ತಮಿಳುನಾಡಿನಲ್ಲಿ ಜಾತಿ ನಿರ್ಮೂಲನೆಗೆ ಒತ್ತು ನೀಡುತ್ತಿರುವ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಸಮಾನತೆ ಪಾಲಿಸುವ ಗ್ರಾಮಗಳಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.
ಅಂತ್ಯಕ್ರಿಯೆ ವೇಳೆ ಎಲ್ಲ ಜಾತಿಗಳಿಗೂ ಸಮಾನ ಸಮಾದಿ ಸ್ಥಳಗಳು ಸ್ಥಾಪನೆಯಾಗಬೇಕು ಎಂದು ತಿಳಿಸಿದ್ದಾರೆ. ಈ ರೀತಿಯಲ್ಲಿ ಸಮಾನತೆ ಪಾಲಿಸಿ ಮಾದರಿಯಾಗುವ ಗ್ರಾಮಗಳಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದಿದ್ದಾರೆ.
ಜಾತಿವಾದಿ ಅಪರಾಧಗಳ ಸಂತ್ರಸ್ತರಿಗೆ ಪರಿಹಾರವನ್ನು ಈಗಿರುವ 85,000 ರಿಂದ 8.25 ಲಕ್ಷದಿಂದ ರೂ. 12 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಇದೇ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ವ್ಯಾಕ್ಸಿನೇಷನ್ ಅಭಿಯಾನ ಉದ್ಘಾಟಿಸಿದ ತಮಿಳುನಾಡು ಸಿಎಂ ಸ್ಟಾಲಿನ್
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲು, ಸೇಲಂ, ಕೃಷ್ಣಗಿರಿ, ಮಧುರೈ ಮತ್ತು ತಿರುನಲ್ವೇಲಿಯಲ್ಲಿ ನಾಲ್ಕು ಹೊಸ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಿಳಿಸಿದ್ದಾರೆ.
SC/ST ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರ ಕುರಿತು ಸರಿಯಾದ ಕ್ರಮ ಮತ್ತು ಪರಿಹಾರವನ್ನು ನೀಡಲು, ‘ನಾವು ಸಮಾನತೆಯನ್ನು ಕಾಣೋಣ’ (Let Us See Equality) ಕಾರ್ಯಕ್ರಮದ ಅಡಿಯಲ್ಲಿ ಪೋಲಿಸರು ಮತ್ತು ಕಂದಾಯ ಅಧಿಕಾರಿಗಳಿಗೆ ಜಾಗೃತಿ ತರಬೇತಿಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಜೊತೆಗೆ ರಾಜ್ಯದಲ್ಲಿ ಆದಿ ದ್ರಾವಿಡರು ಮತ್ತು ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಆಯೋಗವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಆಗಸ್ಟ್ 19 ರಂದು ನಡೆದ ಉನ್ನತ ಮಟ್ಟದ ಸಭೆಯ ಸಲಹೆಗಳನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಕ್ರಮಕ್ಕೆ ಕರ್ನಾಟಕದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾಲಿನ್ ಅವರ ಹೇಳಿಕೆಗಳನ್ನು ಆಧರಿಸಿದ ಸುದ್ದಿಗಳು ವೈರಲ್ ಆಗುತ್ತಿವೆ.
ಇದನ್ನೂ ಓದಿ: ‘ಕೇಂದ್ರ ಸರ್ಕಾರ’ ಅಲ್ಲ, ‘ಒಕ್ಕೂಟ ಸರ್ಕಾರ’: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್!
ಸ್ಟಾಲಿನ್ ಅವರ ಈ ಕ್ರಮ ಸ್ವಾಗತಾರ್ಹ.