Homeಮುಖಪುಟಈಶ್ವರಚಂದ್ರ ವಿದ್ಯಾಸಾಗರ್ ಯಾರು? ಅವರ ಪ್ರತಿಮೆ ಧ್ವಂಸದ ಸುತ್ತಾ ತಿಳಿದಿರಬೇಕಾದ ವಿಷಯಗಳು

ಈಶ್ವರಚಂದ್ರ ವಿದ್ಯಾಸಾಗರ್ ಯಾರು? ಅವರ ಪ್ರತಿಮೆ ಧ್ವಂಸದ ಸುತ್ತಾ ತಿಳಿದಿರಬೇಕಾದ ವಿಷಯಗಳು

- Advertisement -
- Advertisement -

| ಡಾ. ಮಂಜುನಾಥ್. ಬಿ.ಆರ್ |

ಇತ್ತೀಚೆಗೆ ಕಲ್ಕತ್ತಾದಲ್ಲಿ ಪಂಡಿತ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಭಗ್ನಗೊಳಿಸಿರುವುದು ವರದಿಯಾಗಿದೆ.ಇದಕ್ಕೆ ಸಾರ್ವತ್ರಿಕ ಖಂಡನೆಯೂ ಬಂದಿದೆ. ಇದು ಬಂಗಾಳದಲ್ಲಿ ಊಹಿಸಿಕೊಳ್ಳಲು ಕಷ್ಟವಾದ ಸಂಗತಿ. ಏಕೆಂದರೆ ಬಂಗಾಳದ ಜನಮಾನಸದಲ್ಲಿ ಅವರು ಗಳಿಸಿಕೊಂಡಿರುವ ಸ್ಥಾನ ಅಂಥದ್ದು.

ಆದರೆ ಮುಂದಿನ ತಲೆಮಾರಿಗೆ ಮಹಾಪುರುಷರ ಧ್ಯೇಯ ಆದರ್ಶಗಳನ್ನು ನೆನಪಿಸಲೆಂದು ನಿಲ್ಲಿಸಿದ ಪ್ರತಿಮೆಗಳು ದಾಂಧಲೆಗೆ, ಗಲಭೆಗೆ,ರಾಜಕೀಯ ಮೇಲಾಟಕ್ಕೆ ತುತ್ತಾಗುತ್ತಿವೆ ಎಂಬುದು ನಮ್ಮ ಕಾಲದ ದುರಂತಗಳಲ್ಲೊಂದು.

ಇದನ್ನು ಯಾರು ಮಾಡಿರಬಹುದು ಎಂಬುದರ ಬಗ್ಗೆ ಸಾಕಷ್ಟು ಊಹಾಪೋಹ, ಚರ್ಚೆಗಳು ನಡೆಯುತ್ತಿವೆ.ಸಂಶಯದ ಬೊಟ್ಟು ಮಾತ್ರ ಬಿಜೆಪಿಯ ಕಡೆಗೆ ತಿರುಗಿದೆ.ಬಿಜೆಪಿಗೆ ತ್ರಿಪುರ ದಲ್ಲಿ ಲೆನಿನ್ ರವರ ಪ್ರತಿಮೆ ಉರುಳಿಸಿದ ಕುಖ್ಯಾತಿ ಇದೆ.ಅವರು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಯಾರನ್ನೂ ಸಹಿಸುವುದಿಲ್ಲ!

