, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರು ಬ್ರಾಹ್ಮಣ ಮುಖವನ್ನು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಾಕೆ ತೋರಿಸುವುದಿಲ್ಲ?” ಎಂದು ಲಾಲನ್ ಕುಮಾರ್ ಪ್ರಶ್ನಿಸಿದ್ದಾರೆ.
“ವಾಸ್ತವವೆಂದರೆ, ಕಾಂಗ್ರೆಸ್ ಉತ್ತರ ಪ್ರದೇಶಕ್ಕೆ ಆರು ಬ್ರಾಹ್ಮಣ ಮುಖ್ಯಮಂತ್ರಿಗಳನ್ನು ನೀಡಿದೆ. ಇದು ಯಾವುದೇ ರಾಜಕೀಯ ಪಕ್ಷಗಳು ನೀಡಿರುವುದಕ್ಕಿಂತ ಹೆಚ್ಚು. ಬ್ರಾಹ್ಮಣರನ್ನು ಓಲೈಸಲು ಎಲ್ಲಾ ರೀತಿಯ ನಾಟಕಗಳನ್ನು ಮಾಡುತ್ತಿರುವ ಪಕ್ಷಗಳು ಅವರು ಎಷ್ಟು ರಾಜ್ಯಕ್ಕೆ ಬ್ರಾಹ್ಮಣ ಮುಖ್ಯಮಂತ್ರಿಗಳನ್ನು ನೀಡಿದ್ದಾರೆ ಎಂದು ಹೇಳಬೇಕು”” ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬ್ರಾಹ್ಮಣರು ಗರಿಷ್ಠ ದಬ್ಬಾಳಿಕೆಯನ್ನು ಎದುರಿಸಿದ್ದಾರೆ ಎಂದು ಆರೋಪಿಸಿದ ಲಾಲನ್ ಕುಮಾರ್, “ಈಗ ಚುನಾವಣೆ ಹತ್ತಿರವಾಗುತ್ತಿದ್ದು, ಬಿಜೆಪಿ ಪಕ್ಷವು ಸಮುದಾಯವನ್ನು ನೆನಪಿಸಿಕೊಂಡಿದೆ” ಎಂದು ತಿಳಿಸಿದ್ದಾರೆ.
“ಕಾಂಗ್ರೆಸ್ ಎಲ್ಲರನ್ನೂ ಒಟ್ಟಾಗಿ ಮುನ್ನಡೆಸಿಕೊಂಡು ಹೋಗಲು ಪ್ರಯತ್ನಿಸುತ್ತಿದೆ. ಮುಂದಿನ ವರ್ಷದ ಚುನಾವಣೆಯ ನಂತರ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ಆಗ ಮಾತ್ರ ಬ್ರಾಹ್ಮಣರಿಗೆ ನ್ಯಾಯ ಸಿಗುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬ್ರಾಹ್ಮಣ್ಯದ ವಿವಾದ; ಜ್ಞಾನದ ಹೊತ್ತಿಗೆ ಕಾಯಕದ ಸುತ್ತಿಗೆ: ಡಾ. ಟಿ ಆರ್ ಚಂದ್ರಶೇಖರ್