ಬಂಗಾಳದಲ್ಲಿ ವಿದ್ಯಾಸಾಗರರು ವಿವಾದಾತೀತ ಮಹಾಪುರುಷ . ಅವರ ಪ್ರತಿಮೆಯನ್ನು ಮುಟ್ಟಲು ಗೂಂಡಾಗಳೂ ಹಿಂಜರೆಯುತ್ತಾರೆ. ಹೀಗಾಗಿ ಬಿಜೆಪಿ ಹೊರ ರಾಜ್ಯದಿಂದ ಪುಂಡರನ್ನು ಕರೆ ತಂದಿದ್ದರು, ಅವರೇ ಈ ದುಷ್ಕೃತ್ಯವನ್ನು ಮಾಡಿದ್ದಾರೆ ಎಂಬ ಆಪಾದನೆಯಲ್ಲಿ ಸತ್ಯ ಇರಬಹುದು ಎನಿಸುತ್ತದೆ!ಮತ್ತೆ ಯಾವುದೇ ರಾಜ್ಯದಲ್ಲಿ ಗಲಭೆ ಆರಂಭಿಸುತ್ತಾ, ಭಾವನಾತ್ಮಕ ವಿಷಯಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ಒಳಪ್ರವೇಶಮಾಡಲು ಹವಣಿಸುವುದು ಬಿಜೆಪಿ ಯ ಹಳೆಯ ರಣನೀತಿ. ಈ ಬಾರಿ ಅಂದುಕೊಂಡದ್ದಕ್ಕಿಂತ ಕೊಂಚ ಹೆಚ್ಚಾಗಿ ಎಡವಟ್ಟಾಗಿದೆ ಅಷ್ಟೇ!

ಸಂಘ ಪರಿವಾರಕ್ಕೆ , ಅದರಲ್ಲೂ ಬಂಗಾಳಿ ‘ಚಿಂತಕ’ರಿಗೆ ವಿದ್ಯಾಸಾಗರ್ ರ ಮೇಲೆ ವಿಶೇಷ ಸಿಟ್ಟಿರಲು ಕಾರಣಗಳಂತೂ ಇವೆ. ವಿದ್ಯಾಸಾಗರ್ ಎಲ್ಲ ಪುರಾತನ ಗೊಡ್ಡು ವಿಚಾರಗಳನ್ನು ಖಂಡಿಸಿದ್ದರು, ಪುರುಷಪ್ರಧಾನ ಮೌಲ್ಯಗಳನ್ನು ವಿರೋಧಿಸಿದ್ದರು, ಜಾತಿ ಕಟ್ಟುಪಾಡುಗಳನ್ನು ಸಡಿಲಿಸಿದ್ದರು, ಉದಾರವಾದಿ ನಿಲುವುಗಳನ್ನು ಹೊಂದಿದ್ದರು,ಬ್ರಿಟಿಷರ ವಿರುದ್ಧ ಸ್ವಾಭಿಮಾನಿಯಾಗಿ ಸೆಟೆದು ನಿಂತಿದ್ದರು. ಭೌತವಾದಿ ನಿಲುವುಗಳನ್ನು ಸಾರ್ವಜನಿಕವಾಗಿ ಪ್ರತಿಪಾದಿಸಿದ್ದರು.

ಇದೆಲ್ಲಾ ಪರಿವಾರದವರಿಗೆ ನುಂಗಲಾರದ ತುತ್ತೇ ಸರಿ.ಅಮಿತ್ ಶಾ ರೋಡ್ ಶೋ ಗಲಭೆಯ ಸಮಯದಲ್ಲಿ ಪೂರ್ವಯೋಜಿತವೋ ಅಲ್ಲವೋ ವಿದ್ಯಾಸಾಗರ್ ರ ಪ್ರತಿಮೆಯಂತೂ ಗಲಭೆಕೋರರ ಆಕ್ರೋಶಕ್ಕೆ ಬಲಿಯಾಯಿತು.

ತೃಣಮೂಲ ಕಾಂಗ್ರೆಸ್ ನ ವಿದ್ಯಾರ್ಥಿಗಳು ಆ ಸಮಯದಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟಿಸಿದ್ದಾರೆ.ಅವರು ಒಂದಿಷ್ಟು ಪ್ರಚೋದನೆಯನ್ನೂ ಮಾಡಿರಬಹುದು. ಟಿ ಎಮ್ ಸಿ ಪಕ್ಷವು ಈ ಘಟನೆಯಿಂದ ಚುನಾವಣೆಯಲ್ಲಿ ಲಾಭ ಪಡೆಯಲೂ ಯತ್ನಿಸಬಹುದು. ಆದರೆ ಈಗ ಅದನ್ನು ಟೀಕೆಗೆ ಮುಖ್ಯ ಗುರಿ ಮಾಡಿಕೊಳ್ಳಬಾರದೆಂಬ ವಿವೇಕವನ್ನು ಎಡಪಕ್ಷಗಳು ಮತ್ತು ಕಾಂಗ್ರೆಸ್ ತೋರಿಸಬೇಕು.ಏಕೆಂದರೆ ಫ್ಯಾಸಿಸ್ಟ್ ಶಕ್ತಿಗಳು ಒಮ್ಮೆ ಬಂಗಾಳದ ನೆಲದಲ್ಲಿ ಬೇರೂರಿದರೆ ಅದು ಇಡೀ ದೇಶದಲ್ಲಿ ಧರ್ಮನಿರಪೇಕ್ಷ, ಜನ ತಾಂತ್ರಿಕ ಆಂದೋಲನಕ್ಕೆ ದೊಡ್ಡ ಪೆಟ್ಟಾಗುತ್ತದೆ.

ಅದೇನೇ ಇರಲಿ ಇದು ವಿದ್ಯಾಸಾಗರ್ ರ ಇನ್ನೂರನೆಯ ಜನ್ಮವಾರ್ಷಿಕ.ಅವರನ್ನು ನೆನಪಿಸಿಕೊಳ್ಳುವುದೂ ಸಹ ಈ ವಿಧ್ವಂಸಕ ಕೃತ್ಯಕ್ಕೆ ಸೂಕ್ತ ಪ್ರತಿಕ್ರಿಯೆಯೇ. ಎಲ್ಲ ದೀನ- ದುಃಖಿಗಳ ಬಗ್ಗೆ ಕಳಕಳಿ ಹೊಂದಿದ್ದ ಅವರನ್ನು ಗುರುದೇವ ರವೀಂದ್ರನಾಥ ಟಾಗೋರ್ ರು ಕರುಣಾಸಾಗರ ಎಂದೇ ಕರೆದಿದ್ದರು.

ಕಡುಬಡತನವನ್ನು ಕಂಡ ವಿದ್ಯಾಸಾಗರರ ಮೂಲ ಹೆಸರು ಈಶ್ವರಚಂದ್ರ ಬಂದೋಪಾಧ್ಯಾಯ.ತಂದೆಯೊಂದಿಗೆ ಊರಿನಿಂದ ನಡೆಯುತ್ತಾ ಕಲ್ಕತ್ತೆಗೆ ಬಂದ ಬಾಲಕ ಮೈಲಿಗಲ್ಲು ಎಣಿಸುತ್ತಾ ರಾಜಧಾನಿ ತಲುಪುವ ವೇಳೆಗೆ ಸಂಖ್ಯೆ ಬರೆಯಲು ಕಲಿತ ಎಂಬುದು ಒಂದು ದಂತಕತೆ. ಸಂಸ್ಕೃತ ಪಂಡಿತರಾದಾಗ ಬಂದ ವಿದ್ಯಾಸಾಗರ ಎಂಬ ಬಿರುದೇ ಹೆಸರಾಯಿತು

ಅವರು ಓದಿದ್ದು ಸಂಸ್ಕೃತ ಕಾಲೇಜಿನಲ್ಲಿ. ಆದರೆ ತನ್ನ ಪ್ರಚಂಡ ಪಾಂಡಿತ್ಯ, ಕೆಲಸದಲ್ಲಿನ ಶ್ರದ್ಧೆಯಿಂದಾಗಿ ಶೈಕ್ಷಣಿಕ ಇಲಾಖೆಯಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿದರು.ಭಾರತಕ್ಕೆ ಹೊಸ ಶಿಕ್ಷಣದ ಮಾದರಿಯನ್ನು ರೂಪಿಸುವ ಸಂದರ್ಭದಲ್ಲಿ ಈ ಜುಟ್ಟು ಬಿಟ್ಟಿದ್ದ, ಸಾಂಪ್ರದಾಯಿಕ ಉಡುಗೆಯ ಸಂಸ್ಕೃತ ಪಂಡಿತರು ‘ ನಮ್ಮ ಮಕ್ಕಳಿಗೆ ಬೇಕಾದದ್ದು ವೇದಾಂತವಲ್ಲ, ಅವರಿಗೆ ಅಗತ್ಯವಾದದ್ದು ಆಧುನಿಕ ವಿಜ್ಞಾನ, ಗಣಿತ,ಇಂಗ್ಲಿಷ್ ಭಾಷೆ. ಅವರಿಗೆ ಹಳೆಯ ತರ್ಕಶಾಸ್ತ್ರ ಕಲಿಸಬೇಡಿ, ಜೆ.ಎಸ್.ಮಿಲ್ ರ ‘ಲಾಜಿಕ್’, ನೀತಿಶಾಸ್ತ್ರ, ಉದಾರ ಮಾನವತಾವಾದವನ್ನು ಕಲಿಸೋಣ’ ಎಂದು ಹೋರಾಡಿ ಗೆದ್ದರು. ಅವರ ನಿಲುವು ಆ ಕಾಲಕ್ಕೆ ಆಶ್ಚರ್ಯಕರ!

ಬ್ರಿಟಿಷರ ಕೆಳಗೆ ಕೆಲಸ ಮಾಡುತ್ತಲೇ ಈ ಮನುಷ್ಯ ತನ್ನ ಆತ್ಮ ಗೌರವವನ್ನು ಕಾಪಾಡಿಕೊಂಡ ರೀತಿ ಅನನ್ಯವಾದದ್ದು. ಮೇಲಾಧಿಕಾರಿಯನ್ನು ನೋಡಲು ಹೋಗಿದ್ದಾಗ ಆತ ಇವರೆದುರಿನಲ್ಲಿ ಮೇಜಿನ ಮೇಲೆ ಕಾಲಿರಿಸಿಕೊಂಡಿದ್ದದ್ದು ಅವರಿಗೆ ಸಿಟ್ಟು ತರಿಸಿತು.ಇನ್ನೊಮ್ಮೆ ಆತ ಇವರ ಕಛೇರಿಗೆ ಬಂದಾಗ ವಿದ್ಯಾಸಾಗರ್ ಅವನ ಹಾಗೆಯೇ ಕೂತಿದ್ದರು.ಅವನು ಉರಿದುಹೋದ. ವಿದ್ಯಾಸಾಗರ್, “ಇದು ಬ್ರಿಟಿಷ್ ಸಭ್ಯತೆಯ ಅತ್ಯುತ್ತಮ ಮಾದರಿ ಎಂದುಕೊಂಡಿದ್ದೆ” ಎಂದು ತಣ್ಣಗೆ ಹೇಳಿ ಬಿಟ್ಟರು. ಅನೇಕ ಬಾರಿ ಇಂತಹ ಪ್ರತಿಭಟನೆಗಳನ್ನು ಮಾಡಿದ ಈಶ್ವರಚಂದ್ರರು ತಮ್ಮ ಪ್ರತಿಭೆ,ನೈತಿಕ ಸ್ಥೈರ್ಯಗಳಿಂದಾಗಿ ಗೆಲ್ಲುತ್ತಾಹೋದರು.

ಭಾರತದಾದ್ಯಂತ ಮಹಿಳೆಯರ ಪರಿಸ್ಥಿತಿ ಆಗ ತೀರ ಕೆಟ್ಟದಾಗಿತ್ತು. ಬಂಗಾಳದಲ್ಲಂತೂ ಬಾಲ್ಯವಿವಾಹ, ಬಹುಪತ್ನಿತ್ವ ವಿಪರೀತ. ನೂರೆಂಭತ್ತೆಂಟು ಮಡದಿಯರಿದ್ದ ಪುರುಷಪುಂಗವರು ಮೆರೆಯುತ್ತಿದ್ದ ಕಾಲ ಅದು! ವಿದ್ಯಾಸಾಗರ್ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿ ಎಂದರೆ ಯಾರೂ ಒಪ್ಪಲಿಲ್ಲ.ಆದರೆ ವಿದ್ಯಾಸಾಗರ್ ಸ್ವಂತ ಖರ್ಚಿನಲ್ಲಿ ಮೂವತ್ತೆರಡು ಶಾಲೆ ತೆರೆದರು. ಈ ವಿಷಯದಲ್ಲಿ ಅವರು ಸಾವಿತ್ರಿ ಬಾಯಿ ಫುಲೆ ಅವರಂತೆಯೇ ಹರಿಕಾರರು. ಆಮೇಲೆ ಅವರು ವಿಧವಾ ವಿವಾಹಕ್ಕೆ ಕೈ ಇಟ್ಟರು. ಅದಕ್ಕಾಗಿ ಕಾನೂನು ಜಾರಿಯಾಗಬೇಕೆಂದು ಹೋರಾಡಿ ಗೆದ್ದರು. ಆಗ ಸಂಪ್ರದಾಯವಾದಿಗಳಿಂದ ದೈಹಿಕ ಹಲ್ಲೆಯನ್ಮೂ ಎದುರಿಸಿದರು.ಮುದಿ ಪಂಡಿತ ದೊಣ್ಣೆ ಹಿಡಿದು ತಲೆ ಎತ್ತಿ ಕಲ್ಕತ್ತೆಯ ಬೀದಿಗಳಲ್ಲಿ ಓಡಾಡಿದ್ದು ಅಸಾಧಾರಣ ಘಟನೆ ಆದ್ದರಿಂದಲೇ ಗುರುದೇವರು ಇವರನ್ನು “ನಮ್ಮ ಮಧ್ಯದ ಮೊದಲ ಪುರುಷ ಸಿಂಹ” ಎಂದದ್ದು.

ವಿದ್ಯಾಸಾಗರ್ ರಿಗೆ ಆದರ್ಶ ಎಂಬುದು ಪರೋಪದೇಶಕ್ಕೆ ಮಾತ್ರ ಇದ್ದದ್ದಲ್ಲ. ಅವರ ಮಗ ವಿಧವಾ ವಿವಾಹಕ್ಕೆ ಮುಂದಾದಾಗ ಅವರು ಬಂಧುಗಳಿಂದ ಬಹಿಷ್ಕೃತರಾದರೂ ಲಗ್ನ ಮಾಡಿಸಲು ಹಿಂಜರೆಯಲಿಲ್ಲ. ಇದೇ ಮಗ ಮುಂದೆ ಸೊಸೆಗೆ ಕೈ ಕೊಟ್ಟ. ಆಗ ಪಂಡಿತರು ಅವನನ್ನು ತೊರೆದು, ಉಯಿಲಿನಲ್ಲಿ ಅವನಿಗಾಗಿ ಏನೂ ಬರೆಯದೆ ಸೊಸೆಗೆ ಮಾನ್ಯತೆ ನೀಡಿದರು. ಯಾವುದೇ ಗುಡಿ ಗುಂಡಾರಗಳತ್ತ ತಲೆ ಹಾಕದ ಈ ಮಾನವತಾವಾದಿ, ಕಡೆಗಾಲದಲ್ಲೂ ಮಗಳು ಬಲವಂತ ಮಾಡಿದರೂ ಪೂಜಾಗೃಹದೊಳಗೆ ಹೋಗಲಿಲ್ಲ. “ನನಗೆ ಕರ್ಪೂರ ಊದುಬತ್ತಿಗಳಿಂದ ಉಸಿರು ಕಟ್ಟುತ್ತೆ, ನನ್ನ ಪಾಡಿಗೆ ನನ್ನ ನ್ನು ಬಿಟ್ಟು ಬಿಡಿ” ಎಂದು ತಮಾಷೆ ಮಾಡಿ ದೇವರ ಪೂಜೆಯಿಂದ ದೂರ ಉಳಿದರು.

ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವುದು ಚುನಾವಣೆಗಳೋ? ಭಯೋತ್ಪಾದನೆಯೋ?

ಕೆಳ ಜಾತಿಯ ಜನರಿಗೂ ಶಿಕ್ಷಣದಲ್ಲಿ ಪ್ರವೇಶ ಸಿಗಬೇಕೆಂದು ಛಲದಿಂದ ಹೋರಾಡಿದ ಈಶ್ವರಚಂದ್ರರು ಹಿಂದೂಗಳಲ್ಲಿದ್ದ ಬಹುಪತ್ನಿತ್ವದ ವಿರುದ್ಧದ ಹೋರಾಟದಲ್ಲಿ ಗೆಲ್ಲಲಾಗದೆ ನೊಂದರು.ತಮ್ಮ ಕೊನೆಗಾಲವನ್ನು ಕಾಡಿನಲ್ಲಿ ಸಂತಾಲರು ಎಂಬ ಬುಡಕಟ್ಟು ಜನರ ಸೇವೆಯಲ್ಲಿ ಕಳೆದರು.ಆಧುನಿಕ ಬಂಗಾಲಿ ಭಾಷೆಗೆ, ಸರಳ ಗದ್ಯಕ್ಕೆ ಬುನಾದಿ ಹಾಕಿದರು.

ಕರ್ನಾಟಕದ ಅಂದಿನ ಒ್ರಗತಿಶೀಲ ಜನ ವಿಧವಾ ವಿವಾಹ ಕ್ಜೆ ಅವರಿಂದ ಪ್ರೇರಣೆ ಪಡೆದರು.ಇನ್ನೂ ಒಂದು ವಿಷಯವನ್ನು ನಾವು ಕೃತಜ್ಞತೆಯಿಂದ ನೆನಪಿದಿಕೊಳ್ಳಬೇಕು.ಅದೆಂದರೆ, ಕನ್ನಡದಲ್ಲಿ ಕಾದಂಬರಿ ಪ್ರಕಾರವನ್ನು ಪರಿಚಯಿಸಲು ಬಿ.ವೆಂಕಟಾಚಾರ್ಯರು ಬಂಗಾಳಿಯಿಂದ ಬಂಕಿಮಚಂದ್ರರ ಕಾದಂಬರಿಗಳನ್ನು ತರ್ಜುಮೆ ಮಾಡಲು ಯತ್ನಿಸಿದರು. ಆಗ ಈ ಉತ್ಸಾಹಿಯನ್ನು ಪ್ರೋತ್ಸಾಹಿಸಿ ವಿದ್ಯಾಸಾಗರ್ ರು ನಿಯತವಾಗಿ ಪೋಸ್ಟ್ ಕಾರ್ಡ್ ಮೂಲಕ ಬಂಗಾಳಿ ಯನ್ನು ಕಲಿಸಿದರು.

ವಿದ್ಯಾಸಾಗರ್ ರ ಅನೇಕ ನಿಲುವುಗಳು ಸಂಪ್ರದಾಯವಾದಿಗಳನ್ನು ಕೆರಳಿಸುತ್ತಿತ್ತು.ಒಮ್ಮೆ ಅವರು ತಮ್ಮ ಲೋಕೋಪಕಾರಿ ಕೆಲಸಕ್ಕೆ ಧನಸಂಗ್ರಹ ಮಾಡಿಟ್ಟುಕೊಂಡಿದ್ದರು. ಅದೇ ಸಮಯದಲ್ಲಿ ವಿದೇಶದಲ್ಲಿದ್ದ ಕವಿ ಮೈಖೆಲ್ ಮಧುಸೂದನ್ ದತ್ತರು( ಟೆನಿಸ್ ತಾರೆ ಲಿಯಾಂಡರ್ ಪೇಸ್ ರವರ ಮುತ್ತಾತನ ತಂದೆ) ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ದ್ದರು.ಅವರ ಸ್ಥಿತಿ ಕೇಳಿ ಕರುಣಾಸಾಗರರಾದ ನಮ್ಮ ಈಶ್ವರಚಂದ್ರರು ಎಲ್ಲ ಹಣವನ್ನು ಅವರಿಗೆ ಕಳಿಸಿಬಿಟ್ಟರು. ಸನಾತನವಾದಿಗಳು ” ವಿಧವೆಯರ ಪ್ರೇಮಿಯು ಹೆಂಡಕುಡುಕನಿಗೆ ಹಣ ಕಳಿಸಿದ ” ಎಂದು ಜರೆದರು. ವಿದ್ಯಾಸಾಗರ್ ರು ಈ ಕುಡುಕನ ಬಾಯಲ್ಲಿ ಸರಸ್ವತಿ ಕುಳಿತಿದ್ದಾಳೆ.ನೋಡುತ್ತಿರಿ ಈತ ಬಂಗಾಳಿ ಗೆ ಹೊಸ ಜನ್ಮ ಕೊಡುತ್ತಾನೆ ಎಂದರು. ರಾವಣ ಇಂದ್ರಜಿತು ಅವರನ್ನು ದೇಶಾಭಿಮಾನಿ ಹೋರಾಟಗಾರರು ಎಂದು ಬಣ್ಣಿಸಿದ ಮೈಖೇಲ್ ಮಧುಸೂದನ್ ದತ್ ರ ” ಮೇಘನಾದ ವಧಾ” ಮಹಾ ಕಾವ್ಯವು ಆಧುನಿಕ ಬಂಗಾಳಿ ಸಾಹಿತ್ಯದ ನಾಂದಿ ಹಾಡಿತು.

ಭಾರತದ ನವೋದಯದ ಇಂತಹ ಮೇರುವ್ಯಕ್ತಿತ್ವಗಳ ಪ್ರತಿಮೆ ಒಡೆದರೆ, ಭಗ್ನವಾಗುವುದು ಕಲ್ಲಿನ, ಲೋಹದ ವಿಗ್ರಹ ಅಲ್ಲ. ಅದು ಒಂದು ಆದರ್ಶ, ಒಂದು ಬದುಕಿನ ಕುರಿತಾದ ಶ್ರೇಷ್ಠ ಪರಿಕಲ್ಪನೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಬಿಎಸ್‌ಇ ಹಿಂದಿ ಹೇರಿಕೆಯು ತ್ರಿಭಾಷಾ ಸೂತ್ರ ಜಾರಿಯ ‘ರಹಸ್ಯ ಕಾರ್ಯವಿಧಾನ’: ಸ್ಟಾಲಿನ್ ಆರೋಪ

ಸಿಬಿಎಸ್‌ಇ ಇತ್ತೀಚೆಗೆ ಅನಾವರಣಗೊಳಿಸಿದ ಪಠ್ಯಕ್ರಮ ಚೌಕಟ್ಟಿನ ಕುರಿತು ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, "ಮೂರು ಭಾಷಾ ಸೂತ್ರ ಎಂದು ಕರೆಯಲ್ಪಡುವುದು ವಾಸ್ತವದಲ್ಲಿ ಹಿಂದಿ ಮಾತನಾಡದ ಪ್ರದೇಶಗಳಿಗೆ ಹಿಂದಿ ವಿಸ್ತರಿಸುವ ರಹಸ್ಯ ಕಾರ್ಯವಿಧಾನವಾಗಿದೆ"...

‘ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ, ನಿಮ್ಮ ಅಧಿಕ ಪ್ರಸಂಗ ಕರ್ನಾಟಕದ ಜನತೆ ಒಪ್ಪುವುದಿಲ್ಲ’ : ರಾಜ್ಯಪಾಲರ ವಿರುದ್ಧ ಕರವೇ ಕಿಡಿ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ...

‘ತಪ್ಪಾಗಿದೆ’ : ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್‌ ವಿಧೇಯಕದ ಕುರಿತ ಟೀಕೆಗಳನ್ನು ಕೈಬಿಟ್ಟ ರಾಜಸ್ಥಾನ ಹೈಕೋರ್ಟ್

ಟ್ರಾನ್ಸ್‌ಜೆಂಡರ್ ಕಾಯ್ದೆ, 2019ರಲ್ಲಿ ಬದಲಾವಣೆಗಳನ್ನು ತರಲಿರುವ ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026ರ ಕುರಿತು ಈ ಹಿಂದೆ ಮಾಡಿದ್ದ ವಿಮರ್ಶಾತ್ಮಕ ಟಿಪ್ಪಣಿಗಳನ್ನು ರಾಜಸ್ಥಾನ ಹೈಕೋರ್ಟ್ ತೆಗೆದುಹಾಕಿದೆ ಎಂದು...

ಯುಸಿಸಿ ಜಾರಿ ನಂತರ ‘ಜನಸಂಖ್ಯಾ ನಿಯಂತ್ರಣ’ ಕಾನೂನಿಗೆ ಮುಂದಾದ ಉತ್ತರಾಖಂಡ ಬಿಜೆಪಿ ಸರ್ಕಾರ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತಂದ ನಂತರ, ಉತ್ತರಾಖಂಡ ಸರ್ಕಾರ ಈಗ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಬಗ್ಗೆ ಯೋಚಿಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಸೂಚಿಸಿದ್ದಾರೆ. ಪ್ರಸ್ತಾವಿತ ಕ್ರಮದ...

ಪಶ್ಚಿಮ ಬಂಗಾಳ| ಟಿಎಂಸಿ ನಾಯಕರ ಭದ್ರತೆಗೆ ಭಾರೀ ಪೊಲೀಸ್ ನಿಯೋಜನೆ; ಇಸಿಐ ಆಕ್ಷೇಪ

ರಾಜ್ಯದ ವಿವಿಧ ಹಂತಗಳಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರಿಗೆ ವೈಯಕ್ತಿಕ ಭದ್ರತೆ ಒದಗಿಸಲು ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೋಲ್ಕತ್ತಾ ಪೊಲೀಸರು ನಿಯೋಜಿಸಿರುವ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಗಂಭೀರವಾಗಿ...

ಅಮೆರಿಕದ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಇರಾನ್ : ಪಶ್ಚಿಮ ಏಷ್ಯಾ ಸಂಘರ್ಷ ಉಲ್ಬಣ

ಅಲ್ಪಾವಧಿಯ ಕದನ ವಿರಾಮಕ್ಕಾಗಿ ಅಮೆರಿಕ ಮುಂದಿಟ್ಟಿದ್ದ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಏಪ್ರಿಲ್ 1, 2026ರ ಬುಧವಾರದಂದು ಅಮೆರಿಕವು ಅನಾಮಧೇಯ ಮಧ್ಯಸ್ಥಿಕೆ ರಾಷ್ಟ್ರದ ಮೂಲಕ ಇರಾನ್‌ಗೆ 48 ಗಂಟೆಗಳ ತಾತ್ಕಾಲಿಕ ಕದನ ವಿರಾಮದ ಆಫರ್...

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...